ಶುಕ್ರವಾರ, ಸೆಪ್ಟೆಂಬರ್ 6, 2013

ಮೌನದ ಮನವಿ

ಎಲ್ಲಿ ಅಡಗಿರುವೆ ಸ್ವರ
ಮೆಲ್ಲಗೆ ಮರೆಯಾಗಿ
ಕಲ್ಲಾಗಿದೆ ಕೊರಳು
ಸೊಲ್ಲೆತ್ತಲೂ ಬರದೆ

ಮನ್ನಿಸು ಅಸಡ್ಡೆಯನು
ಬಿನ್ನಹದ ಉಪೇಕ್ಷೆಯನು
ನಿನ್ನಿರುವ ಮರೆತು
ಬೆನ್ನು ತೋರಿದ ತಪ್ಪನು

ಮತ್ತಿನ ಮಬ್ಬಿನಲಿದ್ದೆ
ಕತ್ತಲೆಯ ಹೊದ್ದಿದ್ದೆ
ಚಿತ್ತದ ನುಡಿ ಲೆಕ್ಕಿಸದೆ
ಮೆತ್ತಗೆ ಮುಸುಕೆಳೆದಿದ್ದೆ

ಭ್ರಮೆ ಚದುರಿ ಬಯಲಾಗೆ
ಕಮರಿತ್ತು ದನಿ ಟಿಸಿಲು
ಅಮಾವಾಸ್ಯೆಯ ನಭದಂತೆ
ಜಮೆಯಾದ ಕಾರ್ಮುಗಿಲು

ಇಲ್ಲೀಗ ಗದ್ದಲ, ಎಲ್ಲೆಲ್ಲೂ ಸಪ್ಪಳ
ಚೆಲ್ಲಿ ತುಳುಕಿದೆ ಕರ್ಕಶ ರವ
ಒಲ್ಲೆ ಈ ಗೌಜು, ನಿಲ್ಲದ ಮೋಜು
ಮೆಲ್ಲುಲಿಗೆ ಕಿವಿಯಾಗಿ ಕಾದಿದೆ ಜೀವ

ಬಿಕ್ಕುತಿಹೆ ಬೇಡುತಿಹೆ ಪ್ರೀತಿಯಲಿ ಬೈಯುತಿಹೆ
ಸಿಕ್ಕು ನೀ ಬೇಗ, ಕಣ್ಣಂತೆ ಕಾಯುವೆ
ಸುಕ್ಕಿದ ಚೇತನಕೆ ತುಸು ಕಸುವು ತುಂಬುವೆ
ಅಕ್ಕರೆಯಲಿ ಆದರಿಸಿ ಬೆನ್ನಾಗಿ ನಿಲ್ಲುವೆ
(ಅವಧಿ.ಕಾಮ್ ನಲ್ಲಿ ಪ್ರಕಟವಾದ ಕವನ)
ನಮ್ಮ ನಿಮ್ಮ ನಡುವಿನ ಮಹಾನ್ 'ಕಥೆ'ಗಾರರು!

ಇಲ್ಲ, ನಾನು ಮಾಸ್ತಿ, ಕೆ. ಸದಾಶಿವ, ಲಂಕೇಶ, ವೈದೇಹಿ ಇವರ ಬಗ್ಗೆ ಹೇಳುತ್ತಿಲ್ಲ, ಓ. ಹೆನ್ರಿ, ಚೆಕಾವ್‌ರ ಬಗ್ಗೆಯೂ ಅಲ್ಲ. ಅವರೆಲ್ಲಾ ಭಾರಿ ಎತ್ತರಕ್ಕೆ, ಅಗಲಕ್ಕೆ ಬೆಳೆದವರು. ನಾನು ಕೈ ಚಾಚಿದ್ದು ಹೋಗಲಿ, ಉದ್ದದ ದೋಟಿ ಹಿಡಿದು ಕುಪ್ಪಳಿಸಿದರೂ ಅವರ ಕಥನ ಕುಸುಮ ಕೈಗೆ ಸಿಗುವುದಿಲ್ಲ. ಏನಿದ್ದರೂ ಪರಿಮಳ ಮಾತ್ರ ಆವರಿಸಿಕೊಳ್ಳುತ್ತದೆ. 

ನನಗೆ ಸಿಗುವುದೇನಿದ್ದರೂ ಇಲ್ಲೇ ಅಕ್ಕ-ಪಕ್ಕ ಇರುವ, ನಮ್ಮಲ್ಲಿನ 'ನ, ಮ, ಮವತ್ತು' ಎಲ್ಲ ಆಗಿರುವ ಸಾಮಾನ್ಯ ಜನರು. ನಮ್ಮೊಳಗಿನ ಅಸಾಧಾರಣ ಕಥೆಗಾರರು! ಅಷ್ಟೋ, ಇಷ್ಟೋ ಶಿಕ್ಷಣ, ಒಂದು ಕೆಲಸ, ಒಂದಷ್ಟು ಜವಾಬ್ದಾರಿ, ಸಂ-ಸಾರ, ಬಂಧು-ಬಳಗ... ಇವರ ಬಯೋಡೇಟಾ. ಬಾಯ್ತುಂಬ ನಗು, ಚೂರು ಹಾಸ್ಯಪ್ರಜ್ಞೆ, ಅದನ್ನು ಮಾತಿಗೆ ಬಗ್ಗಿಸುವ ಕಲೆಗಾರಿಕೆ.... ಅವರ ಆಸ್ತಿ. ಇವರ ಕಥೆ ಅಕ್ಷರಗಳಲ್ಲಿ ಅರಳುವುದಿಲ್ಲ. ಕಿವಿಯಲ್ಲಿ ತೂರಿಕೊಂಡು ಸೀದಾ ಮೆದುಳಿಗೆ ಹೋಗಿ, ಅಲ್ಲಿನ ಬಿಗಿದುಕೊಂಡ ನರತಂತುಗಳನ್ನೆಲ್ಲಾ ಸಡಲಿಸಿ, ಬೆಚ್ಚನೆಯ ಮಸಾಜ್ ಮಾಡಿ, ಅಲ್ಲಿಂದಲೇ ಒಂದು ಸಿಗ್ನಲ್ ಕೊಟ್ಟು, ಬಾಯಗಲಿಸಿ, ಕೆನ್ನೆ ಅರಳಿಸಿ, ಹಲ್ಲು ಕಿರಿಸಿ, ಕಣ್ಣು ಕಿರಿದಾಗಿಸಿ.... ನಗಲು ಏನೇನು ಬೇಕೋ ಎಲ್ಲ ಮಾಡುತ್ತದೆ. ಮನವನ್ನು ಹಗುರ ಹತ್ತಿಯನ್ನಾಗಿಸುತ್ತದೆ. 
ಹಳ್ಳಿಗಳಲ್ಲಿ ಮದುವೆ, ಮುಂಜಿ, ಶ್ರಾದ್ಧ, ಸಮಾರಾಧನೆಗಳಲ್ಲಿ ಹತ್ತು ಜನ ಸೇರಿದಾಗ ಇಂಥ ಒಬ್ಬವರಿದ್ದರೆ ಪುಕ್ಕಟೆ ಸಮಯಾಲಾಪ. ಅಲ್ಲಿ ಮದುವೆಯೋ, ಉಪನಯನವೋ ಒಂದು ಕಾರ್ಯ ನಿಶ್ಚಯವಾಯಿತೆಂದರೆ ಅದನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ಮನೆಯವರದು, ಬಂಧುಗಳದು, ಊರವರದು. ಬುಕ್ ಮಾಡಿದರೆ ಆಯಾ ಹೊತ್ತಿಗೆ ಬಂದು ಪಟಪಟ ಕೆಲಸ ಮುಗಿಸಿ, ನಿರ್ವಿಕಾರದಿಂದ ದುಡ್ಡು ಎಣಿಸಿಕೊಂಡು ಹೋಗುವ ಜನ ಅವರಲ್ಲ. ಎರಡು ದಿನ ಇರುವಾಗಲಿಂದಲೇ ಬರುತ್ತ, ಹೋಗುತ್ತ 'ಏನಾದರೂ ಕೆಲ್ಸ ಇದ್ರೆ ಮುದ್ದಾಂ ಹೇಳಿ' ಎಂದು ವಿಚಾರಿಸುವ, ಊಟಕ್ಕೆ ಬೇಕಾಗುವ ಬಾಳೆಎಲೆ ಸಂಸ್ಕರಿಸಿ, ಅಂಗಳ ಅಲಂಕರಿಸಿ, ಮಂಟಪ, ಮೇಲ್ಗಟ್ಟು ಕಟ್ಟಿಕೊಡುವ, ಅಡುಗೆಗೆ ತರಕಾರಿ ಹೆಚ್ಚಿಕೊಟ್ಟು, ಕಾಯಿ ತುರಿದು, ಲಾಡು ಕಟ್ಟಿ, ಹೋಳಿಗೆ ಬೇಯಿಸಿ.... ಎಲ್ಲ ಕೆಲಸಕ್ಕೂ ಸೈ ಎನ್ನುವ ಜನ. ಇಂಥ ಹತ್ತಾರು ಕೆಲಸ, ಅದೂ ಪರಿಚಯದ ಜನರ ನಡುವೆ ಒಣ ಮೌನದಲ್ಲಿ ನಡೆಯುತ್ತದೆಯೇ? ಭರಪೂರ ಮಾತು, ತಮಾಷೆ, ತರಲೆ, ಮಧ್ಯದಲ್ಲಿ ಅವಲಕ್ಕಿ-ಚಾ ಫಳಾರ..... ಮೇಲಿಂದ ಹಂಚು ಹಾರಿಸುವಷ್ಟು ನಗೆ. 
ಇವರ ಕಥೆಗೊಂದು ದೊಡ್ಡ ಸುದ್ದಿ ಬೇಕಿಲ್ಲ. ಯಾರೋ ಒಬ್ಬ ಜಾರಿ ಬಿದ್ದ ಜಾಣ, ಎಡವಟ್ಟು-ಎಚ್ಚರಗೇಡಿ, ಯಾವುದೋ ಕಾರ್ಯಕ್ರಮದ ವ್ಯವಸ್ಥೆ-ಅವ್ಯವಸ್ಥೆ, ಪ್ರವಾಸ-ಪ್ರಯಾಸ... ಕೊನೆಗೆ ಆಸ್ಪತ್ರೆಯಾತ್ರೆ, ತಪ್ಪಿಸಿಕೊಂಡ ಆಕಳು, ಸೇತುವೆ ಮೇಲೆ ಹರಿದ ನೀರು.... ಎಲ್ಲವೂ ಕುತೂಹಲ ಹುಟ್ಟಿಸುವ ವಿಷಯವೇ. ಅಪಘಾತ, ಪ್ರೇಮ ಪ್ರಸಂಗಗಳಂತೂ ಭಾರಿ ಆಕರ್ಷಣೆಯ ವಿಷಯಗಳು. ಕೆಲಸ ಮಾಡುತ್ತಿರುವಾಗ, ಊಟ-ಆಸ್ರಿಗೆ ಮುಗಿಸಿ ಕವಳ (ಎಲಡಿಕೆ) ಹಾಕಿಕೊಂಡು ಕುಂತಾಗ, ಇಸ್ಪೀಟ್ ಮಂಡಲಗಳ ಮಧ್ಯದಲ್ಲಿ ಒಬ್ಬ ಮಾತುಗಾರ 'ಆಮೇಲೆ, ಆ .... ಸುದ್ದಿ ಗೊತ್ತಾ' ಎಂದು ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ ಸುತ್ತ ಕುಂತ ಹತ್ತು ಜನ ಇತ್ತ ತಿರುಗಿ, 'ಹಾಂ, ಹೌದು ಮಾರಾಯ, ಆ ಸುದ್ದಿ ಹೇಳೋ' ಎಂದು ಆ ವಿಷಯ ಮಂಡನೆಯನ್ನು ಅನುಮೋದಿಸುತ್ತಾರೆ. ಕಥೆಯ ಮೋಡಕ್ಕೆ ಕೇಳುಗರು ಗಾಳಿ ಊದುತ್ತಿದ್ದಂತೆಯೇ ಭರಭರ ಮಾತಿನ ಮುಸಲಧಾರೆ! 
ಕಡಿಮೆ ಮಾತಿನ ಜನವಾಗಿದ್ದರೆ 'ಬಸ್ ಸ್ಕಿಡ್ ಆಗಿ ರಸ್ತೆಯಂಚಿನ ಕಾಲುವೆಗೆ ಹೋಗಿ ನಿಂತಿತಂತೆ, ನಾಲ್ಕೈದು ಜನಕ್ಕೆ ಗಾಯವಾಯ್ತಂತೆ' ಎಂದೋ, 'ಭಟ್ರ ಮಗಳು ಕ್ರಿಶ್ಚಿಯನ್ ಹುಡುಗನ ಜೊತೆ ಓಡಿ ಹೋಗಿ ಮದುವೆ ಆದ್ಲಂತೆ' ಎಂದೋ ಒಂದೆರಡು ವಾಕ್ಯಗಳಲ್ಲಿ ಹೇಳಿ ಮುಗಿಸುವ ವಿಷಯವನ್ನು ಇವರು ಬರೋಬ್ಬರಿ ಎರಡು ತಾಸು ಹೇಳಬಲ್ಲರು. ಅಪಘಾತವಾದ ಬಸ್ ಹಿಂದಿನ ಟ್ರಿಪ್‌ಗೆ ಎಲ್ಲಿಗೆ ಹೋಗಿತ್ತು ಎಂಬಲ್ಲಿಂದ ಶುರುವಾದರೆ- ಎಷ್ಟು ಹೊತ್ತಿಗೆ ಪೇಟೆಯಿಂದ ಹೊರಟಿತು, ಅದಕ್ಕೂ ಮೊದಲು ಚಾಲಕ ಏನೇನು ಮಾಡಿದ, ಬಸ್‌ನಲ್ಲಿ ಯಾರ್ಯಾರು ಎದ್ದರು, ಅವರು ಏನೆಲ್ಲಾ ಕಾರಣಕ್ಕೆ ಪೇಟೆಗೆ ಹೋಗಿದ್ದರು, ರಶ್ ಇತ್ತೇ, ಇದ್ದರೆ ಏಕೆ, ಇರಲಿಲ್ಲವೇ- ಅದು ಏಕೆ, ಅವತ್ತು ಸೆಖೆ ಇತ್ತೇ, ಮೋಡಗಟ್ಟಿತ್ತೇ..... ಕಥಾನದಿಗೆ ಸೇರಿಕೊಳ್ಳುವ ಹಳ್ಳ-ಕೊಳ್ಳಗಳು ಅಪಾರ. ಒಂದೊಂದು ಹಳ್ಳ ಸೇರಿಕೊಂಡಾಗಲೂ ಹರಿವು ಹಿರಿದಾಗುತ್ತ ಭೋರ್ಗರೆಯತೊಡಗುತ್ತದೆ. ಕಥೆ ಶುರುವಾಗಿ ಮುಕ್ಕಾಲು ಗಂಟೆಯಾದರೂ ಬಸ್ ಇನ್ನೂ ಅಪಘಾತ ಆಗಲಿರುವ ಜಾಗಕ್ಕೆ ಬಂದಿರುವುದಿಲ್ಲ. ಎರಡೆರಡು ನಿಮಿಷಕ್ಕೊಮ್ಮೆ 'ಆಮೇಲೇನು ಆಯ್ತು ಗೊತ್ತಾ', 'ನಿಮ್ಗೆ ಹೇಳ್ಬೇಕು ಅಂದ್ರೆ', 'ನಿಮಗೆ ಗೊತ್ತಿದೆಯೋ ಇಲ್ವೋ'....ಗಳಂಥ ಸ್ಪೀಡ್ ಬ್ರೇಕರ್‌ಗಳನ್ನು ಬಳಸುವುದರಿಂದ ಕಥೆ ನಾಗಾಲೋಟ ಸಾಗುವುದು ಕಷ್ಟವೇ. 
ಹಾಗೆಯೇ ಪಕ್ಕದೂರಿನ ಹುಡುಗಿಯ/ಹುಡುಗನ ಪ್ರೇಮ ಪ್ರಸಂಗವನ್ನು ಕೇಳುತ್ತ ಕುಳಿತವರಿಗೆ ಕಥೆಯ ಜೊತೆ ಬೋನಸ್ ಆಗಿ ಆಕೆಯ/ಆತನ ಜೋಡಿ ಯಾರು, ಅವನ/ಳ ಹಿನ್ನೆಲೆ ಏನು, ಅವರ ಸ್ನೇಹಿತೆ/ತರ್‍ಯಾರು, ಅವರ್‍ಯಾರಾದರೂ ಹೀಗೆಯೇ ಪ್ರೇಮಪಾಶದಲ್ಲಿ ಸಿಕ್ಕಿಕೊಂಡಿದ್ದಾರೆಯೇ, ಇದ್ದರೆ ಯಾರ ಜೊತೆ, ಅವರ ಮನೆಯಲ್ಲಿ, ಮನೆತನದಲ್ಲಿ ಬೇರೆ ಯಾರಿಗಾದರೂ ಹೀಗೆ ಹೂಬಾಣ ಹೊಡೆದಿತ್ತೇ, ಅವರು ಆಮೇಲೆ ಯಾರನ್ನು ಮದುವೆಯಾದರು... ಇಂಥ ಹತ್ತಾರು ಪ್ರಸಂಗಗಳ ಸ್ಥೂಲ ಪರಿಚಯ ದೊರೆಯುತ್ತದೆ. 
ಬೇರೆಯವರ ಕೈಗೊಂದು ಹತ್ತಿಯ ಉಂಡೆ ಕೊಟ್ಟರೆ ಹೆಚ್ಚೆಂದರೆ ಹೂಬತ್ತಿ ಹೊಸೆಯಬಹುದು. ಇವರೋ ಅದನ್ನು ಹಿಂಜಿ ಹಿಂಜಿ ನೂಲು ಹೊಸೆದು ಅಂಗಿ ಮಾಡಿ ಹಾಕಿಕೊಳ್ಳುವಷ್ಟು ಹಿಂಜುಬುರುಕರು. ಹೆಚ್ಚು ಕಡಿಮೆ ಎಲ್ಲ ಕಥೆಗಳ 'ಎಲ್ಲಾಯ್ತು, ಏನಾಯ್ತು' ಎಂಬುದು ಕೇಳುಗರಿಗೆ ಅರಿವಿರುತ್ತದೆ. ಆದರೆ ಹಸಿ ತರಕಾರಿ ತಿನ್ನುವುದಕ್ಕಿಂತ, ಉಪ್ಪು ಖಾರ ಹಚ್ಚಿ, ಮಸಾಲೆ ಒಗ್ಗರಣೆ ಮಾಡಿ ತಿಂದರೆ ರುಚಿ ಹೆಚ್ಚು ನೋಡಿ- ಹಾಗಾಗಿ ಅವರೂ ಮಜ ತೆಗೆದುಕೊಳ್ಳುತ್ತ ಕುಳಿತುಕೊಳ್ಳುತ್ತಾರೆ. 
ಕಥೆಯಲ್ಲಿ ಕಾಮಿಡಿಯೇ ಇರಬೇಕೆಂದಿಲ್ಲ. ರೋಗ-ರುಜಿನ, ಸಾವಿನ ಪ್ರಸಂಗಗಳನ್ನೂ ಇವರು ಅರೆನಿಮಿಷ ಬಿಟ್ಟುಹೋಗದಂತೆ ಪುನರ್ರಚನೆ ಮಾಡಿ ಕೇಳುಗರನ್ನು ಆಸ್ಪತ್ರೆಗೋ, ಸಾವಿನ ಮನೆಗೋ ಕರೆದೊಯ್ದು ಬಿಡುತ್ತಾರೆ. ಮೃತರ ಸಂಬಂಧಿಕರ ಗೋಳಿನ ಸುದ್ದಿಗೆ ಕೇಳುಗರ ಕಣ್ಣಂಚೂ ಒದ್ದೆಯಾದರೆ, ಹೃದಯ ವಜ್ಜೆಯಾಗುತ್ತದೆ. 
ನಮ್ಮ ಸಂಬಂಧಿಕರ ಕುಟುಂಬವೊಂದಿದೆ. ಕಥೆ ಹೇಳುವುದು ಅವರ ಜೀವತಂತುವಿನಲ್ಲೇ ಇರಬೇಕು. ಅವರ ಮನೆಯಲ್ಲಿ ಎಲ್ಲರೂ ಕಥೆಗಾರರೇ. ರಾತ್ರಿ ಊಟದ ನಂತರ ಎಲ್ಲ ಸೇರಿ ಕಥೆ ಗಂಟು ಬಿಚ್ಚಿದರೆಂದರೆ ಅದೊಂದು ದೊಡ್ಡ ಮನರಂಜನಾ ಕಾರ್ಯಕ್ರಮ. ನನ್ನ ಮದುವೆಯ ನಂತರ ಪತಿಯೊಂದಿಗೆ ಅವರ ಮನೆಗೆ ಹೋಗಿದ್ದೆ. ಊಟವಾಗುತ್ತಿದ್ದಂತೆ ಗಂಡಸರು, ಮಕ್ಕಳೆಲ್ಲ ಸೇರಿ ಹೊಸ ನೆಂಟನೊಂದಿಗೆ ಮಾತಿಗೆ ಕುಳಿತರು. ಮನೆಯ ಹಿರಿಯಣ್ಣನ ಬೀಗರ ಮನೆಯಲ್ಲಿ ಸೂತಕ ಬಂದು ಮದುವೆಯೊಂದು ನಿಂತು ಹೋಗಿತ್ತು. ಅವರು ಶುರು ಮಾಡಿದರು- 'ನಮ್ಮ ಗೀತನ ಮನೆಲ್ಲಿ ಮಾರಾಯ, ಸೂತಕದ್ದೇ ಸಮಸ್ಯೆ. ಎಲ್ಲರ ಮನೆಲ್ಲಿ ಹನ್ನೊಂದು ದಿನಕ್ಕೆ ಸೂತಕ ಮುಗಿದ್ರೆ ಇವಕ್ಕೆ ಮುನ್ನೂರ ಹನ್ನೊಂದು ದಿನವಾದ್ರೂ ಸೂತಕ'. ಎರಡನೇ ಸೋದರ ಮುಂದುವರಿಸಿದರು- 'ದೊಡ್ಡ ಮನೆತನ ನೋಡಿ, ನೂರಾರು ಜನ ಇದ್ದ. ಎಲ್ಲ ಹಿಸ್ಸೆಯಾಗಿ ಹೋದ್ರೂ ಸೂತಕ ಸಂಬಂಧ ಮುರಿದ್ದಿಲ್ಲೆ'. ಈಗ ಕಿರಿಯ ಸೋದರನ ಪಾಳಿ- 'ಯಾವ (ಶುಭ)ಕಾರ್ಯ ನಿಶ್ಚಯ ಮಾಡಿದ್ರೂ ಎರಡ್ಮೂರು ಸಲ ಸೂತಕ ಬಂದು ಮುಂದೆ ಹೋಪದು ಗ್ಯಾರಂಟಿ. ಸತ್ತ ಸೂತಕ ಮುಗಿತು ಹೇಳಿ ಕಾರ್ಯ ಖಾಯಂ ಮಾಡಲು ಹೋದ್ರೆ ಹಡೆದ ಸುದ್ದಿ ಬರ್‍ತು. ಆ ಸೂತಕ ಮುಗಿಯೋ ಹೊತ್ತಿಗೆ ಇನ್ಯಾರೋ ಬಸುರಿಗೆ ದಿನ ತುಂಬಿದ ಸುದ್ದಿ ಬರ್‍ತು. ಭಾರಿ ಕಷ್ಟ ಮಾರಾಯ'.
ದೊಡ್ಡ ಮನೆತನ ಅಂದ ಮೇಲೆ ಸದಸ್ಯರು ಜಾಸ್ತಿ ತಾನೆ, ಮದುವೆ, ಮುಂಜಿ, ಶುಭ ಕಾರ್ಯಗಳೂ ಜಾಸ್ತಿ. ಸರಿ, ಯಾವ್ಯಾವ ಕಾರ್ಯಕ್ಕೆ ಎಷ್ಟೆಷ್ಟು ಸಲ ಅಡ್ಡಿ ಬಂತು, ಹೇಗ್ಹೇಗೆ ಅಂತೂ ಪೂರೈಸಿದರು ಎಂಬುದನ್ನು ಮನೆಯ ಹಿರಿ ತಲೆಯಿಂದ ಕಿರಿಯ ಮೊಮ್ಮಕ್ಕಳವರೆಗೆ 'ಖೋ' ಪಡೆದವರಂತೆ, ರಿಲೇ ಬೇಟನ್ ಪಡೆದವರಂತೆ ಒಬ್ಬೊಬ್ಬರಾಗಿ ಹೇಳಿದರು. ಮನೆಗೆಲಸ ಮುಗಿಸಿ ಬಂದ ಹೆಂಗಸರೂ ಮಧ್ಯದಲ್ಲಿ ಸೇರಿಕೊಂಡು 'ಖೋ' ಅಂದವರೇ. 'ಸೂತಕ ಕಳೆಯುವ' ಹೊತ್ತಿಗೆ ಬರೋಬ್ಬರಿ ಮೂರು ತಾಸು ಕಳೆದಿತ್ತು. ಅಷ್ಟು ಹೊತ್ತು ಒಂದೇ ವಿಷಯವನ್ನು ಹೇಳಿದ್ದರೂ ನಮಗೆಲ್ಲೂ ಒಂದಿನಿತೂ ಬೇಸರ ಬಂದಿರಲಿಲ್ಲ, ಬದಲಾಗಿ ನಗೆಯ ಹೊಳೆಯೇ ಹರಿದಿತ್ತು ಅಲ್ಲಿ. ಕಥೆ ಹೇಳುವವರು ಬೇರೆ ಬೇರೆಯವರಾದರೂ ಹಾಸ್ಯದ ತೂಕವನ್ನು, ನಮ್ಮ ಆಸಕ್ತಿಯ ಮಟ್ಟವನ್ನು ಕಾಯ್ದುಕೊಂಡು ನಗು ಚಿಮ್ಮಿಸಿದ ರೀತಿ ಮೆಚ್ಚಲರ್ಹವಾಗಿತ್ತು. 
ಮನುಷ್ಯರ ಜೊತೆಗೆ ಇರುವೆ-ಗೊದ್ದಗಳನ್ನೂ ಆಕರ್ಷಿಸುವ ಬೆಲ್ಲದಂತೆ ಈ ಕಥೆ ಹೇಳುವ ಕಲೆ. ಉಳ್ಳವ-ಇಲ್ಲದವ, ಒಡೆಯ-ಆಳು, ಗಂಡಸು-ಹೆಂಗಸು, ಹಿರಿಯ-ಕಿರಿಯ ಎಲ್ಲ ಭೇದಗಳನ್ನೂ ಅಳಿಸಿ ಕೇವಲ ಹೇಳುವವ-ಕೇಳುವವ(ರು) ಎಂಬುದೊಂದು ತಾತ್ಕಾಲಿಕವಾದರೂ ಪ್ರಾಮಾಣಿಕವಾದ ಸಂಬಂಧವನ್ನು ಹುಟ್ಟುಹಾಕುತ್ತದೆ. ಸುದ್ದಿಯೆಂಬ ರಬ್ಬರ್ ಚೂರಿಗೆ ಗಾಳಿ ಊದಿ ಊದಿ ಪುಗ್ಗಿ ಹಾರಿ ಬಿಡುವ ಇದು, ಇಂಥದ್ದೇ ಚೌಕಟ್ಟಿನಲ್ಲಿ ಜನರನ್ನು ರಂಜಿಸುವ ಟಿವಿ 'ಟಾಕ್ ಶೋ'ಗಳ ಹಂಬಲ್ ಕೌಂಟರ್‌ಪಾರ್ಟ್. ಟಾಕ್ ಶೋ ನಡೆಸುವವರು ಕಾರ್ಯಕ್ರಮ ಮುಗಿದ ಮೇಲೆ ಝಣಝಣ ದುಡ್ಡೆಣಿಸುತ್ತಾರೆ. ನಮ್ಮ ಕಥೆಗಾರರೋ... ಒಂದು ಚಾ ಕುಡಿದೋ, ಎಲಡಿಕೆ ಹಾಕಿಕೊಂಡೋ ಮನೆಗೆ ಮರಳುತ್ತಾರೆ. ಕಥೆ ಇನ್ನೊಂದು ದಿನ ಇನ್ನೆಲ್ಲೋ ಮರು ಹುಟ್ಟು ಪಡೆಯುತ್ತದೆ. 

(ದ್ಯಾಟ್ಸ್ ಕನ್ನಡ.ಕಾಮ್ ನಲ್ಲಿ ಪ್ರಕಟವಾದ ಲೇಖನ)


ಶ್ವಾಮಿ ಧೇವನೆ ಲೋಕ ಫಾಲನೆ..

ಪ್ರಾರ್ಥನೆಯೆಂದರೆ ಶ್ರದ್ಧೆ, ಭಕ್ತಿ, ಸಮರ್ಪಣಾ ಮನೋಭಾವ ಅನಾವರಣಗೊಳ್ಳುವ, ಸಾಕಾರಗೊಳ್ಳುವ ಸಮಯ ಎಂಬುದು ಸಾಮಾನ್ಯ ಕಲ್ಪನೆ. ಬಹಳಷ್ಟು ಜನರಿಗೆ ಇದು ಮನಸ್ಸನ್ನು ಜಾಗೃತಗೊಳಿಸುವ, ಏಕಾಗೃತೆ ಸಾಧಿಸುವ, ದೇವರೊಂದಿಗೆ ಸಂಭಾಷಿಸುವ, ಶಾಂತಗೊಳ್ಳುವ/ಸ್ವಚ್ಛಗೊಳ್ಳುವ ಕ್ರಿಯೆ. ಪ್ರಾರ್ಥನೆ ಎಂದಾಕ್ಷಣ ಮನದಲ್ಲಿ ಮೂಡುವುದು ಗಂಭೀರ, ದೈವೀಕ ಭಕ್ತಿ ಭಾವ.

 ಅದು ಸರಿ. ನಿಜಕ್ಕೂ ಇದು ಇಷ್ಟೆಲ್ಲ ಜಟಿಲ, ಬಿಗುವಿನ, ಗಾಂಭೀರ್ಯದ ಅನುಭವವೇ? ಪ್ರಾರ್ಥನೆಗೆ ಲಘುವಾದ, ತಿಳಿಯಾದ, ಮುಸ್ಸಂಜೆಯ ತಂಗಾಳಿಯಂಥ ಕಚಗುಳಿಯ ಆಯಾಮ ಸಾಧ್ಯವಿಲ್ಲವೇ? ಪ್ರತಿ ಮನೆಯ ಕಿರು ಕೋಣೆಯ ಖಾಸಗೀತನದಲ್ಲಿ, ಏಕಾಂತದಲ್ಲಿ, ಆತಂಕದ, ಅಗತ್ಯದ ಕ್ಷಣಗಳಲ್ಲಿ ಸಾಧ್ಯವಿಲ್ಲದಿರಬಹುದು. ಆದರೆ ಶಾಲೆಗಳಲ್ಲಿ, ವಿಶೇಷವಾಗಿ ಹಳ್ಳಿ ಶಾಲೆಗಳಲ್ಲಿ ನಡೆವ  ಸಾಮೂಹಿಕ ಪ್ರಾರ್ಥನೆಯಲ್ಲಿ ಶ್ರಧ್ಧೆ ಭಕ್ತಿಗಳಿಗಿಂತ ಹೆಚ್ಚು ರಭಸದಿಂದ ಹರಿಯುವುದು ಸರಸಮಯ ಹಾಸ್ಯ ರಸವೇ. ವಿದ್ಯಾರ್ಥಿ ಜೀವನದ ಮೊದಲೈದು ವರ್ಷಗಳನ್ನು ಹಳ್ಳಿ ಶಾಲೆಯಲ್ಲಿ ಕಳೆದ ನನಗೆ ಇದರ ಫಸ್ಟ್ ಹ್ಯಾಂಡ್ ಅನುಭವವಿದೆ. 
ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಆಗಷ್ಟೇ ಮನೆಯಿಂದ ತಾಜಾ ಬಂದಿರುತ್ತಿದ್ದ ಮಕ್ಕಳಲ್ಲಿ ತುಂಟತನದ ಕೋಷಂಟ್ ತಾರಕದಲ್ಲಿರುತ್ತಿತ್ತು. ಹೆಣ್ಣು ಮಕ್ಕಳಾದರೆ ಮುಂದಿರುವವರ ಜಡೆ ಜಗ್ಗುವುದು, ರಿಬ್ಬನ್ ಬಿಚ್ಚುವುದು, ಗಂಡು ಮಕ್ಕಳು ಮುಂದಿರುವವರ ಚಡ್ಡಿ ಎಳೆಯುವುದು, ಬಿಳಿ ಅಂಗಿಯ ಬೆನ್ನಿನ ಮೇಲೆ ಧೂಳಿನ ಕೆಂಪು ಕೈ ಅಚ್ಚು ಒತ್ತುವುದು.... ಮಾಮೂಲು. ಇವೆಲ್ಲ ಇನ್ನೂ ಪ್ರಾರ್ಥನೆಗೆ ಮುನ್ನ ಎಲ್ಲ ಬಂದು ಜಮೆಗೊಳ್ಳುವಾಗಿನ ಕಾರುಬಾರುಗಳು. ಆಮೇಲೆ ಮಾಸ್ತರು ಬಂದು ಒಂದೆರಡು ಮಕ್ಕಳ ಬೆನ್ನು ಬೆಚ್ಚಗೆ ಮಾಡಿದ ಮೇಲೆ ಪ್ರಾರ್ಥನೆ ಆರಂಭ... 
ಭಾರಥಾಂಭೆಯೇ ಝನಿಸಿ ನಿನ್ನೊಳು ಧನ್ಯನಾಧೆನು ಧೇವಿಯೇ 
ನಿನ್ನ ಫ್ರೇಮಧಿ ಭೆಳೆದ ಝೀವವು ಮಾನ್ಯವಾಧುಧು ಥಾಯಿಯೇ ......." 
ಎಲ್ಲೆಡೆಯಿಂದ ಹೊಡೆದು ಹೊಡೆದು, ಕೂಗಿ ಕಿರುಚಿ ಹಾಡುವ(?) ಕಂಠಗಳು.ಹಾಗಂತ ಈ ಹಾಡುಗಳನ್ನೆಲ್ಲ ಬರೆದು ತೋರಿಸಿ ಎಂದು ಯಾರಾದರೂ ಹೇಳಿದ್ದರೆ ಬಹುಷಃ ಎಲ್ಲ ಮಕ್ಕಳೂ ಸರಿಯಾಗಿಯೇ ಅಂದರೆ "ಭಾರತಾಂಬೆಯೇ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ...." ಎಂದೇ ಬರೆಯುತ್ತಿದ್ದರೇನೋ. ಆದರೆ ಅದಕ್ಕೆ ಪ್ರಾರ್ಥನೆ ಎಂಬ ರೂಪ ನೀಡಿ, ಪ್ರಾಣ ತುಂಬಿ ಹಾಡಬೇಕು ಎಂದು ಹಿರಿಯರು ಆದೇಶಿಸುತ್ತಿದ್ದಂತೆಯೇ, ಅದನ್ನು ಸ್ವಲ್ಪ ಜಾಸ್ತಿಯೇ ಪಾಲಿಸುತ್ತಿದ್ದ ಮಕ್ಕಳು "ಬರೀ ಪ್ರಾಣವೇಕೆ,  ಮಹಾಪ್ರಾಣವನ್ನೇ ತುಂಬೋಣ" ಎಂದು ಅತ್ಯುತ್ಸಾಹದಿಂದ ಹಾಡಿ(?) ಅದಕ್ಕೊಂದು ಉಗ್ರ ಸ್ವರೂಪ ನೀಡುತ್ತಿದ್ದರು. ಹಾಗಾಗಿ.. 
"ಸ್ವಾಮಿ ಧೇವನೆ ಲೋಕ ಫಾಲನೆ ಥೇನ ಮೋಸ್ತು ನಮೋಸ್ತುಥೆ 
ಫ್ರೇಮದಿಂದಲಿ ನೋಢು ನಮ್ಮನು ಥೇನ ಮೋಸ್ತು ನಮೋಸ್ತುಥೆ" 
ಎಂದು ಹೊಡೆದು ಹೊಡೆದು, ಪದಗಳನ್ನು ಎಲ್ಲೆಲ್ಲೋ ಒಡೆದು ಉಚ್ಛರಿಸಿಯೇ ನಾವೆಲ್ಲ ಪ್ರಾರ್ಥನೆ ಮಾಡುತ್ತಿದ್ದುದು. ಪ್ರಾರ್ಥನೆ ತಾರಕಕ್ಕೇರಿದ ಸಮಯದಲ್ಲಿ ಒಬ್ಬೊಬ್ಬರ ಆಂಗಿಕ ಭಾವವನ್ನು ಗಮನಿಸಬೇಕು. ಹಾಡಿನ ಯಾವೊಂದು ಶಬ್ದ, ಆಶಯವೂ ಹಾಡುವವರ ಮುಖದಲ್ಲಿ ಪ್ರತಿಫಲಿಸದು, ಅಲ್ಲಿರುವುದು ಒಂದೇ- ಎಲ್ಲಿ ಮಾಸ್ತರರ/ಅಕ್ಕೋರ ಕಣ್ಣು ತಮ್ಮ ಮೇಲೆ ಬಿದ್ದು, ಸರಿಯಾಗಿ ಹಾಡಿಲ್ಲ ಎಂದು ಕಿವಿ ಹಿಂಡುತ್ತಾರೋ ಎಂಬ ದಿಗಿಲು ಮಾತ್ರ. ಹಾಗಾಗಿಯೇ ಬಾಯನ್ನಷ್ಟೇ ಗರಿಷ್ಠ ಸಾಮರ್ಥ್ಯದಲ್ಲಿ ತೆರೆದು ಮುಚ್ಚುತ್ತ, ಸ್ವರಸಂಭ್ರಮವನ್ನು ಮುಗಿಲು ಮುಟ್ಟಿಸುವ ಧಾವಂತ ಆ ಮುಗ್ಧ ಮುಖಗಳಲ್ಲಿ. 
ಅತ್ತ ಒಂದೆಡೆ ಕಂಠಶೋಷಣೆ ನಡೆಯುತ್ತಿದ್ದರೆ ಇನ್ನೊಂದೆಡೆ ಕೈಗಳಿಗೂ ಭಾರಿ ಕೆಲಸ. ಹಾಡು ತಾರಕಕ್ಕೇರುತ್ತಿದ್ದಂತೆಯೇ ಅವಕ್ಕೂ ವಿಚಿತ್ರ ತುಮುಲ. ತಡೆದುಕೊಳ್ಳಲಾರದ ಕೈ ತನ್ನೊಡೆಯನ ಚಡ್ಡಿಯ, ಒಡತಿಯದ್ದಾದರೆ ಲಂಗದ ಚುಂಗನ್ನು ಜಗ್ಗಿ, ಜಗ್ಗಿ ಸ್ವರಭಾರವನ್ನು ಬ್ಯಾಲೆನ್ಸ್ ಮಾಡಲು ತಿಣುಕಾಡುತ್ತದೆ. ಇತ್ತ ಅಷ್ಟೂ ಜೊತೆ ಕಾಲುಗಳು ನೆಲಕ್ಕೆ ಬೆಸುಗೆ ಹಾಕಿದಂತಿದ್ದರೆ, ದೇಹದ ಮೇಲರ್ಧ ಮುಖ್ಯವಾಗಿ ತಲೆಗಳು ಒಳ್ಳೆ ಫಲಭರಿತ ಎತ್ತರೆತ್ತರದ ತೆಂಗಿನಮರಗಳು ಸುಳಿಗಾಳಿಗೆ ಅತ್ತಿತ್ತ ತೊನೆದಾಡುವ ರೀತಿಯಲ್ಲಿ ಹಿಂದಕ್ಕೂ, ಮುಂದಕ್ಕೂ ಹೊಯ್ದಾಡುತ್ತಿರುತ್ತವೆ. ಹಾಡು ಅಡಗುತ್ತಿದ್ದಂತೆಯೇ ತೊನೆದಾಟವೂ ಸ್ತಬ್ಧ. ನಮ್ಮೂರಿನ ಕನ್ನಡ ಶಾಲೆಯಲ್ಲಿ ಓದುತ್ತಿದ್ದ ಸಮಯದಲ್ಲಿ ನಾನೂ ಎಲ್ಲರಂತೆ ಈ ಪ್ರಾರ್ಥನಾ ರಸ ಲಹರಿಯ ಅಭಿವ್ಯಕ್ತಿಯಾಗಿದ್ದೆ. 
ಈ ತೊನೆದಾಟ ಪ್ರಾರ್ಥನೆಗಷ್ಟೇ ಸೀಮಿತವಾಗಿರಲಿಲ್ಲ. ಸಾಯಂಕಾಲ "ಬಾಯಿಪಟ್ಟೆ" (ಬಾಯಿಪಾಠ) ಹೇಳುವಾಗಲೂ "ಒಂದೊಂದ್ಲ್ ಒಂದ, ಒಂದ್ಯೆರಡ್ಲ ಎರಡ" ಎನ್ನುತ್ತಿದ್ದಂತೆ ಪಿಕಪ್ ಆಗುತ್ತಿದ್ದ ಹೊಯ್ದಾಟ "ಒಂದ್ ಹತ್ಲ್ ಹತ್ತ" ಎಂಬಲ್ಲಿ ಒಂದು ಚಿಕ್ಕ ವಿರಾಮ ತೆಗೆದುಕೊಳ್ಳುತ್ತಿತ್ತು. ಮತ್ತೆ ಬ್ರೇಕ್ ಕೇ ಬಾದ್ "ಎರಡೊಂದ್ಲ್ ಎರಡ..." ಆರಂಭವಾಗುತ್ತಿದ್ದಂತೆ ಹೆಣ್ಣು/ಗಂಡು ಮಕ್ಕಳು, ಒಂದನೆತ್ತಿ/ಎರಡನೆತ್ತಿ ಎಂಬೆಲ್ಲ ಪ್ರತ್ಯೇಕತೆಗಳೊಂದಿಗೆ ನಿಂತಿರುತ್ತಿದ್ದ ಉದ್ದುದ್ದ ಸಾಲುಗಳು ಅವೆಲ್ಲ ಭೇದ ಮರೆತು ಒಮ್ಮತದಿಂದ ಹಿಂದಕ್ಕೂ ಮುಂದಕ್ಕೂ ಗಾಳಿ ಗುದ್ದಲಾರಂಭಿಸುತ್ತಿದ್ದವು. "ಪ್ರಭವ, ವಿಭವ..." ದಂಥ ಉದ್ದುದ್ದ ಬಾಯಿಪಾಠವಂತೂ ತೊನೆದಾಟದ ಸಮಸ್ತ ಸಾಧ್ಯತೆಗಳನ್ನು ಪ್ರದರ್ಶಿಸುತ್ತಿತ್ತು. 
ಇರಲಿ, ಮತ್ತೆ ಪ್ರಾರ್ಥನೆಯ ವಿಷಯ/ವಿಲಾಸಕ್ಕೆ ಬರೋಣ. ಮುಂದೆ ಜವಾಹರ ನವೋದಯ ವಿದ್ಯಾಲಯ ಸೇರಿದ ಮೇಲೆ ಅದರ ಭಾವ ಏನಿರಬೇಕು ಎಂಬುದು ಸ್ವಲ್ಪ ಮಟ್ಟಿಗೆ ಅನುಭವಕ್ಕೆ ಬಂತು ನನಗೆ. ಆದರೂ ಹಳ್ಳಿ ಶಾಲೆಗಳಿಗಿಂತ ಆ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಾರ್ಥನೆಯ ದನಿ, ಭಾಷೆ ಬೇರೆಯಿದ್ದವೆ ಹೊರತು ಆ ಸಮಯದಲ್ಲಿನ ತುಂಟಾಟಗಳಲ್ಲ. ಇಲ್ಲೂ ಅದೇ ಅಂಗಿ ಜಗ್ಗುವುದು, ಜಡೆ ಎಳೆಯುವುದು, ಮುಂದಿರುವವರ ಅಂಗಿಯೊಳಗೆ ಕಲ್ಲು ಹರಳು ತೂರಿಸುವುದು..... ಎಲ್ಲ ಎಂದಿನಂತೆ. ದೈಹಿಕ ಶಿಕ್ಷಕರ ಕೈಯಲ್ಲಿ ಸಿಕ್ಕಿ ಬಿದ್ದರೆ ಮಂಡಿಯೂರಿ ಕುಳಿತುಕೊಳ್ಳುವ, ಸಭೆಯ ಸುತ್ತ ಮೊಣಕೈ ಊರುತ್ತ ತೆವಳುವ "ಮರ್ಯಾದೆ" ಪ್ರಾಪ್ತವಾಗುತ್ತಿದ್ದುದು ಮಾತ್ರ ವಿಶೇಷ. 
ಪ್ರಾರ್ಥನೆಯ ಸಂದರ್ಭದಲ್ಲಿ ಒಂದು ಗಾದೆಮಾತನ್ನು ವಿವರಿಸಿ ಹೇಳುವುದು, ವಾರ್ತೆಗಳನ್ನು ಓದುವುದು ಸಾಮಾನ್ಯವಾಗಿ ಎಲ್ಲ ಶಾಲೆಗಳಲ್ಲಿ ಇರುವ ರೂಢಿ. ಶಾಲೆಯ ಹಿರಿಯ ತರಗತಿಗಳ ಮಕ್ಕಳು ಪಾಳಿಯ ಆಧಾರದಲ್ಲಿ ಇವನ್ನು ನಿರ್ವಹಿಸುವುದುಂಟು. ಮಾರನೆ ದಿನ ಪಾಳಿ ಇರುವವರು ಹಿಂದಿನ ದಿನ ಮನೆಯಲ್ಲಿ ಎದ್ದು ಬಿದ್ದು ಹಳೆ ಪುಸ್ತಕ ಹುಡುಕಿ ಗಾದೆ ಆಯ್ದುಕೊಳ್ಳುವುದೇನು, ಉರು ಹೊಡೆಯುವುದೇನು, ಆಯಾ ಗಾದೆಗಳನ್ನು ಆ ಮಕ್ಕಳ ತಲೆಯ ಮೇಲೆಯೇ ಮೊಟಕಿ ಮನೆಯ ಹಿರಿಯರು ಮಜಾ ತೆಗೆದುಕೊಳ್ಳುವುದೇನು... "ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ, ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು, ಆಳಾಗಿ ದುಡಿ; ಅರಸನಾಗಿ ಉಣ್ಣು"-ವಂಥವನ್ನು ಹಿರಿಯರ ಎದುರು ಹೇಳತೊಡಗಿದರೆ ಮೂಲೆಲಿ ಮಲಗಿದ್ದ ಮಾರಿಯನ್ನು ಮೈ ಮೇಲೆ ಎಳಕೊಂಡ ಹಾಗೆ ಆಗುತ್ತಿದ್ದುದು ಖರೆ! 
ಇಷ್ಟೆಲ್ಲ ಉರು ಹೊಡೆದು ಗಾದೆ ವಿಸ್ತಾರದ ಒಂದೊಂದು ಅಕ್ಷರವನ್ನೂ ಮರೆಯದೇ ನೆನಪಿನ ಪೆಟ್ಟಿಗೆಗೆ ತುಂಬಿ ಬೀಗ ಜಡಿದುಕೊಂಡು ಬಂದ ಮಕ್ಕಳು ಮಾರನೇ ದಿನ ಪ್ರಾರ್ಥನೆ ಹೊತ್ತಿಗೆ ಸರಿಯಾಗಿ ಅದರ ಕೀಲಿ ಕಳೆದುಕೊಂಡು ಟಠಡಢಣ, ತಥದಧನ ಎಂದು ತಡಬಡಾಯಿಸುತ್ತಿದ್ದುದೂ ಅಷ್ಟೇ ಖರೆ. 
ಇನ್ನು ವಾರ್ತೆ ಓದುವವರ ಖದರೇ ಬೇರೆ. ಆ ದಿನ ಪ್ರಾರ್ಥನೆಗಿಂತ ಮುಂಚಿನ ಸಮಯದಲ್ಲಿ ಅವರ ವರ್ತನೆ ಥೇಟ್ ಅಮೆರಿಕ ಅಧ್ಯಕ್ಷರ ಗತ್ತಿನದು. ಓದುವ ಸುದ್ದಿ ಮಾತ್ರ ಸ್ಥಳೀಯ, ಹಿಂದಿನ ದಿನದ ಪತ್ರಿಕೆಯಲ್ಲಿ ಬಂದ "ತಾಲ್ಲೂಕಿನ ಇಂಥಲ್ಲಿ ಬೈಕುಗಳ ಡಿಕ್ಕಿ- ಇಬ್ಬರಿಗೆ ಗಾಯ; ಇಂಥ ಊರಲ್ಲಿ ತಹಶೀಲ್ದಾರ್ ಕಚೇರಿ ಎದುರು ಅಂಗನವಾಡಿ ಕಾರ್ಯಕರ್ತೆಯರ ಧರಣಿ...."ಯಂಥವು. ಏಕೆಂದರೆ ಶಿಕ್ಷಕರಿಗೂ ತಾಲ್ಲೂಕಿನ ತರಲೆ ತಾಪತ್ರಯಗಳ ಬಗ್ಗೆ ಆಸಕ್ತಿಯೇ ಹೊರತು ಬುಷ್-ಬ್ಲೇರ್-ಬ್ರೌನ್ ಬಡಿವಾರಗಳಲ್ಲ. ಪತ್ರಿಕೆಗಳಿಗೆ ರಜೆಯಿದ್ದ ದಿನ ಅಥವಾ ಅವು ಊರಿಗೆ ತಲುಪದ ದಿನ ಎರಡು ದಿನಗಳ ಹಿಂದಿನ ಸುದ್ದಿಯೇ ಶಾಲಾ ಸಭೆಯಲ್ಲಿ ಬಿತ್ತರಗೊಳ್ಳುವುದು. 
ಮಕ್ಕಳ- ಮಾಸ್ತರರ ಮನೆಗಳಲ್ಲಿನ ರೇಡಿಯೊ-ಟಿವಿಗಳೇನಿದ್ದರೂ ಅವರವರ ಖಾಸಗಿ ಬಳಕೆಗೆ ಮಾತ್ರ. ಇತ್ತ ವೇದಿಕೆಯ ಮೇಲಿರುವವರು ಗಾದೆ ಹೊದ್ದ ನೀತಿ ಪಾಠ ಬೋಧಿಸುತ್ತ, ವಾರ್ತೆ ಓದುತ್ತ ಲೋಕೋತ್ತರ ಚಿಂತನೆ ಮಾಡುತ್ತಿದ್ದರೆ, ಕೆಳಗೆ ವಿಶ್ರಾಮ ಸ್ಥಿತಿಯಲ್ಲಿ ನಿಂತ ಎಲ್ಲ ವಿದ್ಯಾರ್ಥಿಗಳ ಮೊಗದಲ್ಲಿ ಏಕೋಭಾವ- 'ಅಯ್ಯೋ, ಈ ಬರೀ ಬೋರು ಕಾರುಬಾರು ಯಾವಾಗ ಮುಗಿಯುತ್ತದಪ್ಪ'- ಅವರ ಮನದ ಕನ್ನಡಿಯಾಗಿ ನಡೆದಿರುತ್ತವೆ ಉಗುರು ಕಚ್ಚುವ, ಜಡೆಯ ತುದಿಯನ್ನು ಸುರುಳಿ ಸುತ್ತುವ, ನೆಲ ಕೆರೆಯುವ ಕ್ರಿಯೆಗಳು. 
ನಾನು ಓದಿದ ನವೋದಯ ವಿದ್ಯಾಲಯದಲ್ಲಿ ಪರಿಸ್ಥಿತಿ ಕೊಂಚ ಭಿನ್ನವಿತ್ತು. ಪತ್ರಿಕೆಯ ಸುದ್ದಿ ಹಳೆಯದಾಗುತ್ತದೆಂದು ಹಿಂದಿನ ರಾತ್ರಿಯ ಟಿವಿ ವಾರ್ತೆಯ ಸಾರಾಂಶವನ್ನು ಓದಬೇಕಿತ್ತು. ದೂರದರ್ಶನ ರಾಷ್ಟ್ರೀಯ ವಾಹಿನಿಯ ಪ್ರಸಾರವೊಂದೇ ತಲುಪುತ್ತಿದ್ದ ಆ ಸಮಯದಲ್ಲಿ ರಾತ್ರಿ ಒಂಬತ್ತೂವರೆಯ ಆಂಗ್ಲ ವಾರ್ತೆಯನ್ನು ವೀಕ್ಷಿಸಿ ಸುದ್ದಿ ಸಂಗ್ರಹಿಸಿಕೊಂಡು ಮರುದಿನ ಓದುವುದೆಂದರೆ ಇಂಗ್ಲೀಷ್ ಭೂತಕ್ಕೆ ಬೆದರುತ್ತಿದ್ದ ಬಹಳಷ್ಟು ಮಕ್ಕಳ ಮಂಡೆ ಬಿಸಿಯಾಗುತ್ತಿತ್ತು. ಆದರೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದ ಕಾರಣ "ಭೂತ ದರ್ಶನ"ದ ಪಾಳಿ ಎದುರಾಗುತ್ತಿದ್ದುದು ಅಪರೂಪವಾಗಿತ್ತು. 
ಇಷ್ಟೆಲ್ಲ ಪಡಿಪಾಟಲೇಕೆ, ಆಯಾ ದಿನದ ಪತ್ರಿಕೆಯನ್ನು ತಂದು ಆಯ್ದ ಸುದ್ದಿಯನ್ನು ಓದಬಾರದೇ ಎಂದು ನಿಮಗನಿಸಬಹುದು. ಆದರೆ ರಾಜಧಾನಿಯಿಂದ ಬಲು ದೂರವಿರುವ ನಮ್ಮ ಜಿಲ್ಲೆಯಲ್ಲಿ ಅದರಲ್ಲೂ ಹಳ್ಳಿಗಳಲ್ಲಿ ಅಂದಿನ ಪತ್ರಿಕೆ ಅಂದು ಸಂಜೆಯೊಳಗೇ ಚಂದಾದಾರರ ಕೈ ತಲುಪಿದರೆ ಅದವರ ಪುಣ್ಯ. 
'ನವೋದಯ'ದಲ್ಲಿ ಪ್ರಾರ್ಥನೆಯ ಸಮಯದಲ್ಲಿ ಒಂದು ಪ್ರತಿಜ್ಞೆ ಕೈಗೊಳ್ಳುವ ಪದ್ಧತಿ ಇತ್ತು. "ಭಾರತ ನನ್ನ ದೇಶ. ಎಲ್ಲ ಭಾರತೀಯರೂ ನನ್ನ ಸಹೋದರ-ಸಹೋದರಿಯರು....." ಎಂದು ಆರಂಭವಾಗಿ ಮುಂದುವರಿಯುತ್ತಿತ್ತು ಆ ಪ್ರತಿಜ್ಞೆ. ಆ ಘನ ಗಂಭೀರ ಪ್ರತಿಜ್ಞೆಯ ಸಮಯದಲ್ಲೂ ಕೆಲ ಹಗುರ ಕ್ಷಣಗಳು ಎದುರಾಗುತ್ತಿದ್ದವು. ಆರರಿಂದ ಹನ್ನೆರಡನೇ ತರಗತಿಯವರೆಗೆ ತರಗತಿಗಳು ನಡೆಯುತ್ತಿದ್ದ ಶಾಲೆಯಲ್ಲಿ, ಹನ್ನೊಂದನೇ ತರಗತಿಗೆ ಬರುತ್ತಿದ್ದಂತೆಯೇ ಬಹಳಷ್ಟು ಹುಡುಗರಿಗೆ ತಾವು ತಾರುಣ್ಯಾವಸ್ಥೆಯ ತುಂಟತನದ ಹರಿಕಾರರೇನೋ ಎಂಬ ಪ್ರಜ್ಞೆ. ಕೈಯನ್ನು ಎದೆಮಟ್ಟಕ್ಕೆ ಮುಂದೆ ಚಾಚಿ ಪ್ರತಿಜ್ಞಾವಿಧಿ ಪೂರೈಸುತ್ತಿದ್ದ ಸಂದರ್ಭದಲ್ಲಿ "ಎಲ್ಲ ಭಾರತೀಯರೂ ನನ್ನ ಸಹೋದರ-ಸಹೋದರಿಯರು" ಎನ್ನುವಾಗ ಈ ಹನ್ನೊಂದು, ಹನ್ನೆರಡನೆಯ ತರಗತಿಯ ಸುಮಾರು ಹುಡುಗರು ಮುಂಚಾಚಿದ ಹಸ್ತದ, ಒಂದೇ ಮಟ್ಟದಲ್ಲಿರಬೇಕಾದ ಐದು ಬೆರಳುಗಳ ಪೈಕಿ ಮಧ್ಯದ ಬೆರಳನ್ನು ಕೊಂಚ ತಗ್ಗಿಸುತ್ತಿದ್ದರಂತೆ. 
ಈ ವಿಷಯವನ್ನು ಅರಿತ, ಆ ಹುಡುಗರ ಮೇಲೆ ಕಣ್ಣಿಟ್ಟಿದ್ದ ಕೆಲ ಹುಡುಗಿಯರು ಹಾಗೆ ಮಾಡುವುದರ ಅರ್ಥ- "ಎಲ್ಲ ಭಾರತೀಯರೂ ನನ್ನ ಸಹೋದರ-ಸಹೋದರಿಯರು- ಒಬ್ಬನ/ಳ ಹೊರತಾಗಿ" ಎಂದು ಪತ್ತೆ ಹಚ್ಚಿ ಆಮೇಲೆ ತಾವೂ ಹಾಗೆ ಮಾಡತೊಡಗಿದರು. ಬಾಕಿಯವರಿಗಿಂತ ನಾಲ್ಕು ಡಿಗ್ರಿ ಜಾಸ್ತಿಯೇ ಬಿಸಿಯಾಗುವ ನೆತ್ತರು ನೆತ್ತಿ ಸೇರಿ, ಚಿತ್ತವನ್ನು ಚಿತ್ರಾನ್ನ ಮಾಡುವ ವಯಸ್ಸಿನಲ್ಲಿ ಆ ಬಿಸಿಯಿಂದ ಬಚಾವಾಗಲು ಇಂಥ ಕೂಲ್ ಕಿತಾಪತಿ ಮಾಡುತ್ತಿದ್ದ ಹುಡುಗ/ಗಿಯರು ಮಧ್ಯದ ಬೆರಳ ಬದಲಾಗಿ ಉಂಗುರದ ಬೆರಳನ್ನು ತಗ್ಗಿಸುತ್ತಿದ್ದರೆ ಇನ್ನೂ ಅರ್ಥವತ್ತಾಗಿರುತ್ತಿತ್ತು. ಆದ್ಯಾಕೋ ಆ ಸರಳ ವಿಚಾರ ಯಾರಿಗೂ ಹೊಳೆದಿರಲಿಲ್ಲ ಅನ್ನಿಸುತ್ತದೆ. 
ಈಗೀಗ ಹುಟ್ಟುಹಬ್ಬದ ಶುಭಾಶಯ ಕೋರುವಿಕೆ ಕೂಡ ಪ್ರಾರ್ಥನಾ ಕಲಾಪದ ಅಂಗವಾಗುತ್ತಿದೆ. ದಿನಾ ಅದೇ ಸಮವಸ್ತ್ರ, ಶೂ-ಕಾಲುಚೀಲಗಳಲ್ಲಿ ಹುದುಗಿ, ಒಂದೆ ಫ್ಯಾಕ್ಟರಿಯಿಂದ ತಯಾರಾದ ಗೊಂಬೆಗಳಂತೆ ಕಾಣಿಸುವ ನೂರಾರು ಮಕ್ಕಳ ನಡುವೆ ಮರೆಯಾಗಿ ಬಿಡುವ ಬಾಲಕ/ಕಿಗೆ ಆ ದಿನ ಬಣ್ಣಬಣ್ಣದ ಹೊಸ ಬಟ್ಟೆ ತೊಟ್ಟು ಒಳ್ಳೆ ರಾಜಠೀವಿ ಬೀರುತ್ತ ನಿಲ್ಲುವ ಅವಕಾಶ.
ಇವೆಲ್ಲದರ ಜೊತೆಗೆ ಸಭೆಗೆ ತಡವಾಗಿ ಬಂದದ್ದಕ್ಕೆ, ಉಗುರು ಕೆತ್ತಿಲ್ಲದ್ದಕ್ಕೆ, ಕೊಳೆಯಾದ ಅಂಗಿ ತೊಟ್ಟು ಅಥವಾ ಎಣ್ಣೆ ಹಾಕಿ ಬಾಚದೇ ಕೂದಲು ಕೆದರಿಕೊಂಡು ಬಂದಿದ್ದಕ್ಕೆ... ಹೀಗೆ ಹತ್ತಾರು ತಪ್ಪುಗಳನ್ನು ಗುರುತಿಸಿ, ಶಿಕ್ಷೆ ಕೊಡುವ ಪುಟ್ಟ ಸೆಷನ್  ಕೂಡ ಮುಖ್ಯ ಸಭಾ ಕಾರ್ಯಕ್ರಮದೊಂದಿಗೆ ತಳಕು ಹಾಕಿಕೊಂಡಿರುತ್ತದೆ. "ಶಿಕ್ಷಕ"ರಿಗೂ, ಶಿಕ್ಷೆ ಪಡೆವವರಿಗೂ ಇದೊಂಥರ ಮಾಮೂಲಿ ಕಾರ್ಯಕ್ರಮ- ಬದ್ಧತೆಯಾಗಲಿ, ಬೇಸರವಾಗಲಿ ಎಲ್ಲೂ ಹಣಕದು. ಮಕ್ಕಳ ಪಾಲಿಗಂತೂ ಪ್ರಾರ್ಥನೆಯ ಕೊನೆಯಲ್ಲಿ "ಜನ ಗಣ ಮನ" ಎಂದಷ್ಟೇ ಸಲೀಸು ಈ ಬೈಗುಳು ತಿನ್ನುವುದು. 
ಆಟದ ಮೈದಾನದಲ್ಲಿ ಪಂದ್ಯ ಆರಂಭಿಸುವ ಮುನ್ನ, ಓಟದ ಟ್ರ್ಯಾಕ್ ಗಿಳಿಯುವ ಮುನ್ನ ಮೈ ಹಗುರಗೊಂಡು ಲವಲವಿಕೆ ಮೂಡಲೆಂದು ವಾರ್ಮ್ ಅಪ್ ಅಭ್ಯಾಸ ನಡೆಸುತ್ತಾರಲ್ಲವೇ. ಹೂ ಬಿಸಿ ನೀರಿನ ಹದ ಹೊಂದಿದ ಇಂಥ ಪ್ರಾರ್ಥನೆಯ ಎಫೆಕ್ಟ್ ಕೂಡ ಅದೇ. ಶೈಕ್ಷಣಿಕ ದಿನವನ್ನು ಬರ ಮಾಡಿಕೊಳ್ಳುವ ಇಂಥ ಹಲ್ಕೀ-ಫುಲ್ಕಿ ಕ್ಷಣಗಳು ಇಡೀ ದಿನ ತಲೆಯಲ್ಲಿ ನಡೆವ ಕಸರತ್ತಿಗೆ ಪೂರ್ವಭಾವಿಯಾಗಿ ಮನವನ್ನೊಂಚೂರು ಹಗುರ ಮಾಡಿ, ಹುರುಪು ತುಂಬುವುದು ಸತ್ಯ. 

(ದ್ಯಾಟ್ಸ್ ಕನ್ನಡ.ಕಾಮ್ ನಲ್ಲಿ ಪ್ರಕಟವಾದ ಲೇಖನ)
ಶರಶಯ್ಯೆಯಲ್ಲಿ ಪವಡಿಸಿದ ಭೀಷ್ಮ ಪ್ರತಿಜ್ಞೆ 

ನೋಡನೋಡುತ್ತ ನೂತನ ವರ್ಷ ಬಂದಿದೆ. ನಿನ್ನಿನ ದಿನಕ್ಕೂ, ಇಂದಿನದಕ್ಕೂ ಮೇಲ್ನೋಟಕ್ಕೆ ಯಾವ ವ್ಯತ್ಯಾಸವೂ ಕಾಣದಿದ್ದರೂ, ಹೊಸ ವರ್ಷದ ಹೊಸ ದಿನ ಮುಗಿದು ಇನ್ನೆರಡು ದಿನಗಳು ಮುಗಿದಿವೆ! ಗಡಿಯಾರದ ಮುಳ್ಳಿನ ಒಂದು ಚಲನೆ ಕೂಡ ಜಗತ್ತಿನ ಮೈ ಕೊಡವಿ ಎಬ್ಬಿಸಿ, ಸಂ-ಚಲನ ಮೂಡಿಸುವ ವಿದ್ಯಮಾನವೇ ಆಶ್ಚರ್ಯಕರ..ಓಹ್ ಆಕರ್ಷಕ. ಹೊಸ ವರ್ಷದೊಂದಿಗೆ ಬೆಸುಗೆ ಬಿದ್ದಿರುವ ಸಂಗತಿಗಳು ಅನೇಕ. ಪಾಶ್ಚಿಮಾತ್ಯರಿಗೆ ಧಾರ್ಮಿಕವಾಗಿ, ಸಾಮಾಜಿಕವಾಗಿ, ಸಾರ್ವತ್ರಿಕವಾಗಿ ನೂತನ ಶಕೆಯ ಆಗಮನ. ಹಲವರಿಗೆ ಹೊಸ ವರ್ಷದ ಆರಂಭ ಎಂದರೆ ಪಾರ್ಟಿ, ಪಾನಗೋಷ್ಠಿ, ಕುಣಿತ. ಮಜಾ! ಒಂದಷ್ಟು ಜನರಿಗೆ ಅವೇ ಹಳೆಯ ಗೊಂದಲ : ಹೊಸ ವರ್ಷ ಶುರುವಾಗಿ ವಾರ ಕಳೆದರೂ ಇಸ್ವಿ ಬರೆಯುವಾಗೆಲ್ಲ ಹಳೆಯದನ್ನೇ ಯಾಂತ್ರಿಕವಾಗಿ ಬರೆದು ತಿದ್ದಿ ಮತ್ತೆ ಬರೆಯುವ, ಹಳೆ ಕ್ಯಾಲೆಂಡರನ್ನೇ ದಿಟ್ಟಿಸುವ ಗೋಜಲು. ಬಹುತೇಕ ಜನರಿಗೆ ನವ ವರ್ಷದ ಹೊಸ್ತಿಲಲ್ಲಿ ಏನಾದರೂ ಒಂದು ಪ್ರತಿಜ್ಞೆ 'ನ್ಯೂ ಇಯರ್ ರೆಸೊಲ್ಯೂಶನ್' ಮಾಡುವ ಹಂಬಲ. ಚಟ ಅನ್ನಿ, ಏನೂ ತಪ್ಪಿಲ್ಲ! ಇಂಥ ಪ್ರತಿಜ್ಞೆ ಮಾಡಿ ಪಾಲಿಸುವ, ಕನಿಷ್ಠ ಆಗಾಗ ನೆನಪಾದರೂ ಮಾಡಿಕೊಳ್ಳುವ ಕೆಲವರನ್ನು ನೋಡಿ ನಾನೂ ಅದನ್ನು ರೂಢಿಸಿಕೊಂಡೆ, ಒಂದಷ್ಟು ವರ್ಷಗಳ ಹಿಂದೆ. ಪ್ರತಿಜ್ಞೆ ಮಾಡುವುದೇನೋ ಸರಿ, ಆದರೆ ಏನು ಮಾಡುತ್ತೇನೆ/ಮಾಡಲಾರೆ ಎಂದು? ಕಾಶಿಗೆ ಯಾತ್ರೆ ಹೋದವರು ತಮಗೆ ಅತ್ಯಂತ ಇಷ್ಟವಾದದ್ದನ್ನು (ಸಾಮಾನ್ಯವಾಗಿ ತಿನ್ನುವ ಒಂದು ವಸ್ತು) ಬಿಡುವುದಾಗಿ ಪ್ರತಿಜ್ಞೆ ಮಾಡಿ ಬರುವ ರೂಢಿ ಇದೆ. ಇಲ್ಲಿ ಬಿಡುವುದೇನು? ಎಲ್ಲ ನಾನೇ ರೂಢಿಸಿಕೊಂಡ ಅಭ್ಯಾಸಗಳು; ಅನೇಕ ವರ್ಷಗಳಿಂದ ಹಾಸಿ, ಹೊದೆದುಕೊಂಡು ಬಂದ ಬೆಚ್ಚನೆಯ ಮುಚ್ಚಿಗೆಗಳು. ಆದರೂ ಯುಗಾದಿ ಹಬ್ಬದಲ್ಲಿ ಬೇವು ಬೆಲ್ಲ ತಿಂದ್ಹಾಗೇ ಕಣ್ಮುಚ್ಚಿಕೊಂಡು ಆಣೆ ಮಾಡುತ್ತಿದ್ದೆ: 

1) ಈ ವರ್ಷ ಸೋಮಾರಿತನವನ್ನು ಸಂಪೂರ್ಣ ಬಿಟ್ಟು ಬಿಡುತ್ತೇನೆ. ಪ್ರತಿಯೊಂದು ಕೆಲಸವನ್ನೂ ಆಗಿಂದ್ದಾಗೆ ಮಾಡಿ ಮುಗಿಸುತ್ತೇನೆ. 
2) ಪ್ರತಿ ಬೆಳಿಗ್ಗೆ ಆರು ಗಂಟೆಗೆ ಏಳುತ್ತೇನೆ. 'ಇನ್ನೂ ಐದು ನಿಮಿಷ' ಎಂದು ಮುಸುಕೆಳೆದುಕೊಂಡು ಮುಕ್ಕಾಲು ಗಂಟೆ ಬಿಟ್ಟು ಏಳುವ ಚಟಕ್ಕೆ ಚಟ್ಟ ಕಟ್ಟುತ್ತೇನೆ. 
3) ತೂಕ ಇಳಿಸುವ ವ್ರತವನ್ನು ಪಾಲಿಸುತ್ತೇನೆ. ಕಡಿಮೆ ತಿನ್ನುತ್ತೇನೆ, ಯೋಗಾಭ್ಯಾಸ, ವ್ಯಾಯಾಮ ತಪ್ಪದೇ ಮಾಡುತ್ತೇನೆ. 
4) ಒಣಗಿದ ಬಟ್ಟೆಯನ್ನು ತಕ್ಷಣ ಮಡಿಚಿ, ಇಸ್ತ್ರಿ ಹಾಕಿ ಸಿದ್ಧವಿಟ್ಟುಕೊಳ್ಳುತ್ತೇನೆ. 
5) ಒಗೆಯಬೇಕಿರುವುದನ್ನು ಆಗಿಂದ್ದಾಗೆ ಒಗೆಯುತ್ತೇನೆ. ಕಪಾಟು, ಡ್ರಾಯರ್, ಟೇಬಲ್‌ಗಳ ಮೇಲೆ ಕಸ ಕಡಿಮೆಗೊಳಿಸಿ, ಶಿಸ್ತಿನಿಂದ ಇಟ್ಟುಕೊಳ್ಳುತ್ತೇನೆ. ಯಾವುದೇ ವಸ್ತು ಎಷ್ಟೇ ಚೆನ್ನಾಗಿರಲಿ, ನನಗೆ ಅದರ ಅವಶ್ಯಕತೆಯಿಲ್ಲ ಎಂದಾದರೆ ಬೇರೆಯವರಿಗೆ ಕೊಟ್ಟೋ, ಇಡಬೇಕಾದಲ್ಲಿ ಇಟ್ಟೋ ಅದರಿಂದ ಕಳಚಿಕೊಳ್ಳುತ್ತೇನೆ. ಎಂದಾದರೂ ಬೇಕಾಗಬಹುದು ಎಂಬ ಆಸೆಯಿಂದ ತಲೆ ಮೇಲೆ ಹೊತ್ತು ತಿರುಗುವುದಿಲ್ಲ. 
6) ಯಾವತ್ತೂ ಹೊರಡುವ ಹೊತ್ತಿಗೆ ಗಡಿಬಿಡಿಯಲ್ಲಿ ಒದ್ದಾಡುವುದನ್ನು ಬಿಟ್ಟು, ಐದು ನಿಮಿಷ ಮೊದಲೇ ಸಿದ್ಧವಾಗಿ ಆರಾಮವಾಗಿ ಹೊರಡುತ್ತೇನೆ. 
7) ಕಣ್ಣು, ಕಿವಿ ಎಲ್ಲ ಒಂದೆಡೆ ನೆಟ್ಟು, ಬಾಯಿ ತೆರೆದುಕೊಂಡು ಇಹಪರದ ಅರಿವು ಮರೆತು ಟಿವಿ ವೀಕ್ಷಿಸುವುದುನ್ನು ಬಿಟ್ಟು, ಕೈ ಕೆಲಸ ಮಾಡುತ್ತ, ಸಮಯದ ಪರಿವೆ ಇಡುತ್ತ ಮನರಂಜನೆ ಪಡೆಯುತ್ತೇನೆ. ಟಿವಿಗಿಂತ ಓದಿಗೆ ಹೆಚ್ಚು ಆದ್ಯತೆ ಕೊಡುತ್ತೇನೆ. 
8) ಹಾಲಿನ, ಚಹಾದ ಪಾತ್ರೆ ಒಲೆಯ ಮೇಲಿಟ್ಟು, ಬೇರೆಲ್ಲೋ ಲಕ್ಷ್ಯವಿಟ್ಟು, ಅದು ಚೆಲ್ಲಿ ಕರಕಲಾದ ಮೇಲೆ ತಿಕ್ಕುತ್ತಾ ಕೂಡ್ರುವ ಕಾಯಕಕ್ಕೆ ತಿಲಾಂಜಲಿಯಿಡುತ್ತೇನೆ. 
9) ಪತ್ರ, ಇ-ಪತ್ರಗಳಿಗೆ ಅಂದಂದೇ ಉತ್ತರ ಬರೆಯುತ್ತೇನೆ. ಸ್ನೇಹಿತರಿಗೆಲ್ಲ ಆಗಾಗ್ಗೆ ಕರೆ ಮಾಡುತ್ತ, ಭೇಟಿಯಾಗುತ್ತ ಸಂಪರ್ಕವನ್ನು ಬಲಪಡಿಸುತ್ತೇನೆ. 
10) ಮುಂದೊಂದು ದಿನ ಮತ್ತೆ ಓದುತ್ತೇನೆ/ಬೇಕಾದೀತು ಎಂದು ಪತ್ರಿಕೆಗಳ ಗುಡ್ಡೆ ಹಾಕಿ, ಇನ್ನು ಅವನ್ನು ಇಡಲು ಜಾಗವೇ ಇಲ್ಲ ಎಂಬ ಸ್ಥಿತಿ ಬಂದಾಗ ಹಳೇ ಪೇಪರ್ ಕೊಳ್ಳುವವರನ್ನು ಹುಡುಕುವ ಹಳೆ ಚಾಳಿ ಕಳೆಯುತ್ತೇನೆ. 
11) ಸಿಟ್ಟು ಕಡಿಮೆ ಮಾಡುತ್ತೇನೆ. ಟೆನ್ಶನ್ ದೂರವಿಡುತ್ತೇನೆ. 
12) ಕಚೇರಿಗೆ ತಡವಾಗಿ ಹೋಗುವುದಿಲ್ಲ. ಬದಲಾಗಿ ಐದು ನಿಮಿಷ ಮೊದಲೇ ನನ್ನ ಕುರ್ಚಿಯಲ್ಲಿರುತ್ತೇನೆ. 
13)........ 
14)....... 
15)....... 
ನನ್ನ ಕೆಲವು ಸಾಂಪ್ರದಾಯಿಕ ಪ್ರತಿಜ್ಞೆಗಳಿವು. ಇವತ್ತಿಗೂ ಪ್ರತಿಜ್ಞಾ ಪಟ್ಟಿಯಲ್ಲಿ ಫ್ರೆಶ್ ಆಗಿ, ಅಗ್ರಗಣ್ಯರಾಗಿ ಇವೆ. ಏಕೆಂದರೆ ಯಾವುದನ್ನೂ ನಾನು ಜನವರಿ ಎರಡನೇ ವಾರಕ್ಕಿಂತ ಮುಂದೆ ಪಾಲಿಸಿಕೊಂಡು ಹೋಗಿದ್ದಿಲ್ಲ. ಈಗ ಇನ್ನೂ ಒಂದಷ್ಟು ಹೊಸ '....ತ್ತೇನೆ'ಗಳು ಸೇರಿಕೊಂಡು ಪಟ್ಟಿ ಉದ್ದವಾಗಿದೆಯೇ ಹೊರತು, ಯಾವುದೂ ಪಾಲನೆಯಾಗಿ, ಅನವಶ್ಯಕವಾಗಿದ್ದಿಲ್ಲ. ನನ್ನವಲ್ಲವಾದರೂ ನಮ್ಮಲ್ಲಿ ಚಾಲ್ತಿಯಲ್ಲಿರುವ ಇನ್ನೊಂದಿಷ್ಟು ಪ್ರತಿಜ್ಞೆಗಳಿವೆ. ಬಹಳಷ್ಟು ಜನ ಅನುಸರಿಸುವ, ಕನಿಷ್ಠ ಪಕ್ಷ ಹೊಸ ವರ್ಷವನ್ನು ಸ್ವಾಗತಿಸುವ ಎಕ್ಸೈಟ್‌ಮೆಂಟ್‌ನಲ್ಲಿ, ಬದ್ಧತೆಯ ಹಂಗಿಲ್ಲದೇ ಮೈಮೇಲೆ ಎಳೆದುಕೊಳ್ಳುವ ಪ್ರತಿಜ್ಞೆಗಳಿವು: 
1) ಈ ವರ್ಷ ಖಂಡಿತ ಕುಡಿಯುವುದಿಲ್ಲ. 
2) ಯಾವ ಕಾರಣಕ್ಕೂ ತಂಬಾಕು ಹಾಕುವುದಿಲ್ಲ/ ಧೂಮಪಾನ ಮಾಡುವುದಿಲ್ಲ. 
3) ಮೊಬೈಲ್‌ಗೆ ಅಂಟಿಕೊಳ್ಳುವುದಿಲ್ಲ. ತೀರಾ ಅಗತ್ಯವಿದ್ದರೆ ಮಾತ್ರ ಮಾತನಾಡುತ್ತೇನೆ. 
4) ಒಳ್ಳೊಳ್ಳೆಯ ಪುಸ್ತಕಗಳನ್ನು ಓದುತ್ತೇನೆ. 
5) ಮಾತಿನ ಶೈಲಿ/ಬಾಡಿ ಲ್ಯಾಂಗ್ವೇಜ್/ಅಪ್ರೋಚ್ ಅನ್ನು ಸುಧಾರಿಸಿಕೊಳ್ಳುತ್ತೇನೆ. 
6) ಎಲ್ಲರೆದುರು ಮೂಗಿನಲ್ಲಿ ಬೆರಳಾಡಿಸುವುದಿಲ್ಲ/ ಕಾಲು ಕುಣಿಸುವುದಿಲ್ಲ/ ತಲೆ ಕೆರೆದುಕೊಳ್ಳುವುದಿಲ್ಲ. 
7) ಬೇರೆಯವರ ವಿಷಯದಲ್ಲಿ ತಲೆ ತೂರಿಸುವುದಿಲ್ಲ, ಬಾಯಿ ಹಾಕುವುದಿಲ್ಲ. 
8) ಸಮಾಜಕ್ಕೆ ಒಳ್ಳೆಯದಾಗುವಂತಹ ಕೆಲಸಗಳನ್ನು ಮಾಡುತ್ತೇನೆ. 
.................... 
ಈ ಹೊಸ ವರ್ಷದ ಹೊಸ್ತಿಲ ಪ್ರತಿಜ್ಞೆಗಳೇ ಹೀಗೆ. ಆರಂಭದ ಒಂದು ವಾರ, ಹೆಚ್ಚೆಂದರೆ ಇನ್ನೊಂದೆರಡು ವಾರ ಪ್ರತಿಜ್ಞೆ ಕೈಗೊಂಡ ಬಹುತೇಕರೆಲ್ಲ ಅದರ ಗುಲಾಮರು. ಭಾರಿ ಮನ್ನಣೆ ಅದಕ್ಕೆ. ಮೂರನೇ ವಾರ ಕಳೆಯುತ್ತಿದ್ದಂತೆಯೇ ಗುಲಾಮಗಿರಿ ಸಾಕಾಗಿ, ಪ್ರತಿಜ್ಞಾ ಶೂರರೆಲ್ಲ 'ಇವತ್ತೊಂದಿನ ಮಾಫ್' ಎಂಬ ಮನಸ್ಥಿತಿಗೆ ಬಂದು ಮುಟ್ಟುತ್ತಾರೆ. ಆ 'ಇವತ್ತು' ಮುಗಿಯುವುದಲ್ಲ. ಪ್ರತಿದಿನವೂ ಮಾಫಿ ಮುಂದುವರಿದು ಆಗಲೇ ಮೂರ್‍ನಾಲ್ಕು ತಿಂಗಳು ಕಳೆದುಬಿಟ್ಟಿರುತ್ತದೆ. ಅಲ್ಲಿಗೆ ಹೊಸ ವರ್ಷದ ಪ್ರತಿಜ್ಞೆಯೆಂಬುದು ಹಳೆಯದಾಗಿ, ಹಳಸಲಾಗಿ ಹಾಸಿಗೆ-ಹೊದಿಕೆಯಡಿ ಮುದುಡಿರುತ್ತದೆ, ಮದ್ಯದ ಗುಟುಕಿನಲ್ಲಿ ಕರಗಿರುತ್ತದೆ, ತಂಬಾಕಿನ ಧೂಮದಲ್ಲಿ ಮಸುಕಾಗಿರುತ್ತದೆ. ಅಲ್ಲಿಗೆ, ಅದರೆಡೆಗಿನ ಬದ್ಧತೆ ಸುದೀರ್ಘ ನಿದ್ದೆಗೆ ತೆರಳಿ, 'ಸರಿ, ಈ ವರ್ಷ ಮುಗಿವವರೆಗೆ ಹೀಗಿದ್ದರಾಯ್ತು. ಮುಂದಿನ ವರ್ಷದಿಂದ ಖಂಡಿತಾ ಸುಧಾರಿಸಬೇಕು' ಎಂಬ ಪಲಾಯನವಾದ ಆವರಿಸಿಕೊಳ್ಳುತ್ತದೆ. ಮತ್ತೆ ಹುಟ್ಟಿ ಬರುತ್ತದೆ ಹೊಸ ವರ್ಷದ ಮೊದಲ ದಿನ; ಈಗ ಬಂದಂತೆ. ಪ್ರತಿಜ್ಞೆಗಳೂ ಹುಟ್ಟುತ್ತವೆ!

(ದ್ಯಾಟ್ಸ್ ಕನ್ನಡ.ಕಾಮ್ ನಲ್ಲಿ ಪ್ರಕಟವಾದ ಲೇಖನ)