ಸೋಮವಾರ, ಮಾರ್ಚ್ 9, 2009

ಜೀವ ನದಿ

ಅಂತರ್ರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ನನ್ನ ಜೀವನದ ಬಹುಮುಖ್ಯ ಅಂಗವಾದ ಒಬ್ಬ ಮಹಿಳೆಯ ಕುರಿತು ಈ ಬರೆಹ:
ಆಕೆ ನನ್ನ ಅಮ್ಮಮ್ಮ. ಹೆಸರಿಗೆ ಅಮ್ಮಮ್ಮನಾದರೂ ವಾಸ್ತವದಲ್ಲಿ ಅಪ್ಪನ ಅಮ್ಮ. ಅಚ್ಚ ಬಿಳಿ ಬಣ್ಣ, ಗುಂಡಗಿನ ಗಿಡ್ಡ ದೇಹ, ಬೋಳಿಸಿದ ತಲೆ, ಗುಳಿ ಬಿದ್ದ ಕಣ್ಣುಗಳು, ನೆರಿಗೆಗಟ್ಟಿದ ಮುಖ-ಮೈ, ಸೊಂಟಕ್ಕೆ ಬಿಗಿಯಾಗಿ ಸುತ್ತಿದ ಕೆಂಪು ಅಥವಾ ಅದರ ಆಚೀಚಿನ ಬಣ್ಣಗಳ ಹತ್ತಿ ಸೀರೆ, ರವಿಕೆ... ಅಮ್ಮಮ್ಮನ ಬಾಹ್ಯ ರೂಪ ಇದು. ನಾನು ಹುಟ್ಟಿದಾಗಿನಿಂದ ನೋಡುತ್ತಿರುವ ರೂಪವೂ ಹೌದು. ಇತ್ತೀಚಿನ ವರ್ಷಗಳಲ್ಲಿ ಸುಕ್ಕು ಹೆಚ್ಚಿದೆ, ಕಣ್ಣು-ಕಿವಿ ಕೊಂಚ ಮಂಜು-ಮಂದ ಆಗಿವೆ, ಮುದಿವಯಸ್ಸು ತನ್ನ ಅಸ್ತಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡಿದೆ ಎಂಬುದನ್ನು ಬಿಟ್ಟರೆ, ಒಟ್ಟಾರೆಯಾಗಿ ಅಮ್ಮಮ್ಮನ ಅಪೀಯರೆನ್ಸ್ ಬಹಳೇನೂ ಬದಲಾಗಿಲ್ಲ.
ದೇಹ ಹಣ್ಣಾಗಿದ್ದರೂ ಅಮ್ಮಮ್ಮನ ಮನಸ್ಸು ಇನ್ನೂ ಹಸಿರು. ಅಲ್ಲಿ ಪ್ರೀತಿ-ವಾತ್ಸಲ್ಯ, ಕಾಳಜಿ, ಅಂತಃಕರಣ (ಅವಳ ಭಾಷೆಯಲ್ಲಿ ತನುಕರಣೆ), ಮನೆಮಕ್ಕಳು, ಮೊಮ್ಮಕ್ಕಳ ಮೇಲಿನ ಮೋಹಗಳ ಚಿಲುಮೆ ಸದಾ ಚಿಮ್ಮುತ್ತದೆ. ಮನೆಗೆ ಬಂದ ಅತಿಥಿಗಳ ಊಟೋಪಚಾರ ಸರಿಯಾಗಿ ಆಗುತ್ತಿದೆಯೋ ಇಲ್ಲವೋ ಎಂಬ ಸಂದೇಹವೂ ಬರುತ್ತದೆ. ತೊಂಬತ್ತೆಂಟರ ಅಮ್ಮಮ್ಮ ಈಗಲೂ ಊಟದ ಪಂಕ್ತಿಯಲ್ಲಿ ಅಡ್ಡಾಡಿ ಖುದ್ದಾಗಿ ಅತಿಥಿಗಳನ್ನು ವಿಚಾರಿಸಿಕೊಂಡು ಬರುತ್ತಾಳೆ.
ಅಪ್ಪ-ಅಮ್ಮ ಜಮೀನು ನೋಡಿಕೊಂಡಿದ್ದ ಊರಿನಲ್ಲಿ ಸರಿಯಾದ ಶಾಲೆ ಇಲ್ಲದ ಕಾರಣ ಅಣ್ಣ, ಅಕ್ಕ, ನಾನು ಚಿಕ್ಕವಯಸ್ಸಿನಲ್ಲಿಯೇ ಅವರನ್ನು ಬಿಟ್ಟು ದೊಡ್ಡಪ್ಪ-ದೊಡ್ಡಮ್ಮಂದಿರೊಂದಿಗೆ ಅಮ್ಮಮ್ಮ ವಾಸಿಸುತ್ತಿದ್ದ ಬಾಳೇಸರ ಸೇರಿಕೊಂಡಿದ್ದೆವು. ತಂದೆ-ತಾಯಿಂದ ದೂರವಿದ್ದ ನಮಗೆ ಅಮ್ಮಮ್ಮನೇ ಎಲ್ಲ ಆಗಿದ್ದವಳು. ಸ್ನಾನ ಮಾಡಿಸಿ, ಬಟ್ಟೆ ತೊಳೆದು ಒಣಗಿಸುವುದರೊಂದಿಗೆ ಶಾಲೆಯಿಂದ ಬರುತ್ತಲೂ ತಿಂಡಿ-ಆಸರಿಗೆ ಒದಗಿಸುವುದು, ನಾವು ಸರಿಯಾಗಿ ಓದಿ-ಬರೆಯುತ್ತೇವೋ ಇಲ್ಲವೋ ಎಂಬ ಬಗ್ಗೆ ನಿಗಾ ಇಡುವುದು, ಸಣ್ಣಪುಟ್ಟ ಜಗಳ-ಹೊಡೆದಾಟ ನಡೆಸಿದರೆ ಮಧ್ಯಸ್ಥಿಕೆ ವಹಿಸಿ ಬಿಡಿಸುವುದು, ಕೊನೆಗೆ ರಾತ್ರಿ ಮಲಗುವಾಗ ಬಂದು ಹಾಸಿಗೆ ಬಿಡಿಸಿ, ಕುಡುವಿಕೊಟ್ಟು ಹೋಗುವವರೆಗೆ ಅಮ್ಮಮ್ಮ ನಮಗೆಲ್ಲ ಸೇವೆ ಮಾಡುತ್ತಿದ್ದಳು. ನಾವು ದೊಡ್ಡವರಾಗುತ್ತಿದ್ದಂತೆ ಇವೆಲ್ಲ ಕೆಲಸ ಖುದ್ದು ಮಾಡಿಕೊಳ್ಳಲು ಕಲಿಸಿದ್ದೂ ಅವಳೇ.
ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ಅಜ್ಜಿಮನೆಯ ಆಶ್ರಯಕ್ಕೆ ಬಂದಿದ್ದ ಅಮ್ಮಮ್ಮನಿಗೆ ಓದು ಬರೆಹ ಕಲಿಯಲಾಗಿರಲಿಲ್ಲ. ಇದೊಂದು ಕೊರಗು ಆಕೆಯಲ್ಲಿ ಯಾವತ್ತೂ ಉಳಿದಿತ್ತು. ಹಾಗಾಗಿ ಓದುವ ಮಕ್ಕಳನ್ನು ಅವಳು ಬಹಳವಾಗಿ ಪ್ರೀತಿಸುತ್ತಾಳೆ. ನಮ್ಮ ಶಾಲಾ ದಿನಗಳಲ್ಲಿ ಶನಿವಾರ, ಭಾನುವಾರ ಬಂತೆಂದರೆ ಆಕೆಗೆ ಪಾಠ ಓದಿ ಹೇಳುವ ಕೆಲಸ ನಮ್ಮದು. ತಾನು ಅಡಿಕೆ ಸುಲಿಯುತ್ತಲೋ, ಅಕ್ಕಿ ಬೀಸುತ್ತಲೋ, ಇನ್ನಾವುದೇ ಕೆಲಸ ಮಾಡುತ್ತಲಿರುವಲ್ಲಿ ನಮ್ಮನ್ನು ಕರೆಸಿಕೊಳ್ಳುತ್ತಿದ್ದ ಅಮ್ಮಮ್ಮ ಕನ್ನಡ ಪಠ್ಯದ ಯಾವುದಾದರೂ ಒಂದು ಪಾಠ ಓದಿ ಹೇಳಲು ಆದೇಶ ನೀಡುತ್ತಿದ್ದಳು. ಪೌರಾಣಿಕ ಪಾಠಕ್ಕೆ ಆದ್ಯತೆ. ಇಲ್ಲವಾದರೆ ಯಾವುದೂ ಸರಿ. ಪದ್ಯಗಳನ್ನೂ ರಾಗವಾಗಿ ಓದಿ ಹೇಳಬೇಕಿತ್ತು. ಅದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದರೆ ಆಕೆಗೆ ಇಮ್ಮಡಿ ಸಂತಸ. ಒಂದು ವಿಷಯ ತಿಳಿದುಕೊಂಡಿದ್ದಕ್ಕೆ, ಇನ್ನೊಂದು ತನ್ನ ಮೊಮ್ಮಕ್ಕಳಿಗೆ ಚಂದ ಮಾಡಿ ಓದಲು ಬರುತ್ತದಲ್ಲ ಎಂಬ ಹೆಮ್ಮೆಗೆ. ಮುಂದೆ ನಾವೆಲ್ಲ ಹೈಸ್ಕೂಲು, ಕಾಲೇಜು ಸೇರಿದ ಮೇಲೆ 'ಇಂಗ್ಲೀಷಲ್ಲಿ ಮಾತಾಡಿ' ಎಂದು ಪ್ರೋತ್ಸಾಹಿಸುತ್ತಿದ್ದಳು. 'ಅಮ್ಮಮ್ಮ ನಿಂಗದೆಲ್ಲ ಅರ್ಥ ಆಗ್ತಿಲ್ಲೆ' ಎಂದರೆ, 'ಅಡ್ಡಿ ಇಲ್ಲೆ, ನಿಂಗ ಮಾತಾಡಿದ್ನ ಕೇಳಿರೂ ಯಂಗದೇ ಸಂತೋಷ' ಎನ್ನುತ್ತಿದ್ದಳಾಕೆ.
ಓದು ಬರದಿದ್ದರೂ ಅಮ್ಮಮ್ಮ ಲೆಕ್ಕದಲ್ಲಿ ಭಾರಿ ಜಾಣೆ. ಮಗ್ಗಿ, ಕಾಲು, ಅರ್ಧ, ಮುಕ್ಕಾಲು ಎಲ್ಲ ಆಕೆಗೆ ಕಂಠಪಾಠ. ನಾಣ್ಯ, ನೋಟುಗಳನ್ನೆಲ್ಲ ಚಿತ್ರ ನೋಡಿಯೇ ಗುರುತಿಸುತ್ತಿದ್ದಳು. ಒಬ್ಬಂಟಿಯಾಗಿ ಬಸ್ ಪ್ರಯಾಣ ಮಾಡುವಷ್ಟು ಧೈರ್ಯವೂ ಇತ್ತು. ಸಂಪ್ರದಾಯದ ಹಾಡುಗಳು, ಗಾದೆಗಳಂತೂ ಸಾವಿರದ ಲೆಕ್ಕದಲ್ಲಿ ಗೊತ್ತು. ಯಾರಾದರೂ ಒಂದು ಹೊಸ ಹಾಡು ಹೇಳಿದರೆ ಒಂದು ಸಲ ಕೇಳುತ್ತಲೇ ಪೂರ್ತಿ ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಅವಳದ್ದು. ಬರೆಹ ಕಲಿಯದ ಆಕೆಯ ಕೊರಗು ಕೊನೆಯವರೆಗೂ ಇರಬಾರದೆಂದು ನಾನು ಆಕೆಗೆ ಸುಮಾರು ಎಂಬತ್ತನಾಲ್ಕು ವರ್ಷವಿದ್ದಾಗ 'ಅ,ಆ,ಇ,ಈ' ಹೇಳಿಕೊಟ್ಟಿದ್ದೆ. ಆಗ ನನಗೆ ಶಾಲಾ ರಜೆ, ಅಮ್ಮಮ್ಮನೂ ನನ್ನಪ್ಪ-ಅಮ್ಮ ಇದ್ದ ಹನುಮಾಪುರಕ್ಕೆ ಬಂದುಳಿದಿದ್ದಳು. ಅಕ್ಷರಾಭ್ಯಾಸ ಮಾಡುವ ಖುಷಿಯಲ್ಲಿ ಅಮ್ಮಮ್ಮ ಕನ್ನಡಾಕ್ಷರಗಳನ್ನು ತಿದ್ದಿದ್ದೇ ತಿದ್ದಿದ್ದು. ಎರಡು ಮೂರು ದಿನಗಳಲ್ಲಿ 'ಅಂ, ಅಃ'ವರೆಗೆ ಕಲಿತಳು. 'ಗೌರಿ' ಎಂದು ತನ್ನ ಹೆಸರು ಬರೆಯಲೂ ಕಲಿತಳು. ಅಪ್ಪ-ಅಮ್ಮನ ಪ್ರೋತ್ಸಾಹವೂ ಇದ್ದಿದ್ದರಿಂದ ಅಲ್ಲಿ ಇದ್ದಷ್ಟು ದಿನ ಸಮಯ ಸಿಕ್ಕಾಗಲೆಲ್ಲ ಕಲಿತಷ್ಟನ್ನು ಬರೆಯುತ್ತಲೇ ಇದ್ದಳು. ಆದರೆ ಬಾಳೇಸರಕ್ಕೆ ವಾಪಸ್ ಬಂದ ಮೇಲೆ ಪ್ರೋತ್ಸಾಹ, ಅವಕಾಶ, ಸಮಯ ಯಾವವೂ ಸಿಗದೇ ಅಮ್ಮಮ್ಮನ ಅಕ್ಷರಾಭ್ಯಾಸ ಅಘನಾಶಿನಿಯಲ್ಲಿ ಕೊಚ್ಚಿ ಹೋಯಿತು.
ದೂರದೂರುಗಳಿಂದ ಬಾಳೇಸರ ಶಾಲೆಗೆ ಬರುತ್ತಿದ್ದ ಹಲವಾರು ಮಕ್ಕಳಿಗೆ ನಮ್ಮನೆಯಲ್ಲಿ ಮಧ್ಯಾಹ್ನದ ಊಟ ಹಾಕುವುದು ಅಜ್ಜನ ಕಾಲದಿಂದಲೇ ಇದ್ದ ಪದ್ಧತಿಯಂತೆ. ಅದು ಶುರುವಾಗಿದ್ದು, ಇನ್ನೂ ನಡೆದುಕೊಂಡು ಬರುತ್ತಿರುವುದು ಅಮ್ಮಮ್ಮನ ಒತ್ತಾಸೆಯಿಂದಲೇ. ಮನೆಯ ಸೊಸೆಯರು ಎಷ್ಟೇ ಬಡಿಸಿದರೂ, 'ಪಾಪ, ಶಾಲೆಗೆ ಹೋಪ ಹುಡ್ರು, ಸರಿಯಾಗಿ ತಿನ್ನವು' ಎಂದು ಅಮ್ಮಮ್ಮ ತಾನೇ ಬಂದು ಮತ್ತಷ್ಟು ತುಪ್ಪ ಹಾಕುವುದು, ಕಜ್ಜಾಯ ಬಡಿಸಿಹೋಗುವುದು ಯಾವತ್ತೂ ಇದ್ದದ್ದೇ. ನಾವು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ, ಮಧ್ಯಾಹ್ನ ಊಟ ಮುಗಿಸಿ ಹೊರಡುವಾಗ ಯಾರಿಗೂ ಗೊತ್ತಾಗದಂತೆ ಒಂದರೆಡು ಚಕ್ಕುಲಿಯನ್ನೋ, ಅತ್ರಾಸ, ಅಂಬೊಡೆಯನ್ನೋ ಕೈಗಿಟ್ಟು ಸದ್ದಿಲ್ಲದೇ ತೆರಳುತ್ತಿದ್ದ ಅಮ್ಮಮ್ಮನ ಚಿತ್ರ ಇಂದಿಗೂ ಕಣ್ಣು ಕಟ್ಟುತ್ತದೆ.
ಅಜ್ಜ ಕೂಡ ಅಮ್ಮಮ್ಮನಂತೆ ಎಳವೆಯಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದಂತೆ. ಮದುವೆಯಾಗುವಾಗ ಇಬ್ಬರಿಗೂ ಚಿಕ್ಕವಯಸ್ಸು. ಕೆಲವೇ ಸಮಯದಲ್ಲಿ ಮನೆಯ ಹಿರಿಯಲು ಇವರನ್ನು ಬರಿಗೈಯಲ್ಲಿ ಮನೆಯಿಂದ ಹೊರ ಹಾಕಿದರಂತೆ. ಆಮೇಲೆ ನಾಲ್ಕು ಜನ ದೊಡ್ಡವರು ಮಧ್ಯಸ್ಥಿಕೆ ನಡೆಸಿ ಬಾಳೇಸರದಲ್ಲೊಂದು ತುಂಡು ಜಮೀನು ಖರೀದಿಸಲು ಸಹಾಯ ಮಾಡಿದ್ದರಂತೆ. ಹೀಗೆ ಏನೂ ಇಲ್ಲದೆಯೇ ಪಾಳು ಬಿದ್ದ ತೋಟ ನಂಬಿ ಸಂಸಾರ ಶುರು ಮಾಡಿದ ಅಜ್ಜನಿಗೆ ಸಮನಾಗಿ ನಿಂತು ಮನೆಯ ಹೊರಗೆ, ಒಳಗೆ ದುಡಿದವಳು ಅಮ್ಮಮ್ಮ. ಶಾಂತ ಸ್ವಭಾವದ ನಿಧಾನಸ್ಥ, ಭಾವುಕ, ಕಾವ್ಯಜೀವಿ ಅಜ್ಜನಿಗೆ ಭಾರಿ ಚುರುಕಿನ, ಚಟುವಟಿಕೆಯ, ವಾಸ್ತವವಾದಿ, ಗಡಸು ಹೆಂಡತಿ ಅಮ್ಮಮ್ಮ. ಅಜ್ಜ ಸ್ವಾತಂತ್ರ್ಯ ಹೋರಾಟಕ್ಕೆ ಸೇರಿ ಜೈಲು ಸೇರಿದಾಗ ಮನೆಯನ್ನು ನಡೆಸಿದವಳು ಅವಳು. ಅಂತೂ ಇಬ್ಬರು ಹೊಂದಿ ದುಡಿದು ಮನೆಯನ್ನು ಬೆಳೆಸಿದರು. ನಾಲ್ವರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು. ದೊಡ್ಡಪ್ಪಂದಿರಿಗೆ, ಅತ್ತೆಯರಿಗೆ ಮದುವೆಯೂ ಆಯಿತು. ಇನ್ನೊಬ್ಬ ದೊಡ್ಡಪ್ಪ, ನನ್ನಪ್ಪ ಇನ್ನೂ ಓದುತ್ತಿರುವಾಗಲೇ ಅಜ್ಜ ಕ್ಯಾನ್ಸರಿನಿಂದ ತೀರಿ ಹೋದರು. ಅಮ್ಮಮ್ಮ ಆಗಿನ ಸಂಪ್ರದಾಯದಂತೆ ತಲೆ ಬೋಳಿಸಿಕೊಂಡು, ಕೆಂಪಿನ ಛಾಯೆಗಳ ಸೀರೆಯುಡುವ ವಿಧವೆಯಾದಳು.
ಬಾಹ್ಯರೂಪಕ್ಕೆ ಮಡಿ ಹೆಂಗಸಾಗಿ ಕಂಡರೂ ಅಂತರಂಗದಲ್ಲಿ ಅಮ್ಮಮ್ಮ ತನ್ನ ಸೊಸೆಯಂದಿರಿಗಿಂತಲೂ ಹೆಚ್ಚು ಮಾಡರ್ನ್. ಮೊಮ್ಮಕ್ಕಳ ಮದುವೆ ವಿಷಯದಲ್ಲಿ 'ನಿಂಗ ಪ್ರೀತಿ ಮಾಡಿ ಬೇರೆ ಜಾತಿಯವರನ್ನು ಮದುವೆ ಆದರೂ ಅಡ್ಡಿಲ್ಲೆ, ಆದರೆ ಮದುವೆ ಆದಂವ ನಿಂಗಳನ್ನ ಯಾವತ್ತೂ ಗೌರವದಿಂದ, ಪ್ರೀತಿಯಿಂದ ಕಾಣವು. ಸಂಸಾರವನ್ನ ಸಮರ್ಥವಾಗಿ ನಡೆಸಿಕ್ಯಂಡು ಹೋಪಷ್ಟು ಗಟ್ಟಿ ಇರವು' ಎಂದವಳು ಅವಳು. ಮೊಮ್ಮಕ್ಕಳಲ್ಲಿ ಹುಡುಗಿಯರೆಲ್ಲ ಚೆನ್ನಾಗಿ ಓದಿ, ನೌಕರಿ ಮಾಡಬೇಕೆಂಬುದು ಅವರ ಮಹದಾಸೆ. ಒಬ್ಬಂಟಿಯಾಗಿ ಪರವೂರಿಗೆ ವಿದ್ಯಾಭ್ಯಾಸಕ್ಕೆ, ನೌಕರಿಗೆ ಹೊರಟು ನಿಂತಾಗ ಬೆನ್ನು ತಟ್ಟಿ ಕಳುಹಿಸಿದ್ದಳು. ಸ್ವಾತಂತ್ರ್ಯ ಹೋರಾಟಗಾರರ ಮಾಸಾಶನ ತರಲು ಸಿದ್ದಾಪುರಕ್ಕೆ ಹೋದಾಗಲೆಲ್ಲ ಅಲ್ಲಿನ ಬ್ಯಾಂಕುಗಳಲ್ಲಿ, ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರನ್ನು ನೋಡಿ ಬರುತ್ತಿದ್ದ ಅಮ್ಮಮ್ಮ 'ತಂಗಿ, ನಿಂಗಳೂ ಎಲ್ಲ ಇಂಥಾ ನೌಕರಿಗೆ ಸೇರಿ. ಕೆಲಸನೂ ಮಾಡಲಾಗ್ತು, ಮಕ್ಕಳನ್ನು ಬೆಳಸಿ ಸಂಸಾರ ನೋಡಿಕ್ಯಂಬಲೂ ಆಗ್ತು' ಎಂದು ಹುರುಪು ತುಂಬುತ್ತಿದ್ದಳು. ಈಗಲೂ ಸಹ, ಪತ್ರಿಕೆಗಳಲ್ಲಿ ಪ್ರಕಟವಾಗುವ ನನ್ನ ಲೇಖನಗಳನ್ನು ಅಪ್ಪ ಅವಳೆದುರು ಓದಿ ಹೇಳುತ್ತಿದ್ದರೆ, 'ತನ್ನ ಮೊಮ್ಮಗಳು ಬರೆದದ್ದು' ಎಂದು ಅವಳಿಗಾಗುವ ಹೆಮ್ಮೆ ಅಲ್ಪಸ್ವಲ್ಪದಲ್ಲ.
ದೈಹಿಕವಾಗಿಯೂ ಅಮ್ಮಮ್ಮ ಗಟ್ಟಿ ಜೀವಿ. ತನ್ನೆಲ್ಲ ಕೆಲಸಗಳನ್ನು ತಾನೇ ಮಾಡಿಕೊಂಡು ಬರುವ ಜೊತೆಗೆ ಅಡುಗೆಯಲ್ಲಿ, ಮನೆವಾರ್ತೆಯಲ್ಲಿ ಸಹಾಯ ಮಾಡುವುದು ಆಕೆ ಸುಮಾರು ಎಂಬತ್ತೈದು ವರ್ಷಗಳವರೆಗೂ ನಡೆಸಿಕೊಂಡು ಬಂದ ನಿತ್ಯ ಕರ್ಮ. ಆದರೆ ಕಳೆದೊಂದು ದಶಕದಲ್ಲಿ ಇಬ್ಬರು ಗಂಡು ಮಕ್ಕಳು, ಒಬ್ಬ ಅಳಿಯನನ್ನು ಕಳೆದುಕೊಂಡಿದ್ದು ಅಮ್ಮಮ್ಮನಿಗೆ ಏಕಾಏಕಿ ಮುದಿತನ ತಂದಿತು. ಈಗೆರಡು ವರ್ಷಗಳಿಂದ ಮರೆವು ಜಾಸ್ತಿ. ಹಿಂದಿನ ದಿನಗಳಾಗಲಿ, ಹಿಂದೆ ಕಲಿತ ಹಾಡು ಹಸೆ ಲೆಕ್ಕ, ಹಳೆಯ ನೆಂಟರು ಯಾರೂ ಆಕೆಗೆ ಮರೆತಿಲ್ಲ. ಆದರೆ ದಿನ ನಿತ್ಯದ ಬದುಕಿನ ಚಿಕ್ಕಪುಟ್ಟ ಸಂಗತಿಗಳು ನೆನಪಿರುವುದಿಲ್ಲ. ಆದರೂ ಬಾಯಿ ರುಚಿ ಇಲ್ಲ, ಪಿಸುಗುಟ್ಟಿದರೆ ಕೇಳುವುದಿಲ್ಲ, ಕಣ್ಣು ಸ್ಪಷ್ಟವಾಗಿ ಕಾಣುವುದಿಲ್ಲ ಎಂಬ ವೃದ್ಧಾಪ್ಯದ ಸಮಸ್ಯೆಗಳನ್ನು ಹೊರತುಪಡಿಸಿದರೆ ಇಂದಿಗೂ ಆಕೆಗೆ ಯಾವುದೇ ರೋಗ ಇಲ್ಲ. ತನ್ನ ಕೆಲಸಗಳಿಗೆ ಯಾರನ್ನೂ ಆಕೆ ಅವಲಂಬಿಸಿಲ್ಲ.
ನಮ್ಮ ಕುಟುಂಬದ ಸಮಷ್ಟಿ ಶಕ್ತಿಯಾಗಿ, ಜೀವ ನದಿಯಾಗಿ ನಿಂತ ಅಮ್ಮಮ್ಮ ಬದುಕಿದಷ್ಟು ದಿನ ನೆಮ್ಮದಿಯಿಂದಿರಲಿ, ಇಷ್ಟೇ ಗಟ್ಟಿ ಇರಲಿ. ಅಮ್ಮಮ್ಮನ ಚೇತನ ಕಿರಿಯರಿಗೆಲ್ಲ ಬೆಳಕಾಗಿರಲಿ ಎಂಬುದು ನನ್ನ ಪ್ರೀತಿಯ ಹಾರೈಕೆ.

6 ಕಾಮೆಂಟ್‌ಗಳು:

  1. ಇಂಥಹುದೇ ವ್ಯಕ್ತಿತ್ವದ ನನಗೆ ಒಬ್ಬ ಅಜ್ಜಿ ಇದ್ದಳು..

    ಈಗಿಲ್ಲ..

    ಅವರು ಕಷ್ಟ ಪಟ್ಟಿದ್ದಕ್ಕೆ ನಾವು ಇಂದು

    ಸುಖ ನೋಡುತ್ತಿದ್ದೇವೆ..

    ಮಹಿಳಾ ದಿದಂದು..
    ಒಬ್ಬ ಆದರ್ಶ. ಅತ್ಯಂತ ಸೂಕ್ತವಾದ ..

    ಅ ಗೌರಜ್ಜಿಯನ್ನು.. ನೆನಪಿಸಿದ್ದಕ್ಕೆ....

    ಚಂದದ ಭಾಷೆಯಲ್ಲಿ.. ಸುಂದರ..
    ಸಮಯೋಚಿತ ಲೇಖನ ಬರೆದಿದ್ದಕ್ಕೆ..

    ವಂದನೆಗಳು..
    ಅಭಿನಂದನೆಗಳು..
    ..

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು ಪ್ರಕಾಶಣ್ಣ,
    ಸುನಂದಾ ಬೆಳಗಾಂವಕರ ಅವರ 'ಕೈತುತ್ತು' ಓದುವಾಗೆಲ್ಲ ನನಗೆ ನನ್ನ ಅಮ್ಮಮ್ಮನ ಕತೆಯನ್ನೇ ಓದಿದಂತೆ ಆಗುತ್ತಿತ್ತು.
    ಅಮ್ಮಮ್ಮನಿಗೆ, ಅವಳಂಥ ಅನೇಕ ಅಜ್ಜಿಯರಿಗೆ ನನ್ನದೊಂದು ಪುಟ್ಟ ಸೆಲ್ಯೂಟ್!

    ಪ್ರತ್ಯುತ್ತರಅಳಿಸಿ
  3. ನಿಮ್ಮ ಅಮ್ಮಮ್ಮ ಕುರಿತು ಚಂದ ಬರೆದಿದ್ದೀರಿ ರೇಖಾ,

    ನಿಮ್ಮ ಬ್ಲಾಗ್ ಕಾನ ದನಿ, ವಿಶೇಷವಾಗಿದೆ. ಶುಭಾಶಯಗಳು..

    ಪ್ರತ್ಯುತ್ತರಅಳಿಸಿ
  4. tumba chenagi moodi bandide nimma baraha.. nanna ajji bahala nenapadlu idu odida nantara.. thnak you..

    ಪ್ರತ್ಯುತ್ತರಅಳಿಸಿ