ಗುರುವಾರ, ಡಿಸೆಂಬರ್ 11, 2008

'ಬೆಳ್ಳಿ' ಬಟ್ಟಲಲ್ಲಿ ಹಳ್ಳಿ ಸುಧೆ ಹೀರುತ್ತ....

ಹೀಗೊಂದು ಆಯ್ಕೆ: ಒಂದಿಷ್ಟು ಜನಪ್ರಿಯ ಗೀತೆಗಳಿವೆ. ನಿಮಗವು ಬಲು ಇಷ್ಟ. ಆ ಧಾಟಿಯಲ್ಲಿ ಹಾಡೋಣವೆಂದರೆ ಅವುಗಳ ಸಾಹಿತ್ಯ ಕೊಂಚ ಕ್ಲಿಷ್ಟ ಅಥವಾ ಅವೇ ಸಾಲುಗಳನ್ನು ಕೇಳಿ ಕೇಳಿ ಬೇಸರ ಬಂದಿದೆ. ಸರಿ, ನೀವದನ್ನು ನಿಮ್ಮತನಕ್ಕೆ ಒಗ್ಗಿಸಲು ಯತ್ನಿಸುತ್ತೀರಿ. ಹಿಡಿಸದ, ಹಳತಾದ ಸಾಲುಗಳ ಜಾಗದಲ್ಲಿ ಹೊಸ ಸಾಲುಗಳು, ಹೊಸ ಅರ್ಥವನ್ನು ಹೊಂದಿಸುತ್ತೀರಿ. ಈಗ ನಿಮ್ಮೆದುರು ಎರಡು ಆಯ್ಕೆಗಳಿವೆ. ಒಂದೋ, ಧಾಟಿಯನ್ನಷ್ಟೇ ಎತ್ತಿಕೊಂಡು ಅದಕ್ಕೆ ಪಂಚಿಂಗ್ ಮಾತುಗಳನ್ನು ಪೋಣಿಸಿ ನಿಮ್ಮ ನಿಮ್ಮಲ್ಲೇ ಹಾಡಿಕೊಂಡು ಗೆಳೆಯರ ಬಳಗದಲ್ಲಿ ಬೆಳಗಬಹುದು. ಇಲ್ಲವೇ, ಬೇರೆ ಭಾಷೆಯ ಹಾಡುಗಳ ಸಂಗೀತದ ಜೊತೆಗೆ ಸಾಹಿತ್ಯವನ್ನೂ ಒಂದಕ್ಷರ ಬಿಡದೇ ಅನುವಾದಿಸಿ/ಭಾವಾನುವಾದ ಮಾಡಿ, ಕನ್ನಡ ಸಿನೆಮಾ ನಿರ್ಮಾಪಕರಿಗೆ ಮಾರಿ ಚಿತ್ರ ಸಾಹಿತಿಯಾಗಬಹುದು.
ತಮಿಳು, ತೆಲುಗು ಲೇಬಲ್ ಮದ್ಯಕ್ಕಿಷ್ಟು ಕನ್ನಡತನದ ಕಲಬೆರಕೆ ಮಾಡಿ ಭಟ್ಟಿ ಇಳಿಸಿ, ಕನ್ನಡೀಕರಿಸಿದ ಹೆಸರು ಹಚ್ಚಿ ಹಿಂಬಾಗಿಲಿಂದ ಮನೆಯೊಳು ತಂದು ಮಧುಪಾನ ಮಾಡಿಸುವುದು ಚಿತ್ರಸಾಹಿತಿಗಳಿಗೇ (ಕನಿಷ್ಠ ಕೆಲವರಿಗಾದರೂ) ಸರಿ ಹೊಂದುವ ಕಾರ್ಯ. ಹೀಗಾಗಿ ನೀವು ಎರಡನೆಯದನ್ನು ಅವರಿಗೆ ಬಿಟ್ಟು, ಮೊದಲಿನದನ್ನೇ ಒಪ್ಪಿಕೊಳ್ಳುತ್ತೀರಾದರೆ- ಸುಸ್ವಾಗತ! ದೊಡ್ಡದೊಂದು ಕುಟುಂಬ ನಿಮ್ಮನ್ನು ತನ್ನೊಡಲಲ್ಲಿ ಸೇರಿಸಿಕೊಳ್ಳಲಿದೆ. ಇಲ್ಲಿ ಯಾರೂ/ಎಲ್ಲರೂ ಜನಪ್ರಿಯ ಹಾಡುಗಳಿಗೆ ತಮ್ಮದೇ ಪದಜೋಡಣೆ ಮಾಡಲಡ್ಡಿಯಿಲ್ಲ. ಪದ ಬದಲಿಸಿಕೊಂಡ ಪರ್ಯಾಯ ಪದ್ಯವನ್ನು ಕುಟುಂಬದ ಎಲ್ಲರೂ ಸವಿಯುತ್ತಾರೆ. ಆದರೆ ನೆನಪಿಡಿ, ಯಾರಿಗೂ ಆ ಸವಿ ಉಣಬಡಿಸಿದ ಕ್ರೆಡಿಟ್ ಸಲ್ಲುವುದಿಲ್ಲ. ಅಸಲಿಗೆ ಕುಟುಂಬಕ್ಕೇ ಒಂದು ಹೆಸರಿಲ್ಲ. ಅದೊಂಥರ ಆಗಾಗ ಹೊಸಬರನ್ನು, ಹೊಸ ವರ್ಷನ್ನನ್ನು ಸೇರಿಸಿಕೊಳ್ಳುತ್ತ, ಹಳತನ್ನು-ಹಳಬರನ್ನು ಕಳಚಿಕೊಳ್ಳುತ್ತ ಸಾಗುವ ಆಟೋ ಅಪ್ಗ್ರೇಡಿಂಗ್ ಎಂಟಿಟಿ.
ನನ್ನ ಬಾಲ್ಯದಲ್ಲಿ ಸಮಾನ ವಯಸ್ಕರ, ನಮ್ಮ ತಲೆಮಾರಿನವರ ನಡುವೆ ಇಂಥ ಪರ್ಯಾಯ ಪದ್ಯಗಳು ಭಾರಿ ಚಾಲ್ತಿಯಲ್ಲಿದ್ದವು. ಇವುಗಳಿಗೆಲ್ಲ ಮೂಲ ಸೆಲೆ ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಹಾಡುಗಳು. ಪದ ಬದಲಿಸುವ ಸ್ವಾತಂತ್ರ್ಯವನ್ನು ಎಲ್ಲರೂ ತೆಗೆದುಕೊಳ್ಳುತ್ತಿದ್ದುದುಂಟು.
ಚಿಕ್ಕಂದಿನಲ್ಲಿ ನಮ್ಮೂರಿಗೆ ರೆಗ್ಯುಲರ್ ಆಗಿ ದ್ಯಾವರು ಎಂಬ ಕೆಲಸಿ ಬರುತ್ತಿದ್ದ. ಅವನೆದುರು ಕುಳಿತಾಕ್ಷಣ 'ಬೋಳಿಸಲೆಂದೇ ಕೂಪನು ತಂದೆ, ಕೂಪನು ಮಸೆಯಲು ನಾನಿಂದೆ, ತೆಗೆಯೋ ಟೊಪ್ಪಿಯನು, ತಮ್ಮಾ ತೆಗೆಯೋ ಟೊಪ್ಪಿಯನು' ('ಎರಡು ಕನಸು' ಚಿತ್ರದ 'ಪೂಜಿಸಲೆಂದೇ' ಧಾಟಿಯಲ್ಲಿ) ಎಂದು ಅವನ ಪರವಾಗಿ ಹಾಡಿ ಮುಗಿಸಿಯೇ ಅಣ್ಣ ತಲೆ ಒಡ್ಡುತ್ತಿದ್ದುದು. ಅತ್ತ ಹಣ್ಣು ಹಣ್ಣು ಮುದುಕ ದ್ಯಾವರು ಬೊಚ್ಚು ಬಾಯಿ ಕಿರಿದು ಮುಸಿ ಮುಸಿ ನಗುತ್ತಿದ್ದರೆ, ಇತ್ತ ಕಲ್ಪನಾ ಪ್ರೇಮಿ ಅಮ್ಮ 'ಇದೇ ಹಾಡೇ ಬೇಕಾಗಿತ್ತ ನಿಂಗೆ' ಎಂದು ಸಿಡಿಮಿಡಿಗೊಳ್ಳುತ್ತಿದ್ದಳು.
'ಎಡಕಲ್ಲು ಗುಡ್ಡದ ಮೇಲೆ' ಚಿತ್ರದ 'ವಿರಹ ನೂರು ನೂರು ತರಹ' ಹಾಡನ್ನು ಚಹಕ್ಕೆ ಸಮೀಕರಿಸಿ ಹಾಡುತ್ತಿದ್ದೆವು. ಒಮ್ಮೆ ನನ್ನಕ್ಕ ಒಬ್ಬಳು ತನ್ನ ಚಿಕ್ಕ ವಯಸ್ಸಿನ ಮಗಳೊಂದಿಗೆ ನೆಂಟರ ಮನೆಗೆ ಹೋಗಿದ್ದಳು. ಮಾತಿನ ಮಧ್ಯೆ ಅತಿಥಿಗಳಿಗೆ ಚಹ ಬಂತು. ಒಂದು ತೊಟ್ಟು ಗುಟುಕರಿಸಿದ ಮಗಳು ತಟ್ಟನೆ ಲೋಟ ಕುಕ್ಕಿ ಗಟ್ಟಿ ದನಿಯಲ್ಲಿ 'ಈ ಚಹ ನೀರು ನೀರು ತರಹ, ಈ ಚಹ ಕುಡಿವುದೆನ್ನೆಯ ಹಣೆ ಬರಹ' ಎಂದು ಹಾಡಿದಳು. ಮಗಳನ್ನು ಕರೆದುಕೊಂಡು ಹೋದದ್ದಕ್ಕಾಗಿ ತನ್ನನ್ನೇ ಶಪಿಸಿಕೊಳ್ಳುತ್ತ ಅಕ್ಕ ಲಗುಬಗೆಯಿಂದ ಮನೆಗೆ ಹೊರಟಳು.
ಇಡ್ಲಿ-ಸಾಂಬಾರು ಮಾಡಿದಾಗೆಲ್ಲ 'ನಮ್ಮ ಸಂಸಾರ, ಇಡ್ಲಿ ಸಾಂಬಾರ, ದೋಸೆ ಎಂಬ ದೈವವೇ ನಮಗಾಧಾರ, ಚಟ್ನಿ ತಂದ ಬಲದಿಂದ ಬಾಳೇ ಬಂಗಾರ' ಹಿಮ್ಮೇಳದೊಂದಿಗೆ ಉಂಡಾಗಲೇ ಅದರ ಸವಿ ಮೈಗೆ ಹತ್ತುತ್ತಿತ್ತು. ಇನ್ನು ಕಾಯಿ ತಂಬುಳಿ ಬಡಿಸಿದಾಗೆಲ್ಲ 'ಬಂಧನ' ಚಿತ್ರದ 'ಪ್ರೇಮದಾ ಕಾದಂಬರಿ' ಧಾಟಿಯಲ್ಲಿ 'ಪ್ರೀತಿಯ ಕಾಯ್ತಂಬುಳಿ, ಬೀಸಿದೆ ಒಳ್ಕಲ್ಲಲಿ, ಅನ್ನ ಮುಗಿದೇ ಹೋದರೂ ಮುಗಿಯದಿರಲಿ ತಂಬುಳಿ' ಎಂದು ಹಾಡುತ್ತ ಅದನ್ನು ಕಲಸುತ್ತಿದ್ದರೆ ತಂಬುಳಿಯ ರುಚಿಯೊಂದಿಗೆ ರಸಿಕತೆಯ ಒಗ್ಗರಣೆ ಬೆರೆತು ಪರಿಮಳ ನೆತ್ತಿಗೇರಿ ಮತ್ತೇರಿಸುತ್ತಿತ್ತು. ಇದೇ 'ಬಂಧನ' ಚಿತ್ರದ 'ನೂರೊಂದು ನೆನಪು' ಕೈ ಕೊಟ್ಟಾಗ ಇರಲಿ ಎಂದು 'ನೂರೊಂದು ಬಸ್ಸು ಹಳಿಯಾಳದಿಂದ, ಹಾಳಾಗಿ ಬಂತು ಅಪಘಾತದಿಂದ' ಎಂಬ ಬ್ಯಾಕಪ್ ಮೆಮೊರಿ ತಯಾರಾಗಿತ್ತು. ಹಾಗೆಯೇ 'ಉಪಕಾರ್' ಚಿತ್ರದ 'ಮೆರೆ ದೇಶ್ ಕೇ ಧರತಿ' ಹಾಡು 'ಮೇರೆ ಸೇಠ್ ಕೇ ಚಡ್ಡಿ ಫಡ್ ಫಡ್ ಫಾಟೆ, ಸಿಲೇ ನ ಕೋಯಿ ದರ್ಜಿ, ಮೇರೆ ಸೇಠ್ ಕೇ ಚಡ್ಡಿ' ಎಂಬ ರೂಪ ಪಡೆದಿತ್ತು.
ಹಿಂದಿ ಚಿತ್ರಗೀತೆಗಳ ಪದ್ಯಬಂಡಿ ಆಡುವಾಗೆಲ್ಲ ಒಮ್ಮೆ 'ಸ' ಬಂದರೆ 'ತೇಜಾಬ್' ಚಿತ್ರದ 'ಸೋ ಗಯಾ ಯೇ ಜಹಾಂ' ಹಾಡು ಗ್ಯಾರಂಟಿ. ಮತ್ತೊಮ್ಮೆ 'ಸ' ಬಂದಾಗ ಅದೇ ಧಾಟಿಯಲ್ಲಿ 'ಸೋ ಗಯಾ ಯೇ ಗಧಾ, ಸೋ ಗಯಾ ವೋ ಗಧಾ, ಸೋ ಗಯೀ ಹೈ ಸಾರೇ ಬಕರಿಯಾಂ, ಸೋ ಗಯಾ ಹೈ ಕುತ್ತಾ ಭೌಭೌ' ಎಂದು ಹಿನ್ನೆಲೆ ಸಂಗೀತದ ಸಮೇತ ಹಾಡು ಹೊರಬರುತ್ತಿತ್ತು. ಆಮೇಲಿನ 'ಏ, ಈ ಹಾಡು ಇಲ್ಲ, ಹೀಂಗೆಲ್ಲಾ (ವಿ)ಚಿತ್ರಗೀತೆ ಹಾಡೋ ಹಾಗಿಲ್ಲ.......'ಲ್ಲಲ್ಲಲ್ಲಾಪವೂ ಅಷ್ಟೇ ಗ್ಯಾರಂಟಿ.
ನಾನು ಜವಾಹರ ನವೋದಯ ವಿದ್ಯಾಲಯದಲ್ಲಿ ಓದುತ್ತಿದ್ದಾಗ ಒಂದು ಸಂಜೆ ವಿದ್ಯುತ್ ಕಡಿತಗೊಂಡ ಸಂದರ್ಭ. ಕತ್ತಲೆ ಡಾರ್ಮಿಟರಿಯಲ್ಲಿ ಎಲ್ಲರೂ ತಣ್ಣಗೆ ಕುಳಿತಿದ್ದೆವು. ಇದ್ದಕ್ಕಿದ್ದಂತೆ ಒಬ್ಬಾಕೆ 'ಹೇ, ನಂಗೇನೋ ಕಚ್ಚಿ ಬಿಡ್ತಲ್ಲೆ, ದೀಪ ತಗಂಡು ಬಾರೆ' ಎಂದು 'ಹಮ್ರಾಝ್' ಚಿತ್ರದ 'ಹೇ ನೀಲೆ ಗಗನ್ ಕೆ ತಲೆ' ಅನುಸರಿಸಿ ಹಾಡಿದಳು. ಕತ್ತಲೊಂದಿಗೆ ಕವಿದಿದ್ದ ಮೌನದ ತೆರೆಯನ್ನು ಆ ಹಾಡು ಏಕ್ದಂ ಸರಿಸಿ, ತಿಳಿ ನಗೆಯ ತಿಂಗಳಬೆಳಕನ್ನು ಹರಡಿತ್ತು. ಆ ವಸತಿ ಶಾಲೆಯಲ್ಲಿ ವಿದ್ಯಾಥರ್ಿಗಳ ಸಂಖ್ಯೆ ಹೆಚ್ಚಿದ್ದ ಕಾರಣ ಎರಡು ಬ್ಯಾಚ್ಗಳಲ್ಲಿ ಊಟಕ್ಕೆ ಹೋಗುತ್ತಿದ್ದೆವು. ಎರಡನೇ ಬ್ಯಾಚ್ನವರು ಊಟ ಶುರು ಮಾಡುವ ಹೊತ್ತಿಗೆ ಸಾಂಬಾರೆಂಬುದು ಹೋಳು, ಬೇಳೆಯನ್ನೆಲ್ಲ ಕಳೆದುಕೊಂಡು ತಿಳಿಸಾರಾಗಿರುತ್ತಿತ್ತು. ಅನ್ನದ ಮೇಲಿಷ್ಟು ಸುರಿದುಕೊಂಡು ಬಂದ ಸಾರಲ್ಲಿ ಅಪರೂಪಕ್ಕೊಮ್ಮೆ ಬೇಳೆ ಕಂಡಿತೆಂದರೆ ಬಾಯಿಯ ಬಾವಿಯಲ್ಲಿ ಜೊಲ್ಲಿನ ಜೊತೆ ಈ ಹಾಡೂ ಚಿಮ್ಮುತ್ತಿತ್ತು- 'ದೇಖಾ ಹೈ ಪೆಹಲೀ ಬಾರ್, ಸಾಂಬಾರ್ ಮೇ ತುಅರ್ ಕಾ ದಾಲ್, ಅಬ್ ಜಾಕೆ ಆಯಾ ಮೇರೆ ಭೂಕೆ ಯೇ ಪೇಟ್ ಕೋ ಕರಾರ್, ಪೇಟ್ ಭರ್ ತುಜೇ ಖಾನೆ ಕೋ ಕಬ್ ಸೇ ಥೀ ಮೈ ಬೇಕರಾರ್, ಅಬ್ ಜಾಕೆ ಆಯಾ ಮೇರೆ ಭೂಕೆ ಯೇ ಪೇಟ್ ಕೋ ಕರಾರ್'- ಗೆಳತಿಯರ ಪೈಕಿ ಒಬ್ಬಾಕೆ ಇದನ್ನು ಹಾಡಿದರೆ ಉಳಿದವರಿಂದ 'ಸಾಜನ್' ಚಿತ್ರದ ಆ ಹಾಡಿನ ಹಿನ್ನಲೆ ಸಂಗೀತದ ಮಾದರಿಯಲ್ಲೇ 'ಪಾಂಚ್ ಕಾ ಪಚಾಸ್, ಪಾಂಚ್ ಕಾ ಪಚಾಸ್' ಎಂಬ ಕೋರಸ್.
ಸಾಮಾನ್ಯವಾಗಿ ಇಂಥ ಪರ್ಯಾಯ ಪದ್ಯಗಳೆಲ್ಲ ಚಿತ್ರಗೀತೆಗಳನ್ನೇ ಅನುಸರಿಸುತ್ತಿದ್ದರೂ ಅಪರೂಪಕ್ಕೆ ಕೆಲವು ರಾಷ್ಟ್ರೀಯ ಗೀತೆಗಳೂ ಪದ ಬದಲು ಪ್ರಕ್ರಿಯೆಗೆ ಒಳಗಾಗುತ್ತಿದ್ದವು. ಕೆಲವೊಂದು ಮಜವಾಗಿದ್ದರೆ ವಿಶೇಷವಾಗಿ ಒಂದು ಪದ್ಯ 'ಸಜ'ವಾಗಿತ್ತು.
ನವೋದಯಲ್ಲಿ ರಸಾಯನ ವಿಜ್ಞಾನದ ಶಿಕ್ಷಕಿಯಾಗಿದ್ದ ಸಾರಾ ಎಂಬುವವರು 'ಶಿಕ್ಷಾ'ದಷ್ಟೇ 'ಶಿಕ್ಷೆ'ಗೂ ಪ್ರಾಮುಖ್ಯತೆ ನೀಡುತ್ತಿದ್ದ ಘಾಟಿ ವ್ಯಕ್ತಿ. ಉನ್ನತ ಮಟ್ಟದ ಬೋಧನಾ ಸಾಮಥ್ರ್ಯದ ಜೊತೆಗೆ ಸಿಟ್ಟಿನ ಪ್ರತಿರೂಪದಂತಿದ್ದ ಅವರ ಕಲಿಸುವಿಕೆ, 'ಕೋಲಿಸು'ವಿಕೆ ಕೈಕೈ ಹಿಡಿದು ಸಾಗುತ್ತಿದ್ದವು. ಒಮ್ಮೆ ಏಳು ತಿಂಗಳ ಗರ್ಭಿಣಿಯಾಗಿದ್ದ ಅವರು ಇನ್ನೇನು ನಮ್ಮ ತರಗತಿಯನ್ನು ಪ್ರವೇಶಿಸಬೇಕು ಅನ್ನುವಷ್ಟರಲ್ಲಿ 'ಸಾರೇ ಜಹಾಂ ಸೇ ಅಚ್ಛಾ'ದ ಪರ್ಯಾಯ ಪದ್ಯ ಅವರ ಕಿವಿಗೆ ಬಿತ್ತು. ಧುಮುಧುಮಿಸುತ್ತಲೇ ಒಳ ಬಂದ ಸಾರಾ ಮೇಡಂ 'ಗುಡ್ ಮಾರ್ನಿಂಗ್' ಗಿಳಿಪಾಠ ಒಪ್ಪಿಸಿದ ನಮ್ಮತ್ತ ಚೂಪನೆಯ ದೃಷ್ಟಿ ಬೀರಿ 'ಗರ್ಲ್ಸ್ ಸಿಡೌನ್' ಎಂದರು. ಪ್ರಶ್ನಾರ್ಥಕ ನೋಟ ಹೊತ್ತ ಹುಡುಗರತ್ತ ಕೆಂಗಣ್ಣು ಬೀರಿದವರೇ 'ಯಾರು ಅದನ್ನು ಹಾಡಿದವರು' ಎಂದರು. ಹುಡುಗರ ಅಯೋಮಯ ದೃಷ್ಟಿ ಒಬ್ಬರಿಂದೊಬ್ಬರಿಗೆ ಹರಿದು ಕಗ್ಗಂಟಾಯಿತೇ ಹೊರತು 'ಇವರೇನು ಕೇಳುತ್ತಿದ್ದಾರೆ, ಆ 'ಅದು' ಏನು' ಎಂಬುದು ತಲೆಬುಡ ತಿಳಿಯಲಿಲ್ಲ. ತಮ್ಮ ಕೋಪದ ಬೆಂಕಿಯಲ್ಲಿ ಸುಡಲೊಂದು ಸೂಕ್ತ ಕಟ್ಟಿಗೆ ಸಿಗದೇ ಸಿಡಿಮಿಡಿಗೊಂಡ ಅವರು ತರಗತಿಯ ಎಲ್ಲಾ ಹುಡುಗರನ್ನೂ ಒಂದಿಡೀ ತಾಸು ಹೊರಗೆ ನಿಲ್ಲಿಸಿದರು.
ಆಮೇಲೆ ತಿಳಿಯಿತು: ಮೇಡಂ ತರಗತಿಯನ್ನು ಪ್ರವೇಶಿಸಬೇಕೆನ್ನುವಷ್ಟರಲ್ಲಿ ಪಕ್ಕದಲ್ಲೇ ಇದ್ದ ಡಾರ್ಮಿಟರಿಯ ಹುಡುಗರು 'ಸಾರೇ ಜಹಾಂ ಸೇ ಅಚ್ಛಾ, ಸಾರಾ ಕೆ ಪೇಟ್ ಮೇ ಬಚ್ಚಾ' ಎಂದು (ಕೊಂಚ ಕೀಳು ಮಟ್ಟದಲ್ಲಿಯೇ) ಹಾಡಿದ್ದರು. ಎದುರಿಗೇ ಕುಳಿತಿದ್ದ ನಮ್ಮ ತರಗತಿಯ ಹುಡುಗರೇ ಅದನ್ನು ಹಾಡಿರಬೇಕು ಎಂದುಕೊಂಡ ಅವರು ಒಳಗೆ ಬಂದವರೇ ಶಿಕ್ಷಿಸಲು ಮುಂದಾದರು. ಮೊಸರು ತಿಂದಿದ್ದು ಮಂಗ; ಮುಸುಡಿ ಮೇಲೆ ಬರೆ ಬಿದ್ದಿದ್ದು ಮೇಕೆಗೆ.
ಕನ್ನಡ ಶಾಲೆಯಲ್ಲಿ ಓದುವಾಗ 'ವಂದೇ ಮಾತರಂ' ಬಲ್ಲದ ಮಕ್ಕಳಿಗೂ 'ವಂದೇ ಮಾಸ್ತರಂ' ಮುದ್ದಾಂ ಬರುತ್ತಿತ್ತು. ಮಾಸ್ತರರ ಬೆನ್ನ ಹಿಂದೆ 'ವ(ಒ)ಂದೇ ಮಾಸ್ತರಂ, ಹೊಡಿತಂ, ಬಡಿತಂ, ಕಿವಿ ಚಟ್ಟೆ ಹಿಂಡುತಂ' ಎಂದು ಹಾಡಿಕೊಂಡರೆ ತಿಂದ ಹೊಡೆತಕ್ಕಿಷ್ಟು ನ್ಯಾಯ ಸಲ್ಲಿಸಿದಂತೆ ಭಾಸ.
ಹೆಚ್ಚಿನ ಹಾಡುಗಳು ತಿಳಿ ಹಾಸ್ಯದಲ್ಲಿ ಮಿಂದೆದ್ದು ಬಂದು ಆಹ್ಲಾದಮಯ ನಗೆಗಂಧವನ್ನು ಹರಡುವಂತಿದ್ದರೆ ಒಮ್ಮೊಮ್ಮೆ ಕೆಲವು ಪೋಲಿತನದ ಕೊಚ್ಚೆಯಲ್ಲಿ ಉರುಳಾಡಿ ಉಸಿರುಕಟ್ಟಿಸುವಂತಿದ್ದುದು ಖರೆ. 'ಬಣ್ಣಾ ನನ್ನ ಒಲವಿನ ಬಣ್ಣಾ', 'ಶಿಲೆಗಳು ಸಂಗೀತವ ಹಾಡಿವೆ', 'ಧರಣಿ ಮಂಡಲ ಮಧ್ಯದೊಳಗೆ', 'ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ'ದಂಥ ಮಧುರ ಹಾಡುಗಳು ವಿರೂಪಗೊಂಡು ಮುಜುಗರ ಮೂಡಿಸುವ ರೂಪ ಪಡೆದದ್ದುಂಟು. (ಆ (ವಿ)ರೂಪ ಪ್ರಸ್ತುತಪಡಿಸಲಾರೆ, ಕ್ಷಮಿಸಿ). ಸಂಸ್ಕೃತದ ಕೆಲವು ಶ್ಲೋಕಗಳಿಗೂ ಇದೇ ಗತಿ.
ಸಾಮಾನ್ಯವಾಗಿ ಈ ಹಾಸ್ಯಮಯ ಪರ್ಯಾಯ ಪದ್ಯಗಳೆಲ್ಲ ಪಲ್ಲವಿಗಷ್ಟೇ ಸೀಮಿತವಾಗಿರುತ್ತಿದ್ದವು, ಚರಣಗಳ ತುದಿವರೆಗೆ ಯಾವ ಕವಿ(ಪಿ)ಯೂ ಚರಣ ಬೆಳೆಸುತ್ತಿದ್ದುದಿಲ್ಲ. ಆದರೂ ಅಪರೂಪಕ್ಕೆ ಕೆಲವು ಅಜ್ಞಾತ ಕವಿಗಳು ಚಿತ್ರಗೀತೆಗಳ ಧಾಟಿಯಲ್ಲಿ ಅರ್ಥವತ್ತಾದ ಭಕ್ತಿಗೀತೆಗಳನ್ನು ರಚಿಸಿದ್ದುಂಟು. ಮಜವೆಂದರೆ (ಸ)ರಸವತ್ತಾದ ಚರಣಗಳನ್ನು ಮೂಸಿಯೂ ನೋಡದೇ ಮುಖ ಸಿಂಡರಿಸುತ್ತಿದ್ದ ಹಿರಿಯರೆಲ್ಲ ಥಳಥಳಿಸುವ 'ಬೆಳ್ಳಿ' ಬಾಟಲಿಯಲ್ಲಿ ಬಂದ ಭಕ್ತಿ ಸುಧೆಯನ್ನು ಚಪ್ಪರಿಸಿ ಸವಿಯುತ್ತಿದ್ದರು. 'ದೋ ಆಂಖೆ ಬಾರಾ ಹಾಥ್'ನ 'ಏ ಮಾಲಿಕ್ ತೇರೆ ಬಂದೆ ಹಮ್' ಧಾಟಿಯ 'ಮಂಗಳೇಶ ಮಹೇಶ ನಮೋ', 'ಬೀಸ್ ಸಾಲ್ ಬಾದ್'ನ 'ಕಹೀಂ ದೀಪ್ ಜಲೆ ಕಹೀಂ ದಿಲ್' ಧಾಟಿಯ 'ಗುರುದೇವ ಪರಿಪೂರ್ಣ', 'ಕವಿರತ್ನ ಕಾಳಿದಾಸ'ದ 'ಸದಾ ಕಣ್ಣಲಿ' ಹಿಂಬಾಲಿಸಿ ಬಂದ 'ಗುರುವೆ ನಿನ್ನೆಯ ನಾಮವ', 'ಕಸ್ತೂರಿ ನಿವಾಸ'ದ 'ಎಲ್ಲೇ ಇರು' ಅಂಗಿ ತೊಟ್ಟ 'ಗೌರಿ ಪ್ರಿಯ, ತೋರೋ ದಯ'ಗಳೆಲ್ಲ ಹೀಗೆ ಡಿಸೈನರ್ ಅಚ್ಚಿನಲ್ಲಿ ಅದ್ದಿ ತೆಗೆದ ಲೋಕಲ್ ಭಜನೆಗಳು. ಸಾಂಪ್ರದಾಯಿಕ ಭಜನೆ ಕಾರ್ಯಕ್ರಮವೊಂದರಲ್ಲಿ ಇಂಥ ಹಾಡೊಂದನ್ನು ಹಾಡಿದರೆ ನ್ಯೂಯಾರ್ಕ್ ಬೀದಿಯಲ್ಲಿ ಸೀರೆಯುಟ್ಟು ನಡೆಯುವ ಯುವತಿಯ ರೀತಿಯಲ್ಲಿ ಗಮನ ಸೆಳೆಯುತ್ತಿದ್ದವು (ಬೆಂಗಳೂರಿನ ಬ್ರಿಗೇಡ್ ರಸ್ತೆ ಎನ್ನಲಾರೆ, ಅಲ್ಲಿ ಸೀರೆ ಅಪರೂಪವಾದರೂ ಅದನ್ನುಟ್ಟರೆ ಯಾರೂ ಕಣ್ಣೆತ್ತಿ ನೋಡಲಾರರು).
ಸೀಮಿತ ಅವಕಾಶದಲ್ಲಿ ಪ್ರತಿಭೆಯ ಪ್ರಭೆಯನ್ನು ಹೊರಸೂಸಲು ಅವಕಾಶ ಮಾಡಿಕೊಡುವ ಈ ಪರ್ಯಾಯ ಪದ್ಯಗಳಿಗೆ ಒರಿಜಿನಲ್ ಚಿತ್ರಗೀತೆಗಳಿಗಿರುವ ಸಾರ್ವಕಾಲಿಕ ಜನಪ್ರಿಯತೆಯ, ರಾಷ್ಟ್ರೀಯ ಗೀತೆಗಳು ಹೊದ್ದ ಇನ್ಶೂರ್ಡ್ ಗೌರವದ, ಶ್ಲೋಕಗಳ ಪಾವಿತ್ರ್ಯ, ಪರಂಪರೆಯ ಅಗ್ಗಳಿಕೆಯ ಅಥವಾ ಭಾವಗೀತೆಗಳ ಸಾಹಿತ್ಯಿಕ ಘನತೆಯ, ಘಮಲಿನ ವಿಶೇಷ ಸವಲತ್ತುಗಳೊಂದೂ ಇಲ್ಲ. ಆದರೂ ತುಂಟ ಎಸ್ಸೆಮ್ಮೆಸ್ಗಳಂತೆ ತುಟಿಯ ಮೇಲೊಂದು ತುಂತುರು ನಗೆ ಅರಳಿಸಿ, ತಲೆ ಹತ್ತಿ ಕುಳಿತ ಚಿಂತೆಯ ತೊಲೆಯನ್ನು ಇಳಿಸಿ ಹಗುರ ಮಾಡಿ, ಪುಟ್ಟ ಪುಟ್ಟ ರಸಗಳಿಗೆಗಳನ್ನು ಸೃಷ್ಟಿಸುವ ಸೊಗಸು ಇದೆ.
ಕೊನೆಗೊಂದು ಕೊಸರು: ಹಲವು ಸಲ 'ಚಲ್ತೇ ಚಲ್ತೇ' ಚಿತ್ರದ ಶೀರ್ಷಿಕೆ ಗೀತೆ- 'ಚಲ್ತೇ ಚಲ್ತೇ ಮೇರೆ ಯೇ ಗೀತ್ ಯಾದ್ ರಖನಾ'ದೊಂದಿಗೆ ಸ್ನೇಹ ಸಮಾರಂಭಗಳಿಗೆ ಮುಕ್ತಾಯ ಹಾಡುವುದುಂಟು. ಈ ಗೀತೆಗೊಬ್ಬ ಮಲಸೋದರಿ. ಆಕೆಯೂ ಸಮಾರೋಪ ಸಂಗೀತದಲ್ಲಿ ಸಮರ್ಥಳು. ಆಕೆಯನ್ನು ಮುಂದಿಟ್ಟುಕೊಂಡು ಇತ್ತಲಿಂದ ಬೈ ಬೈ, ಸಲಾಂ- 'ಇರಲಿ, ನೆನಪಿರಲಿ, ನಮ್ಮ ಗೆಳೆತನದ ಸವಿ ನೆನಪಿರಲಿ, ಆ ನೆನಪೇ ಶಾಶ್ವತವು, ಅದುವೆ ಚಿರ ನೂತನವು'.

('ದ್ಯಾಟ್ಸ್ ಕನ್ನಡ'ಕ್ಕೆ ಧನ್ಯವಾದ ಹೇಳುತ್ತ..)

ಸೋಮವಾರ, ಡಿಸೆಂಬರ್ 8, 2008

ಅದೋ ಅಲ್ಲಿ, ಅಲ್ಲಿಗೇಟರ್!!

ಆರು ತಿಂಗಳ ಹಿಂದೆ 'ಫ್ಲೋರಿಡಾಕ್ಕೆ ಹೊರಡುತ್ತಿದ್ದೇವೆ' ಎಂದು ಗೊತ್ತಾಗುತ್ತಿದ್ದಂತೆಯೇ ಸಹಜವಾಗಿ ಜಯರಾಮ ಗೆ ಕೇಳಿದೆ: 'ಹೇಗಿದೆಯಂತೆ ಅದು?' ಮೂರು ಶಬ್ದಗಳಲ್ಲಿ ಉತ್ತರ ಬಂತು- 'ಸೆಖೆ, ಬೀಚು, ಅಲ್ಲಿಗೇಟರ್ಸ್'. 'ಮೊಸಳೆ- ಅಷ್ಟೊಂದಿದೆಯೆ' ತತ್ಕ್ಷಣಕ್ಕೆ ಕುತೂಹಲ ಮೂಡಿತ್ತು ನನಗೆ.
ಟಾಂಪಾ ವಿಮಾನ ನಿಲ್ದಾಣದಿಂದ ಹೊರಬೀಳುತ್ತಿದ್ದಂತೆಯೇ ಸೆಖೆಯ ಅಂದಾಜು ಹತ್ತಿತು ನನಗೆ. ಬಂದ ಒಂದೆರಡು ದಿನದಲ್ಲೇ ಬೀಚ್ ಕೂಡ ಸುತ್ತಾಡಿ ಬಂದೆವು. ನಾನು ಈವರೆಗೆ ನೋಡಿದ್ದಕ್ಕಿಂತ ಅತ್ಯಂತ ಸ್ವಚ್ಛ ನೀರು, ಸುಂದರ-ನಯವಾದ ಮರಳು ಅಲ್ಲಿತ್ತು. ಹೇಳಿ ಕೇಳಿ 'ಕ್ಲೀಯರ್ ವಾಟರ್' ಎಂದು ಹೆಸರು ಆ ಸಾಗರದಂಚಿಗೆ. ಮಕರ ದರ್ಶನ ಮಾತ್ರ ಬಾಕಿ ಉಳಿದಿತ್ತು.
ಒಂದಿನ ನಾವು ಮತ್ತು ಜಯರಾಮ್ ಸಹೋದ್ಯೋಗಿ ದಂಪತಿ ಕಾರ್ ಖರೀದಿಗೆಂದು ಒಂದೆಡೆ ಹೋದೆವು. ಮಾರುತ್ತಿದ್ದ ವ್ಯಕ್ತಿ ಕೆರೆಯಂಚಿನ ಗೃಹ ಸಮುಚ್ಚಯವೊಂದರಲ್ಲಿ ವಾಸವಿದ್ದ. ಕಾರ್ ನೋಡಿ ಜಯರಾಮ್ ಮತ್ತು ಸಹೋದ್ಯೋಗಿ ಪರೀಕ್ಷಾರ್ಥ ಚಾಲನೆಗೆ ತೆರಳಿದರು. ಅವರ ಪತ್ನಿ ಮತ್ತು ನಾನು ಕಾರ್ ಮಾಲೀಕನೊಂದಿಗೆ ಮಾತಿಗಿಳಿದೆವು. ಮಾಮೂಲಿನಂತೆ ಹವಾಮಾನ, ಬೀಚ್ ಅದು ಇದು ಮಾತು ಮುಗಿಸಿ, 'ಇಲ್ಲಿ ಸಿಕ್ಕಾಪಟ್ಟೆ ಅಲ್ಲಿಗೇಟರ್ಸ್ ಇವೆಯಂತೆ ಹೌದಾ' ಎಂದೆವು. 'ಹಾಂ, ನಿನ್ನೆ ಬೆಳಿಗ್ಗೆ ಇಲ್ಲೇ ಒಂದು ಬಂದಿತ್ತು' ಎಂದು ಅಂವ ನಮ್ಮಿಬ್ಬರ ಕಾಲಡಿಗೆ ಇದ್ದ ಮಳೆ ನೀರಿನ ಕಾಲುವೆಯತ್ತ ಕೈ ತೋರಿಸಿದ. ಕಾಲುವೆಗೆ ಮುಚ್ಚಿದ್ದ ತೂತು ತೂತಿನ ಮುಚ್ಚಳದಿಂದ ಗರಗಸದ ದಂತಪಂಕ್ತಿ ತೂರಿದಂತಾಗಿ ಬೆಚ್ಚಿ ನಾವಿಬ್ಬರು ನಾಲ್ಕಡಿ ದೂರ ಜಿಗಿದೆವು.
ಅದೇ ವೇಳೆ ಬಾಡಿಗೆ ಮನೆಯನ್ನೂ ಹುಡುಕುತ್ತಿದ್ದೆವು. ಸರಿ, ಅಪಾರ್ಟಮೆಂಟ್ ಒಂದನ್ನು ನೋಡಿ, ಬಾಡಿಗೆ ಒಪ್ಪಂದ ಮಾಡಿಕೊಳ್ಳಲೆಂದು ಅದೇ ದಂಪತಿ ಜೊತೆ ಆ ಗೃಹ ಸಮುಚ್ಚಯದ ಕಚೇರಿಗೆ ಬಂದೆವು. ಕಣ್ಣಳತೆಯಲ್ಲೇ ಮೂರ್ನಾಲ್ಕು ಕೆರೆಗಳು, ಅಡ್ಡಾದಿಡ್ಡಿ ಹುಲ್ಲು ತುಂಬಿದ ನೆಲ, ಮೈತುಂಬ ಶಿಲಾವಲ್ಕದ ಮಾಲೆ ಜೋತಾಡಿಸಿಕೊಂಡ ಮರಗಳು... ವಾತಾವರಣ ವಿಚಿತ್ರವೆನಿಸಿತು ನಮಗೆ. 'ಇಲ್ಲಿ ಸಿಕ್ಕಾಪಟ್ಟೆ ಓತಿಕ್ಯಾತ ಇದ್ದಂಗಿದೆ' ಎಂದೆವು ಅಪಾರ್ಟಮೆಂಟ್ ಆಡಳಿತಾಧಿಕಾರಿಗೆ. 'ಹಾಂ, ಓತಿಕ್ಯಾತ, ಅಳಿಲು, ಅಲ್ಲಿಗೇಟರ್ಸ್ ಎಲ್ಲಾ ಇಲ್ಲಿ ಬೇಕಾದಷ್ಟಿವೆ' ಆರಾಮವಾಗಿ ಹೇಳಿದರಾಕೆ. ಓತಿಯನ್ನು ನೋಡೇ ಹೆದರಿಕೊಂಡಿದ್ದ ಜಯರಾಮ್ ಸಹೋದ್ಯೋಗಿಯ ಪತ್ನಿ ಕಂಗಾಲು.
ಹೊಸ ಮನೆಗೆ ಬಂದುಳಿದ ಮಾರನೇ ದಿನವೇ ಮೊಸಳೆ ವೀಕ್ಷಣೆಗೆ ಹೊರಟೆ ಮಗನೊಂದಿಗೆ. ಕೆರೆಯ ಸಮೀಪ ಹೋಗಿ ನಿಂತುಕೊಂಡು ಉದ್ದಕ್ಕೂ ಕಣ್ಣು ಹಾಯಿಸುತ್ತದ್ದಂತೆಯೇ ಕಾಲ ಬುಡದಲ್ಲೇ ಏನೋ ಪುಳಕ್ಕೆಂದು ನೀರೊಳಕ್ಕೆ ನುಗ್ಗಿದಂತಾಯಿತು. ಬೆದರಿ ಹಿಂದೆ ಸರಿದು ನೋಡಿದರೆ... ಅಯ್ಯೋ, ದಂಡೆಯಲ್ಲಿ ಮೈಚಾಚಿದ್ದ ಆಮೆಯೊಂದು ಉಲ್ಟಾ ನನ್ನನ್ನು ಕಂಡು ಹೆದರಿ ನೀರಿಗೆ ಜಿಗಿದಿತ್ತಷ್ಟೇ. 'ಸಧ್ಯ' ಎಂದು ಉಸಿರು ಎಳೆದುಕೊಳ್ಳುತ್ತ ದೃಷ್ಟಿ ಚಾಚುತ್ತಿದ್ದಂತೆಯೇ, 'ಅರೇ'- ಈ ಬಾರಿ ನಿಜಕ್ಕೂ 'ಅಲ್ಲಿಗೇಟರ್!' ಹತ್ತು ಮೀಟರ್ ದೂರದಲ್ಲಿ ಆರಾಮವಾಗಿ ನೀರೊಳಗೆ ಮೈ ಹರವಿಕೊಂಡು, ಮೂತಿಯನ್ನಷ್ಟೇ ತೇಲಿ ಬಿಟ್ಟು ನಿಶ್ಚಲವಾಗಿತ್ತು ಮೊಸಳೆ. ಅತ್ಯುತ್ಸಾಹದಿಂದ 'ಅದೇ, ಅಲ್ನೋಡು ಅಲ್ಲಿಗೇಟರ್' ಎಂದು ಮಗನಿಗೆ ತೋರಿಸಿದೆ. ಮರದ ತೊಗಟೆಯ ತುಂಡಿನಂತೆ ಕಾಣುತ್ತಿದ್ದ ಅದನ್ನು ಮೊಸಳೆ ಎಂದು ಗುರುತಿಸಲು ಮಗನಿಗೆ ಸ್ವಲ್ಪ ಕಷ್ಟವಾಯ್ತೇನೋ. 'ಅದು ಅಲ್ಲಿಗೇಟರ್ರಾ'- ಎಂದ ಅಪನಂಬಿಕೆಯಿಂದ. ಅಷ್ಟೊತ್ತಿಗೆ ನಮ್ಮ ಮಾತಿನಿಂದ ಮೊಸಳೆ ಅಪಾಯವನ್ನು ಗ್ರಹಿಸಿತೇನೋ. ಅದೂ ಪುಳಕ್ಕನೇ ಮರೆಯಾಯಿತು. ಎಲ್ಲಿ ಹೋಯಿತು ಎಂದು ಆಚೀಚೆ ನೋಡುವಷ್ಟರಲ್ಲಿ, ಒಂದು ಸೆಕೆಂಡ್ ಅಂತರದಲ್ಲಿ ಹದಿನೈದು ಮೀಟರ್ ಆಚೆ ಮತ್ತೆ ಪ್ರತ್ಯಕ್ಷವಾಯಿತು.
ಮೊಲ, ನರಿ, ಜಿಂಕೆ, ಹಂದಿ, ಹೆಬ್ಬಾವು ಇಂಥ ಅನೇಕ ಪ್ರಾಣಿಗಳನ್ನು ಭಾರತದಲ್ಲಿ ನಾನು ಹುಟ್ಟಿ ಬೆಳೆದ ಪರಿಸರದಲ್ಲಿ, ಮನೆಯ ಆಸುಪಾಸಿನಲ್ಲೇ ಸಾಕಷ್ಟು ಕಂಡಿದ್ದೆನಾದರೂ ಮೊಸಳೆಯನ್ನು ಎಂದೂ ಕಂಡಿರಲಿಲ್ಲ. ಹಾಗಾಗಿ ಆ ದಿನ ನನಗಾದ ನನಗಾದ ಪುಳಕ ಅಷ್ಟಿಷ್ಟಲ್ಲ. ಆಮೇಲಾಮೇಲೆ ಗೃಹ ಸಮುಚ್ಚಯ ಆವರಣದ ಯಾವುದೇ ಕೆರೆಯ ಬಳಿ ಹೋದರೂ ಆಗೀಗ ಮೊಸಳೆ ಕಾಣಿಸಲಾರಂಭಿಸಿದ ಮೇಲೆ ನನ್ನ ಉತ್ಸಾಹ ಒಂದು ಹದಕ್ಕೆ ಬಂತು. ಶಬರಿಮಲೆಯಲ್ಲಿ ಮಧ್ಯರಾತ್ರಿಯ ಕಾವಳದಲ್ಲಿ ಕಾದು ಜನ 'ಮಕರ ಜ್ಯೋತಿ'ಯ ದರ್ಶನ ಮಾಡುತ್ತಾರಂತೆ. ಇಲ್ಲಿ ಹಾಡು ಹಗಲೇ ಸೂರ್ಯನ ಜ್ಯೋತಿಯಲ್ಲಿ 'ಮಕರ ದರ್ಶನ' ಲಭ್ಯ.
ಈ ಕಡೆ ರಸ್ತೆಯಂಚಿನಲ್ಲಿ, ಕಾಡಿನಂಚಿನಲ್ಲಿ ಇರುವ ಪುಟ್ಟ ಪುಟ್ಟ ಕೆರೆಗಳಲ್ಲೂ ಮೊಸಳೆಗಳು ಇರುತ್ತವಂತೆ. ಇತ್ತೀಚೆಗೆ ಕೇಪ್ ಕೆನಾವರಲ್ಗೆ ಹೋದಾಗ ನಾಸಾ ಪ್ರವಾಸಿ ಕೇಂದ್ರವನ್ನು ತಲುಪುವ ದಾರಿಯ ಇಕ್ಕೆಲಗಳಲ್ಲಿ ಇದ್ದ ನಾಲೆಗಳಲ್ಲಿ ಹೆಚ್ಚೆಂದರೆ ಒಂದು ವಾರದ ಹಿಂದೆ ಹುಟ್ಟಿರಬಹುದಾದಷ್ಟು ಎಳೆಯ, ಅರ್ಧ ಅಡಿ ಉದ್ದದ ಮೊಸಳೆಯಿಂದ ಹಿಡಿದು ಐದು-ಐದೂವರೆ ಅಡಿ ಉದ್ದದ ಪ್ರೌಢ ಮೊಸಳೆಗಳವರೆಗೆ ಎಲ್ಲಾ ಸೈಜಿನ ಮಕರ ದರ್ಶನವಾಗಿತ್ತು. ಇಲ್ಲಿನ ಕೆರೆ, ಕಾಲುವೆಗಳ ಅಂಚಿನಲ್ಲಿ 'ಮೊಸಳೆಗಳನ್ನು ಹಿಂಸಿಸಬೇಡಿ, ಆಹಾರ ಹಾಕಬೇಡಿ' (ಆಹಾರವಾಗಲೂಬೇಡಿ) ಎಂಬ ಎಚ್ಚರಿಕೆ ಸಾಮಾನ್ಯ.
ಇಲ್ಲಿನ ಮೊಸಳೆಗಳು (ಅಲ್ಲಿಗೇಟರ್ ಮಿಸ್ಸಿಸ್ಸಿಪ್ಪಿನ್ಸಿಸ್) ಭಾರತದಲ್ಲಿ ಸಾಮಾನ್ಯವಾಗಿ ಕಂಡು ಬರುವ 'ಮಗರ್' (ಕ್ರೊಕೊಡೈಲಸ್ ಪ್ಯಾಲಸ್ಟ್ರೈಸ್) ಜಾತಿಯ ಮೊಸಳೆಗಳಿಗಿಂತ ವಿಭಿನ್ನ. ಇವಕ್ಕೆ ಆಂಗ್ಲ ಭಾಷೆಯ 'ಯು' ಆಕಾರದ ಅಗಲ ಮೂತಿಯಿದ್ದರೆ ಅವರದ್ದು 'ವಿ' ಆಕಾರದ ಮೂತಿ. ಇವುಗಳ ಕೆಳದವಡೆಯ ಹಲ್ಲು ಮೇಲ್ದವಡೆಯಲ್ಲಿ ಮುಚ್ಚಿಕೊಂಡಿದ್ದರೆ, ಮಗರ್ ಗಳ ಕೆಳದವಡೆಯ ನಾಲ್ಕನೇ ಹಲ್ಲು ಹೊರಗೆ, ಮೇಲ್ಚಾಚಿಕೊಂಡಿರುತ್ತದೆ. ಸಿಹಿ ನೀರಿನಲ್ಲಷ್ಟೇ ವಾಸಿಸುವ ಇವು 'ಅಲ್ಲಿಗೇಟರ್'ಗಳು, ಸಿಹಿ ನೀರಿನ ಜೊತೆ ಉಪ್ಪು-ಸಿಹಿ ಮಿಶ್ರಿತ ನೀರಿನಲ್ಲೂ ವಾಸಿಸುವ ಅವು 'ಕ್ರೊಕೊಡೈಲ್'ಗಳು. ಭಾರತದ ಗಂಗಾ ನದಿ, ಮಹಾನದಿ-ಚಂಬಲ್ ನದಿ ಕಣಿವೆ ಪ್ರದೇಶದಲ್ಲಿ 'ಘರಿಯಲ್' (ಗವಿಯಾಲಿಸ್ ಗ್ಯಾಂಜೆಟಿಕಸ್) ಎಂಬ ಸಪೂರ, ಚಾಚು ಮೂತಿಯ ಮತ್ತೊಂದು ಜಾತಿಯ ಮೊಸಳೆಗಳೂ ಇವೆ. ಅವುಗಳ ಮೂತಿಯ ಆಕಾರದಿಂದಾಗಿ ಅವು ಮೀನುಗಳನ್ನಷ್ಟೇ ಹಿಡಿದು ತಿನ್ನಬಹುದಲ್ಲದೇ ದೊಡ್ಡ ಪ್ರಾಣಿಗಳನ್ನು ತಿನ್ನಲು ಸಾಧ್ಯವಿಲ್ಲ. ಅಂಡಮಾನ್ ದ್ವೀಪ ಸಮೂಹದಲ್ಲಿ, ಸುಂದರ ಬನದಂತಹ ಕೆಲವು ನದಿ ಮುಖಜಭೂಮಿಯಲ್ಲಿ ಉಪ್ಪುನೀರಿನಲ್ಲಿ ವಾಸಿಸುವ ಮೊಸಳೆಗಳೂ (ಕ್ರೊಕೊಡೈಲಸ್ ಪೊರೊಸಸ್) ಇವೆ.
ಬಾಳೇಸರದ ನಮ್ಮ ಮನೆಯ ಬಳಿ ಅಘನಾಶಿನಿ ನದಿಯಲ್ಲಿ 'ಮಕರ ಕಟ್ಟು' ಎಂಬ ಜಾಗವೊಂದಿದೆ. ಹಿಂದೆ ಅಲ್ಲಿ ಹರಿವ ಹೊಳೆನೀರಿಗೆ ಕಟ್ಟ ಕಟ್ಟುವಷ್ಟು ಸಂಖ್ಯೆಯಲ್ಲಿ ಮೊಸಳೆಗಳಿದ್ದವಂತೆ. ನಾನು ಬಾಲ್ಯ ಕಳೆದ ಹನುಮಾಪುರದ ಬಳಿ ಹೆಸರೇ ಇಲ್ಲದ ಹಳ್ಳವೊಂದಿದೆ. ಮಳೆಗಾಲದಲ್ಲಿ ಮಾತ್ರ ನೀರು ತುಂಬಿ ಹರಿಯುವ, ಬೇಸಿಗೆಯಲ್ಲಿ ಬತ್ತಿ ಹೋಗುವ ಆ ಹಳ್ಳದಲ್ಲಿ ವರ್ಷಪೂರ್ತಿ ನೀರಿರುವ ಏಕೈಕ ಜಾಗವೆಂದರೆ 'ಮೊಸಳೆ ಗುಂಡಿ'. ವಿಷಾದವೆಂದರೆ ಆ ಎರಡೂ ತಾಣಗಳಲ್ಲಿ ಹೆಸರಿಗೆ ಮರ್ಯಾದೆ ಕೊಡಲಾದರೂ ಒಂದು ಮೊಸಳೆ ಉಳಿದಿಲ್ಲ. 'ಛೇ, ನೈಸರ್ಗಿಕ ತಾಣದಲ್ಲಿ ಮೊಸಳೆಯನ್ನು ನೋಡೋ ಅವಕಾಶವೇ ಇಲ್ಲವಲ್ಲ ನನಗೆ' ಎಂದು ಹಲವು ಬಾರಿ ಹಳಹಳಿಸಿದ್ದೆ. ಫ್ಲೋರಿಡಾ ವಾಸ ಆ ಹಳಹಳಿಕೆಯನ್ನು ಅಳಿಸಿಬಿಟ್ಟಿತು.
Free Web Counter

Free Counter

ಭಾನುವಾರ, ಡಿಸೆಂಬರ್ 7, 2008

ಅಸ್ತ-ಉದಯ

ಆತ ಓಡುತ್ತಲೇ ಇದ್ದ
ನಾ ಹಿಂಬಾಲಿಸಿ ಬಸವಳಿದೆ
ಆತ ಮುನ್ನುಗ್ಗಿ ಮರೆಯಾದ
ನಾ ಮುಸುಕೆಳೆದು ಮಲಗಿದೆ

ಕಣ್ಣೊಡೆದರೆ, ಅರೆ!
ಆತ ಆಗಲೇ ಎದುರಿದ್ದಾನೆ
ನಾ ಮುಖ ತೊಳೆದು ಮಡಿಯಾದೆ
ಮತ್ತೆ ಓಟ ಶುರುವಾಗಿದೆ...

ಶುಕ್ರವಾರ, ಡಿಸೆಂಬರ್ 5, 2008

ಹೆತ್ತೊಡಲ ಹಕ್ಕು

ಹಕ್ಕಿದೆ ನನಗೆ ಮಗುವಿನ ಮೇಲೆ
ಲಾಲಿಸಲು, ಮುದ್ದಿಸಲು, ರಮಿಸಲು
ಹೆಸರಿಟ್ಟು ಕೂಗಿ ಕರೆಯಲು
ಶಿಕ್ಷಿಸಲು, ತಿದ್ದಿ ನಡೆಸಲು
ಅದ ಕಿತ್ತುಕೊಳ್ಳದಿರಿ ನೀವು

ಹೊತ್ತಿದ್ದೆ ಅವನನ್ನು
ಸುತ್ತಲ ಜಗದ ಬೇಗೆ ತಾಕದಂತೆ
ಮುಚ್ಚಟೆಯಿಂದ ಬಸಿರಲ್ಲಿ
ಹಿರಿದು, ಹಿಸಿದು ಕೆಳ ಜಗ್ಗುತಿಹ
ಭಾರವನ್ನು ಸಹಿಸಿ ಪೊರೆದಿದ್ದೆ ಒಡಲಲ್ಲಿ

ಹಿಡಿಹಿಡಿಯಾಗಿ ಹಿಂಡಿದ
ಹನ್ನೆರಡು ತಾಸಿನ ಹೆರಿಗೆಗೆ ಹೆದರಿ
ಕುಂತು, ನಿಂತು
ಸೋತು
ಹೊರಳಾಡಿ, ಅರಚಾಡಿ ಅಂತೂ
ಪಡೆದಿದ್ದೆ ಮಡಿಲಲ್ಲಿ

ನಿದ್ರಾವಶನಾದ ಕಂದ
ಕಾಲ ಮರೆತು ಬಿದ್ದು ಮಲಗುತಿರೆ
ಬಸಿಯುತಿಹ ಎದೆಹಾಲ ಕಂಡು
'ಛೇ, ಸೋರಿಹೋಗುತ್ತಿದೆಯಲ್ಲ ಜೀವಾಮೃತ'
ಎಂದು ಮರುಗಿ ಪರಿತಪಿಸಿದ್ದೆ

ಒಪ್ಪುತ್ತೇನೆ, ಕೊಟ್ಟಿದ್ದೀರಿ ನೀವು
ದುಡ್ಡು, ಅಂತಸ್ತು, ಐಷಾರಾಮಗಳನ್ನು
ಅದ ನಾ ಕೊಡಲೂಬಲ್ಲೆ
ಅದಕ್ಕೆ ಮುಂಚೆ
ಹಡೆದು ತೋರಿಸಿ ಒಮ್ಮೆ.

ಬುಧವಾರ, ಡಿಸೆಂಬರ್ 3, 2008

ಓಂ ನಾಮ

ಅನುದಿನವೂ ಬರೆಯುವನು ಬ್ಲಾಗಿಗೊಳಗುತ್ತಮನು
ಆಗಾಗ್ಗೆ ಬರೆಯುವನು ಮಧ್ಯಮನು
ಅಧಮತಾ ಆರಂಭಶೂರನು ಅಲ್ಪಜ್ಞ-


ಮನದೊಳಗಿನ ಮಾತುಗಳಿಗೆ ಮೈಕ್ ಹಿಡಿಯುತ್ತಿದ್ದೇನೆ. ಒಳಗೆಲ್ಲೋ ಅಡಗಿ ಸಣ್ಣಗೆ ಗುನುಗುಡುತ್ತಿದ್ದ ದನಿಗೆ ಈ ದಿನ ಇದ್ದಕ್ಕಿದ್ದಂತೆ ಹೊರಬರುವ ಆಸೆಯಾಗುತ್ತಿದೆ. ಬರೀ ಆಸೆಯಲ್ಲ. ಗಂಟಲಿಂದ ಹೊರಬಿದ್ದು, ಮನೆ ತುಂಬಿ, ಬಾಗಿಲನ್ನು ದೂಡಿ ಹೊರ ಬಂದು, ಅಂಗಳದ ಸರಗೋಲು ದಾಟಿ, ಎದುರಿನ ಗದ್ದೆಬಯಲು, ಅದರಂಚಿನ ಕೆರೆ-ಕಾಡಿಗೆಲ್ಲ ಹರಡಿ, ಮೇಲೆ ಕವುಚಿದ ಆಗಸಕ್ಕೂ ಆವರಿಸಿಕೊಳ್ಳುವಷ್ಟು ಆಶೆಬುರುಕತನ. ಯಾಕೋ ಈ ಆಶೆಬುರುಕತನವೂ ಆಪ್ಯಾಯವೆನಿಸುತ್ತಿದೆ. ಅದಕ್ಕೆ ಇನ್ನೂ ಗಟ್ಟಿಯಾಗಿಲ್ಲದ ಗಂಟಲಿಗಿಷ್ಟು ಜೇನುತುಪ್ಪ ಸವರಿಕೊಂಡು, ಎರಡು ಸಲ ಕೆಮ್ಮಿ, ಕ್ಯಾಕರಿಸಿ..., ಎದುರಿಗೊಂದು ಮೈಕ್ ತಂದಿಟ್ಟುಕೊಂಡು 'ಹಲೋ.. ಹಲೋ..' ಎಂದು ಪರೀಕ್ಷಿಸಿ ಅಂತೂ ಕಥನ ಕವಾಟ ತೆರೆಯುತ್ತಿದ್ದೇನೆ..
ದನಿ ಹಿತವಾಗಿರಲಿ, ಅಮಿತವಾಗಿರಲಿ ಎಂಬುದು ನನಗೆ ನನ್ನ ಹಾರೈಕೆ.