ಶುಕ್ರವಾರ, ಆಗಸ್ಟ್ 21, 2009

'ಚಂದೋ'ಪನಿಷತ್ತು

'ಹಾ, ನೈಸ್', 'ವೋವ್, ಸೋ ಸಾಫ್ಟ್'..... ಕೈಗೆ ಸಿಕ್ಕಿದ ವಸ್ತುಗಳನ್ನೆಲ್ಲಾ ಮಗ ಒಂದೊಂದಾಗಿ ಕೆನ್ನೆಗೆ ಒತ್ತಿ ನೋಡುತ್ತಿದ್ದಾನೆ. ಅವನ ಕಡ್ಲಿ ಬೇರ್, ಟೆಡ್ಡಿ ಬೇರ್, ರಾಕಿ ಎಂಬ ಉದ್ದ ಕಿವಿಯ ನಾಯಿ, ಶಾಮು ದ ಕಿಲ್ಲರ್ ವೇಲ್, ಥಾಮಸ್ ದ ಟ್ಯಾಂಕ್ ಎಂಜಿನ್ ಚಿತ್ರ ಇರುವ ಚಾದರ...... ಪ್ರತಿಯೊಂದಕ್ಕೂ ಧಾರಾಳ ಮೆಚ್ಚುಗೆ ಹರಿದು ಬರುತ್ತಿದೆ. 'ಅಮ್ಮಾ, ನಂಗೀ ಕಾರು ತುಂಬಾ ಇಷ್ಟ', 'ಈ ಬುಕ್ ಚೆನ್ನಾಗಿದ್ದು', 'ಟ್ರೇನ್ ಎಷ್ಟು ಫಾಸ್ಟ್ ಹೋಗ್ತು ನೋಡು' ಬಣ್ಣನೆ ಮುಗಿಯುವುದೇ ಇಲ್ಲ.
ಮಜ ಎಂದರೆ ಯಾವ ಆಟಿಗೆಯನ್ನು ತೋರಿಸಿದರೂ 'ಅದು ಚೆಂದಿದ್ದು, ಚೆನ್ನಾಗಿದ್ದು' ಎಂದೇ ಉತ್ತರ ಬರುವುದು. ಡಾಲರ್ ಸ್ಟೋರಿನ ಒಂದು ಡಾಲರ್ ವಸ್ತುವಿಗೂ ಇಪ್ಪತ್ತೈದು ನುಂಗಿದ ಬ್ರಾಂಡೆಡ್ ಆಟಿಗೆಗೂ ಒಡೆಯನ ಪ್ರೀತಿಯಲ್ಲಿ ಭೇದ ಇಲ್ಲ. ಊಟದ ಬಟ್ಟಲ ಪಕ್ಕ ಪೇರಿಸಿಟ್ಟುಕೊಳ್ಳುವಾಗ, ಹಾಸಿಗೆಯಂಚಿಗೆ ಸಾಲಾಗಿಟ್ಟು 'ಟ್ರಾಫಿಕ್ ಜಾಂ' ಮಾಡುವಾಗ, ಗೆಳೆಯರ ಜೊತೆ ಹಂಚಿಕೊಳ್ಳುವಾಗ ಎಲ್ಲೂ ಅದಕ್ಕೆ ಹೆಚ್ಚಿನ ಮರ್ಯಾದೆ, ಇದಕ್ಕೆ ಕಮ್ಮಿ ಎಂಬುದಿಲ್ಲ. ಎಲ್ಲವೂ ಚಂದ, ಎಲ್ಲವೂ 'ನೈಸ್'!
ಮಗನ ಆಟ ಮನದ ಪುಟಗಳಲ್ಲಿ ದಾಖಲಾಗುತ್ತಿದ್ದಂತೆ ಹಳೆಯದೊಂದು ಪುಟ ತಾನಾಗಿ ತೆರೆದುಕೊಳ್ಳುತ್ತಿದೆ. ಕಾಲೇಜು ದಿನಗಳಲ್ಲಿ ದಾಖಲಾಗಿದ್ದು ಅದು.
"ಅಪ್ಪಾ, ನನ್ನ ರೂಮ್ ಮೇಟು, ಅದ್ರ ಫ್ರೆಂಡ್ಸೆಲ್ಲಾ ನನ್ನ ನೋಡಿ ನಗಾಡ್ತ."
"ಎಂಥಕ್ಕೆ ತಂಗಿ?"
"ನಂಗೆ ಟೇಸ್ಟೇ ಇಲ್ಯಡ. 'ನೀ ಎಂಥ ನೋಡಿದ್ರೂ ಚಂದ ಕಾಣ್ತು ಹೇಳ್ತೆ. ನಿಂಗೆ ಗುಲಾಬಿನೂ ಚಂದ ಕಾಣ್ತು, ಮಲ್ಲಿಗೆನೂ ಚೊಲೊ ಕಾಣ್ತು. ರಾಜಕುಮಾರನೂ ಚೊಲೊ ಹೇಳ್ತೆ, ಅನಂತನಾಗನೂ ಇಷ್ಟ ಹೇಳ್ತೆ. ಕತ್ಲೆ ಕತ್ಲೆ ಆರ್ಟ್ ಸಿನೆಮಾನೂ ಚೊಲೊ ಇದ್ದು ಹೇಳ್ತೆ, 'ದಿಲ್ ತೋ ಪಾಗಲ್ ಹೈ'ನೂ ಚೊಲೊ ಇದ್ದು ಹೇಳ್ತೆ.....' ಹೇಳೆಲ್ಲಾ ಚಾಳಿಸ್ತ. ಎಂಥಾರೂ 'ಚೆನ್ನಾಗಿದ್ದು' ಅಂದ್ರೆ, 'ನಿಂಗೆ ಚೆನ್ನಾಗಿ ಕಾಣದೋದ್ದು ಯಾವುದು ಇದ್ದು' ಹೇಳಿ ನಗಾಡ್ತ......" ಅಪ್ಪನೆದುರು ದುಃಖ ತೋಡಿಕೊಂಡಿದ್ದೆ ಒಂದು ದಿನ.
"ಅದಕ್ಕೆಲ್ಲಾ ಬೇಜಾರು ಮಾಡಿಕ್ಯಳಡ ತಂಗಿ. ನಿಂಗೆ ಎಲ್ಲಾ ವಸ್ತುನಲ್ಲೂ ಏನಾದ್ರೂ ಚಂದ ಕಾಣ್ತು ಅಂದ್ರೆ ಅದು ನಿನ್ನ ಒಳ್ಳೆಯತನ ತೋರಿಸ್ತು. ನಿನ್ನ ಮುಗ್ಧತೆ ತೋರಿಸ್ತು. ಅವೆರಡೂ ಜೀವನಕ್ಕೆ ಅತಿ ಅವಶ್ಯ ಗುಣ. ನೀ ಹೀಂಗೆ ಇರು' ಅಪ್ಪ ಬೆನ್ನು ತಟ್ಟಿ ಧೈರ್ಯ ತುಂಬಿದ್ದ.
ಇವತ್ತಿಗೂ ನನಗೆ ವಿಮರ್ಶೆ ಮಾಡಲು ಬರುವುದಿಲ್ಲ. ಆದರೆ ನೋಡುವ ನೂರರಲ್ಲಿ ತೊಂಭತ್ತು ಖಂಡಿತ ಚೆನ್ನಾಗಿ ಕಾಣುತ್ತವೆ.

ಗುರುವಾರ, ಜುಲೈ 30, 2009

ಕ್ಷಮೆ ಇರಲಿ

ಪ್ರಿಯ ಸ್ನೇಹಿತರೇ,
ಬಹಳ ದಿನಗಳಿಂದ ಬಳಸದೇ 'ಪೆನ್ನು' ಧೂಳು ಹಿಡಿದಿತ್ತು. ಒಳಗಣ ಶಾಯಿಯೂ ಒಣಗಿ ಗಟ್ಟಿಯಾಗಿತ್ತು. ರಾಶಿ ಸೋಮಾರಿತನ, ಒಂಚೂರು ಸಿನಿಕತನ, ಮೇಲಿಂದ ಮುತ್ತಿಕೊಂಡ ಗೊಂದಲದ ಬಿಂಜಲುಬಲೆ.... ನಿಜ ಹೇಳಬೇಕೆಂದರೆ ನನ್ನ ಬಳಿ 'ಪೆನ್ನು' ಇರುವುದೇ ಮರೆತು ಹೋಗಿತ್ತು. ಇವತ್ತೇಕೋ ನೆನಪಾಯಿತು. ಎತ್ತಿ ತೊಳೆದು, ಶಾಯಿ ತುಂಬುತ್ತಿದ್ದೇನೆ. ಈ ಬಾರಿ ಯಾವ '....ತನ'ದ ಗಾಳಿಯೂ ಅದನ್ನು ಒಣಗಗೊಡದಿರಲಿ ಎಂಬುದೊಂದು ಹಾರೈಕೆ.

ಸೋಮವಾರ, ಮಾರ್ಚ್ 9, 2009

ಜೀವ ನದಿ

ಅಂತರ್ರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ನನ್ನ ಜೀವನದ ಬಹುಮುಖ್ಯ ಅಂಗವಾದ ಒಬ್ಬ ಮಹಿಳೆಯ ಕುರಿತು ಈ ಬರೆಹ:
ಆಕೆ ನನ್ನ ಅಮ್ಮಮ್ಮ. ಹೆಸರಿಗೆ ಅಮ್ಮಮ್ಮನಾದರೂ ವಾಸ್ತವದಲ್ಲಿ ಅಪ್ಪನ ಅಮ್ಮ. ಅಚ್ಚ ಬಿಳಿ ಬಣ್ಣ, ಗುಂಡಗಿನ ಗಿಡ್ಡ ದೇಹ, ಬೋಳಿಸಿದ ತಲೆ, ಗುಳಿ ಬಿದ್ದ ಕಣ್ಣುಗಳು, ನೆರಿಗೆಗಟ್ಟಿದ ಮುಖ-ಮೈ, ಸೊಂಟಕ್ಕೆ ಬಿಗಿಯಾಗಿ ಸುತ್ತಿದ ಕೆಂಪು ಅಥವಾ ಅದರ ಆಚೀಚಿನ ಬಣ್ಣಗಳ ಹತ್ತಿ ಸೀರೆ, ರವಿಕೆ... ಅಮ್ಮಮ್ಮನ ಬಾಹ್ಯ ರೂಪ ಇದು. ನಾನು ಹುಟ್ಟಿದಾಗಿನಿಂದ ನೋಡುತ್ತಿರುವ ರೂಪವೂ ಹೌದು. ಇತ್ತೀಚಿನ ವರ್ಷಗಳಲ್ಲಿ ಸುಕ್ಕು ಹೆಚ್ಚಿದೆ, ಕಣ್ಣು-ಕಿವಿ ಕೊಂಚ ಮಂಜು-ಮಂದ ಆಗಿವೆ, ಮುದಿವಯಸ್ಸು ತನ್ನ ಅಸ್ತಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡಿದೆ ಎಂಬುದನ್ನು ಬಿಟ್ಟರೆ, ಒಟ್ಟಾರೆಯಾಗಿ ಅಮ್ಮಮ್ಮನ ಅಪೀಯರೆನ್ಸ್ ಬಹಳೇನೂ ಬದಲಾಗಿಲ್ಲ.
ದೇಹ ಹಣ್ಣಾಗಿದ್ದರೂ ಅಮ್ಮಮ್ಮನ ಮನಸ್ಸು ಇನ್ನೂ ಹಸಿರು. ಅಲ್ಲಿ ಪ್ರೀತಿ-ವಾತ್ಸಲ್ಯ, ಕಾಳಜಿ, ಅಂತಃಕರಣ (ಅವಳ ಭಾಷೆಯಲ್ಲಿ ತನುಕರಣೆ), ಮನೆಮಕ್ಕಳು, ಮೊಮ್ಮಕ್ಕಳ ಮೇಲಿನ ಮೋಹಗಳ ಚಿಲುಮೆ ಸದಾ ಚಿಮ್ಮುತ್ತದೆ. ಮನೆಗೆ ಬಂದ ಅತಿಥಿಗಳ ಊಟೋಪಚಾರ ಸರಿಯಾಗಿ ಆಗುತ್ತಿದೆಯೋ ಇಲ್ಲವೋ ಎಂಬ ಸಂದೇಹವೂ ಬರುತ್ತದೆ. ತೊಂಬತ್ತೆಂಟರ ಅಮ್ಮಮ್ಮ ಈಗಲೂ ಊಟದ ಪಂಕ್ತಿಯಲ್ಲಿ ಅಡ್ಡಾಡಿ ಖುದ್ದಾಗಿ ಅತಿಥಿಗಳನ್ನು ವಿಚಾರಿಸಿಕೊಂಡು ಬರುತ್ತಾಳೆ.
ಅಪ್ಪ-ಅಮ್ಮ ಜಮೀನು ನೋಡಿಕೊಂಡಿದ್ದ ಊರಿನಲ್ಲಿ ಸರಿಯಾದ ಶಾಲೆ ಇಲ್ಲದ ಕಾರಣ ಅಣ್ಣ, ಅಕ್ಕ, ನಾನು ಚಿಕ್ಕವಯಸ್ಸಿನಲ್ಲಿಯೇ ಅವರನ್ನು ಬಿಟ್ಟು ದೊಡ್ಡಪ್ಪ-ದೊಡ್ಡಮ್ಮಂದಿರೊಂದಿಗೆ ಅಮ್ಮಮ್ಮ ವಾಸಿಸುತ್ತಿದ್ದ ಬಾಳೇಸರ ಸೇರಿಕೊಂಡಿದ್ದೆವು. ತಂದೆ-ತಾಯಿಂದ ದೂರವಿದ್ದ ನಮಗೆ ಅಮ್ಮಮ್ಮನೇ ಎಲ್ಲ ಆಗಿದ್ದವಳು. ಸ್ನಾನ ಮಾಡಿಸಿ, ಬಟ್ಟೆ ತೊಳೆದು ಒಣಗಿಸುವುದರೊಂದಿಗೆ ಶಾಲೆಯಿಂದ ಬರುತ್ತಲೂ ತಿಂಡಿ-ಆಸರಿಗೆ ಒದಗಿಸುವುದು, ನಾವು ಸರಿಯಾಗಿ ಓದಿ-ಬರೆಯುತ್ತೇವೋ ಇಲ್ಲವೋ ಎಂಬ ಬಗ್ಗೆ ನಿಗಾ ಇಡುವುದು, ಸಣ್ಣಪುಟ್ಟ ಜಗಳ-ಹೊಡೆದಾಟ ನಡೆಸಿದರೆ ಮಧ್ಯಸ್ಥಿಕೆ ವಹಿಸಿ ಬಿಡಿಸುವುದು, ಕೊನೆಗೆ ರಾತ್ರಿ ಮಲಗುವಾಗ ಬಂದು ಹಾಸಿಗೆ ಬಿಡಿಸಿ, ಕುಡುವಿಕೊಟ್ಟು ಹೋಗುವವರೆಗೆ ಅಮ್ಮಮ್ಮ ನಮಗೆಲ್ಲ ಸೇವೆ ಮಾಡುತ್ತಿದ್ದಳು. ನಾವು ದೊಡ್ಡವರಾಗುತ್ತಿದ್ದಂತೆ ಇವೆಲ್ಲ ಕೆಲಸ ಖುದ್ದು ಮಾಡಿಕೊಳ್ಳಲು ಕಲಿಸಿದ್ದೂ ಅವಳೇ.
ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ಅಜ್ಜಿಮನೆಯ ಆಶ್ರಯಕ್ಕೆ ಬಂದಿದ್ದ ಅಮ್ಮಮ್ಮನಿಗೆ ಓದು ಬರೆಹ ಕಲಿಯಲಾಗಿರಲಿಲ್ಲ. ಇದೊಂದು ಕೊರಗು ಆಕೆಯಲ್ಲಿ ಯಾವತ್ತೂ ಉಳಿದಿತ್ತು. ಹಾಗಾಗಿ ಓದುವ ಮಕ್ಕಳನ್ನು ಅವಳು ಬಹಳವಾಗಿ ಪ್ರೀತಿಸುತ್ತಾಳೆ. ನಮ್ಮ ಶಾಲಾ ದಿನಗಳಲ್ಲಿ ಶನಿವಾರ, ಭಾನುವಾರ ಬಂತೆಂದರೆ ಆಕೆಗೆ ಪಾಠ ಓದಿ ಹೇಳುವ ಕೆಲಸ ನಮ್ಮದು. ತಾನು ಅಡಿಕೆ ಸುಲಿಯುತ್ತಲೋ, ಅಕ್ಕಿ ಬೀಸುತ್ತಲೋ, ಇನ್ನಾವುದೇ ಕೆಲಸ ಮಾಡುತ್ತಲಿರುವಲ್ಲಿ ನಮ್ಮನ್ನು ಕರೆಸಿಕೊಳ್ಳುತ್ತಿದ್ದ ಅಮ್ಮಮ್ಮ ಕನ್ನಡ ಪಠ್ಯದ ಯಾವುದಾದರೂ ಒಂದು ಪಾಠ ಓದಿ ಹೇಳಲು ಆದೇಶ ನೀಡುತ್ತಿದ್ದಳು. ಪೌರಾಣಿಕ ಪಾಠಕ್ಕೆ ಆದ್ಯತೆ. ಇಲ್ಲವಾದರೆ ಯಾವುದೂ ಸರಿ. ಪದ್ಯಗಳನ್ನೂ ರಾಗವಾಗಿ ಓದಿ ಹೇಳಬೇಕಿತ್ತು. ಅದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದರೆ ಆಕೆಗೆ ಇಮ್ಮಡಿ ಸಂತಸ. ಒಂದು ವಿಷಯ ತಿಳಿದುಕೊಂಡಿದ್ದಕ್ಕೆ, ಇನ್ನೊಂದು ತನ್ನ ಮೊಮ್ಮಕ್ಕಳಿಗೆ ಚಂದ ಮಾಡಿ ಓದಲು ಬರುತ್ತದಲ್ಲ ಎಂಬ ಹೆಮ್ಮೆಗೆ. ಮುಂದೆ ನಾವೆಲ್ಲ ಹೈಸ್ಕೂಲು, ಕಾಲೇಜು ಸೇರಿದ ಮೇಲೆ 'ಇಂಗ್ಲೀಷಲ್ಲಿ ಮಾತಾಡಿ' ಎಂದು ಪ್ರೋತ್ಸಾಹಿಸುತ್ತಿದ್ದಳು. 'ಅಮ್ಮಮ್ಮ ನಿಂಗದೆಲ್ಲ ಅರ್ಥ ಆಗ್ತಿಲ್ಲೆ' ಎಂದರೆ, 'ಅಡ್ಡಿ ಇಲ್ಲೆ, ನಿಂಗ ಮಾತಾಡಿದ್ನ ಕೇಳಿರೂ ಯಂಗದೇ ಸಂತೋಷ' ಎನ್ನುತ್ತಿದ್ದಳಾಕೆ.
ಓದು ಬರದಿದ್ದರೂ ಅಮ್ಮಮ್ಮ ಲೆಕ್ಕದಲ್ಲಿ ಭಾರಿ ಜಾಣೆ. ಮಗ್ಗಿ, ಕಾಲು, ಅರ್ಧ, ಮುಕ್ಕಾಲು ಎಲ್ಲ ಆಕೆಗೆ ಕಂಠಪಾಠ. ನಾಣ್ಯ, ನೋಟುಗಳನ್ನೆಲ್ಲ ಚಿತ್ರ ನೋಡಿಯೇ ಗುರುತಿಸುತ್ತಿದ್ದಳು. ಒಬ್ಬಂಟಿಯಾಗಿ ಬಸ್ ಪ್ರಯಾಣ ಮಾಡುವಷ್ಟು ಧೈರ್ಯವೂ ಇತ್ತು. ಸಂಪ್ರದಾಯದ ಹಾಡುಗಳು, ಗಾದೆಗಳಂತೂ ಸಾವಿರದ ಲೆಕ್ಕದಲ್ಲಿ ಗೊತ್ತು. ಯಾರಾದರೂ ಒಂದು ಹೊಸ ಹಾಡು ಹೇಳಿದರೆ ಒಂದು ಸಲ ಕೇಳುತ್ತಲೇ ಪೂರ್ತಿ ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಅವಳದ್ದು. ಬರೆಹ ಕಲಿಯದ ಆಕೆಯ ಕೊರಗು ಕೊನೆಯವರೆಗೂ ಇರಬಾರದೆಂದು ನಾನು ಆಕೆಗೆ ಸುಮಾರು ಎಂಬತ್ತನಾಲ್ಕು ವರ್ಷವಿದ್ದಾಗ 'ಅ,ಆ,ಇ,ಈ' ಹೇಳಿಕೊಟ್ಟಿದ್ದೆ. ಆಗ ನನಗೆ ಶಾಲಾ ರಜೆ, ಅಮ್ಮಮ್ಮನೂ ನನ್ನಪ್ಪ-ಅಮ್ಮ ಇದ್ದ ಹನುಮಾಪುರಕ್ಕೆ ಬಂದುಳಿದಿದ್ದಳು. ಅಕ್ಷರಾಭ್ಯಾಸ ಮಾಡುವ ಖುಷಿಯಲ್ಲಿ ಅಮ್ಮಮ್ಮ ಕನ್ನಡಾಕ್ಷರಗಳನ್ನು ತಿದ್ದಿದ್ದೇ ತಿದ್ದಿದ್ದು. ಎರಡು ಮೂರು ದಿನಗಳಲ್ಲಿ 'ಅಂ, ಅಃ'ವರೆಗೆ ಕಲಿತಳು. 'ಗೌರಿ' ಎಂದು ತನ್ನ ಹೆಸರು ಬರೆಯಲೂ ಕಲಿತಳು. ಅಪ್ಪ-ಅಮ್ಮನ ಪ್ರೋತ್ಸಾಹವೂ ಇದ್ದಿದ್ದರಿಂದ ಅಲ್ಲಿ ಇದ್ದಷ್ಟು ದಿನ ಸಮಯ ಸಿಕ್ಕಾಗಲೆಲ್ಲ ಕಲಿತಷ್ಟನ್ನು ಬರೆಯುತ್ತಲೇ ಇದ್ದಳು. ಆದರೆ ಬಾಳೇಸರಕ್ಕೆ ವಾಪಸ್ ಬಂದ ಮೇಲೆ ಪ್ರೋತ್ಸಾಹ, ಅವಕಾಶ, ಸಮಯ ಯಾವವೂ ಸಿಗದೇ ಅಮ್ಮಮ್ಮನ ಅಕ್ಷರಾಭ್ಯಾಸ ಅಘನಾಶಿನಿಯಲ್ಲಿ ಕೊಚ್ಚಿ ಹೋಯಿತು.
ದೂರದೂರುಗಳಿಂದ ಬಾಳೇಸರ ಶಾಲೆಗೆ ಬರುತ್ತಿದ್ದ ಹಲವಾರು ಮಕ್ಕಳಿಗೆ ನಮ್ಮನೆಯಲ್ಲಿ ಮಧ್ಯಾಹ್ನದ ಊಟ ಹಾಕುವುದು ಅಜ್ಜನ ಕಾಲದಿಂದಲೇ ಇದ್ದ ಪದ್ಧತಿಯಂತೆ. ಅದು ಶುರುವಾಗಿದ್ದು, ಇನ್ನೂ ನಡೆದುಕೊಂಡು ಬರುತ್ತಿರುವುದು ಅಮ್ಮಮ್ಮನ ಒತ್ತಾಸೆಯಿಂದಲೇ. ಮನೆಯ ಸೊಸೆಯರು ಎಷ್ಟೇ ಬಡಿಸಿದರೂ, 'ಪಾಪ, ಶಾಲೆಗೆ ಹೋಪ ಹುಡ್ರು, ಸರಿಯಾಗಿ ತಿನ್ನವು' ಎಂದು ಅಮ್ಮಮ್ಮ ತಾನೇ ಬಂದು ಮತ್ತಷ್ಟು ತುಪ್ಪ ಹಾಕುವುದು, ಕಜ್ಜಾಯ ಬಡಿಸಿಹೋಗುವುದು ಯಾವತ್ತೂ ಇದ್ದದ್ದೇ. ನಾವು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ, ಮಧ್ಯಾಹ್ನ ಊಟ ಮುಗಿಸಿ ಹೊರಡುವಾಗ ಯಾರಿಗೂ ಗೊತ್ತಾಗದಂತೆ ಒಂದರೆಡು ಚಕ್ಕುಲಿಯನ್ನೋ, ಅತ್ರಾಸ, ಅಂಬೊಡೆಯನ್ನೋ ಕೈಗಿಟ್ಟು ಸದ್ದಿಲ್ಲದೇ ತೆರಳುತ್ತಿದ್ದ ಅಮ್ಮಮ್ಮನ ಚಿತ್ರ ಇಂದಿಗೂ ಕಣ್ಣು ಕಟ್ಟುತ್ತದೆ.
ಅಜ್ಜ ಕೂಡ ಅಮ್ಮಮ್ಮನಂತೆ ಎಳವೆಯಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದಂತೆ. ಮದುವೆಯಾಗುವಾಗ ಇಬ್ಬರಿಗೂ ಚಿಕ್ಕವಯಸ್ಸು. ಕೆಲವೇ ಸಮಯದಲ್ಲಿ ಮನೆಯ ಹಿರಿಯಲು ಇವರನ್ನು ಬರಿಗೈಯಲ್ಲಿ ಮನೆಯಿಂದ ಹೊರ ಹಾಕಿದರಂತೆ. ಆಮೇಲೆ ನಾಲ್ಕು ಜನ ದೊಡ್ಡವರು ಮಧ್ಯಸ್ಥಿಕೆ ನಡೆಸಿ ಬಾಳೇಸರದಲ್ಲೊಂದು ತುಂಡು ಜಮೀನು ಖರೀದಿಸಲು ಸಹಾಯ ಮಾಡಿದ್ದರಂತೆ. ಹೀಗೆ ಏನೂ ಇಲ್ಲದೆಯೇ ಪಾಳು ಬಿದ್ದ ತೋಟ ನಂಬಿ ಸಂಸಾರ ಶುರು ಮಾಡಿದ ಅಜ್ಜನಿಗೆ ಸಮನಾಗಿ ನಿಂತು ಮನೆಯ ಹೊರಗೆ, ಒಳಗೆ ದುಡಿದವಳು ಅಮ್ಮಮ್ಮ. ಶಾಂತ ಸ್ವಭಾವದ ನಿಧಾನಸ್ಥ, ಭಾವುಕ, ಕಾವ್ಯಜೀವಿ ಅಜ್ಜನಿಗೆ ಭಾರಿ ಚುರುಕಿನ, ಚಟುವಟಿಕೆಯ, ವಾಸ್ತವವಾದಿ, ಗಡಸು ಹೆಂಡತಿ ಅಮ್ಮಮ್ಮ. ಅಜ್ಜ ಸ್ವಾತಂತ್ರ್ಯ ಹೋರಾಟಕ್ಕೆ ಸೇರಿ ಜೈಲು ಸೇರಿದಾಗ ಮನೆಯನ್ನು ನಡೆಸಿದವಳು ಅವಳು. ಅಂತೂ ಇಬ್ಬರು ಹೊಂದಿ ದುಡಿದು ಮನೆಯನ್ನು ಬೆಳೆಸಿದರು. ನಾಲ್ವರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು. ದೊಡ್ಡಪ್ಪಂದಿರಿಗೆ, ಅತ್ತೆಯರಿಗೆ ಮದುವೆಯೂ ಆಯಿತು. ಇನ್ನೊಬ್ಬ ದೊಡ್ಡಪ್ಪ, ನನ್ನಪ್ಪ ಇನ್ನೂ ಓದುತ್ತಿರುವಾಗಲೇ ಅಜ್ಜ ಕ್ಯಾನ್ಸರಿನಿಂದ ತೀರಿ ಹೋದರು. ಅಮ್ಮಮ್ಮ ಆಗಿನ ಸಂಪ್ರದಾಯದಂತೆ ತಲೆ ಬೋಳಿಸಿಕೊಂಡು, ಕೆಂಪಿನ ಛಾಯೆಗಳ ಸೀರೆಯುಡುವ ವಿಧವೆಯಾದಳು.
ಬಾಹ್ಯರೂಪಕ್ಕೆ ಮಡಿ ಹೆಂಗಸಾಗಿ ಕಂಡರೂ ಅಂತರಂಗದಲ್ಲಿ ಅಮ್ಮಮ್ಮ ತನ್ನ ಸೊಸೆಯಂದಿರಿಗಿಂತಲೂ ಹೆಚ್ಚು ಮಾಡರ್ನ್. ಮೊಮ್ಮಕ್ಕಳ ಮದುವೆ ವಿಷಯದಲ್ಲಿ 'ನಿಂಗ ಪ್ರೀತಿ ಮಾಡಿ ಬೇರೆ ಜಾತಿಯವರನ್ನು ಮದುವೆ ಆದರೂ ಅಡ್ಡಿಲ್ಲೆ, ಆದರೆ ಮದುವೆ ಆದಂವ ನಿಂಗಳನ್ನ ಯಾವತ್ತೂ ಗೌರವದಿಂದ, ಪ್ರೀತಿಯಿಂದ ಕಾಣವು. ಸಂಸಾರವನ್ನ ಸಮರ್ಥವಾಗಿ ನಡೆಸಿಕ್ಯಂಡು ಹೋಪಷ್ಟು ಗಟ್ಟಿ ಇರವು' ಎಂದವಳು ಅವಳು. ಮೊಮ್ಮಕ್ಕಳಲ್ಲಿ ಹುಡುಗಿಯರೆಲ್ಲ ಚೆನ್ನಾಗಿ ಓದಿ, ನೌಕರಿ ಮಾಡಬೇಕೆಂಬುದು ಅವರ ಮಹದಾಸೆ. ಒಬ್ಬಂಟಿಯಾಗಿ ಪರವೂರಿಗೆ ವಿದ್ಯಾಭ್ಯಾಸಕ್ಕೆ, ನೌಕರಿಗೆ ಹೊರಟು ನಿಂತಾಗ ಬೆನ್ನು ತಟ್ಟಿ ಕಳುಹಿಸಿದ್ದಳು. ಸ್ವಾತಂತ್ರ್ಯ ಹೋರಾಟಗಾರರ ಮಾಸಾಶನ ತರಲು ಸಿದ್ದಾಪುರಕ್ಕೆ ಹೋದಾಗಲೆಲ್ಲ ಅಲ್ಲಿನ ಬ್ಯಾಂಕುಗಳಲ್ಲಿ, ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರನ್ನು ನೋಡಿ ಬರುತ್ತಿದ್ದ ಅಮ್ಮಮ್ಮ 'ತಂಗಿ, ನಿಂಗಳೂ ಎಲ್ಲ ಇಂಥಾ ನೌಕರಿಗೆ ಸೇರಿ. ಕೆಲಸನೂ ಮಾಡಲಾಗ್ತು, ಮಕ್ಕಳನ್ನು ಬೆಳಸಿ ಸಂಸಾರ ನೋಡಿಕ್ಯಂಬಲೂ ಆಗ್ತು' ಎಂದು ಹುರುಪು ತುಂಬುತ್ತಿದ್ದಳು. ಈಗಲೂ ಸಹ, ಪತ್ರಿಕೆಗಳಲ್ಲಿ ಪ್ರಕಟವಾಗುವ ನನ್ನ ಲೇಖನಗಳನ್ನು ಅಪ್ಪ ಅವಳೆದುರು ಓದಿ ಹೇಳುತ್ತಿದ್ದರೆ, 'ತನ್ನ ಮೊಮ್ಮಗಳು ಬರೆದದ್ದು' ಎಂದು ಅವಳಿಗಾಗುವ ಹೆಮ್ಮೆ ಅಲ್ಪಸ್ವಲ್ಪದಲ್ಲ.
ದೈಹಿಕವಾಗಿಯೂ ಅಮ್ಮಮ್ಮ ಗಟ್ಟಿ ಜೀವಿ. ತನ್ನೆಲ್ಲ ಕೆಲಸಗಳನ್ನು ತಾನೇ ಮಾಡಿಕೊಂಡು ಬರುವ ಜೊತೆಗೆ ಅಡುಗೆಯಲ್ಲಿ, ಮನೆವಾರ್ತೆಯಲ್ಲಿ ಸಹಾಯ ಮಾಡುವುದು ಆಕೆ ಸುಮಾರು ಎಂಬತ್ತೈದು ವರ್ಷಗಳವರೆಗೂ ನಡೆಸಿಕೊಂಡು ಬಂದ ನಿತ್ಯ ಕರ್ಮ. ಆದರೆ ಕಳೆದೊಂದು ದಶಕದಲ್ಲಿ ಇಬ್ಬರು ಗಂಡು ಮಕ್ಕಳು, ಒಬ್ಬ ಅಳಿಯನನ್ನು ಕಳೆದುಕೊಂಡಿದ್ದು ಅಮ್ಮಮ್ಮನಿಗೆ ಏಕಾಏಕಿ ಮುದಿತನ ತಂದಿತು. ಈಗೆರಡು ವರ್ಷಗಳಿಂದ ಮರೆವು ಜಾಸ್ತಿ. ಹಿಂದಿನ ದಿನಗಳಾಗಲಿ, ಹಿಂದೆ ಕಲಿತ ಹಾಡು ಹಸೆ ಲೆಕ್ಕ, ಹಳೆಯ ನೆಂಟರು ಯಾರೂ ಆಕೆಗೆ ಮರೆತಿಲ್ಲ. ಆದರೆ ದಿನ ನಿತ್ಯದ ಬದುಕಿನ ಚಿಕ್ಕಪುಟ್ಟ ಸಂಗತಿಗಳು ನೆನಪಿರುವುದಿಲ್ಲ. ಆದರೂ ಬಾಯಿ ರುಚಿ ಇಲ್ಲ, ಪಿಸುಗುಟ್ಟಿದರೆ ಕೇಳುವುದಿಲ್ಲ, ಕಣ್ಣು ಸ್ಪಷ್ಟವಾಗಿ ಕಾಣುವುದಿಲ್ಲ ಎಂಬ ವೃದ್ಧಾಪ್ಯದ ಸಮಸ್ಯೆಗಳನ್ನು ಹೊರತುಪಡಿಸಿದರೆ ಇಂದಿಗೂ ಆಕೆಗೆ ಯಾವುದೇ ರೋಗ ಇಲ್ಲ. ತನ್ನ ಕೆಲಸಗಳಿಗೆ ಯಾರನ್ನೂ ಆಕೆ ಅವಲಂಬಿಸಿಲ್ಲ.
ನಮ್ಮ ಕುಟುಂಬದ ಸಮಷ್ಟಿ ಶಕ್ತಿಯಾಗಿ, ಜೀವ ನದಿಯಾಗಿ ನಿಂತ ಅಮ್ಮಮ್ಮ ಬದುಕಿದಷ್ಟು ದಿನ ನೆಮ್ಮದಿಯಿಂದಿರಲಿ, ಇಷ್ಟೇ ಗಟ್ಟಿ ಇರಲಿ. ಅಮ್ಮಮ್ಮನ ಚೇತನ ಕಿರಿಯರಿಗೆಲ್ಲ ಬೆಳಕಾಗಿರಲಿ ಎಂಬುದು ನನ್ನ ಪ್ರೀತಿಯ ಹಾರೈಕೆ.

ಮಂಗಳವಾರ, ಫೆಬ್ರವರಿ 10, 2009

'ಸುಧಾ'ಪಾನದ ಸುದ್ದಿ

ಇತ್ತೀಚೆಗೆ ಊರಿಗೆ ಹೋದಾಗ ಅಕಸ್ಮಾತ್ತಾಗಿ ಒಂದಿಷ್ಟು ಹಳೆಯ 'ಸುಧಾ'ಗಳ ರಾಶಿ ಕಣ್ಣಿಗೆ ಬಿತ್ತು. ಮಾಡುತ್ತಿದ್ದ ಕೆಲಸ ಕೈ ಬಿಟ್ಟು ಹಾಗೆಯೇ ಓದಲು ಕುಳಿತುಕೊಂಡೆ. ಒಂದೆರಡು ಪುಟ ತಿರುವುತ್ತಿದ್ದಂತೆಯೇ ನಾನೇ ಕಳೆದುಹೋಗಿದ್ದೆ. ಒಂದೊಂದು ಬಿಡಿ ಪತ್ರಿಕೆಯೂ ಒಂದು ನಿಧಿಯಂತೆ. ವೈವಿಧ್ಯಮಯ ನೆನಪುಗಳ ಮೂಟೆಯಂತೆ. ಕುಡಿದಷ್ಟೂ ಇನ್ನೂ ಬೇಕೆನ್ನಿಸುವ, ಮತ್ತು ಹತ್ತಿಸುವ ರಸಪಾಕದಂತೆ ಅನ್ನಿಸತೊಡಗಿತ್ತು.
'ಸುಧಾ' ಜೊತೆಗಿನ ನನ್ನ ನಂಟು ನನಗೊಂದು ಮೂರು-ಮೂರೂವರೆ ವರ್ಷವಾಗಿದ್ದಾಗಲೇ ಶುರುವಾಗಿತ್ತು. ಅಪ್ಪನ ಮೂಲಮನೆ 'ಬಾಳೇಸರ'ದಲ್ಲಿ 'ಸುಧಾ' ತರಿಸುತ್ತಿದ್ದರು. ಊರಿಗೆ ಹೋದಾಗೆಲ್ಲ ಅಪ್ಪ ಹಳೆ ಪತ್ರಿಕೆಗಳನ್ನು ಹಿಡಿದುಕೊಂಡು ನಾವಿರುತ್ತಿದ್ದ ಹನುಮಾಪುರಕ್ಕೆ ತರುತ್ತಿದ್ದ. ರಾತ್ರಿ ಊಟವಾದ ಮೇಲೆ ಚಿಮಣಿ ದೀಪದ ಬೆಳಕಿನಲ್ಲಿ ಅಪ್ಪ-ಅಮ್ಮ ಓದಲು ಶುರು ಮಾಡಿದರೆ ನಾನೂ ಪಕ್ಕದಲ್ಲೊಂದು 'ಸುಧಾ' ಹಿಡಿದು ಕುಳಿತುಕೊಳ್ಳುತ್ತಿದ್ದೆ. ಅಕ್ಷರ ಬರದಿದ್ದರೂ ಚಿತ್ರ ನೋಡುವ ಹಂಬಲ. ಅದರಲ್ಲೂ ಪುಟಾಣಿ ಪುಟ್ಟಿ, ವಿಕ್ರಮ್, ಫ್ಯಾಂಟಮ್ ಕಾರ್ಟೂನುಗಳನ್ನು ನೋಡಿ, ನನಗೆ ತಿಳಿದಂತೆ ಅರ್ಥೈಸಿಕೊಳ್ಳುತ್ತಿದ್ದೆ. ಆಮೇಲೆ ಸರಸರ ಓದಲು ಬರೆಯಲು ಕಲಿತಿದ್ದೇ 'ಸುಧಾ'ದಲ್ಲಿನ ಕಾರ್ಟೂನು, ಮಕ್ಕಳ ಕಥೆ ಓದಬೇಕೆಂಬ ಆಸೆಯಿಂದ.
ಮುಂದೆ ಶಾಲೆಗೆ ಸೇರಲೆಂದು ಬಾಳೇಸರಕ್ಕೆ ಬಂದುಳಿದ ಮೇಲಂತೂ ತೂಕಡಿಸುವವಳಿಗೆ ಹಾಸಿಗೆ ಹಾಸಿಕೊಟ್ಟಂತಾಗಿತ್ತು. ಪ್ರತಿ ಗುರುವಾರ 'ಸುಧಾ' ಬಂತೆಂದರೆ ಮನೆಯಲ್ಲಿದ್ದ ಇತರ ಮಕ್ಕಳ ಜೊತೆ ಜಗಳ ಮಾಡಿಯಾದರೂ ನಾನೇ ಮೊದಲು ಅದನ್ನು ಓದಬೇಕು. ಮೊದಲು ಓದಲು ಅವಕಾಶವಾಗಲಿಲ್ಲವೆಂದರೆ ನನಗಾಗುತ್ತಿದ್ದ ವ್ಯಥೆ, ಅವಮಾನ ಅಷ್ಟಿಷ್ಟಲ್ಲ.
ಅಷ್ಟೊತ್ತಿಗಾಗಲೇ ಮಕ್ಕಳಿಗೆ ಮೀಸಲಾದ ಅಂಕಣಗಳನ್ನೆಲ್ಲಾ ಓದಿ ಅರಗಿಸಿಕೊಳ್ಳುವಷ್ಟು ಪರಿಣಿತಿ ಪಡೆದಿದ್ದ ನಾನು ನನ್ನಷ್ಟಕ್ಕೇ 'ದೊಡ್ಡವರ ಸರಕಿ'ಗೆ ಪ್ರೊಮೋಷನ್ ಕೊಟ್ಟುಕೊಂಡಿದ್ದೆ. ದೊಡ್ಡವರ ಸರಕೆಂದರೆ ಕಥೆ, ಧಾರಾವಾಹಿಗಳು. ಚಿಕ್ಕಮಕ್ಕಳೆಲ್ಲಾ ಧಾರಾವಾಹಿ ಓದಬಾರದು, ದೊಡ್ಡವರ ಮಾತ್ರ ಓದಬೇಕು ಎಂಬುದು ನಮ್ಮ ಮನೆಯಲ್ಲಿದ್ದ ಹಿರಿಯ ಹುಡುಗರು ಅಂದರೆ ನನ್ನ ದೊಡ್ಡಪ್ಪಂದಿರ ಮಕ್ಕಳು ಹಾಕಿದ್ದ ನಿಯಮ. ಅವರು ಬೇಡ ಎಂದಷ್ಟೂ ನನಗೆ ಅದರಲ್ಲೇನೋ ಇದೆ, ನಾನದನ್ನು ಓದಲೇಬೇಕೆಂಬ ಕುತೂಹಲ. ಅವರೆಲ್ಲ ಕೆಳಗೆ ಬರೆಯುವುದರಲ್ಲಿ, ಓದು ಆಟಗಳಲ್ಲಿ ಮಗ್ನರಾಗಿದ್ದಾಗಿದ್ದಾಗ ನಾನು ಕದ್ದು ಮೆತ್ತಿಗೆ ಹೋಗಿ 'ಸುಧಾ' ಧಾರಾವಾಹಿಗಳ ಪುಟ ತೆರೆಯುತ್ತಿದ್ದೆ. ಒಂದೇ ಉಸಿರಿನಲ್ಲಿ ಆ ವಾರದ ಇಡೀ ಕಂತು ಮುಗಿಸುತ್ತಿದ್ದೆ. ಮಧ್ಯದಲ್ಲಿ ಯಾರಾದರೂ ಬಂದರೆ ಸಿಕ್ಕಿ ಹಾಕಿಕೊಳ್ಳಬಾರದೆಂಬ ಉದ್ದೇಶದಿಂದ ಮಧ್ಯದ ಒಂದು ಬೆರಳನ್ನು ಯಾವಾಗಲೂ ಮಕ್ಕಳ ಪುಟದಲ್ಲಿ ಇರಿಸಿಕೊಳ್ಳುತ್ತಿದ್ದೆ. ಮೆತ್ತಿನ ಏಣಿಯನ್ನು ಯಾರಾದರೂ ಹತ್ತಿ ಬರುವ ಸದ್ದಾಗುತ್ತಲೇ ಟಕ್ಕಂತ ಇದನ್ನು ಮುಚ್ಚಿ ಆ ಪುಟಕ್ಕೆ ದೃಷ್ಟಿ ವರ್ಗಾಯಿಸುತ್ತಿದ್ದೆ. ಆದರೆ ಅಕ್ಕ-ಅಣ್ಣಂದಿರಿಗೆ ನಾನು ಧಾರಾವಾಹಿ ಓದುತ್ತೇನೆಂದು ಸದಾ ಸಂಶಯ. ಏಕ್ದಂ ಎಲ್ಲೆಲ್ಲಿಂದಲೋ ಪ್ರತ್ಯಕ್ಷರಾಗಿ, 'ನೀನು ಧಾರ್ವಾಯಿ ಓದ್ತಾ ಇದ್ದಿದ್ದೆ ಹದಾ' ಎಂದು ಅಟ್ಯಾಕ್ ಮಾಡುತ್ತಿದ್ದರು. 'ಇಲ್ಲೇ ಇಲ್ಲ' ಎಂದು ನಾನೂ ಪಟ್ಟು ಬಿಡದೇ ವಾದಿಸುತ್ತಿದ್ದೆ.
ಆ 'ದೊಡ್ಡವರ' ವ್ಯಾಪ್ತಿಯಲ್ಲಿ ಆರನೇ ತರಗತಿಯಲ್ಲಿದ್ದ ನಮ್ಮ ದೊಡ್ಡಪ್ಪನ ಮಗಳೂ ಬರುತ್ತಿದ್ದಳು. ಶಾಲೆಗೆ ಹೋಗುವಾಗ ನಮ್ಮನ್ನೆಲ್ಲಾ ಲೀಡ್ ಮಾಡುತ್ತಿದ್ದ ಹಿರಿಯಕ್ಕ ಅವಳು. ಮಧ್ಯ ದಾರಿಯಲ್ಲಿ ಅವಳದೇ ತರಗತಿಯ ಸ್ನೇಹಿತೆಯೊಬ್ಬಳು, ಇನ್ನೊಂದೆರಡು ಜನ ಚಿಕ್ಕ ಹುಡುಗರ ಜೊತೆ ನಮ್ಮನ್ನು ಸೇರಿಕೊಳ್ಳುತ್ತಿದ್ದಳು. ದಿನಾ ದಾರಿ ತುಂಬ ಅವರಿಬ್ಬರೂ 'ಸುಧಾ'ದಲ್ಲಿ ಓದಿದ್ದನ್ನು ಚರ್ಚಿಸುತ್ತಾ ಸಾಗುತ್ತಿದ್ದರು.
ಒಮ್ಮೆ ಲೇಖಕಿ ವಿದ್ಯುಲ್ಲತಾ ಅವರ 'ರಥಸಪ್ತಮಿ' ಧಾರಾವಾಹಿ ಬರಲಾರಂಭಿಸಿತ್ತು. ಇವರಿಬ್ಬರೂ ಹೊಸ ಧಾರಾವಾಹಿ ಬಗ್ಗೆ ಮಾತುಕತೆ ಆರಂಭಿಸಿದರು. ಏನು ಮಾಡಿದರೂ ಧಾರಾವಾಹಿ ನಾಯಕಿಯ ಹೊಸ ರೀತಿಯ ಹೆಸರು ಇವರಿಗೆ ನೆನಪಿಗೇ ಬರುತ್ತಿಲ್ಲ. 'ಆ ನಾಯಕಿ ಹೆಸರೆಂಥಾ ಆತೇ', 'ಎಂಥೋ ಹೊಸಾ ಹೆಸರು, ಎಂಥಾ ಮಾಡಿರೂ ನೆನಪೇ ಆಗ್ತಿಲ್ಲೆ' ಎಂದು ಇಬ್ಬರೂ ಪರದಾಡಲಾರಂಭಿಸಿದರು. ಹಿಂದೆಯೇ ಬರುತ್ತಿದ್ದ ನನಗೆ ಇವರ ಪೇಚಾಟ ನೋಡಲಾಗಲಿಲ್ಲ. 'ಅಯ್ಯೋ, ಅದ್ರ ಹೆಸರು ಸಮುದ್ಯತಾ' ಎಂದೇ ಹೇಳೇಬಿಟ್ಟೆ. 'ಹಾಂ ಹಾಂ ಸಮುದ್ಯತಾ' ಎಂದು ಇಬ್ಬರೂ ತಲೆದೂಗಿದರೂ, ಮರುಕ್ಷಣ ನಮ್ಮಕ್ಕ 'ನಿಂಗೆ ಹ್ಯಾಂಗೆ ಗೊತ್ತಿದ್ದು ಅದು' ಎಂದು ನನ್ನತ್ತ ದೊಡ್ಡ ಕಣ್ಣು ಬಿಟ್ಟಳು. ತಪ್ಪಿನ ಅರಿವಾದ ನಾನು ಎಂಜಲು ನುಂಗುತ್ತ, 'ಅದಾ, ಅದು ನೀನೇ ಆವತ್ತು ಹೇಳ್ತಾ ಇದ್ದಿದ್ದೆ' ಎಂದೇನೋ ಓಳು ಬಿಟ್ಟು ಪರಾರಿಯಾದೆ.
ಇನ್ನೊಮ್ಮೆ 'ಶಾರದೆ' ಅವರ 'ಕವಲೊಡೆದ ದಾರಿ' ಧಾರಾವಾಹಿಯ ಚರ್ಚೆ. ನಾಯಕ-ನಾಯಕಿಯ ಸಂಸಾರದಲ್ಲಿ ಮೂರನೇ ಹೆಂಗಸಿನ ಪ್ರವೇಶವಾಗಿತ್ತು. ಯಥಾಪ್ರಕಾರ ನಮ್ಮಕ್ಕ-ಅವಳ ಗೆಳತಿಗೆ ಆ ಪಾತ್ರದ ಹೆಸರು ನೆನಪಾಗುತ್ತಿಲ್ಲ. ಹಿಂದಿನ ಸಲದಂತಾಗಬಾರದೆಂದು ನಾನೂ ತಡೆದುಕೊಳ್ಳುವಷ್ಟು ತಡೆದುಕೊಂಡೆ. ಐದು ನಿಮಷವಾದರೂ ಇವರಿಗೆ ನೆನಪೇ ಆಗುತ್ತಿಲ್ಲ. ನೋಡಿ ನೋಡಿ ನನಗೂ ಸಾಕಾಯಿತು. 'ಅದರ ಹೆಸರು ಮೀನಾ ಹೇಳಿ' ಬಾಯ್ತಪ್ಪಿ ಹೇಳಿ ನಾಲಿಗೆ ಕಚ್ಚಿಕೊಳ್ಳುವಷ್ಟರಲ್ಲಿ ನಮ್ಮಕ್ಕ ನನ್ನನ್ನು ಹಿಡಿದಾಗಿತ್ತು. 'ಹೌದಾ, ನೀ ಧಾರ್ವಾಯಿ ಓದ್ತೆ. ಓದ್ತ್ನಿಲ್ಲೆ ಹೇಳಿ ಸುಳ್ಳು ಹೇಳ್ತೆ' ಎಂದು ಅಕ್ಕೋರ ಮಾದರಿಯಲ್ಲಿ ತಲೆ ಹಾಕಲಾರಂಭಿಸಿದಳು. ಈಗ ತಪ್ಪಿಸಿಕೊಳ್ಳುವಂತೆಯೇ ಇರಲಿಲ್ಲ. 'ಇಲ್ಲೆ, ಇಡೀ ಧಾರ್ವಾಯಿ ಓದಿದ್ನಿಲ್ಲೆ, ಇಲ್ಲಿಯವರೆಗೆ... ಹೇಳಿ ಇರ್ತಲೆ, ಅದ್ನ ಮಾತ್ರೆ ಓದಿದ್ದಿ' ಎಂದೆ. ಅವಳಿಗೆ ನಂಬಿಕೆ ಬರಲಿಲ್ಲ. ಆದರೆ ಅಷ್ಟರಲ್ಲಿ ಶಾಲೆ ಹತ್ತಿರ ಬಂದಿತ್ತು, ನಾನು ಬಚಾವಾದೆ.
ಎಳವೆಯಲ್ಲಿ ಓದಿನ ರುಚಿ ಹತ್ತಿಸಿದ 'ಸುಧಾ', ಆಮೇಲೆ ಜೊತೆಗೂಡಿದ ಹಳೆ 'ಕಸ್ತೂರಿ'ಗಳ ಸಖ್ಯದ ಕಥೆ ತುಂಬಾ ದೊಡ್ಡದಿದೆ. ಊರಿಂದ ತಂದಿದ್ದ ಹಳೆ ಪತ್ರಿಕೆಯೊಂದನ್ನು ನೋಡುತ್ತಿದ್ದಂತೆ ಎಲ್ಲ ನೆನಪಾಗುತ್ತಿದೆ ಇಂದು.

ಗುರುವಾರ, ಜನವರಿ 8, 2009

ನನ್ನೊಳಗಿನ ನಾನು

ನನ್ನೊಳಗಿನ ನಾನು ಕಗ್ಗಂಟು
ಒಳಹೊಕ್ಕು ಯಾರೂ ಬಿಡಿಸಲಾರರು
ಗಟ್ಟಿ ಕವಚದ ಒಳಗೆ ಸಿಹಿ ತಿರುಳುಂಟು
ಬಿಡಿಸಿ ಯಾರೂ ಸವಿಯಲಾರರು

ನನ್ನ ಮಾಡಿದರು ಒಂದು ಕೀಲುಗೊಂಬೆ
ಕೂಡ್ರೆಂದರೆ ಕೂರಲು, ನಿಲ್ಲೆಂದರೆ ನಿಲ್ಲಲು
ಒಲ್ಲದೇ ಹೋದಾಗ ನಾ
ಕಾದಿತ್ತು ಮೊನಚು ತಿರಸ್ಕಾರ ಸೊಲ್ಲು ಸೊಲ್ಲಲೂ

ನನ್ನ ಕಡು ಕೋಪ, ನೇರ ನುಡಿ
ಸುತ್ತೆಲ್ಲ ಜನರ ನಾಲಿಗೆಗೆ ಆಹಾರ
ಸುಡು ಕೋಪದ ಹಿಂದೆ ಮಿಡಿವ ಹೃದಯವುಂಟು
ಕಾಣುವ ಕಣ್ಣಿಗೆ ಮಾತ್ರ ಬರವೋ ಬರ

ನನ್ನ ಸರಳ ಸ್ನೇಹ ಇವರ ಮನಕ್ಕೆ ತಟ್ಟದು
ಆಡಂಭರದ ಕೆಳೆಗೆ ಈ ಮನ ಒಪ್ಪದು
ಇರಬಹುದೇನೋ ಹಾಗಾಗಿ ನಾನೊಬ್ಬ ಒಂಟಿಸಲಗ
ಹಾಗಂತ ಇವರೆಲ್ಲ ಪಿಸುನುಡಿವರು ಆಗಾಗ

ನಾನಲ್ಲ ಬಿಳಿಹಾಳೆ, ಜೀವವುಂಟು ನನ್ನಲಿ
ಭೋರ್ಗರೆಯುತ ಧುಮುಕುತ್ತಿಹ ಭಾವವುಂಟು ಎದೆಯಲಿ
ನವಚೈತ್ರದ ಹೊಸ ಚಿಗುರಿಗೆ ಕಾಯುವೆನು ಸತತ
ಹೊಂಬೆಳಕಿನ ಮುಂಜಾವೆ ಬಳಿ ಬಾ, ಇದೋ ಸ್ವಾಗತ
ನಮಸ್ಕಾರ ಸ್ನೇಹಿತರೆ,
ಸ್ಥಳ ಬದಲಾವಣೆಯ ಕಾರಣ ಕೆಲವು ದಿನಗಳಿಂದ ಯಾವುದೇ ಬರಹವನ್ನು ಇಲ್ಲಿ ಪ್ರಕಟಿಸಲಾಗಿರಲಿಲ್ಲ. ಕ್ಷಮೆ ಇರಲಿ. ಇನ್ನು ಮುಂದೆ ಮತ್ತೆ ಎಂದಿನಂತೆ ನಾನು, ನನ್ನ ಬರಹ ಮತ್ತು ನೀವು ಭೇಟಿಯಾಗುತ್ತಿರೋಣ.