ಬುಧವಾರ, ಜೂನ್ 4, 2014

ಸ್ನೇಲ್ ರೈಲ್

ನನಗಿಲ್ಲಿ ಕ್ಯಾಪ್ಟನ್ ಖುದ್ದೂಸನ ಘಾಟಿ ಎಕ್ಸ್ಪ್ರೆಸ್ ಮಿಸ್ಸಾಗುವುದಿಲ್ಲ 
ಯಾಕೆಂದರೆ ರೆಡ್ ಲೈನ್ ಎಮ್ಮಾರ್ಟಿ ರೈಲು ಇದೆಯಲ್ಲ!

ಸೋಮವಾರ, ಫೆಬ್ರವರಿ 17, 2014

‘ಹಣೆಬರಾ ಅಳ್ಚಕಾಗ್ತದ್ಯ’

‘ಅಮಾ, ನಾ ಬಂದನ್ರೋ……..’ಧೋ…ಗುಡುವ ಮಳೆಯ ಜೋಗುಳದ ಹಿನ್ನೆಲೆಯಲ್ಲಿ ಮಲಗಿದ್ದವಳನ್ನು ಬಡಿದೆಬ್ಬಿಸಿದ್ದು ಗಡಸು ದನಿಯ ಸುಪ್ರಭಾತ. ‘ಹೋ ಮಾದೇವಿ, ಇಂಥಾ ಮಳೆಲ್ಲೂ ಇಷ್ಟು ಬ್ಯಾಗ ಬಂದ್ಯನೆ. ನಮ್ಮನೆ ಹಿಳ್ಳೆ, ಬಾಳಂತಿಗೆ ಇನ್ನೂ ಬೆಳಗೇ ಆಗಿಲ್ಲ’ ಅಂಗಳದಲ್ಲಿ ಅಮ್ಮನ ಸ್ವಾಗತ.’ಮಳೆಯಾರೆಂಥು, ಬಿಸ್ಲಾರೆಂಥು? ನಮ್ ಕೆಲ್ಸಕ್ಕೆ ನಾವು ಬರದೇರಾ. ತಂಗಿ ಯಂಥ ಒಂಬತ್ತಾದ್ರೂ ಇನ್ನೂ ಮಲ್ಕಂಡದೆ? ಮೀಸಿ ಮಲಗ್ಸದ್ಯಾವಾಗ? ಬ್ಯಾಗ ಯಬ್ಬಿಸ್ನಿ ವೇದಮಾ”ಅದ್ರ ಗಂಡ ರಾತ್ರೆ ಫೋನ್ ಮಾಡಿ ತಾಸುಗಟ್ಲೆ ಮಾತಾಡ್ತಿದ್ದ. ಮಾಣಿನೂ ರಾತ್ರ್ಯೆಲ್ಲಾ ಎದ್ಕತ್ತಿದ್ದಿದ್ದಾ. ಬೆಳಗಿನ್ ಜಾವದಲ್ಲಿ ಇಬ್ರೂ ಮಲ್ಕಂಡಾರೆ, ಹಂಗಾಗಿ ಇನ್ನೂ ಎಬ್ಸಿಲ್ಲಾ’ ಅಮ್ಮನ ಸಮಝಾಯಿಷಿ.’ಆದ್ರೂ ನಿಮ್ಮನೆ ಬಾಳಂತಿಗೆ ಬ್ಯಳಗಾಗದು ಹನಿ ತಡಾನೇ ಅಂತ್ನಿ’ ಮಾದೇವಿಯ ಆಕ್ಷೇಪಪೂರ್ವಕ ಒಬ್ಸರ್ವೇಶನ್.
ಇನ್ನೂ ಮಲಗಿದ್ರೆ ಊಊಊದ್ದನೆಯ ಭಾಷಣ ಕೇಳಬೇಕಾದೀತೆಂದು ಧಡಕ್ಕನೆ ಎದ್ದು ಬ್ರಷ್ಷು ಹಿಡಿದು ಬಚ್ಚಲ ಕಡೆ ಹೊರಟೆ. ಹಿತ್ಲಾಕಡೆ ಒಳದಲ್ಲಿ ಕುಕ್ಕುರುಗಾಲಲ್ಲಿ ಕುಂತು ಚಾ ಹೀರುತ್ತಿದ್ದ ಮಾದೇವಿ ಮುಂದುವರೆಸಿದ್ದಳು, ‘ನೀವು ಯಂಥದೇ ಹೇಳಿ, ಪ್ಯಾಟೆ ಕಂಡು ಬಂದವ್ಕೆ ಬ್ಯಾಗ ಬ್ಯಳಗಾಗಕಲ್ಲ. ನಮ್ಮನ್ಯಾಗೂ ಐದಾನೆ ಒಬ್ಬಂವಾ. ರಾತ್ರೆ ಬ್ಯಾಗ ಮಲ್ಗಾಕಲ್ಲ, ಬ್ಯಳಿಗ್ಗೆ ಯೋಳಾಕಲ್ಲಾ. ಈ ಪ್ಯಾಟೆ ಮ್ಯಾಲಿನ ಗಾಳಿ ತಾಗಿರೆ…… ”ಹೋ ಮಾದೇವಿ, ನಾ ಆಗಲೇ ಎದ್ದಾಗದೆ. ಮಾಣಿ ಕೊಂಯ್ಗುಟ್ದಾಂಗಾತು, ಹಂಗಾಗಿ ಅಲ್ಲೇ ಕುಂತಿದ್ದೆ’ ಮಾತಿನ ಧಾರೆಯನ್ನು ಕತ್ತರಿಸುತ್ತ ಹೇಳಿದೆ.’ಹಂಗಾರೆ ಯಬ್ಸಿಕ್ಯಂಡು ಬರುದ. ಜಗಿಸಿಕ್ಯಂಡು ಹಾಂಗೇ ಎಣ್ಣಿ ಹಚ್ಚಿ ಮೀಸುಕಾಗ್ತಿತ್ತು’ ಮಾದೇವಿ ಮುಂದುವರೆಸಿದಳು. ಅವಳು ‘ಜಗಿಸುದು’ ಅಂದಿದ್ದಕ್ಕೆ ಹಣೆ ಸಿಂಡರಿಸಿಕೊಳ್ಳುತ್ತ ‘ತಡ್ಕ ಮಾರಾಯ್ತಿ. ಸ್ವಲ್ಪ ಶಾಂತಿಂದ ಆಸ್ರಿಗೆ ಕುಡ್ಕಂತೆ. ಕಡಿಗೆ ಎಬ್ಸುವ ಅಂವನ್ನಾ’ ಎಂದೆ. ಚಾ ಮುಗಿಸಿ ಲೋಟ ತೊಳೆಯುತ್ತಿದ್ದ ಮಾದೇವಿ, ‘ಹಂಗಾರೆ ಉಚ್ಚೆ ವಸ್ತ್ರ ತೊಳಿತ್ನಿ ಮದ್ಲು’ ಎಂದಳು.’ಹಾಂಗೇ ಸ್ವಲ್ಪ ಬಚ್ಚಲು ಬೆಂಕಿ, ಹೊಡ್ತಲ ಬೆಂಕಿ ಘನಾಕೆ ಕತ್ಸು ಮಾರಾಯ್ತಿ. ರಾತ್ರಿ ಮಳೆಗೆ ಸೌದೆ ರಾಶಿಯೆಲ್ಲಾ ಒಬ್ಬಶಿ ಆಗೋಗದೆ. ಒಲೆ ಬೆಂಕಿ ಕತ್ತಾನೆ ಇಲ್ಲ. ಉಬಿಸಿ ಉಬಿಸಿ ಸಾಕಾತು’ ನಿಟ್ಟುಸಿರುಗರೆದಳು ಅಮ್ಮ. ‘ಥೋ, ನಮ್ಮನ್ಯಾಗೂ ಹಾಂಗೇರಾ, ನಾಕ್ ದಿನಾ ನೇರ್ತಾ ಬಿಸ್ಲಿಗ್ ಹಾಕಿರೂ ಬೆಂಕಿ ವಟ್ಟಾಕ್ ಬರದು ಯಂಥನ…’ ಸೋಗುಟ್ಟುತ್ತ ಕಟ್ಟಿಗೆ ಮನೆ ಕಡೆ ಹೋದಳು ಮಾದೇವಿ.
ಆಸ್ರಿಗೆ ಕುಡಿತಾ ಕುಳಿತವಳಿಗೆ ಬಚ್ಚಲ ಕಡೆಯಿಂದ ಮಾದೇವಿಯ ದನಿ ಕೇಳಿಸುತ್ತಿತ್ತು. ಹೆಚ್ಚು ಕಮ್ಮಿ ನನ್ನಮ್ಮನ ವಯಸ್ಸಿನವಳೇ ಆದ ಮಾದೇವಿ ಹೋದಲ್ಲೆಲ್ಲ ಮಾತು, ಮಾತು… ಹತ್ತು ಹಳ್ಳಿ ಸುತ್ತಿ ಚಾಕರಿ ಮಾಡುವುದರಿಂದ ಊರ ಮೇಲಿನ ಸುದ್ದಿಯೆಲ್ಲ ನಾಲಿಗೆ ತುದಿಯಲ್ಲೇ. ದಟ್ಟ ಕಪ್ಪು ಮೈಬಣ್ಣ, ಮುಕ್ಕಾಲುವಶಿ ನೆರೆತ ತಲೆ, ಸಣಕಲು ಮೈಗೆ ಒಂಚೂರು ಹೊಂದಿಕೆಯಾಗದ ಗಡಸಾದ ದನಿ. ಉಬಿಸಿದರೆ ಹಾರಿ ಹೋಗುವಂಥ ಕಾಯದಲ್ಲಿ ಅದೇನು ಶಕ್ತಿಯೋ, ಸದಾಕಾಲ ಮೈಮುರಿದು ದುಡಿಯುವ ‘ದುಡಿವಾನಿ’. ಸ್ವಂತದ ಮನೆ ಬಿಟ್ಟರೆ ಬೇರೆ ಅಂಗೈ ಅಗಲದ ಜಮೀನೂ ಇಲ್ಲ, ಗಂಡ ಶಣ್ಯನೋ ಪರಮ ದುಪ್ಪಾಳ. ಆಚೀಚೆ ಊರ ದನ ಕಾಯುವುದು ಬಿಟ್ಟರೆ ಬೇರೆ ಕೆಲಸ ಮಾಡಿದ್ದ ದಾಖಲೆಯೇ ಇಲ್ಲ. ಗ್ರಾಮಕ್ಕೆ ಹಾಲಿನ ಡೇರಿ ಬಂದ ಮೇಲೆ ಜನರೆಲ್ಲ ಜಾಸ್ತಿ ಹಾಲು ಕೊಡುವ ಜರ್ಸಿ ದನ ಕಟ್ಟಿ ಮನೆಯಲ್ಲಿ ಆರೈಕೆ ಶುರು ಮಾಡಿದ್ದರಿಂದ ಆ ಕೆಲಸವೂ ಇಲ್ಲವಾಯಿತು. ಮೂರು ಹೊತ್ತು ರೇಡಿಯೋ ಕಿವಿಗಂಟಿಸಿಕೊಂಡು ಕೋಳಿಗಳನ್ನ ಗೂಡಿಂದ ಹೊರಗೆ ಬಿಡೋದು- ಒಳಗೆ ಅಟ್ಟೋದು, ಸಂಜೆ ಗಡದ್ದು ಕುಡಿದು ಹೊಟ್ಟೆಬಿರಿ ಉಂಡು ಮಲಗುವುದು… ಇಷ್ಟೇ ಅವನಿಗಿದ್ದ ಘನಂದಾರಿ ಕೆಲಸ. ‘ಮಾದೇವಿ ದುಡಿದಿದ್ದಕ್ಕೆ ಸೋಂಗೆ ಮನೆ ಮಾಡು ಹೋಗಿ ಹಂಚು ಬಂತು’ ಎನ್ನುವುದು ಊರಲ್ಲಿ ಒಕ್ಕೊರಲಿನ ಮಾತು. ತೆರಡಿಕೆ, ಸೋಂಗೆ ಆರಿಸುವ, ಅಡಿಕೆ-ಚಾಲಿ ಸುಲಿಸುವ, ಕಾಫಿ ಬೀಜ ಬಿಡಿಸುವಂಥ ತೋಟದ ಮೇಲಿನ ಚಾಕರಿ ಜೊತೆ ಅಂಗಳ ತೊಡೆಯುವ, ಅಕ್ಕಿ ಆರಿಸುವ, ವಿಶೇಷದ ದಿನ ಪಾತ್ರೆ ತೊಳೆಯುವ ಕೆಲಸಕ್ಕೆಲ್ಲ ‘ಮಾದೇವಿನ್ನ ಲೆಕ್ಕಕ್ಕೆ ಹಿಡಿಯಲೆ ಅಡ್ಡಿಲ್ಲೆ’ ಎಂಬ ನಂಬಿಕೆ ಊರಲ್ಲಿ. ಇನ್ನು ಅವಳ ಸ್ಪೆಷಾಲಿಟಿ ಬಾಣಂತನದ ಚಾಕರಿ. ಹಿಳ್ಳೆ-ಬಾಣಂತಿ ಸ್ನಾನ, ಆರೈಕೆ, ಚಿಕ್ಕ ಪುಟ್ಟ ನಾಟಿ ಔಷಧಿ, ಗುಡ್ಡೆಗಟ್ಟಲೆ ಬಟ್ಟೆ ಒಗೆತ ಎಲ್ಲದಕ್ಕೂ ಮಾದೇವಿ ಬ್ರಾಂಡಿನ ಸೇವೆ ಸುಪ್ರಸಿದ್ಧ. ಅವಳ ಅವ್ವ, ಅಜ್ಜವ್ವನೂ ಇದೇ ಮಾಡಿದವರಂತೆ. ಅವರೆಲ್ಲರ ಅನುಭವಸಾರ ಸೇರಿ ‘ಮಾದೇವಿ ಛಾಪು’ ರೂಪುಗೊಂಡಿತ್ತು. ಊರಲ್ಲಿ ಯಾರದೇ ಮಗಳು/ಸೊಸೆ ಬಸುರಿ ಎಂದು ಗೊತ್ತಾಗುತ್ತಿದ್ದಂತೆ ಹೆಂಗಸರು ‘ಇದೊಂದು ಬಾಳಂತನ ನೀ ಮಾಡ್ಕೊಡದೆಯಾ’ ಎಂದು ರಿಸರ್ವ್ ಮಾಡಿಬಿಡುತ್ತಿದ್ದರು. ನಮ್ಮನೆಯಲ್ಲೂ ದೊಡ್ಡಪ್ಪನ ಮಕ್ಕಳಿಬ್ಬರ, ನನ್ನಕ್ಕನ ಬಾಣಂತನಕ್ಕೆ ಅವಳದ್ದೇ ಪುರೋಹಿತ್ಗೆಯಾಗಿ ಈಗ ನನ್ನ ಸರದಿ ಬಂದಿತ್ತು.
‘ಆಸ್ರಿಗ್ಯಾತ? ಮಾಣಿನ ಎಬ್ಸಿ ಹಾಲು ಕುಡಿಸಿಕ್ಯಂಡು ಬಾ ಬೇಗ’ ಅಮ್ಮ ಅವಸರಿಸಿದಳು.ತಿಂಡಿ ಮುಗಿಸಿ ಬರುವಷ್ಟರಲ್ಲಿ ಮಗರಾಯ ಎದ್ದು ರಂಪ ಶುರುಮಾಡಿದ್ದ. ‘ಎದ್ದ ಕೂಡಲೇ ಹೊಟ್ಟೆಗೆ ಬೇಕು ಮಾಣಿಗೆ, ಅಪ್ಪನ್ ಕಾಣದೇ ಹೋದ್ರೂ ಅಂವಂದೇ ಬುದ್ಧಿ’, ಹುಸಿಮುನಿಸು ತೋರುತ್ತ ಎದೆಗಂಟಿಸಿಕೊಂಡೆ. ಮಗನ ದನಿ ಅಡಗುತ್ತಿದ್ದಂತೆ ಮತ್ತೆ ಮಾದೇವಿ ದನಿಯ ಭೋರ್ಗರೆತ, ಈ ಬಾರಿ ಹೊಡತಲ ಕಡೆಯಿಂದ. ಕೊಟ್ಟಿಗೆಯಲ್ಲಿದ್ದ ದೊಡ್ಡಮ್ಮನ ಬಳಿ ಮಾತನಾಡುತ್ತಿರಬೇಕು, ‘ಯಂಥಾ ಮಾಡದ್ರಾ ಸುಶೀಲಮಾ, ಎಲ್ಲಾ ಹಣೇಬರಾ, ಇಲ್ಲಾರೆ ನಮ್ ರತ್ನಿ ಕತೆ ಹೀಂಗ್ ಆಗ್ತಿತ್ತನ್ರಾ. ಊರವ್ಕೆಲ್ಲಾ ನಾ ಬಾಳಂತನಾ ಆರೈಸ್ತ್ನಿ, ನನ್ ಮಗ್ಳಿಗೇ ಮಾಡುಕೆ ಹಣೇಲಿ ಬರೀನಲ್ಲಾ. ಅದು ಗಂಡನಮಲ್ಲಿ ಯಂಥ ತಿಂತ, ಯಂಥ ಕುಡೀತ… ಒಂದ್ ಮಾತು ನಂಗ್ಯಾರೂ ಹೇಳ್ನಲ್ಲ, ಕೇಳ್ನಲ್ಲ. ಮೊಮ್ಮ ಹುಡುಗನ್ನ ನೋಡಾಕೂ ಇನ್ನೂ ಮೂರ್ತ ಕೂಡ್ಬರ್ನಲ್ಲ ನಂಗೆ’ ಎಂದು ನಿಡುಸುಯ್ಯುತ್ತಿದ್ದಳು. ರತ್ನಳ ಕಂಗಾಲು ಕಣ್ಣುಗಳು ನೆನಪಿಗೆ ಬಂದವು. ನನಗಿಂತ ಎರಡು ವರ್ಷ ಚಿಕ್ಕವಳು, ಶಾಲೆಯಲ್ಲಿದ್ದಾಗಲಿಂದಲೂ ಪರಿಚಯ. ಓದು ಹತ್ತದೇ ಏಳನೆತ್ತಿಗೇ ಶಾಲೆ ಬಿಟ್ಟವಳು ತಾಯಿ ಜೊತೆ ದುಡಿತ ಶುರು ಮಾಡಿದ್ದಳು. ಅವಳಿಗೆ ಇಪ್ಪತ್ತು-ಇಪ್ಪತ್ತೆರಡು ವರ್ಷವಾಗಿದ್ದೇ ಮಗಳ ‘ಮದೀ’ ತಲೆಬಿಸಿ ಹಚ್ಚಿಕೊಂಡ ಮಾದೇವಿ, ‘ನಮ್ ಜನಾ ಇತ್ಲಾಗೆ ಕಮ್ಮಿ ಐದಾವೆ. ಸಾಗರ ಬದೀಗೆ, ಘಟ್ಟದ ತೆಳಗೆ ಹುಡ್ಕಕೆ ಹೋಬೇಕು, ವಟ್ಟು ನಮಗೆ ತಿರುಗ್ಯಾಟವೇ ಸೈ’ ಎನ್ನುತ್ತಿದ್ದಳು.
ಕಷ್ಟಪಟ್ಟು ಹುಡುಕಿದ ಹುಡುಗರೂ ‘ಹುಡ್ಗಿ ಕಪ್ ಅದೆ’ ಎಂದು ಬಿಟ್ಟುಬಿಡುತ್ತಿದ್ದರಂತೆ. ಖುದ್ದು ಮಾದೇವಿಯೇ ‘ಯಂಥ ಮಾಡದ್ರಾ, ನಮ್ಮನೆ ಹುಡ್ಗಿ ಹನಿ ಕಪ್ಪದೆ’ ಎಂದು ಷರಾ ಬರೆಯುತ್ತಿದ್ದಳು. ಎಲ್ಲ ಒಪ್ಪಿಗೆಯಾದ್ರೆ ವರದಕ್ಷಿಣೆ ಬಾಬ್ತು ಕೈ ಮೀರಿದ್ದಾಗಿರುತ್ತಿತ್ತು. ಅಂತೂ ಇಪ್ಪತ್ತಾರು ತುಂಬುವುದರೊಳಗೆ ಕುಮಟಾ ಕಡೆಯ ಚಂದದ ಹುಡುಗನ ಜೊತೆ ಮಗಳ ಮದುವೆಯಾದಾಗ ಮಾದೇವಿಯ ಖುಷಿ ಹೇಳತೀರದಂತೆ; ‘ಮದ್ವೆ ದಿನಾ ಮಾದೇವಿ ನೆಲ ಬಿಟ್ಟು ಮೂರಡಿ ಮ್ಯಾಲೆ ಹಾರ್ತಾ ಇತ್ತು’ ದೂರವಾಣಿಯಲ್ಲಿ ವರದಿ ಕೊಟ್ಟಿದ್ದಳು ಅಮ್ಮ. ಜೊತೆಗೇ ‘ಯಂಥೆಂಥಾ ಸುಮಾರಿನವೂ ರತ್ನ ‘ಕಪ್ಪು’ ಹೇಳಿ ಬಿಟ್ಟಿದ್ದಿದ್ದ. ಈಗ ಇಷ್ಟು ಚಂದ ಇದ್ದಂವ ವರದಕ್ಷಿಣೆ ಸೈತಾ ತಗಳ್ಳದ್ದೇ ಮದ್ವೆ ಆಜಾ ಅಂದ್ರೆ ಯಾಕೋ ಅನುಮಾನ… ಊರ ಬದೀಗೆ ಎಲ್ಲಾ ಇದೇ ಮಾತಾಡ್ಕ್ಯತ್ತಿದ್ದ’ ಎಂದೂ ಹೇಳಿದ್ದಳು.ಆರು ತಿಂಗಳ ಹಿಂದೆ ನಮ್ಮೂರ ಬಸ್ಸ್ಟ್ಯಾಂಡಿನಲ್ಲಿ ಕಂಡಿದ್ದೆ ಅವಳನ್ನ. ಒಂಬತ್ತು ತಿಂಗಳ ಬಸುರಿ ಆಕೆ ಆಗ. ಬಸವಳಿದ ಮೈ, ಬಾಡಿದ ಮುಖ… ನನ್ನ ‘ಆರಾಮನೇ…ರತ್ನಾ’ಗೆ ಪ್ರತ್ಯುತ್ತರವಾಗಿ ನಿರ್ಜೀವ ನಗು ಬೀರಿದ್ದಳಷ್ಟೇ. ‘ರತ್ನಂಗೆ ಯಂಥಾ ಆಜೆ? ಬಡಕಲು ಬೇತಾಳದಂಗೆ ಆಗೋಜು. ಹಗರ ದಬ್ಬೆಗೆ ಹೊಟ್ಟೆ ತಂದು ಕಟ್ಟಿ ಇಟ್ಟಾಂಗೆ ಕಾಣ್ತು’ ಎಂದಿದ್ದಕ್ಕೆ, ‘ಪಾಪ, ಅದರ ಕತೆ ಯಂಥ ಕೇಳ್ತೆ, ಹುಡುಕೀ ಹುಡುಕೀ ಹಾಳು ಬಾವಿಗೆ ಕೆಡಗಿದಾಂಗಾಜು’ ಎಂದಿದ್ದಳು ಅಮ್ಮ. ಊರವರ ಊಹೆ ನೂರಕ್ಕೆ ನೂರು ಸತ್ಯ ಮಾಡಿದ್ದ ಚಟಸಾರ್ವಭೌಮನಂತೆ ಆಕೆಯ ಗಂಡ ಮಾಬ್ಲ. ಕುಡಿತ, ಇಸ್ಪೀಟು, ದುಂದು, ದುಪ್ಪಾಳತನ… ಮೇಲಿಂದ ಲಂಪಟತನ. ಊರ ಬದಿ ಹೆಣ್ಣು ಸಿಗುವುದೇ ಕಷ್ಟವಾಗಿ ಘಟ್ಟದ ಮೇಲೆ ಬಂದು ಹುಡುಕುತ್ತಿದ್ದಾಗ ರತ್ನ ಸಸಾರಕ್ಕೆ ಸಿಕ್ಕಿಕೊಂಡಿದ್ದಳು.
ದುಡಿತಕ್ಕೆ ಹೆದರುವವಳಲ್ಲ ಆಕೆ- ಮದುವೆಗೆ ಮುನ್ನ ದುಪ್ಪಾಳ ಅಪ್ಪನನ್ನು ಕಂಡಿದ್ದಳು; ಈಗ ದುಪ್ಪಾಳ ಗಂಡ. ವ್ಯತ್ಯಾಸವೆಂದರೆ ಮೊದಲು ಅವ್ವನ ಅಕ್ಕರೆ ಇತ್ತು, ಈಗ ಅತ್ತೆಯ ಅಸಡ್ಡೆ ಅಷ್ಟೇ. ಹೇಗೋ ಗಂಡನ ಮನವೊಲಿಸಿ ದಾರಿಗೆ ತರುವಷ್ಟರಲ್ಲಿ ಬಸುರಿ ಆಕೆ. ಇತ್ಲಾಗೆ ಮಾದೇವಿಯ ಮಗ ಸುಬ್ರಾಯಂದು ಮದುವೆ ನಿಶ್ಚಯವಾಗಿತ್ತು. ಮದುವೆಗೆ ಬಂದ ರತ್ನ ಆರಾಮಿಲ್ಲದೇ, ಡಾಕ್ಟರ ಸಲಹೆಯಂತೆ ತವರಲ್ಲೇ ಉಳಿದಿದ್ದಳು. ಹೆಂಡತಿ ದೂರವಾಗಿದ್ದೇ ಮಾಬ್ಲ ಮತ್ತೆ ಬಾಲ ಬಿಚ್ಚಿದ್ದನಂತೆ. ಅತ್ತಿಗೆಯ ತಂಗಿ ಜೊತೆ ಸಂಬಂಧ ಬೆಳೆಸಿ ಆಕೆ ಗರ್ಭಿಣಿಯಾಗಿದ್ದರಿಂದ, ಹೆಂಡತಿಯನ್ನು ಬಿಟ್ಟು ಅವಳನ್ನೇ ಮದುವೆಯಾಗು ಎಂದು ಅಣ್ಣ-ಅತ್ತಿಗೆ ಪಟ್ಟು ಹಿಡಿದಿದ್ದರಂತೆ. ಗಂಡನ ಅವಾಂತರ ರತ್ನಳ ಜೀವಕಳೆಯನ್ನೇ ಕಳೆದಿತ್ತು. ಇದೇ ಸಂದರ್ಭದಲ್ಲಿ ನಾನು ಆಕೆಯನ್ನು ಕಂಡದ್ದು. ಅದಾಗಿ ಒಂದು ವಾರಕ್ಕೆ ನಡೆದ ಪಂಚಾಯಿತಿಯಲ್ಲಿ ಸುಬ್ರಾಯಂಗೂ, ಮಾಬ್ಲಂಗೂ, ಅವನ ಅಣ್ಣಂಗೂ ಜಟಾಪಟಿಯಾಗಿ ಪರಸ್ಪರ ಕುತ್ತಿಗೆ ಪಟ್ಟಿಗೆ ಕೈ ಹಾಕಿ ಹೊಡೆದಾಡಿದ ನಂತರ ಮಾಬ್ಲ, ‘ಜನ್ಮಿತ ಇನ್ನು ನಿಮ್ಮನೆಗೆ ಕಳಸಾಕಲ್ಲ’ ಹೇಳಿ ತಿಂಗಳು ತುಂಬಿದ ರತ್ನಳನ್ನು ವಾಪಸ್ ಕರಕೊಂಡು ಹೋದನಂತೆ. ಆಮೇಲೆ ಮಗಳು ಗಂಡು ಮಗು ಹಡೆದಿದ್ದು, ಅವಳ ಗಂಡ ಅಣ್ಣನಿಂದ ಬೇರೆಯಾಗಿದ್ದು ಎಲ್ಲಾ ಅಡಾಪಡಾ ಸುದ್ದಿಯಾಗೇ ಮಾದೇವಿಯನ್ನು ತಲುಪಿದ್ದು. ಹೋಗಿ ನೋಡಿ ಬರೋಣವೆಂದರೆ ಮನೆಯಲ್ಲಿ ಶಣ್ಯಂದು, ಸುಬ್ರಾಯಂದು ಆಣೆ, ಭಾಷೆ ಕಟ್ಟಲೆ.
ಯೋಚನೆಯನ್ನು ತುಂಡರಿಸಿದ್ದು ದೂರವಾಣಿ ಕರೆ. ಉದ್ದನೆಯ ರಿಂಗ್…. ಪ್ರದೀಪನದೇ… ಅನುಮಾನವಿಲ್ಲ. ಮಗುವನ್ನು ಎದೆಗವಚಿಕೊಂಡೇ ‘ಹಲೋ’ ಎಂದೆ. ‘ಹಾಯ್ ಹನಿ’… ಮಗಚಿಟ್ಟು ಬರುವಷ್ಟು ಸವಿ ಅವನ ದನಿಯಲ್ಲಿ. ‘ಮಗನ ಫೋಟೋ ಯಾವಾಗ ತೆಗೆಸ್ತೆ? ವೀಕೆಂಡ್ ಒಳಗೆ ಪಾಸ್ಪೋರ್ಟ್ ಡಾಕ್ಯುಮೆಂಟ್ ರೆಡಿ ಮಾಡಿಡು. ಅಪ್ಲಿಕೇಶನ್ ಸಬ್ಮಿಟ್ ಮಾಡಲೆ ಏರ್ಪಾಟು ಮಾಡ್ತಿ’ ಎಂದ. ಉತ್ತರ ಕೊಡಲು ಮನಸ್ಸಾಗಲಿಲ್ಲ. ‘ಯೋಚ್ನೆ ಮಾಡ್ತಿ’ ಎಂದು ಫೋನಿಟ್ಟೆ. ನಿನ್ನೆ ರಾತ್ರಿ ಇದೇ ವಿಷಯಕ್ಕಲ್ಲವೇ ಒಂದು ತಾಸು ಫೋನಿನಲ್ಲೇ ತಿಕ್ಕಾಟ ನಡೆಸಿದ್ದು. ನಾನು ಗರ್ಭಿಣಿಯಾಗುತ್ತಲೇ ಹೆರಿಗೆ ರಜೆಯ ಪ್ಲಾನಿಂಗ್ ಶುರು ಮಾಡಿದ್ದರೆ ಇಂವ ವಿದೇಶ ಪ್ರಯಾಣಕ್ಕೆ ಸ್ಕೆಚ್ ಹಾಕಿದ್ದ. ‘ಎಲ್ಲಾ ನಮ್ಮ ಒಳ್ಳೇದಕ್ಕೆ. ನೀನು ಬಾಣಂತನ ಹೇಳಿ ನಾಲ್ಕು ತಿಂಗಳು ಊರಿಗೆ ಹೋಗಿ ಕುಂತ್ರೆ ಇಲ್ಲಿ ನಾನೊಬ್ನೇ ಆಗ್ತಿ. ಅದರ ಬದ್ಲು ‘ಆನ್ ಸೈಟ್’ ಹೋದ್ರೆ ಸಖತ್ ದುಡ್ಡು ಮಾಡಲಾಗ್ತು. ನೀ ವಾಪಸ್ ಬರಹೊತ್ತಿಗೆ ನಾನೂ ವಾಪಸ್ಸಾಗ್ತಿ’, ಬೆಣ್ಣೆ ಹಚ್ಚಿದ್ದ. ‘ನಾನು ಬೇನೆ ತಿಂದು ನರಳ್ತಾ ಇದ್ರೆ ನೀನು ಫಾರಿನ್ ಮಜಾ ಮಾಡ್ತ್ಯ, ಹುಟ್ಟಿದ ಮಗುವನ್ನ ಎತ್ತಿಗ್ಯತ್ತ್ತಿಲ್ಯ, ಹೆಸರಿಡಲೆ ಅಪ್ಪನೇ ಬರವು ಗೊತ್ತಿದ್ದ’ ದಬಾಯಿಸಿದ್ದೆ. ‘ನಿನ್ನ ನೋವು ನಾ ಹಂಚಿಕೊಳ್ಳಲಾಗ್ತ ಹೇಳು, ಶಿಶುಗಂತೂ ಯಾರು ಎತ್ತಿಕ್ಯಂಡ್ರೂ ಒಂದೇ, ಏನೂ ತಿಳಿತಿಲ್ಲೆ. ದುಡಕಂಡು ಬಂದ್ರೆ ನೀನು ಇಷ್ಟಪಟ್ಟಂಥ ಮನೆ ಆಗ್ತು ಬೆಂಗಳೂರಲ್ಲಿ’ ವಾದ ಮಾಡಿದ್ದ. ತನ್ನ ಮಹತ್ವಾಕಾಂಕ್ಷೆಗೇ ಅಂಟಿಕೊಂಡು ವಿದೇಶಕ್ಕೆ ಹೋದವನಿಗೆ ಈಗಿನ್ನೊಂದು ಆಸೆ. ‘ನೀನೂ ಇಲ್ಲಿ ಬಂದ್ಬಿಡು. ಒಂದು ವರ್ಷ ಝುಮ್ಮಂತ ಇದ್ದು ಹೋಪನ’ ಎನ್ನುತ್ತಿದ್ದಾನೆ. ಕೆಲಸ ಬಿಡಬೇಕಾಗುತ್ತಲ್ಲ ಎಂದು ನಾನು ಚಿಂತಿಸಿದರೆ ‘ಚೊಲೋನೆ ಆತು, ಜಾಸ್ತಿ ಹೊತ್ತು ಜೊತೆಗೆ ಇರಲಾಗ್ತು’ ಎನ್ನುತ್ತಾನವ. ಅಪ್ಪ ಅಮ್ಮನೂ ಅವನಿಗೆ ಬೆಂಬಲವಾಗಿ ‘ಸಣ್ಣ ಶಿಶು ಇಟ್ಗಂಡು ಕೆಲಸ ಕಷ್ಟನೇ. ಆರಾಮಾಗಿ ಮನೆಲ್ಲಿದ್ದು ಮಗನ್ನ ನೋಡ್ಕ್ಯ. ಎಲ್ಲರಿಗೂ ಒಳ್ಳೇದು’ ಎಂದು ತುಂಬಕ್ಕಿ ತಟ್ಟುತ್ತಿದ್ದಾರೆ. ನನ್ನ ಅಭಿಲಾಷೆಗೆ ಬೆಲೆ ಇಲ್ಲವೇ? ತಲೆ ಹನ್ನೆರಡಾಣೆಯಾಗುತ್ತಿದೆ.
ಮಾಣಿಗೆ ಎಣ್ಣೆ ತೀಡಿದ ಅಮ್ಮ ಸ್ನಾನಕ್ಕೆ ಕರೆದುಕೊಂಡು ಹೋದರೂ ಅನ್ಯಮನಸ್ಕಳಾಗಿ ಕುಂತೇ ಇದ್ದೆ. ನೀರಿನ ಬಿಸಿ ತಡೆಯಲಾರದೇ ಅಂವ ಒಂದೇ ಸಮ ಅತ್ತಿದ್ದು, ಕೆಂಪಗಾಗಿ ಉಗಿ ಹಾಯುತ್ತಿರುವ ಮೊಮ್ಮಗನನ್ನು ಎತ್ತಿಕೊಂಡು ಬಂದ ಅಮ್ಮ ‘ಬಾಳೆಯ ಬನ ಚಂದ, ತಾಳೆಯ ಹೂ ಚಂದ, ಯಮ್ಮನೆ ತಮ್ಮಯ್ಯನ ಅಳು ಚಂದ…. ಒಳೊಳಳೆಯ್…’ಎನ್ನುತ್ತ ಪೌಡರ್ ಮೆತ್ತಿ ಪಂಜಿ ಸುತ್ತಿದ್ದು ಮರಗಟ್ಟಿದ್ದ ನನ್ನ ಮನಕ್ಕೆ ತಾಗಲೇ ಇಲ್ಲ. ‘ಯಂಥಾ ತಲೆ ಕೆಡಿಸಿಕ್ಯತ್ತೆ ತಂಗಿ, ಹಣೇ ಬರದಲ್ಲಿ ಇದ್ದಂಗಾಗ್ತು. ಗಂಡ-ಸಂಸಾರಕ್ಕಿಂತ ನಿನ್ನ ಕೆಲಸ ಹೆಚ್ಚಲ್ಲ. ತಗ, ಮಾಣಿನ್ ಮಲಗಿಸಿ ಬಾ. ಮೀಯಲಕ್ಕು’ ಸಸಾರಕ್ಕೆ ಹೇಳಿದ ಅಮ್ಮ ಮಗನನ್ನು ಕೈಗಿತ್ತು ಅಡುಗೆ ಮನೆಯತ್ತ ನಡೆದಳು. ಇನ್ನು ನನಗೆ ಕಷಾಯ, ಪಥ್ಯದ ಪದಾರ್ಥ, ಮಧ್ಯಾಹ್ನದ ಅಡಿಗೆ… ಎನ್ನುತ್ತ ಮನೆಕೆಲಸದಲ್ಲಿ ಮುಳುಗಿಹೋಗುವ ಅಮ್ಮನಿಗೆ ನನ್ನ ವಾದ ‘ಹಠ’ವಾಗಿ ಕಂಡರೆ ಆಶ್ಚರ್ಯವೇನಿಲ್ಲ.ಮಗ ಮಲಗುತ್ತಿದ್ದಂತೆ ನನ್ನ ಸ್ನಾನ ‘ಸಂಘರ್ಷ’ ಶುರು! ಹಂಡೆಗಟ್ಟಲೆ ಕುದಿ ನೀರನ್ನು ಮಾದೇವಿ ಧಸಭಸ ಮೈ ಮೇಲೆ ಹೊಯ್ಯುತ್ತಿದ್ದರೆ ದಿನಾ ಕೂಗಿಕೊಳ್ಳುತ್ತಿದ್ದೆ. ಇವತ್ತು ಆ ನೀರಿಗಿಂತ ಜಾಸ್ತಿ ಬಿಸಿ ಮನಸ್ಸಿನಲ್ಲಿ ತುಂಬಿಕೊಂಡಿದ್ದರಿಂದ ತಾಪವೂ ತಿಳಿಯಲಿಲ್ಲ, ಚರ್ಮ ಕೆಂಪಾಗಿ ಉರಿಯುತ್ತಿದ್ದುದೂ ಅರಿವಾಗಲಿಲ್ಲ. ಸ್ನಾನದ ನಂತರ ‘ಬೆವರಿಳಿಸಿಕೊಳ್ಳುವ’ ರಾಮಾಯಣ! ‘ಬಾಳಂತಿ ಮೈ ಚೊಲೋ ಬೆಗರಬಕು. ಬಾಳಂತನದಾಗೆ ಬೆಗರಿಸಿಕಳ್ನಲ್ಲ ಅಂದ್ರೆ ಕಡಿಗೆ ಸಾಯತಂಕ ಕಸಾಲೆ ತಪ್ಪಕಲ್ಲ’ ಎಂಬುದು ಕಳೆದ ಒಂದೂವರೆ ತಿಂಗಳಿಂದ ಮಾದೇವಿಯ ಪ್ರತಿದಿನದ ಬೋಧನೆ. ಹೊಡತಲ ಬೆಂಕಿಯೆದುರು ಕಂಬಳಿ ಮುಚ್ಚಿಕೊಂಡು ದುಂಡಗೆ ಮಲಗುವುದೆಂದರೆ ನನಗೆ ಎಲ್ಲಿಲ್ಲದ ಮುಜುಗರ, ಕಿರಿಕಿರಿ. ಇವೆಲ್ಲ ಅರ್ಥವಿಲ್ಲದ ಆಚರಣೆಗಳೆಂದು ದಿನಾ ತಕರಾರು ತೆಗೆಯುತ್ತಿದ್ದೆ. ಇವತ್ತು ಯಾವುದಕ್ಕೂ ಮನಸ್ಸಾಗದೇ ಸೀದಾ ಹೋಗಿ ಕಂಬಳಿ ಮೇಲೆ ಬಿದ್ದುಕೊಂಡೆ. ಹಿಂದೆಯೇ ಬಂದ ಮಾದೇವಿ ಮೇಲಿಂದೆರಡು ಕಂಬಳಿ ಮುಚ್ಚಿ ಬೆಂಕಿ ಹೆಚ್ಚಿಸಿದಳು. ಧಗೆಗೆ ಸ್ವೇದಗ್ರಂಥಿಗಳೆಲ್ಲ ಬಾಯ್ತೆರೆದು ಗುಳುಗುಳು ಉಗುಳತೊಡಗಿ ರೇಜಿಗೆಗಿಟ್ಟುಕೊಳ್ಳುವ ಹೊತ್ತಿಗೆ ಸರಿಯಾಗಿ ‘ಟಕ ಟಕ’ ಸದ್ದು ಹತ್ತಿರವಾಯ್ತು.
ಅಮ್ಮಮ್ಮ ಕೋಲೂರುತ್ತ ಬಂದಿರಬೇಕು, ಬೆಂಕಿ ಕಾಸಲು. ‘ಘನಾಕೆ ಬೆಂಕಿ ಕತ್ಸು ಮಾದೇವಿ. ಗಳಗಳ ಬೆವರಿಳಿಬೇಕು ನೋಡು’- ಪಕ್ಕದಲ್ಲಿ ಕುಳಿತುಕೊಂಡು ಕಂಬಳಿ ಮೇಲಿಂದಲೇ ನನ್ನ ಮೈ ತಡವಿದ ಅಮ್ಮಮ್ಮ, ‘ಬೆಂಗಳೂರಲ್ಲಿ ಚೊಲೋ ಕೆಲಸದಲ್ಲದೆ ನಮ್ಮನೆ ಮೊಮ್ಮಗಳು. ಹಡೆದ ಮೈ ಗಟ್ಟಿ ಆದ್ರೆ ನಾಳೆ ಕೆಲಸಕ್ಕೋಪದು ಸಸಾರ. ಸರೀ ಆರೈಸು ಅದ್ರನ್ನ’ ಎಂದಳು. ಅಕ್ಕರೆಯ ದನಿಗೆ ಆ ಧಗೆಯಲ್ಲೂ ತಂಗಾಳಿ ಬೀಸಿದಂತಾಯ್ತು.’ನಿನ್ನ ಮಗಳ ಪಂಚಾಯ್ತಿ ಮುಗಿತಿದ್ದಂಗೆ ಮಗಂದು ಶುರುವಾಗದೆ ಹೇಳಿ ಅಡಾಪಡಾ ಕೇಳ್ದೆ. ಯಂಥೇ ಅದು?’ ಸೊಂಟ ಕಾಸುತ್ತ ಅಮ್ಮಮ್ಮ ಕೆದಕಿದಳು.’ಥೋ, ಅಂವನ ಸುದ್ದಿ ಯಂಥ ಕೇಳ್ತ್ರಿ ಗೌರಮಾ. ಆವಾಗ ಮನ್ಯಾಗೆ ಇನ್ನೊಂದು ತಂಗಿ ಅದೆ, ಅದ್ರ ಮದೀ ಮಾಡು ಮದ್ಲು ಅಂದ್ರೂ ಕೇಳ್ದೇ ತಾನು ಮದೀಯಾದ. ಹುಡ್ಗಿ ಹೀಂಗದೆ ಹೇಳಿ ನಮಗ್ಯೆಂತಾ ಗೊತ್ತಿತ್ತನ್ರಾ’ ಅಳಲು ತೋಡಿಕೊಂಡಳು ಮಾದೇವಿ.’ಗಂಡುಹುಡ್ಗ’ ಸುಬ್ರಾಯನ್ನ ಮುದ್ದಿನಿಂದ ಸಾಕಿದ್ದಳು ಮಾದೇವಿ. ನನ್ನ ಕ್ಲಾಸಿನಲ್ಲಿ ಇದ್ದವ ಎಂಟನೆತ್ತಿಗೆ ಢುಮ್ಕಿ ಹೊಡ್ದು ಊರಲ್ಲೇ ಓಡಾಡಿಕೊಂಡಿದ್ದ. ಹೇಳಿದವರ ಮನೆಗೆ ನೆಟ್ಟಗೆ ಕೆಲಸಕ್ಕೆ ಹೋಗುತ್ತಿಲ್ಲ, ಗುಟ್ಕಾ ಜಗಿಯುತ್ತಾನೆ ಎಂದು ತಾಯಿ ಒಮ್ಮೆ ಜೋರು ಬಯ್ದಿದ್ದಕ್ಕೆ ಸಿಟ್ಟಾಗಿ ಕಿವಿಯೋಲೆ ಕದ್ದು ಓಡಿ ಹೋದವ ವರ್ಷದ ಮೇಲೆ ಖಾಲಿ ಕೈಯಲ್ಲಿ ವಾಪಸ್ಸಾಗಿದ್ದ.
ಹೊಸದಾಗಿ ಕಲಿತ ವಿದ್ಯೆಯೆಂದರೆ ಸಿನೆಮಾ ಷೋಕಿ, ಕುಡಿತ. ಆದರೂ ಮತ್ತೆಲ್ಲಿ ಓಡಿ ಹೋದಾನೋ ಎಂದು ಮಾದೇವಿ ತಣ್ಣಗೆ ಉಳಿದಿದ್ದಳು. ಸೊಸೈಟಿಯ ರಾತ್ರಿ ಕಾವಲುಗಾರನಾಗಿ ಸೇರಿಕೊಂಡರೂ ಸಂಪಾದನೆಯೆಲ್ಲ ಷೋಕಿಗೇ ಆಗುತ್ತಿತ್ತು. ಇದ್ದಿದ್ದರಲ್ಲಿ ದಡ ಹತ್ತಿದವಳೆಂದರೆ ಕಿರಿ ಮಗಳು ಸವಿತಾ. ಹತ್ತನೆತ್ತಿ ಮುಗಿಸಿ ಡೇರಿಯಲ್ಲಿ ಕ್ಯಾನು ತೊಳೆಯುವ, ಗುಡಿಸಿ ಒರೆಸುವ ಕೆಲಸಕ್ಕೆ ಸೇರಿ ಒಂಚೂರು ಸಂಪಾದಿಸುತ್ತಿದ್ದಳು.ಇಂತಿಪ್ಪ ಸುಬ್ರಾಯ ಏಕಾಏಕಿ ಒಂದಿನ ತನಗೊಂದು ಹುಡುಗಿ ಗೊತ್ತು ಮಾಡಿಕೊಂಡು ಬಂದ. ಕಿರಿ ತಂಗಿಯದಾಗಲಿ ತಡಿ ಎಂಬ ಹಿತವಚನಕ್ಕೆ ತಲೆ ಬಾಗದ್ದರಿಂದ ಮಾದೇವಿ-ಶಣ್ಯ ಮದುವೆಗೆ ಹೂಂಗುಟ್ಟಿದರು. ಸಂಭ್ರಮ ಇಳಿದ ಮೇಲೆ ಸೊಸೆಯೇ ಹೇಳಿದಳಂತೆ ತಾನು ಮದುವೆಗೆ ಮೊದಲೇ ಬಸುರಾಗಿ ಹೆತ್ತವಳು… ಮದುವೆ ದಿನ ‘ನಂಟರ ಹುಡ್ಗ’ ಎಂದು ಓಡಾಡಿಕೊಂಡಿದ್ದ ಪೋರ ತನ್ನ ಮಗ ಎಂದು. ಶುರುವಾಯಿತು ಸುಬ್ರಾಯನ ಪೌರುಷ ಪ್ರತಾಪ- ಹೊಡೆತ, ಬಡಿತ ಎಲ್ಲ. ಅವನ ಹೆಂಡತಿ ‘ತನ್ನದೇ ತಪ್ಪು’ ಎಂದು ತಿಂಗಳುಗಟ್ಟಲೇ ಸಹಿಸಿಕೊಂಡು ಇದ್ದಳಂತೆ. ಆದರೆ ಗ್ರಾಮದ ‘ಸ್ತ್ರೀ ಶಕ್ತಿ’ ಸಂಘದವರು ತಡೆಯಲಿಕ್ಕಾಗದೇ ಪೊಲೀಸ್ ಕಂಪ್ಲೇಂಟ್ ಕೊಟ್ಟು, ಪೋಲಿಸರು ಬಂದು ಸುಬ್ರಾಯನಿಗೆ ನಾಕು ತದುಕಿದ್ದಲ್ಲದೇ, ಕುಟುಂಬದ ಎಲ್ಲರೂ ಠಾಣೆಗೆ ಬಂದು ‘ಇನ್ನು ಹೀಂಗೆ ಮಾಡೋದಿಲ್ಲ’ ಎಂದು ಮುಚ್ಚಳಿಕೆ ಬರೆದುಕೊಡಬೇಕೆಂದು ತಾಕೀತು ಮಾಡಿದ್ದರಂತೆ. ಅದೇ ಸುದ್ದಿ ಅಮ್ಮಮ್ಮನಿಗೆ ವಿವರಿಸಿದ ಮಾದೇವಿ ‘ನಾಳೀಕೆ ಬ್ಯಳಿಗ್ಗೆ ಠಾಣೆಗೆ ಬರೂಕೆ ಹೇಳಿ ಹೋಗ್ಯಾವೆ’ ಎಂದಳು.
ಬೆವರೊರೆಸಿಕೊಂಡವಳು ಬಟ್ಟೆ ತೊಟ್ಟು ಬಂದು ಹಾಸಿಗೆ ಮೇಲೆ ಬಿದ್ದುಕೊಂಡೆ. ಜಗುಲಿಯಲ್ಲಿ ಅಮ್ಮ ಮಾದೇವಿಗೆ ಕವಳ ಕೊಡುತ್ತಿದ್ದವಳು, ‘ಹಂಗಾರೆ ನಾಳೆ ಮೀಸಲೆ ಬರುದಿಲ್ಲ ನೀನು, ಠಾಣೆ ಕಾಂಬಲೆ ಹೋಪವಳಿದ್ದೀಯೆ’ ಎಂದಳು.’ಅದಕ್ಕೆಂಥು? ಎಂಟು ಗಂಟಿಗೇ ಬತ್ನಿ. ಒಂಬತ್ತೂವರೆ ಬಸ್ಸಿಗೆ ಹೋದ್ರೂ ಆತದೆ ನಂಗೆ. ಠಾಣೆ ನೋಡದು ನನ್ ಹಣೆಬರದಾಗೆ ಇದ್ರೆ ಅಳ್ಚಕಾಗ್ತದ್ಯ’ ಕವಳ ಬಾಯಿಗೆ ಗಿಡಿಯುತ್ತ ಮಾದೇವಿ ಹೊರಟಳು.ಕೇಳುತ್ತಿದ್ದ ನನಗೆ ಬೆಳಿಗ್ಗೆ ಎಂಟು ಗಂಟೆಯೊಳಗೆ ಏಳಬೇಕಲ್ಲ ಎಂಬ ಚಿಂತೆ ಜೊತೆಗೆ ‘ಹಣೆಬರಾ ಅಳ್ಚಕಾಗ್ತದ್ಯ’ ಎಂಬ ಜಿಜ್ಞಾಸೆಯೂ ಮೂಡಿ ಸಿಕ್ಕಾಪಟ್ಟೆ ಸುಸ್ತೆನಿಸತೊಡಗಿತು. ‘ಸ್ಟ್ರೆಸ್ ಮ್ಯಾನೇಜ್ಮೆಂಟ’ನ್ನು ಮಾದೇವಿಯಿಂದಲೇ ಕಲಿತರೊಳ್ಳೆಯದೇನೋ.

('ಅವಧಿ.ಕಾಮ್'ನಲ್ಲಿ ಫೆಬ್ರವರಿ ೧೧, ೨೦೧೪ರಂದು ಪ್ರಕಟವಾದ ಲೇಖನ)

ಮಂಗಳವಾರ, ಜನವರಿ 14, 2014

ಏನಿಲ್ಲ... ಏನಿಲ್ಲ... ನನ್ನ ನಿನ್ನ ನಡುವೆ ವೆನಿಲ್ಲಾ...

ಒಂದು ಹತ್ತು ವರ್ಷಗಳ ಹಿಂದಿನ ಮಾತು. ನಮ್ಮ ಮಲೆನಾಡಿನಲ್ಲೆಲ್ಲ ವೆನಿಲ್ಲಾ ಮಾಯೆ ಅಮರಿಕೊಂಡಿದ್ದ ಹೊತ್ತು! ಕೆಜಿ ತೂಕದ ವೆನಿಲ್ಲಾ ಕ್ವಿಂಟಲ್ ಅಡಿಕೆಗಿಂತ ಜಾಸ್ತಿ ತೂಗುತ್ತಿದ್ದ ಕಾಲ. "ಇಂಥವರ ಮನೆಯಲ್ಲಿ ಇಂತಿಷ್ಟು ಕ್ವಿಂಟಲ್ ಅಡಿಕೆ ಆಗ್ತಡ" ಎಂಬ ಮಾತಿಗಿಂತ "ಇಂಥವರ ಮನೆಯಲ್ಲಿ ಇಷ್ಟು ಕೆಜಿ ವೆನಿಲ್ಲಾ ಆಗ್ತಡ" ಎಂಬುದಕ್ಕೆ ಹೆಚ್ಚು ತೂಕ ಇತ್ತು.
ಈ ವೆನಿಲ್ಲಾ ಹೆಂಗೆಂಗೋ ಇದ್ದವರನ್ನೆಲ್ಲ ಏನೇನೋ ಮಾಡಿಸಿತು. ತುಂಡು ಭೂಮಿ ಇಟ್ಟುಕೊಂಡು 'ಉಂಡರೆ ಉಡಲಿಲ್ಲ, ಉಟ್ಟರೆ ಉಣ್ಣಲಿಲ್ಲ' ಎಂದು ಬದುಕುತ್ತಿದ್ದವರೆಲ್ಲ ವೆನಿಲ್ಲಾ ದೇವಿಯ ಕೃಪೆಯಿಂದ ರಾಜರಾಗಿಹೋದರು. ವೆನಿಲ್ಲಾ ಸೋಡಿಗೆಯಂತೂ (ಬೀನ್, ಕೋಡು) ಸೈ, ಅದರ ಬುಡದ ದಂಟು ಕೂಡ ಮಂತ್ರ ದಂಡವಾಗಿ ಝಣ ಝಣ ಹಣ ಉದುರಿಸುತ್ತಿದ್ದ ಕಾಲ ಅದು. ಹೊಸದಾಗಿ ಬೆಳೆ ಬೆಳೆಯುವವರಿಗೆ ಕೂಳೆ ಮಾರಿಕೊಂಡೇ ಎಷ್ಟೋ ಜನ ಚೆನ್ನಾಗಿ ದುಡ್ಡು ಮಾಡಿದರು. ಅಂಗಳ-ಹಿತ್ತಲುಗಳಲ್ಲಿ, ಬೆಟ್ಟ, ಧರೆಗಳ ಮೇಲೆ... ಎಲ್ಲೆಲ್ಲೂ ಗಿಡದ ಗೂಟ, ಕಲ್ಲು ಕಂಬ ಎದ್ದು, ವೆನಿಲ್ಲಾ ಬಳ್ಳಿಯನ್ನು ಹೊದ್ದವು. ಹಿಂದೆ ಕಾಳುಮೆಣಸಿನ ಬಳ್ಳಿ ಸುತ್ತಿದ್ದ ಅಡಿಕೆ ಮರಗಳಿಗೆಲ್ಲ ಹೊಸದಾಗಿ ವೆನಿಲ್ಲಾ ಬಳ್ಳಿಯಪ್ಪುಗೆ.
ಮಧ್ಯ ಅಮೇರಿಕಾ ದೇಶಗಳಲ್ಲಿ, ಮೂಲತಃ ಇಂದಿನ ಮೆಕ್ಸಿಕೋದಲ್ಲಿ ಮೊದಲು ಬಳಕೆಯಾದ ವೆನಿಲ್ಲಾ ಒಂದು ತರಹದ ಸೀತಾಳೆ (ಆರ್ಕಿಡ್) ಸಸ್ಯ. ಇದರ ಸೋಡಿಗೆ ಆಹಾರದಲ್ಲಿ ಬಳಕೆಯಾಗುವ ಪರಿಮಳದ ಮೂಲ. ಇದು ಸೋಡಿಗೆ ಎಂದು ಕರೆಸಿಕೊಂಡರೂ ವಾಸ್ತವದಲ್ಲಿ ದ್ವಿದಳ ಸಸ್ಯಗಳ ಸೋಡಿಗೆಗಿಂತ ಭಿನ್ನ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಡೋನೇಶಿಯಾ, ಮಡಗಾಸ್ಕರ್, ಚೀನಾ, ಮೆಕ್ಸಿಕೋ ಅತಿ ಹೆಚ್ಚು ವೆನಿಲ್ಲಾ ಉತ್ಪಾದಿಸುವ, ರಫ್ತು ಮಾಡುವ ದೇಶಗಳು. ಭಾರತದಲ್ಲಿ ಮೊದಮೊದಲು ಕೇರಳ, ದಕ್ಷಿಣ ಕನ್ನಡದ ಕೆಲ ಭಾಗಗಳಲ್ಲಿ, ತೀರ್ಥಹಳ್ಳಿಯ ಪುರುಷೋತ್ತಮ ರಾಮ್ ಅವರಂಥದ ಪ್ರಗತಿಪರ ಕೃಷಿಕರ ತೋಟದಲ್ಲಿ ಬೆಳೆಯುತ್ತಿದ್ದ ವೆನಿಲ್ಲಾ ೧೯೯೫ರ ಇಸ್ವಿಯ ಆಸುಪಾಸು ಬೆಲೆ ಮುಗಿಲು ಮುಟ್ಟುತ್ತಿದ್ದಂತೆಯೇ ಪಶ್ಚಿಮ ಘಟ್ಟ ಪ್ರದೇಶಗಳ ತೋಟದೊಳಗೆಲ್ಲಾ ಪ್ರವೇಶ ಮಾಡಿತು, ನಮ್ಮ ಉತ್ತರ ಕನ್ನಡಕ್ಕೂ ಬಂತು.
ನೆಟ್ಟ ದುಡ್ಡಿನ ಬಳ್ಳಿ ಬೇರೂರುತ್ತಿದ್ದಂತೆಯೇ ಜನರ ದಿನಚರಿಯೂ ಬದಲಾಯಿತು. ಬೆಳ್ಳಂಬೆಳಿಗ್ಗೆ ಮೊದಲು ಆಸ್ರಿಗೆ ಕುಡಿದು, ಕೈಯಲ್ಲಿ ಒಂದು ಕತ್ತಿ ಹಿಡಿದು ಅಡಿಕೆ ತೋಟಕ್ಕೆ ತೆರಳುತ್ತಿದ್ದ ತೋಟಿಗರೆಲ್ಲ ಎಲ್ಲಾ ಕೆಲಸ ಬಿಟ್ಟು, 'ಥೋ, ಸೂರ್ಯನ ಬೆಳಕು ಬೀಳದ್ರೊಳಗೆ ಪಾಲಿನೇಷನ್ ಮಾಡವು' ಎನ್ನುತ್ತ ವೆನಿಲ್ಲಾ ಚಪ್ಪರಗಳಿಗೆ ದೌಡಾಯಿಸತೊಡಗಿದರು. (ಇದಕ್ಕೆ ಕೃತಕ ಪರಾಗ ಸ್ಪರ್ಷ ಬೇಕು). ಮುರುಗಲು, ಉಪ್ಪಾಗೆ ಸಿಪ್ಪೆಗಳನ್ನು ಹೊಡತಲ (ಅಗ್ಗಿಷ್ಟಿಕೆ) ಹೊಗೆಯಲ್ಲಿ, ಕಾಳುಮೆಣಸು, ಏಲಕ್ಕಿಗಳನ್ನು ಬಿಸಿಲಿನಲ್ಲೋ ಕೆಂಡದ ಕಾವಿನಲ್ಲೋ ಒಣಗಿಸುತ್ತಿದ್ದ ಜನ ವೆನಿಲ್ಲಾಗಾಗಿ ವಿಶೇಷ ಡ್ರೈಯರ್ ಕಟ್ಟಿದರು. ಮಾಮೂಲಿಯಾಗಿ ಏಲಕ್ಕಿ, ವಿಶೇಷ ಸಂದರ್ಭದಲ್ಲಿ ಕೇಸರಿಯ ದೋಸ್ತಿ ಮಾಣುತ್ತಿದ್ದ ಪಾಯಸ, ಲಾಡು, ಪೇಡೆಗಳು ಬದಲಾದ ಕಾಲಕ್ಕೆ ತಕ್ಕಂತೆ 'ವೆನಿಲ್ಲಾ' ಎಂಬ ಕಪ್ಪು ಸುಂದರಿಯ ಸಖ್ಯ ಶುರು ಮಾಡಿಕೊಂಡವು.
ಮಾತುಕತೆಗೆ ಕುಂತಾಗ 'ಯಮ್ಮಲ್ಲಿ ಇಂತಿಷ್ಟು ಕೆಜಿ ವೆನಿಲ್ಲಾ ಆಗ್ತು' ಎಂಬ ಹೆಗ್ಗಳಿಗೆಯ ಹೇಳಿಕೆಗಳು, 'ಅವರ್ ಮನೆಲ್ಲಿ ಈ ಸಲ ಭಾರಿ ವೆನಿಲ್ಲಾ ಆಜಪ್ಪಾ' ಎಂಬ ಅರೆ ಅಸೂಯೆಯ, ಚೂರು ಮೆಚ್ಚುಗೆಯ ಮಾತುಗಳು ಕುಶಲೋಪರಿ ವಿಚಾರಣೆಯಷ್ಟೇ ಸಾಮಾನ್ಯವಾದವು. ಕೆಲವೆಡೆ ಒಟ್ಟು ಕುಟುಂಬದಲ್ಲಿ ಮನೆಯ ಮೂಲ ಧನ-ಜಾಗ-ಗೊಬ್ಬರ, ಮನೆಯದೇ ಲೆಕ್ಕದಲ್ಲಿ ಆಳು ಪಡೆದ ಜನ, 'ವೆನಿಲ್ಲಾ ಉತ್ಪನ್ನ ಯನ್ನದು!' ಎಂದು ಹೇಳಿ ಪ್ರತ್ಯೇಕ ಖಾತೆಯಲ್ಲಿ ದುಡ್ಡು ಜಮಾಯಿಸತೊಡಗಿದರು. ಮೊದಲೆಲ್ಲ ಮನೆಯ ಎಲ್ಲ ಸದಸ್ಯರಿಗೆ ಒಟ್ಟಾಗಿ ಆಭರಣ ಮಾಡಿಸುತ್ತಿದ್ದ ಕೂಡು ಕುಟುಂಬಗಳಲ್ಲಿ ಈಗ ಇದ್ದಕ್ಕಿದ್ದಂತೆ ಕೆಲವರ ಮೈಮೇಲೆ 'ವೆನಿಲ್ಲಾ ಚಿನ್ನ' ಅರಳಿ ಅಸಹನೆಯ ನಾತ ನಾರಲಾರಂಭಿಸಿತು.
ಎಷ್ಟೋ ಕಡೆ ಮನೆಗೆ ಬರುವ ನೆಂಟರೆಲ್ಲ 'ನಿಮ್ಮನೆ ವೆನಿಲ್ಲಾ ಪ್ಲಾಟ್ ಭಾರಿ ಇದ್ದಡಾ, ನೋಡಕಾತು' ಎಂದು ಕೋರುವುದು, ಆತಿಥೇಯರು ಮನೆ ತೋರಿಸಿದಷ್ಟೇ ಸಲೀಸಾಗಿ 'ಬನ್ನಿ, ಯಮ್ಮನೆ ವೆನಿಲ್ಲಾ ನೋಡಲಕ್ಕು' ಎಂದು ಆಹ್ವಾನಿಸುವುದು ಅತಿಥಿ ಸತ್ಕಾರದ ಭಾಗವಾದವು. ಹಲವೆಡೆ ಹಳೆ ಕಾಲದಿಂದ ಬಂದು ಹೋಗಿ ಮಾಡುತ್ತಿದ್ದ ವಿಶ್ವಾಸದ ಜನರೂ ಎಲ್ಲೋ ಕ್ಷಣಿಕ ಆಸೆಗೆ ಬಿದ್ದು ಗುರ್ತದವರ ಮನೆಯಲ್ಲಿ ಐದೋ, ಆರೋ ಸೋಡಿಗೆ ಕದಿಯಲು ಹೋಗಿ 'ಅಡಿಕೆಗೆ ಹೋಗದ ಮಾನವನ್ನು ವೆನಿಲ್ಲಾದಲ್ಲಿ ಕಳಕೊಂಡರು'. ಇಂಥ ಪ್ರಕರಣಗಳು ಪದೇ ಪದೇ ವರದಿ ಆಗತೊಡಗಿದಂತೆ ಶಿರಸಿ, ಸಿದ್ದಾಪುರಗಳಂಥ ಪೇಟೆಗಳ ಜನರ ಗಮನವೂ ಇತ್ತ ತಿರುಗಿ, ಎಷ್ಟೋ ಮಂದಿ ತಂತಮ್ಮ ಪೇಟೆ ಮನೆಯ ತಾರಸಿ ಮೇಲೆ ವೆನಿಲ್ಲಾ ಚಪ್ಪರ ಬೆಳೆಸಿ ದುಡ್ದು ಕೊಯಿಲು ಮಾಡಿದರು. ಇನ್ನು ಕೆಲವು ಪುಂಡರು ಸಮೀಪದ ಹಳ್ಳಿಗಳಿಗೆ ಸದ್ದಿಲ್ಲದೇ ಹೋಗಿ, ವೆನಿಲ್ಲಾ ಕದ್ದು ಬರುವ ಪರಿಪಾಟ ಮಾಡಿಕೊಂಡರು, ಸಿಕ್ಕಿಬಿದ್ದು ಹೊಡೆತ ತಿಂದರು.
ಮಜವೆಂದರೆ ನಾನು ಗಮನಿಸಿದ ಪ್ರಕಾರ ನನ್ನ ಮದುವೆಯಲ್ಲಿ ದಿಬ್ಬಣದವರು ಮದುಮಗಳಿಗಿಂತ ಹೆಚ್ಚು ಆಸಕ್ತಿಯಿಂದ ನೋಡಿದ್ದು ನಮ್ಮನೆಯಲ್ಲಿ ಬೆಳೆದ ವೆನಿಲ್ಲಾ ಬಳ್ಳಿಗಳನ್ನು! ಕರಿ (ಮದುವೆ) 'ಕೂಸಿ'ಗಿಂತ ಕರಿ ಸೋಡಿಗೆಯ ನೋಟವೇ ಸೊಗಸು ಎಂಬ ತೀರ್ಮಾನಕ್ಕೆ ಬಂದಿದ್ದರೋ ಅಥವಾ ಮದುವೆ ಚಪ್ಪರದ ಸ್ವೇದ ಗಂಧಕ್ಕಿಂತ, ಸೀತಾಳೆ (ವೆನಿಲ್ಲಾ) ಚಪ್ಪರದಡಿಯ ಸಿಹಿ ವಾಸನೆಯೇ ಆಪ್ಯಾಯಮಾನಮಾನವಾಗಿತ್ತೋ, ನಾನು ಕೇಳುವ ಸಾಹಸ ಮಾಡಲಿಲ್ಲ. ಆದರೆ ಹೊಸದಾಗಿ ಹೋದ ಗಂಡನ ಮನೆಯಲ್ಲಿ ನಾಲ್ಕು ಜನ ಕೂತು 'ಬೀಗರ ಮನೆಲ್ಲಿ ಭರ್ಜರಿ ವೆನಿಲ್ಲಾ ಪ್ಲಾಟ್ ಮಾಡಿದ್ದ' ಎನ್ನುವುದನ್ನು ಕೇಳಿದಾಗೆಲ್ಲಾ ನನಗೆ ಮದುವೆ ಮನೆಯಲ್ಲಿನ ವೈರುಧ್ಯ ನೆನಪಾಗಿ ನಗು ಬರುತ್ತಿದ್ದುದು ಸುಳ್ಳಲ್ಲ.
ಇಂತಿಪ್ಪ ವೆನಿಲ್ಲಾ ಮುಗಿಲೇರಿ ಕುಂತಿದ್ದು, ಮೆರೆದಿದ್ದು ಒಂದು ನಾಲ್ಕು ವರ್ಷ ಮಾತ್ರ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ವೆನಿಲ್ಲಾಕ್ಕೆ ಬೆಲೆ ಏರಿದಷ್ಟೇ ಸುಲಭವಾಗಿ ಕುಸಿದೂ ಹೋಯಿತು. ಲಾಭದ ಆಸೆಗೆ ಬಿದ್ದ ಒಂದಷ್ಟು ಜನ ಸರಿಯಾಗಿ ಸೋಡಿಗೆಯ ವರ್ಗ ವಿಂಗಡನೆ ಮಾಡದೆ ಮಾರುಕಟ್ಟೆಗೆ ಬಿಟ್ಟಿದ್ದು, ಕಲಬೆರಕೆ ಮಾಡಿದ್ದು... ಒಳ್ಳೆಯ ರೈತರ ಸಂಪಾದನೆಗೂ ಮಣ್ಣು ಹಾಕಿತು. ಮುಚ್ಚಟೆಯಿಂದ ಬೆಳೆದು, ಸಂಸ್ಕರಿಸಿ ಇಟ್ಟಿದ್ದ ಕಟ್ಟು ಕಟ್ಟು ವೆನಿಲ್ಲಾ ಕೊಳ್ಳುವವರಿಲ್ಲದೇ ಮುಗ್ಗತೊಡಗಿದಾಗ ಬೆಳೆಗಾರರು ಕಂಗೆಟ್ಟರು. ಹೊಸತಾಗಿ ಚಾಲ್ತಿಗೆ ಬಂದಿದ್ದ ಬೆಳೆಯಾಗಿದ್ದರಿಂದ ಅದರ ಪರ್ಯಾಯ ಬಳಕೆಯಾಗಲಿ, ಮಾರುಕಟ್ಟೆ ತಂತ್ರವಾಗಲೇ ಬಹುತೇಕರಿಗೆ ತಿಳಿದಿರಲಿಲ್ಲ. ವೆನಿಲ್ಲಾ ಅಬ್ಬರದಲ್ಲಿ ತೋಟದಲ್ಲಿ ತಲೆಮಾರಿನಿಂದ ಬೆಳೆದುಕೊಂಡು ಬಂದಿದ್ದ ಏಲಕ್ಕಿ, ಕಾಳುಮೆಣಸಿಂಥ ಉಪಬೆಳೆಗಳನ್ನು ಮರೆತಿದ್ದ ಜನ ನಿಧಾನವಾಗಿಯಾದರೂ ಎಚ್ಚೆತ್ತು ಮತ್ತೆ ಅವುಗಳ ಬುಡಕ್ಕೆ ಮಣ್ಣು, ಗೊಬ್ಬರ ಹೊರಲಾರಂಭಿಸಿದರು. ಏಲಕ್ಕಿ ಪಾಯಸಕ್ಕೆ ಮರಳಿದ್ದಷ್ಟೇ ಅಲ್ಲ, ಹೊಸದಾಗಿ ಡ್ರೈಯರಿನಲ್ಲೂ ಜಾಗ ಪಡೆದುಕೊಂಡಿತು.

ಮೊನ್ನೆ ಜೂನಿನಲ್ಲಿ, ತುಂಬಾ ಸಮಯದ ನಂತರ ಊರಿಗೆ ಹೋದಾಗ ಅಲ್ಲಿ ಇಲ್ಲಿ ತೋಟ ಸುತ್ತಾಡುತ್ತಿದ್ದೆ. ಅಡಿಕೆ ಮರಗಳಿಗೆ ಸುತ್ತಿದ್ದ ಕಾಳು ಮೆಣಸಿನ ಬಳ್ಳಿಗಳ ಮಧ್ಯೆ ಸ್ಯಾಂಪಲ್ಲಿಗೆ ಕೂಡ ಒಂದು ವೆನಿಲ್ಲಾ ಬಳ್ಳಿ ಕಾಣದು. ಕೆಲವೆಡೆ ಹಿಂದೆ ಚಪ್ಪರ ಇದ್ದ ಜಾಗದಲ್ಲಿ ಬೋಳು ಬೋಳು ಕಲ್ಲು ಕಂಬಗಳ, ಗೂಟಗಳ ಸಾಲು ಇಂದೋ ನಾಳೆಯೋ ಬುಡಮೇಲಾಗುವುದಕ್ಕೆ ಕಾಯುತ್ತ ನಿಂತಿದ್ದರೆ, ಇನ್ನು ಹಲವೆಡೆ ಆಗಲೇ ಎರಡಡಿ ಎತ್ತರದ ಅಡಿಕೆ ಸಸಿಯ ಸಾಲುಗಳು ಎದ್ದಿವೆ. ಕೆಲವೊಂದು ಕಡೆ ಮಾತ್ರ ವೆನಿಲ್ಲಾ ಬುಡ ಕಿತ್ತ ನಂತರದ ಕುಣಿ ಹಾಗೆಯೇ ಬಾಯ್ತೆರೆದು ನಿಂತಿದೆ, 'ವೆನಿಲ್ಲಾ ದುಡ್ಡು' ತುಂಬು ಸಂಸಾರಗಳಲ್ಲಿ ತೋಡಿದ ಕಂದರದಂತೆಯೇ!

('ಅವಧಿ.ಕಾಮ್'ನಲ್ಲಿ ಡಿಸೆಂಬರ್ ೪, ೨೦೧೩ರಂದು ಪ್ರಕಟವಾದ ಲೇಖನ)