ಭಾನುವಾರ, ಜೂನ್ 7, 2015

ಅ ಫಾರ್ ಅಯ್ಯೋ, ಪ ಫಾರ್ ಪಾಪ

ಸಿಂಗಪುರಕ್ಕೆ ಬಂದ ಹೊಸದರಲ್ಲಿ ಇಲ್ಲಿನ ಕನ್ನಡ ಸಂಘದ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. 'ಕನ್ನಡ ಕಲಿ' ಕಾರ್ಯಕ್ರಮದ ಅಂಗವಾಗಿ ಹೊಸದಾಗಿ ಕನ್ನಡ ಓದಲು ಬರೆಯಲು ಕಲಿತಿದ್ದ ಮಕ್ಕಳೆಲ್ಲ ವೇದಿಕೆ ಹತ್ತಿ ಸಂಭ್ರಮಿಸುತ್ತಿದ್ದರು. 'ಒಂದು ಎರಡು, ಬಾಳೆಲೆ ಹರಡು'- ಹಿರಿ ಕಿರಿಯ ಕಂಠಗಳಲ್ಲಿ ಧ್ವನಿ ಹೊರಡುತ್ತಿದ್ದಂತೆ ತಂತಾನೇ ನನ್ನ ಕಣ್ಣುಗಳಲ್ಲಿ ನಗು ಇಣುಕಿತು. ಮನಸ್ಸು ನನ್ನ ಕುಮಾರ ಕಂಠೀರವನಿಗೆ ಕನ್ನಡ ಕಲಿಸಲು ಮುಂದಾದ ಸಮಯದ ಮಜಕೂರುಗಳನ್ನು ಮೆಲುಕಾಡತೊಡಗಿತು.
ನಮ್ಮ ಹಿರಿಯರು 'ಮನೆಯೆ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರುವು' ಎಂದು ಸುಲಭಕ್ಕೆ ಹೇಳಿ ಬಿಟ್ಟರು. ಈ ಗಾದೆ ರೂಪುಗೊಂಡ ಸಮಯದಲ್ಲಿ ಸಂಸ್ಕಾರ, ಸಂಸ್ಕೃತಿ, ಜೀವನ ವಿಧಾನ, ಹೆಚ್ಚೆಂದರೆ ಒಂದು ಭಾಷೆ... ಇಷ್ಟನ್ನೇ ಮಕ್ಕಳು ಕಲಿಯುತ್ತಿದ್ದುದು, ಅಮ್ಮಂದಿರು ಕಲಿಸುತ್ತಿದ್ದುದು. ಮೇಲಾಗಿ ಕಲಿಸುವವರು ಅಕ್ಕರೆಯ ಅಮ್ಮನಾಗಿರಲಿ, ಹಿರಿಯ ಬಂಧುವಾಗಿರಲಿ ಇಲ್ಲವೇ ಹೆದರಿಸುವ ಮಾಸ್ತರಾಗಿರಲಿ... ಅವರು ಹೇಳಿಕೊಟ್ಟಿದ್ದನ್ನು ಸಂಪೂರ್ಣ ಒಪ್ಪಿ, ಅನೂಚಾನವಾಗಿ ತಿದ್ದಿ-ತೀಡಿ ಕರಗತ ಮಾಡಿಕೊಳ್ಳುವುದು ಕಲಿಯುವವರ ಧರ್ಮವಾಗಿತ್ತು. 'ಕನ್ನಡದಲ್ಲಿ ಅಃ/ಅನುನಾಸಿಕಗಳು ಏಕಿವೆ, ಒಂದೇ ಉಚ್ಚಾರಕ್ಕೆ ಶ-ಷ ಎರಡು ಅಕ್ಷರ ಏಕೆ' ಎಂದೆಲ್ಲ ಆಗಿನ 'ಸಾಮಾನ್ಯ' ವಿದ್ಯಾರ್ಥಿಗಳು ಪ್ರಶ್ನಿಸಿದ್ದು ಕಡಿಮೆಯೇ, ಒಂದೊಮ್ಮೆ ಕೇಳಿದ್ದರೂ ಬರುತ್ತಿದ್ದ ಉತ್ತರ ಹೆಚ್ಚುಕಡಿಮೆ ಒಂದೇ-'ಸಾಕು ತಲೆಹರಟೆ!'
ವರುಷಗಳ ಹಿಂದೆ ಒಂದು ಪಾಟಿಯಲ್ಲಿ 'ಅಆಇಈ' ಬರೆದು, 'ಇದನ್ನು ತಿದ್ದು ಮಗಳೇ' ಎಂದು ಕೈಗಿತ್ತ ಹೊತ್ತಿನಲ್ಲಿ ನನ್ನಮ್ಮನಿನೂ ಇಂಥ ವಿಚಾರ ಹೊಳೆದಿರಲಿಕ್ಕಿಲ್ಲ. ನಾನೂ ಅಷ್ಟೇ, ಉಲ್ಟಾ ಮಾತಾಡದೇ ಅಮ್ಮ ಬರೆದಿದ್ದನ್ನು ತಿದ್ದುತ್ತಾ ಹೋಗಿದ್ದೆ. ಕಾಲವೂ ಬಹಳ ಸರಳವಾಗಿತ್ತು. ನನ್ನಂಥ ಬಹುಪಾಲು ಮಕ್ಕಳಿಗೆ ಐದನೆತ್ತಿಯವರೆಗೆ ಒಂದೇ ಭಾಷೆ-ಕನ್ನಡ. ಆಮೇಲೆ ಇಂಗ್ಲೀಷ್, ಹಿಂದಿ ಎಲ್ಲ ಬಂದಿದ್ದು. ಮಾಸ್ತರು 'ಸಿಯುಟಿ-ಕಟ್, ಪಿಯುಟಿ-ಪುಟ್' ಎಂದು ಹೇಳಿ ಕೊಟ್ಟರು, ನಾವೂ ಪೀಂ ಪಿಟ್ ಎನ್ನದೇ ತೌಡು ಕುಟ್ಟುತ್ತಾ ಹೋಗಿದ್ದೆವು. ಆಗೆಲ್ಲ ಏನಿದ್ದರೂ ಸ್ಪೆಲ್ಲಿಂಗ್, ಅರ್ಥ ಇವೆರಡಕ್ಕೆ ಮಾತ್ರ ಲಕ್ಷ್ಯ. ಫೋನಿಕ್ಸ್, ವ್ಯುತ್ಪತ್ತಿ ಇಂಥವೆಲ್ಲ ನಮ್ಮ ಬ್ರಹ್ಮಾಂಡದಲ್ಲಿ ಅಸ್ತಿತ್ವದಲ್ಲೇ ಇರಲಿಲ್ಲ.
'ಒಂದು ಮಗು ಹುಟ್ಟಿದಾಗ ಒಬ್ಬ ತಾಯಿಯೂ ಜನ್ಮ ತಾಳುತ್ತಾಳೆ' ಎಂಬ ಮಾತಿದೆ, ಹಾಗೇ ಒಂದು ಮಗುವಿನಲ್ಲೊಬ್ಬ 'ವಿದ್ಯಾರ್ಥಿ' ಹುಟ್ಟಿಕೊಳ್ಳುತ್ತಿದ್ದಂತೆ ಅಮ್ಮನಲ್ಲೂ ಒಬ್ಬ 'ಗುರು'ವಿನ ಸೃಷ್ಟಿಯಾಗುತ್ತದೆ. ನಾನು ಅಮ್ಮನಾದ ಮೇಲೆ, ನನ್ನ ಮಗನಿಗೆ ಬರೆಯುವುದನ್ನು ಕಲಿಸುವ ಸಂದರ್ಭ ಬಂದಾಗಲೇ ಈ ಗುರು ಪದವಿಯ ಗುರುತರ ಜವಾಬ್ದಾರಿ ಮತ್ತು ಅರಿವಾಗಿದ್ದು.
ಅವನ ತಲೆಮಾರಿನ ಬಹುತೇಕರಂತೆ ಅವನೂ ಮೊದಲು ಇಂಗ್ಲೀಷ್ ಓದಲು, ಬರೆಯಲು ಕಲಿತ. ಮೂರನೇ ವರ್ಷದವರೆಗೆ ಅಚ್ಚ ಕನ್ನಡ ಮಾತ್ರ ಅರಿತಿದ್ದ ಆತ ಶಾಲೆಯಲ್ಲಿ ಆಂಗ್ಲ ಭಾಷೆಗೆ ತೆರೆದುಕೊಳ್ಳುತ್ತಿದ್ದಂತೆಯೇ ಮನದ ಮೂಲೆಗಳಲ್ಲಿ ಕನ್ನಡ ನಿಧಾನಕ್ಕೆ ಮಸುಕಾಗತೊಡಗಿತು. ಆ ಸಮಯದಲ್ಲಿ ನಾವು ಯುಎಸ್ಎಯಲ್ಲಿ ಇದ್ದುದರಿಂದ ಆತ ಇಂಗ್ಲೀಷ್ ಕಲಿಯಬೇಕಾದ ಒತ್ತಡ ಇತ್ತು. ಹಾಗಾಗಿ ಕನ್ನಡದ ಗೂಡಲ್ಲಿ ಆಂಗ್ಲ ಕೋಗಿಲೆ ಇಟ್ಟ ಮೊಟ್ಟೆಗಳಿಗೆ ನಾವೂ ಅನಿವಾರ್ಯವಾಗಿ ಕಾವು ಕೊಟ್ಟೆವು. ಆತ ಆ ಭಾಷೆಗೆ ಒಗ್ಗಿಕೊಂಡು, ಸರಾಗವಾಗಿ ಓದಲು, ಬರೆಯಲು ಕಲಿತ ಮೇಲೆ, ಮತ್ತೆ ಕನ್ನಡದ ಬಳಕೆಯ ಮೇಲೆ ಜಮೆಗೊಂಡಿದ್ದ ದೂಳು ಒರೆಸುವ ಕೆಲಸ ಶುರುವಾಯಿತು. ಕರ್ನಾಟಕದಲ್ಲಿ ಕನ್ನಡ ಪರಿಸರದ ನಡುವೆ ಇದ್ದು ಆ ಭಾಷೆಯನ್ನು ಕಲಿಸುವಷ್ಟು ಸುಲಭವಲ್ಲ, ದೂರ ದೇಶದಲ್ಲಿ ಕನ್ನಡದ ಗಂಧ ಗಾಳಿ ಇಲ್ಲದೆಡೆ ಕಲಿಸುವುದು. ಸಿಂಗಪುರದ ಕನ್ನಡಿಗ ಮಕ್ಕಳು ಜೊತೆಗಾರರ ಉಮೇದಿಗಾದರೂ ಕಲಿತರೇನೋ, ನನ್ನ ಮಗನಿಗೆ ಸಹಕನ್ನಡಿಗ ಸ್ನೇಹಿತರೂ ಇರಲಿಲ್ಲ.
ಒಂದಿನ ಕನ್ನಡ ಅಕ್ಷರಗಳನ್ನು ಹೇಳಿ ಅದರಿಂದ ಆರಂಭವಾಗುವ ಶಬ್ದಗಳನ್ನು ಹೇಳಿಸುತ್ತಿದ್ದೆ. ಅ-ಅರಸ, ಆ-ಆನೆ ಎಂಬ ನಮ್ಮ ಡಿಫಾಲ್ಟ್ ಪದ ವಿಸ್ತಾರ ಅವನಿಗೆ ಪರಿಚಯವಿರಲಿಲ್ಲ. ಹಾಗಾಗಿ ಸುಲಭ ಶಭ್ದಗಳಲ್ಲಿ 'ಅ-ಅನ್ನ, ಆ-ಆ ಕಡೆ, ಇ-ಇದು, ಈ-ಈ ಕಡೆ...' ಹೀಗೆ ನಮ್ಮ ಅಭ್ಯಾಸ ಶುರುವಾಯಿತು. 'ಐ'ಗೆ ಒಂದು ಶಬ್ದ ಹೇಳು ಅಂದೆ- 'ಐಯ್ಯೋ' ಎಂದ. ಫೋನಿಕ್ಸ್ ವಿಧಾನದಲ್ಲಿ ಆಂಗ್ಲ ಭಾಷೆಯನ್ನು ಕಲಿತಿದ್ದ ಮಗ, ಅದೇ ನಿಯಮಗಳನ್ನು ಕನ್ನಡಕ್ಕೂ ಅನ್ವಯಿಸಿ 'ಅಯ್ಯೋ'ಗೆ ಐಯ್ಯೋ ಎಂದಿದ್ದು ನೋಡಿ ನಗು ತಡೆಯಲಾಗಲಿಲ್ಲ. ಅವನಿಗೋ, ಗೊಂದಲ! ಇಷ್ಟು ಸರಳ ಉದಾಹರಣೆಗೆ ಅಮ್ಮ ನಗುತ್ತಿದ್ದಾಳಲ್ಲ ಎಂದು. ಆ ಹೊತ್ತಿಗೆ ಕನ್ನಡ ಬರೆಯಲು ಗೊತ್ತಿಲ್ಲದಿದ್ದ ಅವನಿಗೆ ತಿಳಿಸಿ ಹೇಳುವಷ್ಟರಲ್ಲಿ ನನ್ನ ಸ್ಥಿತಿ 'ಅಯ್ಯೋ' ಎನ್ನುವಂತಾಗಿತ್ತು.
ಅಂತೂ ಹಳಿ ತಪ್ಪಿ, ಅಯೋಮಯವಾಗಿದ್ದ 'ಅಯ್ಯೋ'ವನ್ನು ಸ್ವಸ್ಥಾನಕ್ಕೆ ತಂದಿಳಿಸಿ ನಮ್ಮ ಪದಬಂಡಿ ಮುಂದುವರಿಯಿತು. ಒ-ಒಂದು, ಓ-ಓಡೋದು... ಔ- 'ಅವ್ ಹೋಗ್ತ'....!! ಮತ್ತದೇ ಫೋನಿಕ್ಸ್ ತಮಾಷೆ. ನಮ್ಮ ಮನೆ ಮಾತು 'ಹವ್ಯಕ ಕನ್ನಡ'ದಲ್ಲಿ 'ಅವು' ಎಂದರೆ 'ಅವರು' ಎಂದರ್ಥ. ಮಗನಿಗೆ ಗೊತ್ತಿದ್ದಿದ್ದು ಅದೊಂದೇ ಕನ್ನಡವಾದ್ದರಿಂದ ಅವನ ಪ್ರಕಾರ ಈ ಪದ ವಿಸ್ತಾರವೂ ಕಾಯಿದೆಶೀರು ಇತ್ತು. ವಿಧಿ ಇಲ್ಲದೇ ನಾನೇ ಔ-ಅವು, ಅಂ-ಅಮ್ಮ...ಗಳನ್ನೆಲ್ಲ 'ಅಕ್ರಮ-ಸಕ್ರಮ' ಮಾಡಿಕೊಂಡೆ.
ವರ್ಣಮಾಲೆಯನ್ನು ಕಲಿತು ಮುಗಿಸುವ ಹೊತ್ತಿಗೆ 'ಒತ್ತಕ್ಷರ'ದ ತಲೆ ಬಿಸಿ ಶುರುವಾಯ್ತು. ಇಂಗ್ಲೀಷಿನಂತೆ ಇನ್ನೊಂದ್ಸಲ ಅದೇ ಅಕ್ಷರವನ್ನು ಬರೆದರೆ ಆಯ್ತಪ್ಪ, ಒಂಚೂರೂ ಹೋಲಿಕೆ ಇಲ್ಲದ ಹೊಸದೊಂದು ಒತ್ತು ಬಂದು ಗತ್ತು ಮಾಡುವುದೇಕೆ ಎಂದವನ ಪ್ರಶ್ನೆ. ಯಥಾ ಪ್ರಕಾರ 'ಅಮ್ಮ' ಎಂದರೆ 'ಅ-ಮ-ಮ-ಅ' ಎಂದೂ, 'ಅಪ್ಪ' ಎಂದರೆ 'ಅ-ಪ-ಪ-ಅ' ಎಂದೆಲ್ಲ ಬರೆದು, ಅಳಿಸಿ... ಅಂತೂ ಇಂತೂ ಒತ್ತಕ್ಷರ ಕೈಗೆ ಹತ್ತುವಷ್ಟರಲ್ಲಿ ನೆತ್ತಿ ಹೊತ್ತಿ ಉರಿದಷ್ಟು ಸುಸ್ತು!
ಇಷ್ಟೆಲ್ಲ ಕಷ್ಟಪಟ್ಟು ಕಲಿತ ಕನ್ನಡ ಭಾರತದಲ್ಲಿ ಒಂದನೆಯ ತರಗತಿ ಓದುತ್ತಿದ್ದಾಗ ಅಂತೂ ಅನುಕೂಲಕ್ಕೆ ಬಂತು. ಶಾಲಾ ಪುಸ್ತಕದ ಜೊತೆ ಬಸ್ಸಿನ ಬೋರ್ಡ್, ನಿಯತಕಾಲಿಕಗಳು ಎಲ್ಲ ಓದುವ ಮಟ್ಟಕ್ಕೆ ಅವ ಬಂದ. ಇನ್ನೇನು ಮಗ ನನ್ನ ಫೇವರಿಟ್ ಆದ ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳನ್ನು ಓದುತ್ತಾನೆ, ಮಾರ-ಪ್ಯಾರ, ಕರ್ವಾಲೋ, ಜುಗಾರಿ ಕ್ರಾಸ್ ಎಂದೆಲ್ಲ ಅವನ ಜೊತೆ ಕಥೆ ಹೊಡೆಯಬಹುದು ಎಂದು ಹಗಲುಕನಸು ಕಾಣುವ ಹೊತ್ತಿಗೆ ಸಿಂಗಪುರ ಕೈ ಬೀಸಿ ಕರೆದಿತ್ತು.
ಇಲ್ಲಿ ಬರುತ್ತಿದ್ದಂತೆ ಹಿಂದಿ ಕಲಿಯಬೇಕಾದ ಅನಿವಾರ್ಯತೆ, ಅದೂ ಸೀದಾ ಎರಡನೆತ್ತಿ ಲೆವೆಲ್ಗೆ, ವ್ಯಾಕರಣದ ಜೊತೆಗೆ. ಮತ್ತೆ ನಮ್ಮ 'ಅ,ಆ,ಇ,ಈ' ಶುರು. ಈ ಬಾರಿ ಅವನಿಗೆ ಸಂಪೂರ್ಣ ಅಪರಿಚಿತವಾಗಿದ್ದ ಭಾಷೆಯಲ್ಲಿ. ಅದು ಇನ್ನೊಂದು ರಾಮಾಯಣ ಬಿಡಿ!
ಹೊರನಾಡಿನಲ್ಲಿ ಕನ್ನಡ ಕಲಿಕೆಗೆ ಇರುವ ಅಡ್ಡಿ ಅನೇಕ. ಮೇಲಿನ ತರಗತಿಗಳಿಗೆ ಬರುತ್ತಿದ್ದಂತೆ ಮಕ್ಕಳ ಆಂಗ್ಲ ಭಾಷಾ ಬಳಕೆ ಹೆಚ್ಚಾಗುತ್ತದೆ. ಶಾಲೆಯ ಪುಸ್ತಕಗಳ ಜೊತೆಗೆ ಅವರು ಓದುವ ಇತರ ಮನರಂಜನೆಯ, ಜ್ಞಾನಾರ್ಜನೆಯ ಪುಸ್ತಕಗಳೆಲ್ಲ ಆಂಗ್ಲ ಭಾಷೆಯವು. ಕನ್ನಡ ಕಣ್ಣಿಗೆ ಬೀಳುವುದೇ ಅಪರೂಪ. ಬಿದ್ದರೂ ಪಕ್ಕದಲ್ಲಿ ಅದರ ಆಂಗ್ಲ ಭಾಷಾಂತರ ರೂಪ ಲಭ್ಯ, ಬಹುತೇಕ ಸಂದರ್ಭಗಳಲ್ಲಿ. ಕನ್ನಡ ಅಕ್ಷರ ಹೆಕ್ಕಿ ಹೆಕ್ಕಿ, ಪದ ಜೋಡಿಸಿ, ವಾಕ್ಯ ಮಾಡಿ ಅರಿತುಕೊಳ್ಳುವಷ್ಟು ಆಸಕ್ತಿ, ಸಹನೆ ಎರಡೂ ಇಂದಿನ ವೇಗಗತಿಯ ಸಮಾಜದಲ್ಲಿ ಬೆಳೆಯುತ್ತಿರುವ ಮಕ್ಕಳಲ್ಲಿಲ್ಲ. ಇನ್ನು ಅವರ ಉಚ್ಚಾರಣೆಯೋ!? ಗೌರಮ್ಮನ್ನಿಗೆ ಗೌನ್ ತೊಡಿಸಿದಂತೆ. ನನ್ನ ಬಂಧುವೊಬ್ಬರ ಮಕ್ಕಳಿಬ್ಬರು ಅಮೆರಿಕದಲ್ಲಿ ಹುಟ್ಟಿ ಬೆಳೆದವರು. ಭಾರತಕ್ಕೆ ಬಂದಾಗ, ಅಜ್ಜ-ಅಜ್ಜಿಗೆ ಇಂಗ್ಲೀಷ್ ಬರುವುದಿಲ್ಲ ಎಂಬ ಕಾರಣಕ್ಕೆ, ಅಮ್ಮನ ಒತ್ತಾಯಕ್ಕೆ ಕನ್ನಡ ಮಾತನಾಡುತ್ತಾರೆ. ಅವರ 'ನನ್ ಖೇಯ್, ನನ್ ಕ್ಯಾಲ್' ಎಂಬ ಉಚ್ಚಾರ ಕೇಳುವುದಕ್ಕೆ ತಮಾಷೆಯಾಗಿರುತ್ತದೆ, ಆದರೆ ಅಷ್ಟಾದರೂ ಕನ್ನಡ ಮಾತನಾಡುತ್ತಾರಲ್ಲ ಎಂಬುದೊಂದು ಸಮಾಧಾನ. ಏಕೆಂದರೆ ಈಗೀಗ ಹೊರ ದೇಶಗಳಲ್ಲಿ ಹೋಗಲಿ, ಬೆಂಗಳೂರಲ್ಲಿ ಸಹ ಇಬ್ಬರು ಕನ್ನಡಿಗ ಮಕ್ಕಳು ಸೇರಿದರೆ, ಅವರು ಮಾತನಾಡುವುದು ಇಂಗ್ಲೀಷಿನಲ್ಲಿ. ಗೆಳೆಯನ ಧಾರವಾಡ ಕನ್ನಡ ಮಂಡ್ಯದ ಹುಡುಗನಿಗೆ ಬರುವುದಿಲ್ಲ, ಗೆಳತಿ ಮನೆಯಲ್ಲಾಡುವ ಕುಂದಾಪುರ ಕನ್ನಡ ಹವ್ಯಕರ ಹುಡುಗಿಗೆ ಗೊತ್ತಿಲ್ಲ. ಇನ್ನು ಬೆಂಗಳೂರಿನ ಸ್ಥಳೀಯ ಕನ್ನಡವೋ, ಅದಕ್ಕೆ ಸ್ವಂತಿಕೆಯೇ ಇಲ್ಲ!
ತೇಜಸ್ವಿಯವರ ಪುಸ್ತಕಗಳನ್ನು ಮಗ ಎಂದು ಓದುತ್ತಾನೋ ಗೊತ್ತಿಲ್ಲ, ಹಳ್ಳಿಗೆ ಹೋದಾಗ ಬೋರ್ಡ್ ನೋಡಿಕೊಂಡು ಬಸ್ ಹತ್ತುವಷ್ಟಾದರೂ ಗೊತ್ತಿರಲಿ ಎಂದು ಪ್ರತಿಬಾರಿ ರಜೆ ಬಂದಾಗಲೂ ಅವನ ಕನ್ನಡ ವರ್ಣಮಾಲೆ, ಕಾಗುಣಿತ ತಿದ್ದಿ ತೀಡುವ ಕಾರ್ಯಕ್ರಮ ತಪ್ಪದೇ ಹಮ್ಮಿಕೊಳ್ಳುತ್ತೇನೆ. ತಡವರಿಸದೇ, ಅಳುಕದೇ ಅರ್ಧ ಪುಟ ಓದುವಷ್ಟು ಆತ ತಯಾರಾಗುವ ಹೊತ್ತಿಗೆ ರಜೆ ಮುಗಿದು ಮತ್ತೆ ಶಾಲೆ ಶುರುವಾಗುತ್ತದೆ. ಕನ್ನಡ ದೀರ್ಘಕಾಲದ ರಜೆಯ ಮೇಲೆ ತೆರಳುತ್ತದೆ.
-ರೇಖಾ ಹೆಗಡೆ ಬಾಳೇಸರ


ಕನ್ನಡ ಸಂಘ (ಸಿಂಗಪುರ)ದ ದ್ವೈವಾರ್ಷಿಕ ಪತ್ರಿಕೆ 'ಸಿಂಗಾರ'ದಲ್ಲಿ ಪ್ರಕಟಗೊಂಡ ಲೇಖನ

ಮಂಗಳವಾರ, ಜನವರಿ 13, 2015

ಸಲಹೆಯೆಂಬ ಶೂಲ

ಹಕ್ಕುತ್ಯಾಗ ಘೋಷಣೆ: ಈ ಲೇಖನದಲ್ಲಿ ಬರುವ ಉದಾಹರಣೆಗಳು ಯಾವುದೇ ಪ್ರತ್ಯೇಕ ವ್ಯಕ್ತಿಗೆ ಸಂಬಂಧಿಸಿಲ್ಲ. ಅಕಸ್ಮಾತ್ ಯಾರಿಗಾದರೂ ಹೋಲಿಕೆಯಾಗುತ್ತಿದೆಯಾದರೆ ... ಒಂದ್ಕೆಲಸ ಮಾಡಿ, ನಿಡಿದಾದ ಶ್ವಾಸ ತಗೊಂಡು ನಿಧಾನವಾಗಿ ಉಸಿರು ಬಿಡಿ. ಇದನ್ನೇ ಉದ್ದಕ್ಕೂ ಮುಂದುವರೆಸುತ್ತ, 'ಬರೆದಿದ್ದು ನಿಮ್ಮ ಬಗೆಗಲ್ಲ, ಪಕ್ಕದ ಮನೆಯವರ ಬಗ್ಗೆ' ಎಂದುಕೊಂಡು ಪೂರ್ತಿ ಲೇಖನ ಓದಿಬಿಡಿ. ಹೆಚ್ಚುವ(ಉ)ರಿ ಉಪಶಮನಕ್ಕಾಗಿ ಒಂದ್ಲೋಟ ತಂಪು ಮಜ್ಜಿಗೆ ಕುಡಿಯಿರಿ, ಸೌತೆಕಾಯಿ ತಿನ್ನಿ....

ನಾಲ್ಕು ಜನ ಸೇರಿದರೆಂದರೆ ನಲವತ್ತು ವಿಚಾರ ಚರ್ಚೆಯಾಗುತ್ತವೆ. ಅದರಲ್ಲಿ ಅರ್ಧದಷ್ಟು ಸಲಹೆಗೆ ಸಂಬಂಧಿಸಿದ್ದೇ. ಬೇಕಾದ್ದು, ಬೇಡದ್ದು, ಕೇಳಿ ಪಡೆದದ್ದು, ಉಪಯುಕ್ತ ವಿನಿಮಯ, ಉಚಿತವಾಗಿ ಉದುರಿಸಿದ್ದು... ಅಂತೂ ಎಲ್ಲವೂ ಸಲ್ಲುತ್ತವೆ ಇಂಥ ಮಾತುಕತೆಗಳಿಗೆ. 'ಬಿಟ್ಟಿಯಾದ್ರೇನಂತೆ, ವೆರೈಟಿ ಬೇಕು' ಅನ್ನುವವರಿಗೆ ಅದು ಸಿಗುವುದು ಸಲಹೆಗಳಲ್ಲಿ ಮಾತ್ರ. ಆಹಾ! ಏನು ವೈವಿಧ್ಯ, ಏನು ವಿಸ್ತಾರ ಈ ಸಲಹಾಸಮುದ್ರ!
ಹಲವರ ಸಲಹೆಗಳು 'ಹಿತನುಡಿ'ಗಳಿದ್ದಂತೆ. ಅವರು ಪ್ರೀತಿಯಿಂದ ಹೇಳಿದ್ದನ್ನು ಪಾಲಿಸುವುದು ಸುಲಭ, ಪರಿಣಾಮವೂ ಹಿತಕಾರಿ. ಇನ್ನು ಕೆಲವರದ್ದು 'ಹಿತೋಪದೇಶ', ಅವರ ಸಲಹೆಯಲ್ಲಿ ಪ್ರೀತಿ, ಕಾಳಜಿಯ ಜೊತೆಗೆ ಅದನ್ನು ಪಾಲಿಸಬೇಕೆಂಬ ಆಗ್ರಹವೂ ಇರುತ್ತದೆ. ಮತ್ತೊಂದಷ್ಟು ಜನರಿರುತ್ತಾರೆ, ಅವರ ಸಲಹೆ ಹಿತವೂ ಇಲ್ಲ, ಮಿತವೂ ಇಲ್ಲ- ಬರೀ ಉಪದೇಶ ಮಾತ್ರ. ಇಂಥ ಜನ ಸಾಮಾನ್ಯವಾಗಿ 'ನನಗೆಲ್ಲ ಗೊತ್ತು' ಸಿಂಡ್ರೋಂನಿಂದ ಬಳಲುತ್ತಿರುತ್ತಾರೆ. ನಿಮ್ಮ ಎಲ್ಲ ಕಾರ್ಯಗಳನ್ನೂ ಅದಕ್ಕಿಂತ ಚೆನ್ನಾಗಿ (ಅದು ಅವರ ಅಭಿಪ್ರಾಯ!) ಮಾಡುವುದು ಹೇಗೆಂಬ ಸಲಹೆ ಅವರ ಬಳಿ ಸದಾ ಸಿದ್ಧ! ಈ ಸಲಹೆ ಕೊಡುವ ಚಪಲ ಅದೆಷ್ಟು ಇರುತ್ತದೆಂದರೆ ಅವರು ಬಾಯಿ ತೆರೆದಾಗೆಲ್ಲ 'ಸರ್ರ'ಂಥ ಸಲಹಾಮುತ್ತು ಸುರಿಯುವುದಲ್ಲಿ ಸಂದೇಹವಿಲ್ಲ. ನೀವು ಉಣ್ಣೆಯ ಸ್ವೆಟರ್ ಹಾಕಿಕೊಂಡಿರೋ, ಅವರು 'ಇದಕ್ಕಿಂತ ಕ್ಯಾಶ್ಮೀರ್ ಕಾರ್ಡಿಗನ್ ಚೋಲೋದು' ಅನ್ನುತ್ತಾರೆ. ಟ್ರೇನ್ ಟಿಕೆಟ್ ತಗೊಂಡರೆ, 'ಬಸ್ಸಲ್ಲಿ ಹೋಗೋದು ಬೆಟರ್ರು' ಅನ್ನುತ್ತಾರೆ. ಆಸ್ಪಿರಿನ್ ತಗೊಳ್ತಾ ಇದ್ದೀರೋ, 'ಐಬುಪ್ರೊಪೇನ್ ಇನ್ನೂ ಒಳ್ಳೇದು' ಎಂದು ಉಚಿತವಾಗಿ ಉಪದೇಶಿಸುತ್ತಾರೆ.
ಸಲಹೆಯ ಚಟ ಬಹಳಷ್ಟು ಜನರಿಗೆ ಇರುತ್ತದಾದರೂ ಅದನ್ನು ಕೊಡುವ, ಪಡೆಯುವ ಸಂಭವ ಹೆಂಗಸರಲ್ಲೇ ಹೆಚ್ಚು. ಮೊದಲೇ ಮಾತು ಜಾಸ್ತಿ, ಮೇಲಿಂದ ಊರ ಮೇಲಿನ ಸುದ್ದಿ ಕೇಳುವ, ಹೇಳುವ ಹಂಬಲ ಬೇರೆ... ಕೆಲವರಿಗೆ ಮೈ-ಮಂಡೆ ಶೃಂಗಾರದಲ್ಲಿ ಆಸಕ್ತಿ. 'ತಲೆ ಸ್ನಾನಕ್ಕೆ ಮೊದ್ಲು ಸ್ವಲ್ಪ ಮೊಸರು ಹಚ್ಕೊಂಡ್ರೆ ಕಂಡೀಶನ್ ಆಗುತ್ತೆ', 'ನಿಂಬೆರಸ ತಿಕ್ಕಿಕೊಂಡ್ರೆ ಚರ್ಮದ ಮೇಲಿನ ಕಪ್ಪು ಕಲೆ ಬಿಟ್ಟೋಗತ್ತೆ' ಎಂದು ಪಟ್ಟಿ ಮಾಡುವ 'ಚಂದ ಚಕೋರಿ'ಯರು ಅವರು. ಕೆಲವರು ದುಡ್ಡು, ಕಾಸು, ಚೌಕಾಸಿ ಲೆಕ್ಕಾಚಾರದಲ್ಲಿ ತೀರಾ ಚುರುಕು- 'ಶೆಟ್ಟಿ ಅಂಗಡೀಲಿ ಅಕ್ಕಿ ತಗೋಬೇಡಿ, ರೇಟು ಜಾಸ್ತಿ', 'ಭಟ್ರ ಅಂಗಡೀಗೆ ಬುಧವಾರ ಬೆಳಿಗ್ಗೆ ಹೋಗಿ, ತಾಜಾ ತರಕಾರಿ ಸಿಗುತ್ತೆ'ಯಂಥ ವಿತ್ತ ಸಂಬಂಧಿ ಉಪದೇಶಗಳು ಅಂಥವರಿಂದ ಬರೋದು. 'ಅಯ್ಯೋ, ಅವಳತ್ರ ಏನೂ ಹೇಳ್ಬೇಡಿ; ಊರಿಗೆಲ್ಲ ಹರಡ್ತಾಳೆ', 'ಆ ಮಗು ಭಾರೀ ಹಠಮಾರಿ, ನಿಮ್ಮಗೂನ್ನ ಅದ್ರ ಹತ್ರ ಸೇರಿಸ್ಬೇಡಿ'ಯಂಥ ಹುಳುಕು ಸಲಹೆ ಕೊಡೋರೂ ಕಮ್ಮಿಯಿಲ್ಲ.
ಇನ್ನು ಬಸುರಿಯಾದರನ್ತೂ ಸಲಹೆಗಳ ಸುರಿಮಳೆಯೇ ಸುತ್ತೆಲ್ಲ ಕವಿದುಕೊಳ್ಳುತ್ತದೆ. ಹೋದಲ್ಲಿ ಬಂದಲ್ಲೆಲ್ಲ, ಕುಂತಲ್ಲಿ ನಿಂತಲ್ಲೆಲ್ಲ ಆಪ್ತ ಸಲಹೆಗಳೆಂಬ ಆಲಿಕಲ್ಲಿಗಳ ಧಪಧಪ ದಾಳಿ. "ಓ, ಪ್ರೆಗ್ನನ್ಸಿ ಖಾತ್ರಿ ಆಯ್ತಾ, ಇನ್ನು ಭಾರಿ ಹುಶಾರಿ ಇರ್ಬೇಕು ನೀವು, ಬೆಳ್ಳುಳ್ಳಿ, ಹಸಿಮೆಣಸು, ಪಪ್ಪಾಯಿ ತಿನ್ಬೇಡಿ' ಎಂಬಲ್ಲಿಂದ ಶುರುವಾದರೆ... 'ಕಾಯಿ ತುರೀಬೇಡಿ, ನೀರು ಸೇದಬೇಡಿ, ಬಿರುಸಾಗಿ ನಡೀಬೇಡಿ, ಏಕ್‍ದಂ ಏಳಬೇಡಿ'...ಗಳಂಥ 'ಬೇಡ'ಗಳೂ, 'ಕೇಸರಿ ಹಾಲು ಕುಡೀಬೇಕು, ತುಪ್ಪ ಜಾಸ್ತಿ ತಿನ್ನಬೇಕು, ದಿನಾ ವಾಕ್ ಮಾಡಬೇಕು, ಪುರಾಣ ಪುಣ್ಯ ಕಥೆ ಓದಬೇಕು...'ಗಳಂಥ 'ಬೇಕು'ಗಳೂ ಸಾಧ್ಯವಿರೋ ಎಲ್ಲಾ ದಿಕ್ಕು, ಮೂಲಗಳಿಂದ ಯಥೇಚ್ಛ ಪ್ರವಾಹೋಪಾದಿಯಲ್ಲಿ ಹರಿದು ಬಂದು ತೋಯ್ದು ತೊಪ್ಪೆಯಾಗಿಸುತ್ತವೆ.
ಜನರಿಗೆ (ಸ್ತ್ರೀ ಜಾತಿಗೆ ಎಂದು ಓದಿಕೊಳ್ಳಿ) ಬಸುರಿ ಹೆಂಗಸಿನ ಪರಿಚಯವೇ ಇರಬೇಕೆಂದಿಲ್ಲ. ಬಸ್ ನಿಲ್ದಾಣದಲ್ಲೋ, ಮಾರುಕಟ್ಟೆಯಲ್ಲೋ, ಮದುವೆ ಮನೆಯಲ್ಲೋ ಎಲ್ಲಾದರೂ ಸರಿ, ಕೊಂಚ ಉಬ್ಬಿದ ಹೊಟ್ಟೆ, ಬಸವಳಿದ ಮುಖ ಕಂಡರೆ ಸಾಕು, ಒಂದು ಮಂದಹಾಸ ತೂರಿ 'ಎಷ್ಟು ತಿಂಗಳು' ಎನ್ನುತ್ತ ಮಾತಿಗೆ ಶುರುವಿಟ್ಟುಕೊಳ್ಳುತ್ತಾರೆ. 'ಇಂತಿಷ್ಟು..' ಎಂಬ ಉತ್ತರ ಮುಗಿಯುವುದರೊಳಗೆ ಅವರದ್ದೊಂದು ಸಲಹೆ ಸಿದ್ಧವಿರುತ್ತದೆ, 'ದಿನಾ ಪಾಲಕ್ ತಿನ್ನಿ.. ಕಬ್ಬಿಣಾಂಶ ಇರುತ್ತೆ, ಒಂದೆಲಗ ಸೇವಿಸಿ.. ಮಗೂಗೆ ನೆನಪಿನ ಶಕ್ತಿ ಚೆನ್ನಾಗಿರುತ್ತೆ'... ಹಾಗೆ ಹೀಗೆ...! ವಯಸ್ಸಾದ ಹೆಂಗಸರು, ಎರಡೋ ನಾಲ್ಕೋ ಹೆತ್ತ ಮಾತೆಯರು ಹೇಳಿದರೆ ಅದು ಅವರ 'ಅನುಭವ ನೀಡಿದ ಹಕ್ಕು' ಎಂದುಕೊಳ್ಳಬಹುದು, ಆದರೆ ಇನ್ನೂ ಮದುವೆಯೂ ಆಗಿರದ ಕಿರಿಯರು, ಕುಮಾರಿಯರು ಕೂಡ ಬಂದು ಸೆಕೆಂಡ್ ಹ್ಯಾಂಡ್ ಸಲಹೆ ಕೊಟ್ಟಾಗ ಮೊದಲೇ ಓವರ್ ಡೋಸ್ ಅನುಭವಿಸುತ್ತಿರುವ ಭಾವಿ ತಾಯಂದಿರು ಭುಸುಗುಟ್ಟಿದರೆ ಆಶ್ಚರ್ಯವಿಲ್ಲ.
ಬಾಣಂತಿಯರದ್ದು ಇನ್ನೊಂದು ಅವಸ್ಥೆ. ಮೊದಲೇ ಹೊಸ ಮಗುವಿನ ಅಳಾಣಕ್ಕೆ, ಅವಶ್ಯಕತೆಗಳಿಗೆ ಹೊಂದಿಕೊಳ್ಳಲಾಗದೇ ಒದ್ದಾಡುತ್ತಿರುತ್ತಾರೆ. ಮೇಲಿಂದ 'ಮಾತಾಡಿಸಿಕೊಂಡು ಹೋಗಲು' ಬರುವ ಮಹಾತಾಯಿಯರ ಸಲಹಾ ಪ್ರಹಾರ ಬೇರೆ.... 'ಬಾಳೆಹಣ್ಣು ತಿನ್ನಬೇಡ, ಶಿಶುಗೆ ಶೀತವಾಗುತ್ತೆ' ಎಂದು ಒಬ್ಬರೆಂದರೆ, 'ಬಾಳೆಹಣ್ಣು ಚೆನ್ನಾಗಿ ತಿನ್ನು, ಮಗೂಗೆ ಮಲಬದ್ಧತೆ ಬರೋಲ್ಲ' ಎಂಬ ಉಲ್ಟಾ ದಿಕ್ಕಿನ ಉಪದೇಶ ಕೊಡೋರು ಇನ್ನೊಬ್ಬರು. ಈ ಶೀತ, ಉಷ್ಣ, ಕಫ, ಪಿತ್ತ ಎಂಬೆಲ್ಲ ಕಾರಣ ಎತ್ತಿಕೊಂಡು ತಲೆಗೊಂದು ಸಲಹೆ ಕೊಟ್ಟು, ತಿನ್ನೋ ಅನ್ನ-ಊಟದ ವಿಷಯದಲ್ಲೂ ತಲೆಬೇನೆ ತಗುಲಿಸಿಬಿಡುತ್ತಾರೆ. 'ಕಿವಿಗೊಡೋದೇ ಬೇಡ' ಎಂದು ಕೊಡವಿಕೊಂಡು ನಡೆಯಲೂ ಹೆದರಿಕೆ, ಮಗುವಿನ ಮೇಲೆ ಪರಿಣಾಮ ಬೀರುತ್ತಲ್ಲ ಎಂದು. ಕಿವಿಗೊಟ್ಟರೆ ಬಾಣಂತಿಯ ತಲೆ ಮೇಲೆ ಬಿಟ್ಟಿ ಸಲಹೆಗಳ ಬೇಣ ಬೆಳೆಯುವುದು ಖಂಡಿತ.
ನಾವು ಗಂಡ-ಹೆಂಡತಿ ಮದುವೆಯಾದ ಹೊಸದರಲ್ಲಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಹಿಡಿದಿದ್ದೆವು. ಮನೆಯ ಯಜಮಾನರ ಮಗನಿಗೆ ಸಿಕ್ಕಾಪಟ್ಟೆ 'ಸಲಹಾ ಸಿಂಡ್ರೋಂ'! ನಮಗೆ ಜಾಸ್ತಿ ರಜ ಇರಲಿಲ್ಲವಾದ್ದರಿಂದ ಗಡಿಬಿಡಿಯಲ್ಲಿ ಒಂದೆರಡು ಅಂಗಡಿ ತಿರುಗಿ ಪಾತ್ರೆ-ಪಗಡೆ, ಫ್ರಿಡ್ಜು, ಟಿವಿ, ಮಂಚ, ಕಪಾಟು ಅಂತೆಲ್ಲ ಖರೀದಿಸಿಕೊಂಡು ಬಂದೆವು. ಮನೆಗೆ ಬಂದು ಸಜ್ಜುಗೊಳಿಸಲು ಶುರುಮಾಡಿದ್ದೇ ಈ ವ್ಯಕ್ತಿ ಬಂದು ತಲಾ ಒಂದೊಂದು ಐಟಮ್ ಮೇಲೆ ಅರ್ಧರ್ಧ ತಾಸು 'ಇದಲ್ಲ, ಅದು ತಗೋಬೇಕಿತ್ತು' ಎಂದು ಸಲಹಾಬಾಂಬ್ ಸುರಿಮಳೆಗೈದರು. 'ಅಗತ್ಯ ಐಟಮ್ ಎಲ್ಲ ಬಂದವಲ್ಲ' ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದ ನಾವು 'ಈ ಅನಗತ್ಯ 'ಐಟಮ್' ಬಂದಿದ್ದಕ್ಕೆ ಏನು ಮಾಡೋದು' ಎಂದು ತಿಳಿಯದೇ ತಲೆ ಕೆರೆದುಕೊಂಡೆವು. ಆ ಮನೆಯಲ್ಲಿ ಉಳಿದಷ್ಟೂ ದಿನ ಅವರ ಸಲಹೆಯ ಶೂಲ ನಮ್ಮನ್ನು ಚುಚ್ಚುತ್ತಲೇ ಇತ್ತು. ಆದರೆ ಆ ಜನ ಮಿಕ್ಕೆಲ್ಲಾ ವಿಷಯಕ್ಕೆ ಒಳ್ಳೆಯವರಿದ್ದರಿಂದ ನಾವೂ ಬಿಟ್ಟಿ ಸಲಹೆ ನುಂಗುತ್ತ ನಾಲ್ಕು ವರ್ಷ ಗಟ್ಟಿಯಾಗಿ ಅಲ್ಲೇ ಉಳಿದೆವು.
ಈ ಸಲಹೆಯ ಚಟ ಒಂಥರಾ ಅಂಟುಜಾಡ್ಯವಿದ್ದಂತೆ, ಸಲಹೆಯ ಶೂಲೆಗೆ ತುತ್ತಾದವರು ತಮಗರಿವಿಲ್ಲದಂತೆ ಅದನ್ನು ಅಳವಡಿಸಿಕೊಂಡು, ಇನ್ನೊಬ್ಬರಿಗೆ ದಾಟಿಸುತ್ತಾರೆ. ಆಫೀಸಿನಲ್ಲಿ ಸದಾ ಮೇಲಧಿಕಾರಿಯ (ಬೇಕಾ)ಬಿಟ್ಟಿ ಸಲಹೆಗಳಿಗೆ ತಲೆ ಒಡ್ಡುವ ಪತಿ, ಮನೆಗೆ ಬರುತ್ತಿದ್ದಂತೆ ಅದೇ ಮಾದರಿಯಲ್ಲಿ 'ಈ ಕೆಲಸ ಹೀಂಗಿದ್ರೆ ಸರಿ ಇರ್ತು ನೋಡು, ಹಾಂಗಲ್ಲ' ಎಂದು ನನ್ನ ಮೇಲೆರಗುವ ಸಲಹಾಶೂಲ. ಆಮೇಲೆ ತಾವೂ ಮನೆಯಲ್ಲಿ 'ಬಾಸ್' ಆಗುತ್ತಿರುವುದು ಲಕ್ಷ್ಯಕ್ಕೆ ಬರುತ್ತಿದ್ದಂತೆ 'ಥೋ ಮಾರಾಯ್ತಿ....' ಎಂದು ನಕ್ಕು ಹಗುರಾಗುವ ಹತ್ತಿ. ಆ ಸಲಹೆಗಳೆಲ್ಲ ನನ್ನ ಕಿವಿಯಿಂದ ತಲೆಯೆಂಬೋ ಸುರಂಗ ಹೊಕ್ಕಿ ಬಾಯಿ ಮೂಲಕ ಮಗನ ತಲುಪುವುದು ಸರಣಿ ಪ್ರಕ್ರಿಯೆಯ ಮುಂದಿನ ಹಂತ.
ಸಲಹಾ ಚಟ ನಮ್ಮೂರು, ನಮ್ಮ ಜನರಿಗಷ್ಟೇ ಅಂಟಿಕೊಂಡಿಲ್ಲ, ಇದರದ್ದು ಗ್ಲೋಬಲ್ ಔಟ್‍‌ರೀಚ್. ಸಿಂಗಪುರಕ್ಕೆ ಬಂದ ಹೊಸದರಲ್ಲಿ ಮಗನೊಂದಿಗೆ ಬಸ್ಸಿನಲ್ಲಿ ಪಯಣಿಸುತ್ತಿದ್ದೆ. ಪಕ್ಕದಲ್ಲಿದ್ದ ಸಿಂಗಪುರಿಯನ್ ಅಜ್ಜಿ, 'ಒನ್ ಚೈಲ್ಡ್?' ಎಂದು ಪ್ರಶ್ನಿಸಿದಳು. ಹೌದೆಂದೆ. 'ಒನ್ ಚೈಲ್ಡ್, ನೋ ಗೂ...(ಡ್)' ಎಂದಳು. ಅಪರಿಚಿತೆ ಅಜ್ಜಿಯ ಮಾತಿಗೆ ಏನೆನ್ನಬೇಕು ತಿಳಿಯದೇ ಸುಮ್ಮನೆ ನಗೆ ಬೀರಿದೆ. 'ಬಿಕಾಸ್ ಸಿಂಗಲ್ ಚೈಲ್ಡಾ..., ಗೋ ಅಬ್ರಾಡ್, ಗೋ ಅವೇ! ಮೋರ್ ಚಿಲ್ಡ್ರನ್ನಾ...., ಸ್ಟೇ ಕ್ಲೋಸ್, ಟೇಕ್ ಕೇರ್' ಆಕೆ ಮುಂದುವರೆಸಿದಳು. ವಿಭಕ್ತಿ ಪ್ರತ್ಯಯಗಳನ್ನೆಲ್ಲ ಉಳಿತಾಯ ಮಾಡಿ ಕರ್ತೃ, ಕರ್ಮ ಮಾತ್ರ ಬಳಸುವ ಪಕ್ಕಾ ಸಿಂಗ್ಲೀಷ್ (ಸಿಂಗಪುರದ ಮ್ಯಾಂಡರಿನ್, ಮಲಯ್ ಮಿಶ್ರಿತ ಇಂಗ್ಲೀಷ್) ಅನ್ನು ನಿಧಾನಕ್ಕೆ ಜೀರ್ಣಿಸಿಕೊಳ್ಳುವಷ್ಟರಲ್ಲಿ ಅಜ್ಜಿಯ ಸಲಹೆ ತೂರಿ ಬಂತು, 'ಹ್ಯಾವ್ ಮೋರ್ ಚಿಲ್ಡ್ರನ್ ಲಾ!... ಗೂ...(ಡ್) ಫಾರ್ ಯೂ'. ಸುಪರ್ ಮಾರ್ಕೆಟಿನಲ್ಲಿ ಹಣ್ಣು, ತರಕಾರಿ ತೂಕ ಮಾಡಿಕೊಡುವ ಅಜ್ಜಿ, 'ದಿ(ಸ್) ವನ್ನಾ.., ವೆರಿ ಬಿತ್ತ...(ರ್)... ಬ(ಟ್) ಗುಡ್ಡಾ!... ದ್ಯಾ(ಟ್) ವನ್ನಾ..., ಟೂ ಸೌರ್... ನಾ(ಟ್) ತೇಸ್ತೀ ಲಾ...!' ಎನ್ನುತ್ತ ತೂಕದ ಚೀಟಿಯ ಜೊತೆಗೆ ಸಲಹೆಯನ್ನೂ ಅಂಟಿಸಿಕೊಡುತ್ತಾಳೆ. ಸೈಕಲ್ ಸವಾರಿಗೆ ಹೋದಾಗ ಸೀಟಿನ ಎತ್ತರ/ತಗ್ಗು ಬಗ್ಗೆ ಉದ್ದುದ್ದ ಉಪದೇಶಿಸುವ ಸಹಸೈಕಲಿಗ ಹಿರಿಯರು, ಟ್ಯಾಕ್ಸಿಯಲ್ಲಿ ಕುಳಿತಾಗ 'ಸಿಂಗಪೂರ್ ವೆರಿ ಗೂ...(ಡ್), ಟೇಕ್ ಪಿಆರ್ (ಶಾಶ್ವತ ನಿವಾಸಿ ಸ್ಥಾನಮಾನ) ಲಾ!' ಎಂಬ ಕೆಲ ಚಾಲಕರು... ಎಲ್ಲರಿದ್ದೂ ಇದೇ ಕಥೆ!
ಹಾಗಂತ ಎಲ್ಲ ಸಲಹೆಗಳೂ ಬಿಟ್ಟಿ-ಬೇಕಾಬಿಟ್ಟಿ ಎಂದೇನಲ್ಲ. ಇದಕ್ಕೂ ಇತಿಹಾಸ ಇದೆ, ಘನತೆ-ಮಾನ್ಯತೆ ಇದೆ. ದೇವ-ದಾನವರಿಗೆ ರಾಜಗುರುಗಳಾಗಿದ್ದ ಬೃಹಸ್ಪತಿ, ಶುಕ್ರಾಚಾರ್ಯರು, ವಶಿಷ್ಠ, ನಾರದರು ಇವರೆಲ್ಲರ ಸಲಹೆಗಳಿಗೆ ಮಾನ್ಯತೆ ನೀಡುತ್ತಿದ್ದ ಅಪಾರ ಶಿಷ್ಯವರ್ಗವಿತ್ತು. ಕೌರವರಲ್ಲಿ ವಿವೇಚನೆ ತುಂಬಲೆತ್ನಿಸಿದ ವಿದುರ, ಚಂದ್ರಗುಪ್ತ ಮೌರ್ಯನ ಏಳಿಗೆಯಲ್ಲಿ ಮಹತ್ತರ ಪಾಲು ವಹಿಸಿದ ಚಾಣಕ್ಯ ಇವರೆಲ್ಲ ಸಲಹೆಗಾರರದ ಹುದ್ದೆಗೆ ಘನತೆ ತುಂಬಿದವರು. ಪುರಾಣ, ಚರಿತ್ರೆಯ ಉದ್ದಕ್ಕೂ ಆಡಳಿತಗಾರರ ಮೆದುಳಾಗಿ ಮೇಧಾವಿ ಸಲಹಾಗಾರರಿದ್ದರು. ಬೀರಬಲ್, ಬೆಂಜಮಿನ್ ಫ್ರಾಂಕ್ಲಿನ್, ಬಿಸ್ಮಾರ್ಕ್ ಅವರಂಥ ಸಮಾಜಮುಖಿ ಸಲಹೆಗಾರರಿದ್ದಂತೆಯೇ ಶಕುನಿ, ಮಂಥರೆ, ಮಾಕಿಯಾವೆಲ್ಲಿ, ರಾಸ್ಪುಟಿನ್‍ರಂಥ ವಿವಾದಾತ್ಮಕ ವ್ಯಕ್ತಿಗಳೂ ಇದ್ದರು. ಸಲಹೆ ಪಡೆದವರಲ್ಲಿ ಹಂಸಕ್ಷೀರ ನ್ಯಾಯ ಮಾಡಲು ತಿಳಿದವರು ಗೆದ್ದರು, ಉಳಿದವರು ಬಿದ್ದರು. ಇವತ್ತು ವಾಣಿಜ್ಯ, ಭದ್ರತೆ, ಕಾನೂನು, ಶಿಕ್ಷಣ.... ಹೀಗೆ ಸಮಾಜದ ಎಲ್ಲ ರಂಗಗಳಲ್ಲಿ, ಸರ್ಕಾರದ ಎಲ್ಲ ಅಂಗಗಳಲ್ಲಿ ಸಲಹೆಗಾರರ ಪ್ರತಿಷ್ಠಿತ ಹುದ್ದೆಗಳಿವೆ. ಆ ಹುದ್ದೆಗಳನ್ನು ತಲುಪಲು ಸೂಕ್ತ ಶಿಕ್ಷಣ, ಅನುಭವದ ಅಗತ್ಯ ಇದೆ. ಅವರ ಸಲಹೆಗಳೂ ಬಿಟ್ಟಿಯಾಗಿ ಸಿಗುವಂಥದ್ದಲ್ಲ, ಕೈತುಂಬ ಸಂಬಳ, ಗೌರವಧನ ಇದೆ.

ಸಿನೆಮಾ ಡೈಲಾಗ್ ಒಂದನ್ನು ಅನುಸರಿಸಿ ಹೇಳಬೇಕೆಂದರೆ: ಈ ಜಗತ್ತಿನಲ್ಲಿ ಎರಡು ತರಹದ ಸಲಹೆಗಳು ಇರುತ್ತವೆ. ಒಂದು ಕಸುವಾಗಿದ್ದು ಕಾಸು ಗಳಿಸುವಂಥವು; ಇನ್ನೊಂದು ಬಿಟ್ಟಿ- ಗಿರಗಿಟ್ಟಿ!!


(ಈ ಲೇಖನ 'ಪ್ರಜಾವಾಣಿ'ಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ದಿನ ಅಂದರೆ ೧೬ನೇ ನವೆಂಬರ್ ೨೦೧೪ರಂದೇ ನನ್ನ ಮಗಳೂ ಈ ಲೋಕದ ಬೆಳಕು ನೋಡಿದ್ದು. ಅವತ್ತು 'ಡಬಲ್ ಬೊನಾಂಝಾ' ನನ್ನ ಪಾಲಿಗೆ.)