ತೆರೆದ ಕಣ್ಣು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ತೆರೆದ ಕಣ್ಣು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಜೂನ್ 4, 2014

ಸ್ನೇಲ್ ರೈಲ್

ನನಗಿಲ್ಲಿ ಕ್ಯಾಪ್ಟನ್ ಖುದ್ದೂಸನ ಘಾಟಿ ಎಕ್ಸ್ಪ್ರೆಸ್ ಮಿಸ್ಸಾಗುವುದಿಲ್ಲ 
ಯಾಕೆಂದರೆ ರೆಡ್ ಲೈನ್ ಎಮ್ಮಾರ್ಟಿ ರೈಲು ಇದೆಯಲ್ಲ!

ಮಂಗಳವಾರ, ಜನವರಿ 14, 2014

ಏನಿಲ್ಲ... ಏನಿಲ್ಲ... ನನ್ನ ನಿನ್ನ ನಡುವೆ ವೆನಿಲ್ಲಾ...

ಒಂದು ಹತ್ತು ವರ್ಷಗಳ ಹಿಂದಿನ ಮಾತು. ನಮ್ಮ ಮಲೆನಾಡಿನಲ್ಲೆಲ್ಲ ವೆನಿಲ್ಲಾ ಮಾಯೆ ಅಮರಿಕೊಂಡಿದ್ದ ಹೊತ್ತು! ಕೆಜಿ ತೂಕದ ವೆನಿಲ್ಲಾ ಕ್ವಿಂಟಲ್ ಅಡಿಕೆಗಿಂತ ಜಾಸ್ತಿ ತೂಗುತ್ತಿದ್ದ ಕಾಲ. "ಇಂಥವರ ಮನೆಯಲ್ಲಿ ಇಂತಿಷ್ಟು ಕ್ವಿಂಟಲ್ ಅಡಿಕೆ ಆಗ್ತಡ" ಎಂಬ ಮಾತಿಗಿಂತ "ಇಂಥವರ ಮನೆಯಲ್ಲಿ ಇಷ್ಟು ಕೆಜಿ ವೆನಿಲ್ಲಾ ಆಗ್ತಡ" ಎಂಬುದಕ್ಕೆ ಹೆಚ್ಚು ತೂಕ ಇತ್ತು.
ಈ ವೆನಿಲ್ಲಾ ಹೆಂಗೆಂಗೋ ಇದ್ದವರನ್ನೆಲ್ಲ ಏನೇನೋ ಮಾಡಿಸಿತು. ತುಂಡು ಭೂಮಿ ಇಟ್ಟುಕೊಂಡು 'ಉಂಡರೆ ಉಡಲಿಲ್ಲ, ಉಟ್ಟರೆ ಉಣ್ಣಲಿಲ್ಲ' ಎಂದು ಬದುಕುತ್ತಿದ್ದವರೆಲ್ಲ ವೆನಿಲ್ಲಾ ದೇವಿಯ ಕೃಪೆಯಿಂದ ರಾಜರಾಗಿಹೋದರು. ವೆನಿಲ್ಲಾ ಸೋಡಿಗೆಯಂತೂ (ಬೀನ್, ಕೋಡು) ಸೈ, ಅದರ ಬುಡದ ದಂಟು ಕೂಡ ಮಂತ್ರ ದಂಡವಾಗಿ ಝಣ ಝಣ ಹಣ ಉದುರಿಸುತ್ತಿದ್ದ ಕಾಲ ಅದು. ಹೊಸದಾಗಿ ಬೆಳೆ ಬೆಳೆಯುವವರಿಗೆ ಕೂಳೆ ಮಾರಿಕೊಂಡೇ ಎಷ್ಟೋ ಜನ ಚೆನ್ನಾಗಿ ದುಡ್ಡು ಮಾಡಿದರು. ಅಂಗಳ-ಹಿತ್ತಲುಗಳಲ್ಲಿ, ಬೆಟ್ಟ, ಧರೆಗಳ ಮೇಲೆ... ಎಲ್ಲೆಲ್ಲೂ ಗಿಡದ ಗೂಟ, ಕಲ್ಲು ಕಂಬ ಎದ್ದು, ವೆನಿಲ್ಲಾ ಬಳ್ಳಿಯನ್ನು ಹೊದ್ದವು. ಹಿಂದೆ ಕಾಳುಮೆಣಸಿನ ಬಳ್ಳಿ ಸುತ್ತಿದ್ದ ಅಡಿಕೆ ಮರಗಳಿಗೆಲ್ಲ ಹೊಸದಾಗಿ ವೆನಿಲ್ಲಾ ಬಳ್ಳಿಯಪ್ಪುಗೆ.
ಮಧ್ಯ ಅಮೇರಿಕಾ ದೇಶಗಳಲ್ಲಿ, ಮೂಲತಃ ಇಂದಿನ ಮೆಕ್ಸಿಕೋದಲ್ಲಿ ಮೊದಲು ಬಳಕೆಯಾದ ವೆನಿಲ್ಲಾ ಒಂದು ತರಹದ ಸೀತಾಳೆ (ಆರ್ಕಿಡ್) ಸಸ್ಯ. ಇದರ ಸೋಡಿಗೆ ಆಹಾರದಲ್ಲಿ ಬಳಕೆಯಾಗುವ ಪರಿಮಳದ ಮೂಲ. ಇದು ಸೋಡಿಗೆ ಎಂದು ಕರೆಸಿಕೊಂಡರೂ ವಾಸ್ತವದಲ್ಲಿ ದ್ವಿದಳ ಸಸ್ಯಗಳ ಸೋಡಿಗೆಗಿಂತ ಭಿನ್ನ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಡೋನೇಶಿಯಾ, ಮಡಗಾಸ್ಕರ್, ಚೀನಾ, ಮೆಕ್ಸಿಕೋ ಅತಿ ಹೆಚ್ಚು ವೆನಿಲ್ಲಾ ಉತ್ಪಾದಿಸುವ, ರಫ್ತು ಮಾಡುವ ದೇಶಗಳು. ಭಾರತದಲ್ಲಿ ಮೊದಮೊದಲು ಕೇರಳ, ದಕ್ಷಿಣ ಕನ್ನಡದ ಕೆಲ ಭಾಗಗಳಲ್ಲಿ, ತೀರ್ಥಹಳ್ಳಿಯ ಪುರುಷೋತ್ತಮ ರಾಮ್ ಅವರಂಥದ ಪ್ರಗತಿಪರ ಕೃಷಿಕರ ತೋಟದಲ್ಲಿ ಬೆಳೆಯುತ್ತಿದ್ದ ವೆನಿಲ್ಲಾ ೧೯೯೫ರ ಇಸ್ವಿಯ ಆಸುಪಾಸು ಬೆಲೆ ಮುಗಿಲು ಮುಟ್ಟುತ್ತಿದ್ದಂತೆಯೇ ಪಶ್ಚಿಮ ಘಟ್ಟ ಪ್ರದೇಶಗಳ ತೋಟದೊಳಗೆಲ್ಲಾ ಪ್ರವೇಶ ಮಾಡಿತು, ನಮ್ಮ ಉತ್ತರ ಕನ್ನಡಕ್ಕೂ ಬಂತು.
ನೆಟ್ಟ ದುಡ್ಡಿನ ಬಳ್ಳಿ ಬೇರೂರುತ್ತಿದ್ದಂತೆಯೇ ಜನರ ದಿನಚರಿಯೂ ಬದಲಾಯಿತು. ಬೆಳ್ಳಂಬೆಳಿಗ್ಗೆ ಮೊದಲು ಆಸ್ರಿಗೆ ಕುಡಿದು, ಕೈಯಲ್ಲಿ ಒಂದು ಕತ್ತಿ ಹಿಡಿದು ಅಡಿಕೆ ತೋಟಕ್ಕೆ ತೆರಳುತ್ತಿದ್ದ ತೋಟಿಗರೆಲ್ಲ ಎಲ್ಲಾ ಕೆಲಸ ಬಿಟ್ಟು, 'ಥೋ, ಸೂರ್ಯನ ಬೆಳಕು ಬೀಳದ್ರೊಳಗೆ ಪಾಲಿನೇಷನ್ ಮಾಡವು' ಎನ್ನುತ್ತ ವೆನಿಲ್ಲಾ ಚಪ್ಪರಗಳಿಗೆ ದೌಡಾಯಿಸತೊಡಗಿದರು. (ಇದಕ್ಕೆ ಕೃತಕ ಪರಾಗ ಸ್ಪರ್ಷ ಬೇಕು). ಮುರುಗಲು, ಉಪ್ಪಾಗೆ ಸಿಪ್ಪೆಗಳನ್ನು ಹೊಡತಲ (ಅಗ್ಗಿಷ್ಟಿಕೆ) ಹೊಗೆಯಲ್ಲಿ, ಕಾಳುಮೆಣಸು, ಏಲಕ್ಕಿಗಳನ್ನು ಬಿಸಿಲಿನಲ್ಲೋ ಕೆಂಡದ ಕಾವಿನಲ್ಲೋ ಒಣಗಿಸುತ್ತಿದ್ದ ಜನ ವೆನಿಲ್ಲಾಗಾಗಿ ವಿಶೇಷ ಡ್ರೈಯರ್ ಕಟ್ಟಿದರು. ಮಾಮೂಲಿಯಾಗಿ ಏಲಕ್ಕಿ, ವಿಶೇಷ ಸಂದರ್ಭದಲ್ಲಿ ಕೇಸರಿಯ ದೋಸ್ತಿ ಮಾಣುತ್ತಿದ್ದ ಪಾಯಸ, ಲಾಡು, ಪೇಡೆಗಳು ಬದಲಾದ ಕಾಲಕ್ಕೆ ತಕ್ಕಂತೆ 'ವೆನಿಲ್ಲಾ' ಎಂಬ ಕಪ್ಪು ಸುಂದರಿಯ ಸಖ್ಯ ಶುರು ಮಾಡಿಕೊಂಡವು.
ಮಾತುಕತೆಗೆ ಕುಂತಾಗ 'ಯಮ್ಮಲ್ಲಿ ಇಂತಿಷ್ಟು ಕೆಜಿ ವೆನಿಲ್ಲಾ ಆಗ್ತು' ಎಂಬ ಹೆಗ್ಗಳಿಗೆಯ ಹೇಳಿಕೆಗಳು, 'ಅವರ್ ಮನೆಲ್ಲಿ ಈ ಸಲ ಭಾರಿ ವೆನಿಲ್ಲಾ ಆಜಪ್ಪಾ' ಎಂಬ ಅರೆ ಅಸೂಯೆಯ, ಚೂರು ಮೆಚ್ಚುಗೆಯ ಮಾತುಗಳು ಕುಶಲೋಪರಿ ವಿಚಾರಣೆಯಷ್ಟೇ ಸಾಮಾನ್ಯವಾದವು. ಕೆಲವೆಡೆ ಒಟ್ಟು ಕುಟುಂಬದಲ್ಲಿ ಮನೆಯ ಮೂಲ ಧನ-ಜಾಗ-ಗೊಬ್ಬರ, ಮನೆಯದೇ ಲೆಕ್ಕದಲ್ಲಿ ಆಳು ಪಡೆದ ಜನ, 'ವೆನಿಲ್ಲಾ ಉತ್ಪನ್ನ ಯನ್ನದು!' ಎಂದು ಹೇಳಿ ಪ್ರತ್ಯೇಕ ಖಾತೆಯಲ್ಲಿ ದುಡ್ಡು ಜಮಾಯಿಸತೊಡಗಿದರು. ಮೊದಲೆಲ್ಲ ಮನೆಯ ಎಲ್ಲ ಸದಸ್ಯರಿಗೆ ಒಟ್ಟಾಗಿ ಆಭರಣ ಮಾಡಿಸುತ್ತಿದ್ದ ಕೂಡು ಕುಟುಂಬಗಳಲ್ಲಿ ಈಗ ಇದ್ದಕ್ಕಿದ್ದಂತೆ ಕೆಲವರ ಮೈಮೇಲೆ 'ವೆನಿಲ್ಲಾ ಚಿನ್ನ' ಅರಳಿ ಅಸಹನೆಯ ನಾತ ನಾರಲಾರಂಭಿಸಿತು.
ಎಷ್ಟೋ ಕಡೆ ಮನೆಗೆ ಬರುವ ನೆಂಟರೆಲ್ಲ 'ನಿಮ್ಮನೆ ವೆನಿಲ್ಲಾ ಪ್ಲಾಟ್ ಭಾರಿ ಇದ್ದಡಾ, ನೋಡಕಾತು' ಎಂದು ಕೋರುವುದು, ಆತಿಥೇಯರು ಮನೆ ತೋರಿಸಿದಷ್ಟೇ ಸಲೀಸಾಗಿ 'ಬನ್ನಿ, ಯಮ್ಮನೆ ವೆನಿಲ್ಲಾ ನೋಡಲಕ್ಕು' ಎಂದು ಆಹ್ವಾನಿಸುವುದು ಅತಿಥಿ ಸತ್ಕಾರದ ಭಾಗವಾದವು. ಹಲವೆಡೆ ಹಳೆ ಕಾಲದಿಂದ ಬಂದು ಹೋಗಿ ಮಾಡುತ್ತಿದ್ದ ವಿಶ್ವಾಸದ ಜನರೂ ಎಲ್ಲೋ ಕ್ಷಣಿಕ ಆಸೆಗೆ ಬಿದ್ದು ಗುರ್ತದವರ ಮನೆಯಲ್ಲಿ ಐದೋ, ಆರೋ ಸೋಡಿಗೆ ಕದಿಯಲು ಹೋಗಿ 'ಅಡಿಕೆಗೆ ಹೋಗದ ಮಾನವನ್ನು ವೆನಿಲ್ಲಾದಲ್ಲಿ ಕಳಕೊಂಡರು'. ಇಂಥ ಪ್ರಕರಣಗಳು ಪದೇ ಪದೇ ವರದಿ ಆಗತೊಡಗಿದಂತೆ ಶಿರಸಿ, ಸಿದ್ದಾಪುರಗಳಂಥ ಪೇಟೆಗಳ ಜನರ ಗಮನವೂ ಇತ್ತ ತಿರುಗಿ, ಎಷ್ಟೋ ಮಂದಿ ತಂತಮ್ಮ ಪೇಟೆ ಮನೆಯ ತಾರಸಿ ಮೇಲೆ ವೆನಿಲ್ಲಾ ಚಪ್ಪರ ಬೆಳೆಸಿ ದುಡ್ದು ಕೊಯಿಲು ಮಾಡಿದರು. ಇನ್ನು ಕೆಲವು ಪುಂಡರು ಸಮೀಪದ ಹಳ್ಳಿಗಳಿಗೆ ಸದ್ದಿಲ್ಲದೇ ಹೋಗಿ, ವೆನಿಲ್ಲಾ ಕದ್ದು ಬರುವ ಪರಿಪಾಟ ಮಾಡಿಕೊಂಡರು, ಸಿಕ್ಕಿಬಿದ್ದು ಹೊಡೆತ ತಿಂದರು.
ಮಜವೆಂದರೆ ನಾನು ಗಮನಿಸಿದ ಪ್ರಕಾರ ನನ್ನ ಮದುವೆಯಲ್ಲಿ ದಿಬ್ಬಣದವರು ಮದುಮಗಳಿಗಿಂತ ಹೆಚ್ಚು ಆಸಕ್ತಿಯಿಂದ ನೋಡಿದ್ದು ನಮ್ಮನೆಯಲ್ಲಿ ಬೆಳೆದ ವೆನಿಲ್ಲಾ ಬಳ್ಳಿಗಳನ್ನು! ಕರಿ (ಮದುವೆ) 'ಕೂಸಿ'ಗಿಂತ ಕರಿ ಸೋಡಿಗೆಯ ನೋಟವೇ ಸೊಗಸು ಎಂಬ ತೀರ್ಮಾನಕ್ಕೆ ಬಂದಿದ್ದರೋ ಅಥವಾ ಮದುವೆ ಚಪ್ಪರದ ಸ್ವೇದ ಗಂಧಕ್ಕಿಂತ, ಸೀತಾಳೆ (ವೆನಿಲ್ಲಾ) ಚಪ್ಪರದಡಿಯ ಸಿಹಿ ವಾಸನೆಯೇ ಆಪ್ಯಾಯಮಾನಮಾನವಾಗಿತ್ತೋ, ನಾನು ಕೇಳುವ ಸಾಹಸ ಮಾಡಲಿಲ್ಲ. ಆದರೆ ಹೊಸದಾಗಿ ಹೋದ ಗಂಡನ ಮನೆಯಲ್ಲಿ ನಾಲ್ಕು ಜನ ಕೂತು 'ಬೀಗರ ಮನೆಲ್ಲಿ ಭರ್ಜರಿ ವೆನಿಲ್ಲಾ ಪ್ಲಾಟ್ ಮಾಡಿದ್ದ' ಎನ್ನುವುದನ್ನು ಕೇಳಿದಾಗೆಲ್ಲಾ ನನಗೆ ಮದುವೆ ಮನೆಯಲ್ಲಿನ ವೈರುಧ್ಯ ನೆನಪಾಗಿ ನಗು ಬರುತ್ತಿದ್ದುದು ಸುಳ್ಳಲ್ಲ.
ಇಂತಿಪ್ಪ ವೆನಿಲ್ಲಾ ಮುಗಿಲೇರಿ ಕುಂತಿದ್ದು, ಮೆರೆದಿದ್ದು ಒಂದು ನಾಲ್ಕು ವರ್ಷ ಮಾತ್ರ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ವೆನಿಲ್ಲಾಕ್ಕೆ ಬೆಲೆ ಏರಿದಷ್ಟೇ ಸುಲಭವಾಗಿ ಕುಸಿದೂ ಹೋಯಿತು. ಲಾಭದ ಆಸೆಗೆ ಬಿದ್ದ ಒಂದಷ್ಟು ಜನ ಸರಿಯಾಗಿ ಸೋಡಿಗೆಯ ವರ್ಗ ವಿಂಗಡನೆ ಮಾಡದೆ ಮಾರುಕಟ್ಟೆಗೆ ಬಿಟ್ಟಿದ್ದು, ಕಲಬೆರಕೆ ಮಾಡಿದ್ದು... ಒಳ್ಳೆಯ ರೈತರ ಸಂಪಾದನೆಗೂ ಮಣ್ಣು ಹಾಕಿತು. ಮುಚ್ಚಟೆಯಿಂದ ಬೆಳೆದು, ಸಂಸ್ಕರಿಸಿ ಇಟ್ಟಿದ್ದ ಕಟ್ಟು ಕಟ್ಟು ವೆನಿಲ್ಲಾ ಕೊಳ್ಳುವವರಿಲ್ಲದೇ ಮುಗ್ಗತೊಡಗಿದಾಗ ಬೆಳೆಗಾರರು ಕಂಗೆಟ್ಟರು. ಹೊಸತಾಗಿ ಚಾಲ್ತಿಗೆ ಬಂದಿದ್ದ ಬೆಳೆಯಾಗಿದ್ದರಿಂದ ಅದರ ಪರ್ಯಾಯ ಬಳಕೆಯಾಗಲಿ, ಮಾರುಕಟ್ಟೆ ತಂತ್ರವಾಗಲೇ ಬಹುತೇಕರಿಗೆ ತಿಳಿದಿರಲಿಲ್ಲ. ವೆನಿಲ್ಲಾ ಅಬ್ಬರದಲ್ಲಿ ತೋಟದಲ್ಲಿ ತಲೆಮಾರಿನಿಂದ ಬೆಳೆದುಕೊಂಡು ಬಂದಿದ್ದ ಏಲಕ್ಕಿ, ಕಾಳುಮೆಣಸಿಂಥ ಉಪಬೆಳೆಗಳನ್ನು ಮರೆತಿದ್ದ ಜನ ನಿಧಾನವಾಗಿಯಾದರೂ ಎಚ್ಚೆತ್ತು ಮತ್ತೆ ಅವುಗಳ ಬುಡಕ್ಕೆ ಮಣ್ಣು, ಗೊಬ್ಬರ ಹೊರಲಾರಂಭಿಸಿದರು. ಏಲಕ್ಕಿ ಪಾಯಸಕ್ಕೆ ಮರಳಿದ್ದಷ್ಟೇ ಅಲ್ಲ, ಹೊಸದಾಗಿ ಡ್ರೈಯರಿನಲ್ಲೂ ಜಾಗ ಪಡೆದುಕೊಂಡಿತು.

ಮೊನ್ನೆ ಜೂನಿನಲ್ಲಿ, ತುಂಬಾ ಸಮಯದ ನಂತರ ಊರಿಗೆ ಹೋದಾಗ ಅಲ್ಲಿ ಇಲ್ಲಿ ತೋಟ ಸುತ್ತಾಡುತ್ತಿದ್ದೆ. ಅಡಿಕೆ ಮರಗಳಿಗೆ ಸುತ್ತಿದ್ದ ಕಾಳು ಮೆಣಸಿನ ಬಳ್ಳಿಗಳ ಮಧ್ಯೆ ಸ್ಯಾಂಪಲ್ಲಿಗೆ ಕೂಡ ಒಂದು ವೆನಿಲ್ಲಾ ಬಳ್ಳಿ ಕಾಣದು. ಕೆಲವೆಡೆ ಹಿಂದೆ ಚಪ್ಪರ ಇದ್ದ ಜಾಗದಲ್ಲಿ ಬೋಳು ಬೋಳು ಕಲ್ಲು ಕಂಬಗಳ, ಗೂಟಗಳ ಸಾಲು ಇಂದೋ ನಾಳೆಯೋ ಬುಡಮೇಲಾಗುವುದಕ್ಕೆ ಕಾಯುತ್ತ ನಿಂತಿದ್ದರೆ, ಇನ್ನು ಹಲವೆಡೆ ಆಗಲೇ ಎರಡಡಿ ಎತ್ತರದ ಅಡಿಕೆ ಸಸಿಯ ಸಾಲುಗಳು ಎದ್ದಿವೆ. ಕೆಲವೊಂದು ಕಡೆ ಮಾತ್ರ ವೆನಿಲ್ಲಾ ಬುಡ ಕಿತ್ತ ನಂತರದ ಕುಣಿ ಹಾಗೆಯೇ ಬಾಯ್ತೆರೆದು ನಿಂತಿದೆ, 'ವೆನಿಲ್ಲಾ ದುಡ್ಡು' ತುಂಬು ಸಂಸಾರಗಳಲ್ಲಿ ತೋಡಿದ ಕಂದರದಂತೆಯೇ!

('ಅವಧಿ.ಕಾಮ್'ನಲ್ಲಿ ಡಿಸೆಂಬರ್ ೪, ೨೦೧೩ರಂದು ಪ್ರಕಟವಾದ ಲೇಖನ)

ಸೋಮವಾರ, ಡಿಸೆಂಬರ್ 8, 2008

ಅದೋ ಅಲ್ಲಿ, ಅಲ್ಲಿಗೇಟರ್!!

ಆರು ತಿಂಗಳ ಹಿಂದೆ 'ಫ್ಲೋರಿಡಾಕ್ಕೆ ಹೊರಡುತ್ತಿದ್ದೇವೆ' ಎಂದು ಗೊತ್ತಾಗುತ್ತಿದ್ದಂತೆಯೇ ಸಹಜವಾಗಿ ಜಯರಾಮ ಗೆ ಕೇಳಿದೆ: 'ಹೇಗಿದೆಯಂತೆ ಅದು?' ಮೂರು ಶಬ್ದಗಳಲ್ಲಿ ಉತ್ತರ ಬಂತು- 'ಸೆಖೆ, ಬೀಚು, ಅಲ್ಲಿಗೇಟರ್ಸ್'. 'ಮೊಸಳೆ- ಅಷ್ಟೊಂದಿದೆಯೆ' ತತ್ಕ್ಷಣಕ್ಕೆ ಕುತೂಹಲ ಮೂಡಿತ್ತು ನನಗೆ.
ಟಾಂಪಾ ವಿಮಾನ ನಿಲ್ದಾಣದಿಂದ ಹೊರಬೀಳುತ್ತಿದ್ದಂತೆಯೇ ಸೆಖೆಯ ಅಂದಾಜು ಹತ್ತಿತು ನನಗೆ. ಬಂದ ಒಂದೆರಡು ದಿನದಲ್ಲೇ ಬೀಚ್ ಕೂಡ ಸುತ್ತಾಡಿ ಬಂದೆವು. ನಾನು ಈವರೆಗೆ ನೋಡಿದ್ದಕ್ಕಿಂತ ಅತ್ಯಂತ ಸ್ವಚ್ಛ ನೀರು, ಸುಂದರ-ನಯವಾದ ಮರಳು ಅಲ್ಲಿತ್ತು. ಹೇಳಿ ಕೇಳಿ 'ಕ್ಲೀಯರ್ ವಾಟರ್' ಎಂದು ಹೆಸರು ಆ ಸಾಗರದಂಚಿಗೆ. ಮಕರ ದರ್ಶನ ಮಾತ್ರ ಬಾಕಿ ಉಳಿದಿತ್ತು.
ಒಂದಿನ ನಾವು ಮತ್ತು ಜಯರಾಮ್ ಸಹೋದ್ಯೋಗಿ ದಂಪತಿ ಕಾರ್ ಖರೀದಿಗೆಂದು ಒಂದೆಡೆ ಹೋದೆವು. ಮಾರುತ್ತಿದ್ದ ವ್ಯಕ್ತಿ ಕೆರೆಯಂಚಿನ ಗೃಹ ಸಮುಚ್ಚಯವೊಂದರಲ್ಲಿ ವಾಸವಿದ್ದ. ಕಾರ್ ನೋಡಿ ಜಯರಾಮ್ ಮತ್ತು ಸಹೋದ್ಯೋಗಿ ಪರೀಕ್ಷಾರ್ಥ ಚಾಲನೆಗೆ ತೆರಳಿದರು. ಅವರ ಪತ್ನಿ ಮತ್ತು ನಾನು ಕಾರ್ ಮಾಲೀಕನೊಂದಿಗೆ ಮಾತಿಗಿಳಿದೆವು. ಮಾಮೂಲಿನಂತೆ ಹವಾಮಾನ, ಬೀಚ್ ಅದು ಇದು ಮಾತು ಮುಗಿಸಿ, 'ಇಲ್ಲಿ ಸಿಕ್ಕಾಪಟ್ಟೆ ಅಲ್ಲಿಗೇಟರ್ಸ್ ಇವೆಯಂತೆ ಹೌದಾ' ಎಂದೆವು. 'ಹಾಂ, ನಿನ್ನೆ ಬೆಳಿಗ್ಗೆ ಇಲ್ಲೇ ಒಂದು ಬಂದಿತ್ತು' ಎಂದು ಅಂವ ನಮ್ಮಿಬ್ಬರ ಕಾಲಡಿಗೆ ಇದ್ದ ಮಳೆ ನೀರಿನ ಕಾಲುವೆಯತ್ತ ಕೈ ತೋರಿಸಿದ. ಕಾಲುವೆಗೆ ಮುಚ್ಚಿದ್ದ ತೂತು ತೂತಿನ ಮುಚ್ಚಳದಿಂದ ಗರಗಸದ ದಂತಪಂಕ್ತಿ ತೂರಿದಂತಾಗಿ ಬೆಚ್ಚಿ ನಾವಿಬ್ಬರು ನಾಲ್ಕಡಿ ದೂರ ಜಿಗಿದೆವು.
ಅದೇ ವೇಳೆ ಬಾಡಿಗೆ ಮನೆಯನ್ನೂ ಹುಡುಕುತ್ತಿದ್ದೆವು. ಸರಿ, ಅಪಾರ್ಟಮೆಂಟ್ ಒಂದನ್ನು ನೋಡಿ, ಬಾಡಿಗೆ ಒಪ್ಪಂದ ಮಾಡಿಕೊಳ್ಳಲೆಂದು ಅದೇ ದಂಪತಿ ಜೊತೆ ಆ ಗೃಹ ಸಮುಚ್ಚಯದ ಕಚೇರಿಗೆ ಬಂದೆವು. ಕಣ್ಣಳತೆಯಲ್ಲೇ ಮೂರ್ನಾಲ್ಕು ಕೆರೆಗಳು, ಅಡ್ಡಾದಿಡ್ಡಿ ಹುಲ್ಲು ತುಂಬಿದ ನೆಲ, ಮೈತುಂಬ ಶಿಲಾವಲ್ಕದ ಮಾಲೆ ಜೋತಾಡಿಸಿಕೊಂಡ ಮರಗಳು... ವಾತಾವರಣ ವಿಚಿತ್ರವೆನಿಸಿತು ನಮಗೆ. 'ಇಲ್ಲಿ ಸಿಕ್ಕಾಪಟ್ಟೆ ಓತಿಕ್ಯಾತ ಇದ್ದಂಗಿದೆ' ಎಂದೆವು ಅಪಾರ್ಟಮೆಂಟ್ ಆಡಳಿತಾಧಿಕಾರಿಗೆ. 'ಹಾಂ, ಓತಿಕ್ಯಾತ, ಅಳಿಲು, ಅಲ್ಲಿಗೇಟರ್ಸ್ ಎಲ್ಲಾ ಇಲ್ಲಿ ಬೇಕಾದಷ್ಟಿವೆ' ಆರಾಮವಾಗಿ ಹೇಳಿದರಾಕೆ. ಓತಿಯನ್ನು ನೋಡೇ ಹೆದರಿಕೊಂಡಿದ್ದ ಜಯರಾಮ್ ಸಹೋದ್ಯೋಗಿಯ ಪತ್ನಿ ಕಂಗಾಲು.
ಹೊಸ ಮನೆಗೆ ಬಂದುಳಿದ ಮಾರನೇ ದಿನವೇ ಮೊಸಳೆ ವೀಕ್ಷಣೆಗೆ ಹೊರಟೆ ಮಗನೊಂದಿಗೆ. ಕೆರೆಯ ಸಮೀಪ ಹೋಗಿ ನಿಂತುಕೊಂಡು ಉದ್ದಕ್ಕೂ ಕಣ್ಣು ಹಾಯಿಸುತ್ತದ್ದಂತೆಯೇ ಕಾಲ ಬುಡದಲ್ಲೇ ಏನೋ ಪುಳಕ್ಕೆಂದು ನೀರೊಳಕ್ಕೆ ನುಗ್ಗಿದಂತಾಯಿತು. ಬೆದರಿ ಹಿಂದೆ ಸರಿದು ನೋಡಿದರೆ... ಅಯ್ಯೋ, ದಂಡೆಯಲ್ಲಿ ಮೈಚಾಚಿದ್ದ ಆಮೆಯೊಂದು ಉಲ್ಟಾ ನನ್ನನ್ನು ಕಂಡು ಹೆದರಿ ನೀರಿಗೆ ಜಿಗಿದಿತ್ತಷ್ಟೇ. 'ಸಧ್ಯ' ಎಂದು ಉಸಿರು ಎಳೆದುಕೊಳ್ಳುತ್ತ ದೃಷ್ಟಿ ಚಾಚುತ್ತಿದ್ದಂತೆಯೇ, 'ಅರೇ'- ಈ ಬಾರಿ ನಿಜಕ್ಕೂ 'ಅಲ್ಲಿಗೇಟರ್!' ಹತ್ತು ಮೀಟರ್ ದೂರದಲ್ಲಿ ಆರಾಮವಾಗಿ ನೀರೊಳಗೆ ಮೈ ಹರವಿಕೊಂಡು, ಮೂತಿಯನ್ನಷ್ಟೇ ತೇಲಿ ಬಿಟ್ಟು ನಿಶ್ಚಲವಾಗಿತ್ತು ಮೊಸಳೆ. ಅತ್ಯುತ್ಸಾಹದಿಂದ 'ಅದೇ, ಅಲ್ನೋಡು ಅಲ್ಲಿಗೇಟರ್' ಎಂದು ಮಗನಿಗೆ ತೋರಿಸಿದೆ. ಮರದ ತೊಗಟೆಯ ತುಂಡಿನಂತೆ ಕಾಣುತ್ತಿದ್ದ ಅದನ್ನು ಮೊಸಳೆ ಎಂದು ಗುರುತಿಸಲು ಮಗನಿಗೆ ಸ್ವಲ್ಪ ಕಷ್ಟವಾಯ್ತೇನೋ. 'ಅದು ಅಲ್ಲಿಗೇಟರ್ರಾ'- ಎಂದ ಅಪನಂಬಿಕೆಯಿಂದ. ಅಷ್ಟೊತ್ತಿಗೆ ನಮ್ಮ ಮಾತಿನಿಂದ ಮೊಸಳೆ ಅಪಾಯವನ್ನು ಗ್ರಹಿಸಿತೇನೋ. ಅದೂ ಪುಳಕ್ಕನೇ ಮರೆಯಾಯಿತು. ಎಲ್ಲಿ ಹೋಯಿತು ಎಂದು ಆಚೀಚೆ ನೋಡುವಷ್ಟರಲ್ಲಿ, ಒಂದು ಸೆಕೆಂಡ್ ಅಂತರದಲ್ಲಿ ಹದಿನೈದು ಮೀಟರ್ ಆಚೆ ಮತ್ತೆ ಪ್ರತ್ಯಕ್ಷವಾಯಿತು.
ಮೊಲ, ನರಿ, ಜಿಂಕೆ, ಹಂದಿ, ಹೆಬ್ಬಾವು ಇಂಥ ಅನೇಕ ಪ್ರಾಣಿಗಳನ್ನು ಭಾರತದಲ್ಲಿ ನಾನು ಹುಟ್ಟಿ ಬೆಳೆದ ಪರಿಸರದಲ್ಲಿ, ಮನೆಯ ಆಸುಪಾಸಿನಲ್ಲೇ ಸಾಕಷ್ಟು ಕಂಡಿದ್ದೆನಾದರೂ ಮೊಸಳೆಯನ್ನು ಎಂದೂ ಕಂಡಿರಲಿಲ್ಲ. ಹಾಗಾಗಿ ಆ ದಿನ ನನಗಾದ ನನಗಾದ ಪುಳಕ ಅಷ್ಟಿಷ್ಟಲ್ಲ. ಆಮೇಲಾಮೇಲೆ ಗೃಹ ಸಮುಚ್ಚಯ ಆವರಣದ ಯಾವುದೇ ಕೆರೆಯ ಬಳಿ ಹೋದರೂ ಆಗೀಗ ಮೊಸಳೆ ಕಾಣಿಸಲಾರಂಭಿಸಿದ ಮೇಲೆ ನನ್ನ ಉತ್ಸಾಹ ಒಂದು ಹದಕ್ಕೆ ಬಂತು. ಶಬರಿಮಲೆಯಲ್ಲಿ ಮಧ್ಯರಾತ್ರಿಯ ಕಾವಳದಲ್ಲಿ ಕಾದು ಜನ 'ಮಕರ ಜ್ಯೋತಿ'ಯ ದರ್ಶನ ಮಾಡುತ್ತಾರಂತೆ. ಇಲ್ಲಿ ಹಾಡು ಹಗಲೇ ಸೂರ್ಯನ ಜ್ಯೋತಿಯಲ್ಲಿ 'ಮಕರ ದರ್ಶನ' ಲಭ್ಯ.
ಈ ಕಡೆ ರಸ್ತೆಯಂಚಿನಲ್ಲಿ, ಕಾಡಿನಂಚಿನಲ್ಲಿ ಇರುವ ಪುಟ್ಟ ಪುಟ್ಟ ಕೆರೆಗಳಲ್ಲೂ ಮೊಸಳೆಗಳು ಇರುತ್ತವಂತೆ. ಇತ್ತೀಚೆಗೆ ಕೇಪ್ ಕೆನಾವರಲ್ಗೆ ಹೋದಾಗ ನಾಸಾ ಪ್ರವಾಸಿ ಕೇಂದ್ರವನ್ನು ತಲುಪುವ ದಾರಿಯ ಇಕ್ಕೆಲಗಳಲ್ಲಿ ಇದ್ದ ನಾಲೆಗಳಲ್ಲಿ ಹೆಚ್ಚೆಂದರೆ ಒಂದು ವಾರದ ಹಿಂದೆ ಹುಟ್ಟಿರಬಹುದಾದಷ್ಟು ಎಳೆಯ, ಅರ್ಧ ಅಡಿ ಉದ್ದದ ಮೊಸಳೆಯಿಂದ ಹಿಡಿದು ಐದು-ಐದೂವರೆ ಅಡಿ ಉದ್ದದ ಪ್ರೌಢ ಮೊಸಳೆಗಳವರೆಗೆ ಎಲ್ಲಾ ಸೈಜಿನ ಮಕರ ದರ್ಶನವಾಗಿತ್ತು. ಇಲ್ಲಿನ ಕೆರೆ, ಕಾಲುವೆಗಳ ಅಂಚಿನಲ್ಲಿ 'ಮೊಸಳೆಗಳನ್ನು ಹಿಂಸಿಸಬೇಡಿ, ಆಹಾರ ಹಾಕಬೇಡಿ' (ಆಹಾರವಾಗಲೂಬೇಡಿ) ಎಂಬ ಎಚ್ಚರಿಕೆ ಸಾಮಾನ್ಯ.
ಇಲ್ಲಿನ ಮೊಸಳೆಗಳು (ಅಲ್ಲಿಗೇಟರ್ ಮಿಸ್ಸಿಸ್ಸಿಪ್ಪಿನ್ಸಿಸ್) ಭಾರತದಲ್ಲಿ ಸಾಮಾನ್ಯವಾಗಿ ಕಂಡು ಬರುವ 'ಮಗರ್' (ಕ್ರೊಕೊಡೈಲಸ್ ಪ್ಯಾಲಸ್ಟ್ರೈಸ್) ಜಾತಿಯ ಮೊಸಳೆಗಳಿಗಿಂತ ವಿಭಿನ್ನ. ಇವಕ್ಕೆ ಆಂಗ್ಲ ಭಾಷೆಯ 'ಯು' ಆಕಾರದ ಅಗಲ ಮೂತಿಯಿದ್ದರೆ ಅವರದ್ದು 'ವಿ' ಆಕಾರದ ಮೂತಿ. ಇವುಗಳ ಕೆಳದವಡೆಯ ಹಲ್ಲು ಮೇಲ್ದವಡೆಯಲ್ಲಿ ಮುಚ್ಚಿಕೊಂಡಿದ್ದರೆ, ಮಗರ್ ಗಳ ಕೆಳದವಡೆಯ ನಾಲ್ಕನೇ ಹಲ್ಲು ಹೊರಗೆ, ಮೇಲ್ಚಾಚಿಕೊಂಡಿರುತ್ತದೆ. ಸಿಹಿ ನೀರಿನಲ್ಲಷ್ಟೇ ವಾಸಿಸುವ ಇವು 'ಅಲ್ಲಿಗೇಟರ್'ಗಳು, ಸಿಹಿ ನೀರಿನ ಜೊತೆ ಉಪ್ಪು-ಸಿಹಿ ಮಿಶ್ರಿತ ನೀರಿನಲ್ಲೂ ವಾಸಿಸುವ ಅವು 'ಕ್ರೊಕೊಡೈಲ್'ಗಳು. ಭಾರತದ ಗಂಗಾ ನದಿ, ಮಹಾನದಿ-ಚಂಬಲ್ ನದಿ ಕಣಿವೆ ಪ್ರದೇಶದಲ್ಲಿ 'ಘರಿಯಲ್' (ಗವಿಯಾಲಿಸ್ ಗ್ಯಾಂಜೆಟಿಕಸ್) ಎಂಬ ಸಪೂರ, ಚಾಚು ಮೂತಿಯ ಮತ್ತೊಂದು ಜಾತಿಯ ಮೊಸಳೆಗಳೂ ಇವೆ. ಅವುಗಳ ಮೂತಿಯ ಆಕಾರದಿಂದಾಗಿ ಅವು ಮೀನುಗಳನ್ನಷ್ಟೇ ಹಿಡಿದು ತಿನ್ನಬಹುದಲ್ಲದೇ ದೊಡ್ಡ ಪ್ರಾಣಿಗಳನ್ನು ತಿನ್ನಲು ಸಾಧ್ಯವಿಲ್ಲ. ಅಂಡಮಾನ್ ದ್ವೀಪ ಸಮೂಹದಲ್ಲಿ, ಸುಂದರ ಬನದಂತಹ ಕೆಲವು ನದಿ ಮುಖಜಭೂಮಿಯಲ್ಲಿ ಉಪ್ಪುನೀರಿನಲ್ಲಿ ವಾಸಿಸುವ ಮೊಸಳೆಗಳೂ (ಕ್ರೊಕೊಡೈಲಸ್ ಪೊರೊಸಸ್) ಇವೆ.
ಬಾಳೇಸರದ ನಮ್ಮ ಮನೆಯ ಬಳಿ ಅಘನಾಶಿನಿ ನದಿಯಲ್ಲಿ 'ಮಕರ ಕಟ್ಟು' ಎಂಬ ಜಾಗವೊಂದಿದೆ. ಹಿಂದೆ ಅಲ್ಲಿ ಹರಿವ ಹೊಳೆನೀರಿಗೆ ಕಟ್ಟ ಕಟ್ಟುವಷ್ಟು ಸಂಖ್ಯೆಯಲ್ಲಿ ಮೊಸಳೆಗಳಿದ್ದವಂತೆ. ನಾನು ಬಾಲ್ಯ ಕಳೆದ ಹನುಮಾಪುರದ ಬಳಿ ಹೆಸರೇ ಇಲ್ಲದ ಹಳ್ಳವೊಂದಿದೆ. ಮಳೆಗಾಲದಲ್ಲಿ ಮಾತ್ರ ನೀರು ತುಂಬಿ ಹರಿಯುವ, ಬೇಸಿಗೆಯಲ್ಲಿ ಬತ್ತಿ ಹೋಗುವ ಆ ಹಳ್ಳದಲ್ಲಿ ವರ್ಷಪೂರ್ತಿ ನೀರಿರುವ ಏಕೈಕ ಜಾಗವೆಂದರೆ 'ಮೊಸಳೆ ಗುಂಡಿ'. ವಿಷಾದವೆಂದರೆ ಆ ಎರಡೂ ತಾಣಗಳಲ್ಲಿ ಹೆಸರಿಗೆ ಮರ್ಯಾದೆ ಕೊಡಲಾದರೂ ಒಂದು ಮೊಸಳೆ ಉಳಿದಿಲ್ಲ. 'ಛೇ, ನೈಸರ್ಗಿಕ ತಾಣದಲ್ಲಿ ಮೊಸಳೆಯನ್ನು ನೋಡೋ ಅವಕಾಶವೇ ಇಲ್ಲವಲ್ಲ ನನಗೆ' ಎಂದು ಹಲವು ಬಾರಿ ಹಳಹಳಿಸಿದ್ದೆ. ಫ್ಲೋರಿಡಾ ವಾಸ ಆ ಹಳಹಳಿಕೆಯನ್ನು ಅಳಿಸಿಬಿಟ್ಟಿತು.