ಗುರುವಾರ, ಡಿಸೆಂಬರ್ 11, 2008

'ಬೆಳ್ಳಿ' ಬಟ್ಟಲಲ್ಲಿ ಹಳ್ಳಿ ಸುಧೆ ಹೀರುತ್ತ....

ಹೀಗೊಂದು ಆಯ್ಕೆ: ಒಂದಿಷ್ಟು ಜನಪ್ರಿಯ ಗೀತೆಗಳಿವೆ. ನಿಮಗವು ಬಲು ಇಷ್ಟ. ಆ ಧಾಟಿಯಲ್ಲಿ ಹಾಡೋಣವೆಂದರೆ ಅವುಗಳ ಸಾಹಿತ್ಯ ಕೊಂಚ ಕ್ಲಿಷ್ಟ ಅಥವಾ ಅವೇ ಸಾಲುಗಳನ್ನು ಕೇಳಿ ಕೇಳಿ ಬೇಸರ ಬಂದಿದೆ. ಸರಿ, ನೀವದನ್ನು ನಿಮ್ಮತನಕ್ಕೆ ಒಗ್ಗಿಸಲು ಯತ್ನಿಸುತ್ತೀರಿ. ಹಿಡಿಸದ, ಹಳತಾದ ಸಾಲುಗಳ ಜಾಗದಲ್ಲಿ ಹೊಸ ಸಾಲುಗಳು, ಹೊಸ ಅರ್ಥವನ್ನು ಹೊಂದಿಸುತ್ತೀರಿ. ಈಗ ನಿಮ್ಮೆದುರು ಎರಡು ಆಯ್ಕೆಗಳಿವೆ. ಒಂದೋ, ಧಾಟಿಯನ್ನಷ್ಟೇ ಎತ್ತಿಕೊಂಡು ಅದಕ್ಕೆ ಪಂಚಿಂಗ್ ಮಾತುಗಳನ್ನು ಪೋಣಿಸಿ ನಿಮ್ಮ ನಿಮ್ಮಲ್ಲೇ ಹಾಡಿಕೊಂಡು ಗೆಳೆಯರ ಬಳಗದಲ್ಲಿ ಬೆಳಗಬಹುದು. ಇಲ್ಲವೇ, ಬೇರೆ ಭಾಷೆಯ ಹಾಡುಗಳ ಸಂಗೀತದ ಜೊತೆಗೆ ಸಾಹಿತ್ಯವನ್ನೂ ಒಂದಕ್ಷರ ಬಿಡದೇ ಅನುವಾದಿಸಿ/ಭಾವಾನುವಾದ ಮಾಡಿ, ಕನ್ನಡ ಸಿನೆಮಾ ನಿರ್ಮಾಪಕರಿಗೆ ಮಾರಿ ಚಿತ್ರ ಸಾಹಿತಿಯಾಗಬಹುದು.
ತಮಿಳು, ತೆಲುಗು ಲೇಬಲ್ ಮದ್ಯಕ್ಕಿಷ್ಟು ಕನ್ನಡತನದ ಕಲಬೆರಕೆ ಮಾಡಿ ಭಟ್ಟಿ ಇಳಿಸಿ, ಕನ್ನಡೀಕರಿಸಿದ ಹೆಸರು ಹಚ್ಚಿ ಹಿಂಬಾಗಿಲಿಂದ ಮನೆಯೊಳು ತಂದು ಮಧುಪಾನ ಮಾಡಿಸುವುದು ಚಿತ್ರಸಾಹಿತಿಗಳಿಗೇ (ಕನಿಷ್ಠ ಕೆಲವರಿಗಾದರೂ) ಸರಿ ಹೊಂದುವ ಕಾರ್ಯ. ಹೀಗಾಗಿ ನೀವು ಎರಡನೆಯದನ್ನು ಅವರಿಗೆ ಬಿಟ್ಟು, ಮೊದಲಿನದನ್ನೇ ಒಪ್ಪಿಕೊಳ್ಳುತ್ತೀರಾದರೆ- ಸುಸ್ವಾಗತ! ದೊಡ್ಡದೊಂದು ಕುಟುಂಬ ನಿಮ್ಮನ್ನು ತನ್ನೊಡಲಲ್ಲಿ ಸೇರಿಸಿಕೊಳ್ಳಲಿದೆ. ಇಲ್ಲಿ ಯಾರೂ/ಎಲ್ಲರೂ ಜನಪ್ರಿಯ ಹಾಡುಗಳಿಗೆ ತಮ್ಮದೇ ಪದಜೋಡಣೆ ಮಾಡಲಡ್ಡಿಯಿಲ್ಲ. ಪದ ಬದಲಿಸಿಕೊಂಡ ಪರ್ಯಾಯ ಪದ್ಯವನ್ನು ಕುಟುಂಬದ ಎಲ್ಲರೂ ಸವಿಯುತ್ತಾರೆ. ಆದರೆ ನೆನಪಿಡಿ, ಯಾರಿಗೂ ಆ ಸವಿ ಉಣಬಡಿಸಿದ ಕ್ರೆಡಿಟ್ ಸಲ್ಲುವುದಿಲ್ಲ. ಅಸಲಿಗೆ ಕುಟುಂಬಕ್ಕೇ ಒಂದು ಹೆಸರಿಲ್ಲ. ಅದೊಂಥರ ಆಗಾಗ ಹೊಸಬರನ್ನು, ಹೊಸ ವರ್ಷನ್ನನ್ನು ಸೇರಿಸಿಕೊಳ್ಳುತ್ತ, ಹಳತನ್ನು-ಹಳಬರನ್ನು ಕಳಚಿಕೊಳ್ಳುತ್ತ ಸಾಗುವ ಆಟೋ ಅಪ್ಗ್ರೇಡಿಂಗ್ ಎಂಟಿಟಿ.
ನನ್ನ ಬಾಲ್ಯದಲ್ಲಿ ಸಮಾನ ವಯಸ್ಕರ, ನಮ್ಮ ತಲೆಮಾರಿನವರ ನಡುವೆ ಇಂಥ ಪರ್ಯಾಯ ಪದ್ಯಗಳು ಭಾರಿ ಚಾಲ್ತಿಯಲ್ಲಿದ್ದವು. ಇವುಗಳಿಗೆಲ್ಲ ಮೂಲ ಸೆಲೆ ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಹಾಡುಗಳು. ಪದ ಬದಲಿಸುವ ಸ್ವಾತಂತ್ರ್ಯವನ್ನು ಎಲ್ಲರೂ ತೆಗೆದುಕೊಳ್ಳುತ್ತಿದ್ದುದುಂಟು.
ಚಿಕ್ಕಂದಿನಲ್ಲಿ ನಮ್ಮೂರಿಗೆ ರೆಗ್ಯುಲರ್ ಆಗಿ ದ್ಯಾವರು ಎಂಬ ಕೆಲಸಿ ಬರುತ್ತಿದ್ದ. ಅವನೆದುರು ಕುಳಿತಾಕ್ಷಣ 'ಬೋಳಿಸಲೆಂದೇ ಕೂಪನು ತಂದೆ, ಕೂಪನು ಮಸೆಯಲು ನಾನಿಂದೆ, ತೆಗೆಯೋ ಟೊಪ್ಪಿಯನು, ತಮ್ಮಾ ತೆಗೆಯೋ ಟೊಪ್ಪಿಯನು' ('ಎರಡು ಕನಸು' ಚಿತ್ರದ 'ಪೂಜಿಸಲೆಂದೇ' ಧಾಟಿಯಲ್ಲಿ) ಎಂದು ಅವನ ಪರವಾಗಿ ಹಾಡಿ ಮುಗಿಸಿಯೇ ಅಣ್ಣ ತಲೆ ಒಡ್ಡುತ್ತಿದ್ದುದು. ಅತ್ತ ಹಣ್ಣು ಹಣ್ಣು ಮುದುಕ ದ್ಯಾವರು ಬೊಚ್ಚು ಬಾಯಿ ಕಿರಿದು ಮುಸಿ ಮುಸಿ ನಗುತ್ತಿದ್ದರೆ, ಇತ್ತ ಕಲ್ಪನಾ ಪ್ರೇಮಿ ಅಮ್ಮ 'ಇದೇ ಹಾಡೇ ಬೇಕಾಗಿತ್ತ ನಿಂಗೆ' ಎಂದು ಸಿಡಿಮಿಡಿಗೊಳ್ಳುತ್ತಿದ್ದಳು.
'ಎಡಕಲ್ಲು ಗುಡ್ಡದ ಮೇಲೆ' ಚಿತ್ರದ 'ವಿರಹ ನೂರು ನೂರು ತರಹ' ಹಾಡನ್ನು ಚಹಕ್ಕೆ ಸಮೀಕರಿಸಿ ಹಾಡುತ್ತಿದ್ದೆವು. ಒಮ್ಮೆ ನನ್ನಕ್ಕ ಒಬ್ಬಳು ತನ್ನ ಚಿಕ್ಕ ವಯಸ್ಸಿನ ಮಗಳೊಂದಿಗೆ ನೆಂಟರ ಮನೆಗೆ ಹೋಗಿದ್ದಳು. ಮಾತಿನ ಮಧ್ಯೆ ಅತಿಥಿಗಳಿಗೆ ಚಹ ಬಂತು. ಒಂದು ತೊಟ್ಟು ಗುಟುಕರಿಸಿದ ಮಗಳು ತಟ್ಟನೆ ಲೋಟ ಕುಕ್ಕಿ ಗಟ್ಟಿ ದನಿಯಲ್ಲಿ 'ಈ ಚಹ ನೀರು ನೀರು ತರಹ, ಈ ಚಹ ಕುಡಿವುದೆನ್ನೆಯ ಹಣೆ ಬರಹ' ಎಂದು ಹಾಡಿದಳು. ಮಗಳನ್ನು ಕರೆದುಕೊಂಡು ಹೋದದ್ದಕ್ಕಾಗಿ ತನ್ನನ್ನೇ ಶಪಿಸಿಕೊಳ್ಳುತ್ತ ಅಕ್ಕ ಲಗುಬಗೆಯಿಂದ ಮನೆಗೆ ಹೊರಟಳು.
ಇಡ್ಲಿ-ಸಾಂಬಾರು ಮಾಡಿದಾಗೆಲ್ಲ 'ನಮ್ಮ ಸಂಸಾರ, ಇಡ್ಲಿ ಸಾಂಬಾರ, ದೋಸೆ ಎಂಬ ದೈವವೇ ನಮಗಾಧಾರ, ಚಟ್ನಿ ತಂದ ಬಲದಿಂದ ಬಾಳೇ ಬಂಗಾರ' ಹಿಮ್ಮೇಳದೊಂದಿಗೆ ಉಂಡಾಗಲೇ ಅದರ ಸವಿ ಮೈಗೆ ಹತ್ತುತ್ತಿತ್ತು. ಇನ್ನು ಕಾಯಿ ತಂಬುಳಿ ಬಡಿಸಿದಾಗೆಲ್ಲ 'ಬಂಧನ' ಚಿತ್ರದ 'ಪ್ರೇಮದಾ ಕಾದಂಬರಿ' ಧಾಟಿಯಲ್ಲಿ 'ಪ್ರೀತಿಯ ಕಾಯ್ತಂಬುಳಿ, ಬೀಸಿದೆ ಒಳ್ಕಲ್ಲಲಿ, ಅನ್ನ ಮುಗಿದೇ ಹೋದರೂ ಮುಗಿಯದಿರಲಿ ತಂಬುಳಿ' ಎಂದು ಹಾಡುತ್ತ ಅದನ್ನು ಕಲಸುತ್ತಿದ್ದರೆ ತಂಬುಳಿಯ ರುಚಿಯೊಂದಿಗೆ ರಸಿಕತೆಯ ಒಗ್ಗರಣೆ ಬೆರೆತು ಪರಿಮಳ ನೆತ್ತಿಗೇರಿ ಮತ್ತೇರಿಸುತ್ತಿತ್ತು. ಇದೇ 'ಬಂಧನ' ಚಿತ್ರದ 'ನೂರೊಂದು ನೆನಪು' ಕೈ ಕೊಟ್ಟಾಗ ಇರಲಿ ಎಂದು 'ನೂರೊಂದು ಬಸ್ಸು ಹಳಿಯಾಳದಿಂದ, ಹಾಳಾಗಿ ಬಂತು ಅಪಘಾತದಿಂದ' ಎಂಬ ಬ್ಯಾಕಪ್ ಮೆಮೊರಿ ತಯಾರಾಗಿತ್ತು. ಹಾಗೆಯೇ 'ಉಪಕಾರ್' ಚಿತ್ರದ 'ಮೆರೆ ದೇಶ್ ಕೇ ಧರತಿ' ಹಾಡು 'ಮೇರೆ ಸೇಠ್ ಕೇ ಚಡ್ಡಿ ಫಡ್ ಫಡ್ ಫಾಟೆ, ಸಿಲೇ ನ ಕೋಯಿ ದರ್ಜಿ, ಮೇರೆ ಸೇಠ್ ಕೇ ಚಡ್ಡಿ' ಎಂಬ ರೂಪ ಪಡೆದಿತ್ತು.
ಹಿಂದಿ ಚಿತ್ರಗೀತೆಗಳ ಪದ್ಯಬಂಡಿ ಆಡುವಾಗೆಲ್ಲ ಒಮ್ಮೆ 'ಸ' ಬಂದರೆ 'ತೇಜಾಬ್' ಚಿತ್ರದ 'ಸೋ ಗಯಾ ಯೇ ಜಹಾಂ' ಹಾಡು ಗ್ಯಾರಂಟಿ. ಮತ್ತೊಮ್ಮೆ 'ಸ' ಬಂದಾಗ ಅದೇ ಧಾಟಿಯಲ್ಲಿ 'ಸೋ ಗಯಾ ಯೇ ಗಧಾ, ಸೋ ಗಯಾ ವೋ ಗಧಾ, ಸೋ ಗಯೀ ಹೈ ಸಾರೇ ಬಕರಿಯಾಂ, ಸೋ ಗಯಾ ಹೈ ಕುತ್ತಾ ಭೌಭೌ' ಎಂದು ಹಿನ್ನೆಲೆ ಸಂಗೀತದ ಸಮೇತ ಹಾಡು ಹೊರಬರುತ್ತಿತ್ತು. ಆಮೇಲಿನ 'ಏ, ಈ ಹಾಡು ಇಲ್ಲ, ಹೀಂಗೆಲ್ಲಾ (ವಿ)ಚಿತ್ರಗೀತೆ ಹಾಡೋ ಹಾಗಿಲ್ಲ.......'ಲ್ಲಲ್ಲಲ್ಲಾಪವೂ ಅಷ್ಟೇ ಗ್ಯಾರಂಟಿ.
ನಾನು ಜವಾಹರ ನವೋದಯ ವಿದ್ಯಾಲಯದಲ್ಲಿ ಓದುತ್ತಿದ್ದಾಗ ಒಂದು ಸಂಜೆ ವಿದ್ಯುತ್ ಕಡಿತಗೊಂಡ ಸಂದರ್ಭ. ಕತ್ತಲೆ ಡಾರ್ಮಿಟರಿಯಲ್ಲಿ ಎಲ್ಲರೂ ತಣ್ಣಗೆ ಕುಳಿತಿದ್ದೆವು. ಇದ್ದಕ್ಕಿದ್ದಂತೆ ಒಬ್ಬಾಕೆ 'ಹೇ, ನಂಗೇನೋ ಕಚ್ಚಿ ಬಿಡ್ತಲ್ಲೆ, ದೀಪ ತಗಂಡು ಬಾರೆ' ಎಂದು 'ಹಮ್ರಾಝ್' ಚಿತ್ರದ 'ಹೇ ನೀಲೆ ಗಗನ್ ಕೆ ತಲೆ' ಅನುಸರಿಸಿ ಹಾಡಿದಳು. ಕತ್ತಲೊಂದಿಗೆ ಕವಿದಿದ್ದ ಮೌನದ ತೆರೆಯನ್ನು ಆ ಹಾಡು ಏಕ್ದಂ ಸರಿಸಿ, ತಿಳಿ ನಗೆಯ ತಿಂಗಳಬೆಳಕನ್ನು ಹರಡಿತ್ತು. ಆ ವಸತಿ ಶಾಲೆಯಲ್ಲಿ ವಿದ್ಯಾಥರ್ಿಗಳ ಸಂಖ್ಯೆ ಹೆಚ್ಚಿದ್ದ ಕಾರಣ ಎರಡು ಬ್ಯಾಚ್ಗಳಲ್ಲಿ ಊಟಕ್ಕೆ ಹೋಗುತ್ತಿದ್ದೆವು. ಎರಡನೇ ಬ್ಯಾಚ್ನವರು ಊಟ ಶುರು ಮಾಡುವ ಹೊತ್ತಿಗೆ ಸಾಂಬಾರೆಂಬುದು ಹೋಳು, ಬೇಳೆಯನ್ನೆಲ್ಲ ಕಳೆದುಕೊಂಡು ತಿಳಿಸಾರಾಗಿರುತ್ತಿತ್ತು. ಅನ್ನದ ಮೇಲಿಷ್ಟು ಸುರಿದುಕೊಂಡು ಬಂದ ಸಾರಲ್ಲಿ ಅಪರೂಪಕ್ಕೊಮ್ಮೆ ಬೇಳೆ ಕಂಡಿತೆಂದರೆ ಬಾಯಿಯ ಬಾವಿಯಲ್ಲಿ ಜೊಲ್ಲಿನ ಜೊತೆ ಈ ಹಾಡೂ ಚಿಮ್ಮುತ್ತಿತ್ತು- 'ದೇಖಾ ಹೈ ಪೆಹಲೀ ಬಾರ್, ಸಾಂಬಾರ್ ಮೇ ತುಅರ್ ಕಾ ದಾಲ್, ಅಬ್ ಜಾಕೆ ಆಯಾ ಮೇರೆ ಭೂಕೆ ಯೇ ಪೇಟ್ ಕೋ ಕರಾರ್, ಪೇಟ್ ಭರ್ ತುಜೇ ಖಾನೆ ಕೋ ಕಬ್ ಸೇ ಥೀ ಮೈ ಬೇಕರಾರ್, ಅಬ್ ಜಾಕೆ ಆಯಾ ಮೇರೆ ಭೂಕೆ ಯೇ ಪೇಟ್ ಕೋ ಕರಾರ್'- ಗೆಳತಿಯರ ಪೈಕಿ ಒಬ್ಬಾಕೆ ಇದನ್ನು ಹಾಡಿದರೆ ಉಳಿದವರಿಂದ 'ಸಾಜನ್' ಚಿತ್ರದ ಆ ಹಾಡಿನ ಹಿನ್ನಲೆ ಸಂಗೀತದ ಮಾದರಿಯಲ್ಲೇ 'ಪಾಂಚ್ ಕಾ ಪಚಾಸ್, ಪಾಂಚ್ ಕಾ ಪಚಾಸ್' ಎಂಬ ಕೋರಸ್.
ಸಾಮಾನ್ಯವಾಗಿ ಇಂಥ ಪರ್ಯಾಯ ಪದ್ಯಗಳೆಲ್ಲ ಚಿತ್ರಗೀತೆಗಳನ್ನೇ ಅನುಸರಿಸುತ್ತಿದ್ದರೂ ಅಪರೂಪಕ್ಕೆ ಕೆಲವು ರಾಷ್ಟ್ರೀಯ ಗೀತೆಗಳೂ ಪದ ಬದಲು ಪ್ರಕ್ರಿಯೆಗೆ ಒಳಗಾಗುತ್ತಿದ್ದವು. ಕೆಲವೊಂದು ಮಜವಾಗಿದ್ದರೆ ವಿಶೇಷವಾಗಿ ಒಂದು ಪದ್ಯ 'ಸಜ'ವಾಗಿತ್ತು.
ನವೋದಯಲ್ಲಿ ರಸಾಯನ ವಿಜ್ಞಾನದ ಶಿಕ್ಷಕಿಯಾಗಿದ್ದ ಸಾರಾ ಎಂಬುವವರು 'ಶಿಕ್ಷಾ'ದಷ್ಟೇ 'ಶಿಕ್ಷೆ'ಗೂ ಪ್ರಾಮುಖ್ಯತೆ ನೀಡುತ್ತಿದ್ದ ಘಾಟಿ ವ್ಯಕ್ತಿ. ಉನ್ನತ ಮಟ್ಟದ ಬೋಧನಾ ಸಾಮಥ್ರ್ಯದ ಜೊತೆಗೆ ಸಿಟ್ಟಿನ ಪ್ರತಿರೂಪದಂತಿದ್ದ ಅವರ ಕಲಿಸುವಿಕೆ, 'ಕೋಲಿಸು'ವಿಕೆ ಕೈಕೈ ಹಿಡಿದು ಸಾಗುತ್ತಿದ್ದವು. ಒಮ್ಮೆ ಏಳು ತಿಂಗಳ ಗರ್ಭಿಣಿಯಾಗಿದ್ದ ಅವರು ಇನ್ನೇನು ನಮ್ಮ ತರಗತಿಯನ್ನು ಪ್ರವೇಶಿಸಬೇಕು ಅನ್ನುವಷ್ಟರಲ್ಲಿ 'ಸಾರೇ ಜಹಾಂ ಸೇ ಅಚ್ಛಾ'ದ ಪರ್ಯಾಯ ಪದ್ಯ ಅವರ ಕಿವಿಗೆ ಬಿತ್ತು. ಧುಮುಧುಮಿಸುತ್ತಲೇ ಒಳ ಬಂದ ಸಾರಾ ಮೇಡಂ 'ಗುಡ್ ಮಾರ್ನಿಂಗ್' ಗಿಳಿಪಾಠ ಒಪ್ಪಿಸಿದ ನಮ್ಮತ್ತ ಚೂಪನೆಯ ದೃಷ್ಟಿ ಬೀರಿ 'ಗರ್ಲ್ಸ್ ಸಿಡೌನ್' ಎಂದರು. ಪ್ರಶ್ನಾರ್ಥಕ ನೋಟ ಹೊತ್ತ ಹುಡುಗರತ್ತ ಕೆಂಗಣ್ಣು ಬೀರಿದವರೇ 'ಯಾರು ಅದನ್ನು ಹಾಡಿದವರು' ಎಂದರು. ಹುಡುಗರ ಅಯೋಮಯ ದೃಷ್ಟಿ ಒಬ್ಬರಿಂದೊಬ್ಬರಿಗೆ ಹರಿದು ಕಗ್ಗಂಟಾಯಿತೇ ಹೊರತು 'ಇವರೇನು ಕೇಳುತ್ತಿದ್ದಾರೆ, ಆ 'ಅದು' ಏನು' ಎಂಬುದು ತಲೆಬುಡ ತಿಳಿಯಲಿಲ್ಲ. ತಮ್ಮ ಕೋಪದ ಬೆಂಕಿಯಲ್ಲಿ ಸುಡಲೊಂದು ಸೂಕ್ತ ಕಟ್ಟಿಗೆ ಸಿಗದೇ ಸಿಡಿಮಿಡಿಗೊಂಡ ಅವರು ತರಗತಿಯ ಎಲ್ಲಾ ಹುಡುಗರನ್ನೂ ಒಂದಿಡೀ ತಾಸು ಹೊರಗೆ ನಿಲ್ಲಿಸಿದರು.
ಆಮೇಲೆ ತಿಳಿಯಿತು: ಮೇಡಂ ತರಗತಿಯನ್ನು ಪ್ರವೇಶಿಸಬೇಕೆನ್ನುವಷ್ಟರಲ್ಲಿ ಪಕ್ಕದಲ್ಲೇ ಇದ್ದ ಡಾರ್ಮಿಟರಿಯ ಹುಡುಗರು 'ಸಾರೇ ಜಹಾಂ ಸೇ ಅಚ್ಛಾ, ಸಾರಾ ಕೆ ಪೇಟ್ ಮೇ ಬಚ್ಚಾ' ಎಂದು (ಕೊಂಚ ಕೀಳು ಮಟ್ಟದಲ್ಲಿಯೇ) ಹಾಡಿದ್ದರು. ಎದುರಿಗೇ ಕುಳಿತಿದ್ದ ನಮ್ಮ ತರಗತಿಯ ಹುಡುಗರೇ ಅದನ್ನು ಹಾಡಿರಬೇಕು ಎಂದುಕೊಂಡ ಅವರು ಒಳಗೆ ಬಂದವರೇ ಶಿಕ್ಷಿಸಲು ಮುಂದಾದರು. ಮೊಸರು ತಿಂದಿದ್ದು ಮಂಗ; ಮುಸುಡಿ ಮೇಲೆ ಬರೆ ಬಿದ್ದಿದ್ದು ಮೇಕೆಗೆ.
ಕನ್ನಡ ಶಾಲೆಯಲ್ಲಿ ಓದುವಾಗ 'ವಂದೇ ಮಾತರಂ' ಬಲ್ಲದ ಮಕ್ಕಳಿಗೂ 'ವಂದೇ ಮಾಸ್ತರಂ' ಮುದ್ದಾಂ ಬರುತ್ತಿತ್ತು. ಮಾಸ್ತರರ ಬೆನ್ನ ಹಿಂದೆ 'ವ(ಒ)ಂದೇ ಮಾಸ್ತರಂ, ಹೊಡಿತಂ, ಬಡಿತಂ, ಕಿವಿ ಚಟ್ಟೆ ಹಿಂಡುತಂ' ಎಂದು ಹಾಡಿಕೊಂಡರೆ ತಿಂದ ಹೊಡೆತಕ್ಕಿಷ್ಟು ನ್ಯಾಯ ಸಲ್ಲಿಸಿದಂತೆ ಭಾಸ.
ಹೆಚ್ಚಿನ ಹಾಡುಗಳು ತಿಳಿ ಹಾಸ್ಯದಲ್ಲಿ ಮಿಂದೆದ್ದು ಬಂದು ಆಹ್ಲಾದಮಯ ನಗೆಗಂಧವನ್ನು ಹರಡುವಂತಿದ್ದರೆ ಒಮ್ಮೊಮ್ಮೆ ಕೆಲವು ಪೋಲಿತನದ ಕೊಚ್ಚೆಯಲ್ಲಿ ಉರುಳಾಡಿ ಉಸಿರುಕಟ್ಟಿಸುವಂತಿದ್ದುದು ಖರೆ. 'ಬಣ್ಣಾ ನನ್ನ ಒಲವಿನ ಬಣ್ಣಾ', 'ಶಿಲೆಗಳು ಸಂಗೀತವ ಹಾಡಿವೆ', 'ಧರಣಿ ಮಂಡಲ ಮಧ್ಯದೊಳಗೆ', 'ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ'ದಂಥ ಮಧುರ ಹಾಡುಗಳು ವಿರೂಪಗೊಂಡು ಮುಜುಗರ ಮೂಡಿಸುವ ರೂಪ ಪಡೆದದ್ದುಂಟು. (ಆ (ವಿ)ರೂಪ ಪ್ರಸ್ತುತಪಡಿಸಲಾರೆ, ಕ್ಷಮಿಸಿ). ಸಂಸ್ಕೃತದ ಕೆಲವು ಶ್ಲೋಕಗಳಿಗೂ ಇದೇ ಗತಿ.
ಸಾಮಾನ್ಯವಾಗಿ ಈ ಹಾಸ್ಯಮಯ ಪರ್ಯಾಯ ಪದ್ಯಗಳೆಲ್ಲ ಪಲ್ಲವಿಗಷ್ಟೇ ಸೀಮಿತವಾಗಿರುತ್ತಿದ್ದವು, ಚರಣಗಳ ತುದಿವರೆಗೆ ಯಾವ ಕವಿ(ಪಿ)ಯೂ ಚರಣ ಬೆಳೆಸುತ್ತಿದ್ದುದಿಲ್ಲ. ಆದರೂ ಅಪರೂಪಕ್ಕೆ ಕೆಲವು ಅಜ್ಞಾತ ಕವಿಗಳು ಚಿತ್ರಗೀತೆಗಳ ಧಾಟಿಯಲ್ಲಿ ಅರ್ಥವತ್ತಾದ ಭಕ್ತಿಗೀತೆಗಳನ್ನು ರಚಿಸಿದ್ದುಂಟು. ಮಜವೆಂದರೆ (ಸ)ರಸವತ್ತಾದ ಚರಣಗಳನ್ನು ಮೂಸಿಯೂ ನೋಡದೇ ಮುಖ ಸಿಂಡರಿಸುತ್ತಿದ್ದ ಹಿರಿಯರೆಲ್ಲ ಥಳಥಳಿಸುವ 'ಬೆಳ್ಳಿ' ಬಾಟಲಿಯಲ್ಲಿ ಬಂದ ಭಕ್ತಿ ಸುಧೆಯನ್ನು ಚಪ್ಪರಿಸಿ ಸವಿಯುತ್ತಿದ್ದರು. 'ದೋ ಆಂಖೆ ಬಾರಾ ಹಾಥ್'ನ 'ಏ ಮಾಲಿಕ್ ತೇರೆ ಬಂದೆ ಹಮ್' ಧಾಟಿಯ 'ಮಂಗಳೇಶ ಮಹೇಶ ನಮೋ', 'ಬೀಸ್ ಸಾಲ್ ಬಾದ್'ನ 'ಕಹೀಂ ದೀಪ್ ಜಲೆ ಕಹೀಂ ದಿಲ್' ಧಾಟಿಯ 'ಗುರುದೇವ ಪರಿಪೂರ್ಣ', 'ಕವಿರತ್ನ ಕಾಳಿದಾಸ'ದ 'ಸದಾ ಕಣ್ಣಲಿ' ಹಿಂಬಾಲಿಸಿ ಬಂದ 'ಗುರುವೆ ನಿನ್ನೆಯ ನಾಮವ', 'ಕಸ್ತೂರಿ ನಿವಾಸ'ದ 'ಎಲ್ಲೇ ಇರು' ಅಂಗಿ ತೊಟ್ಟ 'ಗೌರಿ ಪ್ರಿಯ, ತೋರೋ ದಯ'ಗಳೆಲ್ಲ ಹೀಗೆ ಡಿಸೈನರ್ ಅಚ್ಚಿನಲ್ಲಿ ಅದ್ದಿ ತೆಗೆದ ಲೋಕಲ್ ಭಜನೆಗಳು. ಸಾಂಪ್ರದಾಯಿಕ ಭಜನೆ ಕಾರ್ಯಕ್ರಮವೊಂದರಲ್ಲಿ ಇಂಥ ಹಾಡೊಂದನ್ನು ಹಾಡಿದರೆ ನ್ಯೂಯಾರ್ಕ್ ಬೀದಿಯಲ್ಲಿ ಸೀರೆಯುಟ್ಟು ನಡೆಯುವ ಯುವತಿಯ ರೀತಿಯಲ್ಲಿ ಗಮನ ಸೆಳೆಯುತ್ತಿದ್ದವು (ಬೆಂಗಳೂರಿನ ಬ್ರಿಗೇಡ್ ರಸ್ತೆ ಎನ್ನಲಾರೆ, ಅಲ್ಲಿ ಸೀರೆ ಅಪರೂಪವಾದರೂ ಅದನ್ನುಟ್ಟರೆ ಯಾರೂ ಕಣ್ಣೆತ್ತಿ ನೋಡಲಾರರು).
ಸೀಮಿತ ಅವಕಾಶದಲ್ಲಿ ಪ್ರತಿಭೆಯ ಪ್ರಭೆಯನ್ನು ಹೊರಸೂಸಲು ಅವಕಾಶ ಮಾಡಿಕೊಡುವ ಈ ಪರ್ಯಾಯ ಪದ್ಯಗಳಿಗೆ ಒರಿಜಿನಲ್ ಚಿತ್ರಗೀತೆಗಳಿಗಿರುವ ಸಾರ್ವಕಾಲಿಕ ಜನಪ್ರಿಯತೆಯ, ರಾಷ್ಟ್ರೀಯ ಗೀತೆಗಳು ಹೊದ್ದ ಇನ್ಶೂರ್ಡ್ ಗೌರವದ, ಶ್ಲೋಕಗಳ ಪಾವಿತ್ರ್ಯ, ಪರಂಪರೆಯ ಅಗ್ಗಳಿಕೆಯ ಅಥವಾ ಭಾವಗೀತೆಗಳ ಸಾಹಿತ್ಯಿಕ ಘನತೆಯ, ಘಮಲಿನ ವಿಶೇಷ ಸವಲತ್ತುಗಳೊಂದೂ ಇಲ್ಲ. ಆದರೂ ತುಂಟ ಎಸ್ಸೆಮ್ಮೆಸ್ಗಳಂತೆ ತುಟಿಯ ಮೇಲೊಂದು ತುಂತುರು ನಗೆ ಅರಳಿಸಿ, ತಲೆ ಹತ್ತಿ ಕುಳಿತ ಚಿಂತೆಯ ತೊಲೆಯನ್ನು ಇಳಿಸಿ ಹಗುರ ಮಾಡಿ, ಪುಟ್ಟ ಪುಟ್ಟ ರಸಗಳಿಗೆಗಳನ್ನು ಸೃಷ್ಟಿಸುವ ಸೊಗಸು ಇದೆ.
ಕೊನೆಗೊಂದು ಕೊಸರು: ಹಲವು ಸಲ 'ಚಲ್ತೇ ಚಲ್ತೇ' ಚಿತ್ರದ ಶೀರ್ಷಿಕೆ ಗೀತೆ- 'ಚಲ್ತೇ ಚಲ್ತೇ ಮೇರೆ ಯೇ ಗೀತ್ ಯಾದ್ ರಖನಾ'ದೊಂದಿಗೆ ಸ್ನೇಹ ಸಮಾರಂಭಗಳಿಗೆ ಮುಕ್ತಾಯ ಹಾಡುವುದುಂಟು. ಈ ಗೀತೆಗೊಬ್ಬ ಮಲಸೋದರಿ. ಆಕೆಯೂ ಸಮಾರೋಪ ಸಂಗೀತದಲ್ಲಿ ಸಮರ್ಥಳು. ಆಕೆಯನ್ನು ಮುಂದಿಟ್ಟುಕೊಂಡು ಇತ್ತಲಿಂದ ಬೈ ಬೈ, ಸಲಾಂ- 'ಇರಲಿ, ನೆನಪಿರಲಿ, ನಮ್ಮ ಗೆಳೆತನದ ಸವಿ ನೆನಪಿರಲಿ, ಆ ನೆನಪೇ ಶಾಶ್ವತವು, ಅದುವೆ ಚಿರ ನೂತನವು'.

('ದ್ಯಾಟ್ಸ್ ಕನ್ನಡ'ಕ್ಕೆ ಧನ್ಯವಾದ ಹೇಳುತ್ತ..)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ