ಗುರುವಾರ, ಜನವರಿ 22, 2009

ಅರೆರೆ.... ಚಿಗರೆ!!

ಅಡವಿ, ವನ್ಯಪ್ರಾಣಿಗಳು ಎಂದಾಕ್ಷಣ ನನ್ನ ಕಣ್ಣೆದುರು ಮೂಡುತ್ತಿದ್ದ ಆಕಾರಗಳು ಎರಡು: ಒಂದು ಹುಲಿ, ಇನ್ನೊಂದು ಜಿಂಕೆ (ನಮ್ಮೂರಿನ ಭಾಷೆಯಲ್ಲಿ ಚಿಗರೆ).
ಈ ಪೈಕಿ ಮೊದಲನೆಯದು ಕಾಡಿನ ವಿಚಾರವಾಗಿ ಎದೆಯಾಳದಲ್ಲೊಂದು ಮರಗಟ್ಟಿಸುವ ಭಯವನ್ನು ಹುದುಗಿಸಿಟ್ಟಿದ್ದರೆ, ಎರಡನೆಯದು ಬೆಚ್ಚನೆಯ ಆಕರ್ಷಣೆಯನ್ನು ಚೌಕಟ್ಟು ಕಟ್ಟಿ ಕೂಡ್ರಿಸಿತ್ತು. ಅದರ ಮಿರಿಮಿರಿ ಮಿಂಚುವ ಚಂದದ ಚುಕ್ಕೆಭರಿತ ಚರ್ಮ, ಕವಲು ಕವಲಾದ ಕೋಡುಗಳು, ಪಿಳಿ ಪಿಳಿ ಕಣ್ಣುಗಳು, ಛಂಗನೇ ನೆಗೆದು ಓಡುವ ಪರಿ... ಅದರ ಬಗೆಗೊಂದು ಮಧುರವಾದ ಪ್ರೀತಿಯನ್ನು ಹುಟ್ಟು ಹಾಕಿದ್ದವು.
ಮನೆ ಸುತ್ತಲ ಕಾಡಿನಲ್ಲಿ ಹರಿಣಗಳು ಹೇರಳವಾಗಿದ್ದ ಕಾಲ ಅದು. ಚಕ್ಕಡಿ ಗಾಡಿ ಕಟ್ಟಿಕೊಂಡು ಕಾಡಿನೊಳಗೆ ಕಟ್ಟಿಗೆ ಹೇರಲೋ, ಗಳು ತರಲೋ ಹೊರಟಾಗ ಇದ್ದಕ್ಕಿದ್ದಂತೆ ಜಿಂಕೆಗಳ ದರ್ಶನವಾಗುತ್ತಿತ್ತು. ಸಾಮಾನ್ಯವಾಗಿ ಹಿಂಡಿನಲ್ಲೇ ಕಾಣಿಸಿಕೊಳ್ಳುತ್ತಿದ್ದ ಅವು ಆಗಾಗ ನಾಯಿಗಳಿಂದ, ಬೆನ್ನಟ್ಟಿದ ಬೇಟೆಗಾರರಿಂದ ತಪ್ಪಿಸಿಕೊಳ್ಳಲೆಂದು ನಮ್ಮ ಕಂಪೌಂಡ್ನೊಳಗೆ ನುಗ್ಗಿ ಬರುತ್ತಿದ್ದುದುಂಟು. ಇದ್ದಕ್ಕಿದ್ದಂತೆ ಶೂನ್ಯದೊಳಗಿನಿಂದ ಪ್ರತ್ಯಕ್ಷವಾದಂತೆ ಕಂಡ ಜಿಂಕೆಯನ್ನು ನೋಡಿ ನಾವು 'ಅರೆ! ಚಿಗರೆ!! ಇಲ್ ಬಾ, ಅಲ್ನೋಡು' ಎನ್ನುವುದರೊಳಗಾಗಿ ಅವು ಮಾಯವಾಗಿರುತ್ತಿದ್ದವು. ಆದರೂ 'ನಮ್ಮನೆಗೆ ಚಿಗರೆ ಬಂದಿತ್ತು' ಎಂಬುದೊಂದು ಪುಳಕ ವರ್ಷಗಟ್ಟಲೇ ನಮ್ಮಲ್ಲಿ ಉಳಿದಿರುತ್ತಿತ್ತು.
ಶೌಚಾಲಯ ಇಲ್ಲದ ಆ ದಿನಗಳಲ್ಲಿ ತಂಬಿಗೆ ತಗೊಂಡು ಕಾಡಿಗೆ ಹೋದಾಗ ಎಷ್ಟೋ ಬಾರಿ ಜಿಂಕೆಗಳು ಕಾಣುತ್ತಿದ್ದುದುಂಟು. ಮನೇಲಿ ಯಾರಾದ್ರೂ ಒಬ್ಬರಿಗೆ ಅವು ಕಂಡವೆಂದರೆ ಬಂದು ಹೇಳಿದಾಕ್ಷಣ ಮತ್ತಿಬ್ಬರು ಆ ಕಡೆಗೆ ಓಡುತ್ತಿದ್ದೆವು. ಆದರೆ ಒಮ್ಮೆ ಮನುಷ್ಯರನ್ನು ಕಂಡ ಅವು ನಮ್ಮ ಸ್ವಾಗತಕ್ಕೆ ಕಾದಿರಬೇಕಲ್ಲ!
ಜಿಂಕೆಗಳಿಗೆ ಎತ್ತಿನ ಕೊರಳಿನ ಗಂಟೆಗಳ, ಗೆಜ್ಜೆಸರಗಳ ನಾದ ಬಲು ಇಷ್ಟ ಎಂಬುದು ಅಪ್ಪ ಅನುಭವದಿಂದ ಕಂಡುಕೊಂಡಿದ್ದ ಸತ್ಯ. ಒಮ್ಮೆ ಗೆಜ್ಜೆಸರ ಕಟ್ಟಿದ್ದ ಎತ್ತುಗಳನ್ನು ಹೂಡಿದ್ದ ಗಾಡಿಯಲ್ಲಿ ಕುಳಿತು ಕಾಡಿನ ದಾರಿಯಲ್ಲಿ ಮಾಸ್ತ್ಯಮ್ಮ ದೇವಿಯ ಗುಡಿಗೆ ಸಾಗುತ್ತಿದ್ದಾಗ, ಇದ್ದಕ್ಕಿದ್ದಂತೆಯೇ ನನ್ನ ಆರನೆಯ ಇಂದ್ರಿಯ ಜಾಗೃತವಾಯಿತು. ಯಾರೋ ನಮ್ಮನ್ನು ಗಮನಿಸುತ್ತಿದ್ದಾರೆ ಎಂಬ ಭಾವನೆ ನನ್ನಲ್ಲಿ ಗಟ್ಟಿಗೊಳ್ಳತೊಡಗಿತು.
ಗಾಡಿ ಹೊಡೆಯುತ್ತಿದ್ದ ಅಪ್ಪನ ಬೆನ್ನಿಗಂಟಿ ಕುಳಿತಿದ್ದ ನಾನು ಈ ಬಗ್ಗೆ ಅವನ ಕಿವಿಯಲ್ಲಿ ಪಿಸುಗುಟ್ಟಿದೆ. ಎತ್ತುಗಳ ಹಗ್ಗ ಎಳೆದು ಗಾಡಿಯ ವೇಗ ತಗ್ಗಿಸಿದ ಅಪ್ಪ ಅಷ್ಟೇ ಮೆತ್ತಗಿನ ದನಿಯಲ್ಲಿ, 'ಆನೂ ಈಗ ಅದನ್ನೇ ಹೇಳಂವ ಆಗಿದ್ದಿ. ರಸ್ತೆ ಅಂಚಿಗಿರ ಬಿದಿರ ಮಟ್ಟಿಗಳನ್ನ ದಿಟ್ಟಿಸಿ ನೋಡು... ಎಂಥ ಕಾಣ್ತು ಹೇಳು...' ಎಂದ. ಗದ್ದಲ ಮಾಡುತ್ತಿದ್ದ ಅಣ್ಣ, ಅಕ್ಕ ಕೂಡ ಮಾತು ನಿಲ್ಲಿಸಿ ಅತ್ತ ದೃಷ್ಟಿ ತೂರಿದರು. ರಸ್ತೆಯ ಇಕ್ಕೆಲಗಳಲ್ಲಿ ಉದ್ದಕ್ಕೂ ಬಿದಿರು ಮೆಳೆಗಳು ದಟ್ಟೈಸಿದ್ದವು. ದಪ್ಪ ದಪ್ಪ ಬಿದಿರ ಬುಡಗಳ ಮರೆಯಲ್ಲಿ ನಮಗೆ ಹೊಳೆಯುವ ಪಿಳಿ ಪಿಳಿ ಕಣ್ಣುಗಳು, ನಿಮಿರುತ್ತಿದ್ದ ಕಿವಿಗಳು, ಬಡಿದುಕೊಳ್ಳುತ್ತಿದ್ದ ಮೊಂಡ ಬಾಲಗಳು ಕಾಣಿಸಿದವು. ಅತ್ಲಾಗೊಂದ್ನಾಕು, ಇತ್ಲಾಗೊಂದ್ನಾಕು ಜಿಂಕೆಗಳು ನಮ್ಮನ್ನೇ ಗಮನಿಸುತ್ತ ಬಹುಶಃ ಕುತೂಹಲದಿಂದ ನಿಂತಿದ್ದವು. 'ಅರೆ! ಎಷ್ಟೆಲ್ಲಾ ಜಿಂಕೆ!'- ನಾವು ಕೂಗುವುದರೊಳಗಾಗಿ ನಮ್ಮ ಪ್ರತಿಕ್ರಿಯೆ ಹೀಗೆ ಇರಬಹುದು ಎಂದು ಊಹಿಸಿದ್ದ ಅಪ್ಪ 'ಶ್! ಕೂಗಡಿ, ಸುಮ್ಮಂಗೆ ನೋಡಿ' ಎಂದ.
ನಾವು ನಿಂತರೆ ಅವು ಪರಾರಿಯಾಗುತ್ತವೆಂಬ ಅರಿವಿದ್ದ ಅಪ್ಪ ನಿಧಾನವಾಗಿ ಗಾಡಿ ಹೊಡೆಯುತ್ತಲಿದ್ದ. 'ಅಪ್ಪಾ, ಗಾಡಿ ನಿಲ್ಸಾ, ಒಂದ್ಸಲ ನಿಲ್ಸಾ' ಎಂದು ನಾವು ಕುಸುಕುಸು ಶುರು ಮಾಡಿಯೇ ಬಿಟ್ಟವು. ನಮ್ಮ ಈ ಜಾಗರೂಕ ವರ್ತನೆ ಮತ್ತು ಇದ್ದಕ್ಕಿದ್ದಂತೆ ಉಂಟಾದ ಮೌನದ ವಾತಾವರಣದಲ್ಲಿ ಅಪಾಯದ ವಾಸನೆ ಗ್ರಹಿಸಿದ ಜಿಂಕೆಗಳು ರಸ್ತೆಯ ಅತ್ಲಾಗಿಂದ ಇತ್ಲಾಗೆ ಅಡ್ಡಾದಿಡ್ಡಿ ಜಿಗಿದು, ಮನಸ್ಸೋ ಇಚ್ಛೆ ಚದುರಿಯೇ ಬಿಟ್ಟವು. 'ನೋಡಿ, ನಾವು ಅವನ್ನು ಗಮನಿಸದು ಅವಕ್ಕೆ ಗೊತ್ತಾಗ್ಲಾಗ. ನಮ್ಮ ಪಾಡಿಗೆ ಕೆಲಸ ಮಾಡ್ತಾ ಸೂಕ್ಷ್ಮವಾಗಿ ಅವನ್ನು ಗಮನಿಸವು. ಆವಾಗ ಅವೂ ಅಲ್ಲೇ ನಿಲ್ತ'- ಅಪ್ಪ ಪರಿಸರ ಪಾಠದ ಒಂದು ನೀತಿ ಬೋಧಿಸಿದ.
ರಸ್ತೆಯಂಚಿನಲ್ಲಿ ಮೇಯುತ್ತಿರುವ ಜಿಂಕೆಗಳು ಯಾರಾದರೂ ಬರುವ ಸೂಚನೆ ಸಿಕ್ಕಿದ್ದೇ ಈ ಬದಿಯಿಂದ ಆ ಬದಿಗೆ ದಾಟಿ ಓಡಿ ಹೋಗಿದ್ದನ್ನು ನಾನು ಹಲವು ಬಾರಿ ಗಮನಿಸಿದ್ದೇನೆ. ಈ ವರ್ತನೆ, ಓಡಾಡುವ ಜನರ ಮತ್ತು ಅವರ ಬಳಿಯಿರಬಹುದಾದ ನಾಯಿಗಳ ಗಮನವನ್ನು ಮುದ್ದಾಂ ಅವುಗಳ ಮೇಲೆ ಎಳೆದು ತರುತ್ತಿತ್ತು. ಹಲವು ಬಾರಿ ಖುದ್ದು ಅವನ್ನು ಅಪಾಯದಲ್ಲಿ ಸಿಕ್ಕಿಸುತ್ತಿತ್ತು. ಅವುಗಳ ಈ ಪೆದ್ದ ನಡವಳಿಕೆಯ ಬಗ್ಗೆ ಅಪ್ಪನಲ್ಲಿ ಪ್ರಸ್ತಾಪಿಸಿದಾಗ, ತಾನೂ ಇದನ್ನು ಗಮನಿಸಿರುವುದಾಗಿ ಆತ ಹೇಳಿದ. ಈ ಕಾರಣದಿಂದಾಗಿಯೇ ಅವು ಬೇಟೆಗಾರರಿಗೆ ಸುಲಭವಾಗಿ ಬಲಿಯಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ.
ಕಾಡು ಕಣಗಿಲು, ಅತ್ತಿ ಮರಗಳ ಹಣ್ಣೆಂದರೆ ಜಿಂಕೆಗಳಿಗೆ ಮಹಾ ಪ್ರೀತಿ. ಅತ್ತಿ ಹಣ್ಣಾಗುವ ಕಾಲದಲ್ಲಿ ಗದ್ದೆಗಳ ಅಂಚಿನಲ್ಲಿರುವ ಆ ಮರಗಳ ಕೆಳಗೆ ಮುಂಜಾವಿನಲ್ಲಿ ಜಿಂಕೆಗಳ ಜಾತ್ರೆಯೇ ಸೇರುತ್ತಿತ್ತು. ಟಣ್ ಟಣ್ ಎಂದು ನೆಗೆಯುತ್ತ, ಒಂದು ಐದ್ಹತ್ತು ನಿಮಿಷದಲ್ಲಿ ಇದ್ದ ಹಣ್ಣುಗಳನ್ನೆಲ್ಲ ತಿಂದು ನೆಲ ಸಾಫ್ ಮಾಡಿ ಜಾಗ ಖಾಲಿ ಮಾಡುತ್ತಿದ್ದವು ಅವು. ಬೇಗ ಎದ್ದು ಹೋಗಿ, ಕದ್ದು ಕೂತು ನೋಡಿದಾಗಲಷ್ಟೇ ಈ ಮನೋಹರ ದೃಶ್ಯ ಲಭ್ಯವಾಗುತ್ತಿತ್ತು.
ಇನ್ನು ಏಕಮುಖವಾಗಿ ಎತ್ತರಕ್ಕೆ ಬೆಳೆವ ಕಣಗಿಲು ಮರದ ಕೆಳಗೂ ಅಷ್ಟೇ. ರಾತ್ರಿಯಿಡೀ ಬಿದ್ದಿರುತ್ತಿದ್ದ ಅರಿಶಿಣ ಬಣ್ಣದ, ಗೋಲಿ ಗಾತ್ರದ ಹಣ್ಣುಗಳನ್ನು ತಿನ್ನಲು ಬೆಳಿಗ್ಗೆ ಹಿಂಡುಗಟ್ಟಲೇ ಜಿಂಕೆಗಳು ಬರುತ್ತಿದ್ದವು. ಅವುಗಳ ಕಾಲ್ತುಳಿತ, ಕಾದಾಟದಿಂದಾಗಿ ಹಣ್ಣಿನ ಸುಗ್ಗಿಯ ಕಾಲದಲ್ಲಿ ಆ ಮರಗಳ ಅಡಿಯ ನೆಲ ಈಗಷ್ಟೇ ಕೆತ್ತಿದ ಹಾಗೆ ಇರುತ್ತಿತ್ತು. ಸುತ್ತಲ ನೆಲವೆಲ್ಲ ಎಳೆ ಹುಲ್ಲು, ಗರಿಕೆ ಚಿಗುರುಗಳಿಂದ ನಳನಳಿಸುತ್ತಿದ್ದರೆ ಕಣಗಿಲು ಮರದಡಿ ವೃತ್ತದಾಕಾರದಲ್ಲಿ ಕಾಲುದಾರಿಯಷ್ಟು ಬೋಳಾಗಿರುತ್ತಿತ್ತು ನೆಲ.
ವಿಪರ್ಯಾಸವೆಂದರೆ ಕಣಗಿಲು, ಅತ್ತಿ ಹಣ್ಣುಗಳ ಮೇಲಿನ ಈ ಮೋಹವೇ ಜಿಂಕೆಗಳಿಗೆ ಬಹಳಷ್ಟು ಸಲ ಡೆತ್ ಟ್ರ್ಯಾಪ್ ಆಗುತ್ತಿತ್ತು. ಹನುಮಾಪುರದ ಬಹುಸಂಖ್ಯಾತ ಜನರಿಗೆ ಜಿಂಕೆ ಮಾಂಸವೆಂದರೆ ಅದೇನು ಪ್ರೀತಿಯೋ! ಕಣ್ಣಿಗೆ ಬಿದ್ದ ಯಾವೊಂದು ಜಿಂಕೆಯನ್ನೂ ಅವರು ಬದುಕಗೊಡುತ್ತಿರಲಿಲ್ಲ. ಕಾಡಿನೊಳಗಣ ಜಿಂಕೆ ಬೇಟೆಯ ವಿದ್ಯಮಾನ ನಮಗೆ ತಿಳಿಯುತ್ತಿರಲಿಲ್ಲ ನಿಜ, ಆದರೆ ನಮ್ಮ ಮನೆಯ ಆಸುಪಾಸಿನಲ್ಲೇ ಎಷ್ಟೋ ಬಾರಿ ನಮ್ಮ ಕಣ್ಣೆದುರೇ ಆ ಜನ, ಮತ್ತವರ ನಾಯಿಗಳು ಜಿಂಕೆ ಹಿಡಿದಾಗ ನಮಗೆ ತೀರಾ ವ್ಯಥೆಯಾಗುತ್ತಿತ್ತು.
ಹಲವು ಸಲ ಊರವರ ನಾಯಿಗಳು ಬೆನ್ನು ಹತ್ತಿದಾಗ ಜಿಂಕೆಗಳು ದಾರಿ ತಪ್ಪಿ ನಮ್ಮ ಕಂಪೌಂಡ್ನೊಳಗೆ ನುಗ್ಗುತ್ತಿದ್ದವು. ಅವು ಎತ್ತಲಿಂದ ಬಂದವು, ಎತ್ತ ಓಡಿದವು ಅಥವಾ ಎಲ್ಲಿ ಅಡಗಿವೆ ಎಂದು ನಮಗೆ ಗೊತ್ತಿದ್ದರೂ, ಆ ನಾಯಿಗಳ ಒಡೆಯರು ಬಂದು ಕೇಳಿದಾಗ ನಾವು ಜಿಂಕೆ ಅಲ್ಲಿ ಬಂದಿಲ್ಲ ಎಂದೇ ವಾದಿಸುತ್ತಿದ್ದೆವು. 'ಅಮ್ಮಾರು/ಹೆಗಡೇರು ಬಿಡ್ರೀ, ನೀವು ಸುಳ್ಳ್ ಹೇಳಾಕ್ಹತ್ತೀರಿ' ಎಂದು ಅವರು ಗೊಣಗಿಕೊಂಡರೂ, ಒಳನುಗ್ಗಿ ಹುಡುಕಾಡುವ ಧಾರ್ಷ್ಟ್ಯ ತೋರುತ್ತಿರಲಿಲ್ಲ. ಅತ್ತ ಆ ಜಿಂಕೆಯ ಪ್ರಾಣ ಉಳಿದುಕೊಂಡರೆ, ಇತ್ತ ಒಂದು ಬಡಜೀವ ಬದುಕಿಸಿದ ಧನ್ಯತಾಭಾವ ನಮ್ಮಲ್ಲಿ ಉಳಿದುಕೊಳ್ಳುತ್ತಿತ್ತು. ಆದರೆ ಹಲವು ಸಲ ನಮ್ಮ ನಾಯಿಗಳು ಬೊಗಳಿ, ಆ ಜಿಂಕೆಯನ್ನು ಇನ್ನಷ್ಟು ಬೆದರಿಸಿ, ಅದು ಹೊರ ಓಡುವಂತೆ ಮಾಡಿ ನಮ್ಮೆಲ್ಲಾ ಪ್ರಯತ್ನಗಳನ್ನೂ ಮಣ್ಣುಗೂಡಿಸುತ್ತಿದ್ದವು. ಅಂಥ ದಿನ ನಮ್ಮ ನಾಯಿಗಳಿಗೆ ಕಡ್ಡಾಯ ಉಪವಾಸದ ಶಿಕ್ಷೆ.
ಒಮ್ಮೆ ಹೀಗಾಯ್ತು: ಬೇಸಿಗೆಯ ಆ ದಿನ ಊರಿನ ಸುಮಾರು 20-25 ಜನ ನಮ್ಮನೆಯೆದುರಿನ ಕೆರೆಯಲ್ಲಿ ಮೀನು ಹಿಡಿಯಲು ಜಮಾಯಿಸಿದ್ದರು. ಅವರೊಂದಿಗೆ ಅವರ ಹೆಂಡಿರು-ಮಕ್ಕಳು, ನಾಯಿಗಳ ಗದ್ದಲವೂ ಸೇರಿತ್ತು. ಇತ್ತ ಅವರು ಮೀನು ಬೇಟೆಯಲ್ಲಿ ತೊಡಗಿದ್ದಾಗ ಅವರ ನಾಯಿಗಳು ಕಾಡಿಗೆ ನುಗ್ಗಿದವು. ಅಲ್ಲೊಂದು ನತದೃಷ್ಟ ಜಿಂಕೆ ಅವುಗಳ ಕಣ್ಣಿಗೆ ಬಿತ್ತು, ಸರಿ ಅದನ್ನು ಬೆನ್ನತ್ತಿದವು. ತಪ್ಪಿಸಿಕೊಳ್ಳಲು ಎರ್ರಾಬಿರ್ರಿ ಓಡಿದ ಜಿಂಕೆ ಸೀದಾ ನಮ್ಮ ಬೇಲಿಯೊಳಗೆ ನುಗ್ಗಿತು. ಮನುಷ್ಯರನ್ನಾದರೆ ನಾವು ತಡೆಯಬಹುದಿತ್ತು. ಆದರೆ ನಾಯಿಗಳಿಗೆ ನಮ್ಮ ಮಾತು ಪಾಲಿಸಬೇಕಾದ ಭಿಡೆ ಇಲ್ಲವಲ್ಲ, ಅವು ಹಿಂದೆಯೇ ನುಗ್ಗಿದವು. ದಿಕ್ಕುಗಾಣದ ಜಿಂಕೆ ಅಲ್ಲಿ ಇಲ್ಲಿ ಓಡಿ, ಕೊನೆಗೆ ನಮ್ಮ ತೋಟದ ಬೇಲಿ ದಾಟಿ, ಅದಕ್ಕೆ ಹೊಂದಿಕೊಂಡಿದ್ದ ಕೆರೆ ಏರಿ ಪ್ರವೇಶಿಸಿತು. ಅದರ ದುರಾದೃಷ್ಟಕ್ಕೆ ಅಲ್ಲಿ ಊರಿನ ಹೆಂಗಸರು, ಮಕ್ಕಳು ಇದ್ದರು. ಅವರು ಛೂಗುಟ್ಟಿ ಅದನ್ನು ಇನ್ನಷ್ಟು ಕಂಗೆಡಿಸಿದರು. ಬೆದರಿದ ಈ ಹರಿಣಿ ಬೇರೆ ಮಾರ್ಗವೇ ಇಲ್ಲದೇ, ಸೀದಾ ಎದುರಿನ ಕೆರೆಗೆ ನುಗ್ಗಿತು. ಮೊದಲೇ ಕ್ಷೀಣಿಸಿದ್ದ ಕೆರೆಯ ನೀರು ಮೀನು ಹಿಡಿಯುವವರ ಭರಾಟೆಯಿಂದಾಗಿ ಕೆಸರುಗಟ್ಟಿತ್ತು. ಅದು ಆ ಹೆದರಿದ ಹುಲ್ಲೆಯ ದುರಂತ ನಾಟಕದ ಕೊನೆಯ ವೇದಿಕೆಯಾಯ್ತು. ಜಿಂಕೆ ಕೆರೆಗೆ ಹಾರುತ್ತಲೇ ಮೀನು ಹಿಡಿಯುತ್ತಿದ್ದವರೆಲ್ಲ ವೃತ್ತಾಕಾರವಾಗಿ ಅದನ್ನು ಸುತ್ತುವರೆದರು. ಕೆಸರು ನೀರಿನಲ್ಲಿ ಈಜಲು ವಿಫಲ ಯತ್ನ ನಡೆಸುತ್ತಿದ್ದ ಅದನ್ನು ಸಮೀಪಿಸಿದ ಅವರು, ಅದರ ಕೋಡು ಹಿಡಿದು, ಬಲವಂತವಾಗಿ ಅದರ ಮೊಗವನ್ನು ಕೆಸರಲ್ಲಿ ಮುಳುಗಿಸಿ, ಉಸಿರು ಗಟ್ಟಿಸಿ.......
ಮೂರು ನಿಮಿಷ ಒದ್ದಾಡಿದ ಆ ನಾಲ್ಕು ಹೊಳಪು ಕಾಲುಗಳು ಮರು ನಿಮಿಷದಲ್ಲಿ ನಿಶ್ಚಲವಾದವು. ಜಿಂಕೆ ಬೇಲಿ ದಾಟಿ ಕೆರೆ ಏರಿಗೆ ನುಗ್ಗಿದಾಗಿನಿಂದ 'ಅಯ್ಯೋ, ಅದಕ್ಕೇನೂ ಮಾಡಬೇಡ್ರೋ, ಅದನ್ನು ಬಿಟ್ಟು ಬಿಡ್ರೋ' ಎಂದು ಅಂಗಲಾಚುತ್ತಿದ್ದ, ಕೂಗುತ್ತಿದ್ದ, ಗದರಿಸುತ್ತಿದ್ದ ಅಮ್ಮನ ಕಂಠವೂ ದನಿಯನ್ನು ಕಳೆದುಕೊಂಡಿತು. ಕಣ್ಣೆದುರೇ ಕಿರಾತ ನರ್ತನ ಮಾಡಿದ ಕ್ರೌರ್ಯ, ನನ್ನ, ಅಣ್ಣ-ಅಕ್ಕನ ಕಾಲುಗಳನ್ನು ಕಂಪನದ ಕೇಂದ್ರಗಳನ್ನಾಗಿ ಮಾಡಿತ್ತು. ನಮ್ಮ ಎಳೆಯ ಮನಗಳಿಗೆ ಆ ಘಟನೆ ನೀಡಿದ ಹೊಡೆತ ಅಪಾರ.
ಊರಿಗೆ ವಿದ್ಯುತ್ ಬಂದ ಮೇಲಂತೂ ಅಕ್ರಮ ವಿದ್ಯುತ್ ಬೇಲಿಗಳಿಗೆ ಸಿಕ್ಕು ಸತ್ತ ಜಿಂಕೆಗಳೆಷ್ಟೋ. ಒಮ್ಮೆ ಅಪ್ಪ-ಅಮ್ಮ-ಪುಟ್ಟ ಮರಿಜಿಂಕೆಯ ಸುಂದರ ಸಂಸಾರವೊಂದು ನಮ್ಮ ಮನೆ ಸುತ್ತ ಅಲ್ಲಿ ಇಲ್ಲಿ ಸುಳಿದಾಡುತ್ತ, ಮೇಯುತ್ತ ಸಂತಸ ಮೂಡಿಸಿತ್ತು. ಆದರೆ ಭತ್ತ ತೆನೆಗಟ್ಟುತ್ತಿದ್ದ ಆ ಸಮಯದಲ್ಲಿ ಅವುಗಳ ಇರುವಿಕೆ ಬಹುಶಃ ಸುತ್ತಲ ಹೊಲಗಳ ರೈತರಿಗೇನೂ ಸಂತಸ ಉಕ್ಕಿಸಿರಲಿಕ್ಕಿಲ್ಲ. ಒಂದು ಮುಂಜಾನೆ, 'ಇಂಥವನ ಹೊಲದಂಚಿಗೆ ಒಂದು ಜಿಂಕೆ ಕರೆಂಟ್ ತಾಗಿ ಸತ್ತು ಬಿದ್ದಿದೆಯಂತೆ' ಎಂದು ಅಪ್ಪ ಸುದ್ದಿ ತಂದ. ನಾನೂ ಅವನೊಟ್ಟಿಗೆ ನೋಡಲು ಹೋದೆ. ಕೊಬ್ಬಿದ ಮೈಯ ಹೆಣ್ಣು ಜಿಂಕೆಯೊಂದರ ದೇಹ ಅಲ್ಲಿತ್ತು. ಅದು ಬಹುಶಃ ನಮಗೆಲ್ಲ ಮುದ ನೀಡಿದ ಆ ಬಾಣಂತಿ ಜಿಂಕೆಯೇ ಇರಬೇಕು. ಅದರ ತುಂಬಿದ ಕೆಚ್ಚಲು, ಅನಾಥವಾಗಿರಬಹುದಾದ ಆ ಮರಿ ಜಿಂಕೆಯ ನೆನಪನ್ನು ಮೂಡಿಸಿ ಮನಸ್ಸನ್ನು ಭಾರವಾಗಿಸಿತು.
ಮತ್ತೊಂದು ಪ್ರಸಂಗ: ಒಂದಿನ ಕಾಡಿನ ಕಡೆಯಿಂದ ಲಗುಬಗೆಯಿಂದ ಬಂದ ಅಪ್ಪ, ಮನೆ ಬಳಿ ಏನೋ ಮಾಡುತ್ತಿದ್ದ ನನ್ನನ್ನು, ಅಮ್ಮನನ್ನು ಕರೆದು, 'ನಮ್ಮ ಗದ್ದೆಯಂಚಿನ ಅಗಳ(ಕಾಲುವೆ)ದಲ್ಲಿ ಒಂದು ಜಿಂಕೆ ಅಡಗಿ ಕೂತಿದ್ದು. ಬೇಕಾದ್ರೆ ಸದ್ದು ಮಾಡದೇ ಹೋಗಿ ನೋಡಿ ಬನ್ನಿ' ಎಂದ. ನಮಗೆ ಕುತೂಹಲ- 'ಎಲ್ಲಿತ್ತು, ಎಲ್ಲಿಂದ ಬಂತು'- ಇತ್ಯಾದಿ ಪ್ರಶ್ನೆಗಳಿಗೆ ಮೊದಲಿಟ್ಟೆವು. 'ಈಗ ಆನು ಕಾಡಿಂದ ಬರಬೇಕಾದ್ರೆ ಬೂಬಣ್ಣನ ನಾಯಿ ಅದನ್ನು ಬೆನ್ನಟ್ಟಿ ಬಂತು. ಅದು ಬಂದು ಅಗಳ ಇಳತ್ತು. ಹಿಂದಿಂದ ಕೂಗ್ತಾ ಬಂದ ನಾಯಿನ್ನ ಆನು ಬೆದರಿಸಿ ದೂರ ಕಳ್ಸಿದ್ದಿ' ಎಂದ ಅಪ್ಪ. 'ಬೂಬಣ್ಣ ಇದ್ದಿದ್ನಿಲ್ಯ' ನಾವು ಕೇಳಿದೆವು. 'ಅಂವ ಸ್ವಲ್ಪ ಹೊತ್ತು ಬಿಟ್ಟು ಬಂದ. ಜಿಂಕೆ ಬಗ್ಗೆ ವಿಚಾರಿಸ್ದ. ಆನು ಗೊತ್ತಿಲ್ಲೆ ಅಂದಿ. ಅಂವ ತನ್ನ ನಾಯಿನ್ನ ಕೂಗ್ತಾ ಊರ ಕಡೆಗೆ ಹೋದ' ಎಂದ. ನನಗೆ ಅನುಮಾನ- 'ಜಿಂಕೆ ಇನ್ನೂ ಅಲ್ಲಿರ್ತ' ಎಂದೆ. 'ಗೊತ್ತಿಲ್ಲೆ, ಆದರೆ ನಾಯಿ ಬಾಯಿ ಹಾಕಿತ್ತಕ್ಕು, ಅದರ ಕಾಲಿಗೆ ಸಣ್ಣ ಗಾಯ ಆಜು. ಹಂಗಾಗಿ ಅಲ್ಲೇ ಇದ್ರೂ ಇದ್ದಿಕ್ಕು' ಎಂದ ಅಪ್ಪ.
ನಾನು, ಅಮ್ಮ ಗಡಿಬಿಡಿಯಿಂದ ಅತ್ತ ಧಾವಿಸಿದೆವು. ಮನದಣಿಯೆ ಜಿಂಕೆಯನ್ನು ನೋಡಲು ಹೋದ ನಮ್ಮ ಕಣ್ಣಿಗೆ ಕಂಡಿದ್ದು ಮಾತ್ರ ಎಂಥ ಭೀಭತ್ಸ ದೃಶ್ಯ!! ಅಗಳಕ್ಕೆ ಇಳಿದಿದ್ದ ಬೂಬಣ್ಣನ ಕೈಯಲ್ಲಿ ರಕ್ತಸಿಕ್ತ ಚಾಕು. ಜಿಂಕೆಯ ಕುತ್ತಿಗೆ ಮುಕ್ಕಾಲು ಭಾಗ ಕತ್ತರಿಸಿ ಹೋಗಿತ್ತು. ಕತ್ತರಿಸಿದ ಕತ್ತಿನಿಂದ ಧಾರಾಕಾರ ಸುರಿಯುತ್ತಿದ್ದ ರಕ್ತ ಕಪ್ಪು ನೆಲವನ್ನು ಕೆಂಪಗೆ ತೋಯಿಸಿತ್ತು. ಅದರ ಉರುಟು ಕುತ್ತಿಗೆಯೊಳಗಿನ ಪೊಳ್ಳಿನಿಂದ ಪ್ರವಹಿಸುತ್ತಿದ್ದ ರಕ್ತಧಾರೆ, ಮಳೆಗಾಲದಲ್ಲಿ ಬಾಳೇಸರದ ಝರಿಗಳಲ್ಲಿ ಧುಮ್ಮಿಕ್ಕುತ್ತಿದ್ದ ಕೆನ್ನೀರಿನ ಪ್ರವಾಹವನ್ನು ಆ ಕ್ಷಣ ನೆನಪಿಸಿತು ನನಗೆ. 'ಯಂಥಕ್ಕೆ ಅದರ ಕುತ್ತಿಗೆ ಕಡಿದ್ಯ ಬೂಬಣ್ಣ, ಬಿಟ್ಟಿದ್ರೆ ಎಲ್ಲಾದರೂ ಬದುಕ್ಯತ್ತಿತ್ತು' ಆಕ್ಷೇಪಿಸಿದಳು ಅಮ್ಮ. 'ನಾ ಕಡೀಲಿಲ್ಲಾಂದ್ರೂ ಅದು ಏನೂ ಬದುಕಂಗಿರಲಿಲ್ಲ ಅಮ್ಮಾರೇ, ನಮ್ಮ ನಾಯಿ ಅದರ ಕಾಲಿಗೆ ಗಾಯ ಮಾಡಿತ್ತು' ಎಂದನಾತ.
ಜಿಂಕೆ ಇತ್ತ ಬಂದಿಲ್ಲ ಎಂದು ಅಪ್ಪ ಹೇಳಿದ ಮೇಲೆ ಆತ ಮುಂದೆ ಸಾಗಿದ್ದನಂತೆ. ಅಷ್ಟರಲ್ಲಿ ಅವನ ನಾಯಿ ಜಿಂಕೆಯ ಸೂಟು ಹಿಡಿದು ವಾಪಸ್ ಬಂದು ಕೂಗಲಾರಂಭಿಸಿತಂತೆ. ಜಿಂಕೆ ಎದ್ದು ಓಡಬೇಕೆನ್ನುವಷ್ಟರಲ್ಲಿ ಅಲ್ಲಿ ಬಂದ ಬೂಬಣ್ಣ, ಅದು ಓಡದಂತೆ ಅದರ ಮುಂಗಾಲಿನ ಮೂಳೆಯನ್ನು ಲಟಕ್ಕೆಂದು ಮುರಿದನಂತೆ- ಅದನ್ನಾತ ಹೆಮ್ಮೆಯಿಂದ ಹೇಳಿಕೊಂಡ. 'ನಮ್ ಮಂದ್ಯಾಗ ನಾವ ಅದಕ್ಕ ಚಾಕು ಹಾಕಲಿಲ್ಲಾಂದ್ರ ತಿನ್ನಂಗಿಲ್ರೀ, ಅದ್ಕ ಅದರ ಕುತ್ಗೀ ಕೊಯ್ದೆ' ಎಂದ ಬೂಬಣ್ಣ, ಅಷ್ಟೊತ್ತಿಗೆ ಅಸು ನೀಗಿದ್ದ ಜಿಂಕೆಯ ಕಳೇಬರವನ್ನು ಹೊತ್ತೊಯ್ಯಲು ಅಣಿಯಾದ. ಜಿಗುಪ್ಸೆ ಹುಟ್ಟಿ ವಾಕರಿಕೆ ಬಂದಂತಾಗಿದ್ದರಿಂದ ನಾನು, ಅಮ್ಮ ಮನೆಯತ್ತ ಓಡಿದೆವು.
ಈಚಿನ ವರ್ಷಗಳಲ್ಲಿ ಮನೆ ಸುತ್ತಲಿನ ಕಾಡೆಲ್ಲ ಒತ್ತುವರಿಯಾಗಿ ಭತ್ತ, ಹತ್ತಿ ಬೆಳೆವ ಗದ್ದೆಯಾಗಿ ಮಾರ್ಪಟ್ಟ ನಂತರ ಜಿಂಕೆಗಳ ಈ ಒಡನಾಟ ಅಪರೂಪವಾಗಿ ಬಿಟ್ಟಿದೆ. ಹಿಂದೆ ತಮ್ಮದಾಗಿದ್ದ ನೆಲದತ್ತ ಇಂದು ಕಣ್ಣೆತ್ತಿ ನೋಡಲೂ ಭಯ ಬೀಳುತ್ತಿರಬೇಕು ಅವು. ಇತ್ತ ನಾವೂ ನಗರಾಭಿಮುಖಿಗಳಾಗಿ ಬೆಳೆದೆವಲ್ಲ. ಆದರೂ ಅಪರೂಪಕ್ಕೊಮ್ಮೆ ಬನ್ನೇರು ಘಟ್ಟಕ್ಕೋ, ಇನ್ಯಾವುದೋ ವನ್ಯಧಾಮಕ್ಕೋ ಹೋದಾಗ, ಅಲ್ಲಿ ಕಣ್ಣಳತೆ ಅಗಲದ ಜಾಗದಲ್ಲಿ, ಕಬ್ಬಿಣದ ಬೇಲಿಯೊಳಗೆ ಭರ್ತಿಯಾದ ಹರಿಣಗಳ ಹಿಂಡನ್ನು ನೋಡಿದಾಕ್ಷಣ, ನನ್ನೂರಿನ ಅಡವಿಗಳಲ್ಲಿ ವಿಸ್ತಾರವಾಗಿ ವಿಹರಿಸುತ್ತಿದ್ದ ಆ ಚಂಚಲನೇತ್ರ ಚಿತ್ತಾಪಹಾರಿಗಳ ನೋಟ ನಯನದೆದುರು ನರ್ತಿಸುತ್ತದೆ.
ನನ್ನೂರಿನ ಸುತ್ತ ಈಗ ಬಾಳಲು ಬೇಕಾದ ಅನುಕೂಲತೆ, ಅನಿವಾರ್ಯತೆ ಜಿಂಕೆಗಳಿಗಿಲ್ಲ. ಬಾಳಿಸುವ ಬದ್ಧತೆ ಜನರಿಗಿಲ್ಲ. ಹಾಗಾಗಿ ಮೊದಲಿದ್ದ ಎಡೆಗಳಲ್ಲಿ ಇಂದು ಅವುಗಳ ಬಾಳುವೆಯೇ ಇಲ್ಲ.

(ಪ್ರಜಾವಾಣಿಗೆ ಧನ್ಯವಾದ ಹೇಳುತ್ತ.....)

ಗುರುವಾರ, ಜನವರಿ 8, 2009

ನನ್ನೊಳಗಿನ ನಾನು

ನನ್ನೊಳಗಿನ ನಾನು ಕಗ್ಗಂಟು
ಒಳಹೊಕ್ಕು ಯಾರೂ ಬಿಡಿಸಲಾರರು
ಗಟ್ಟಿ ಕವಚದ ಒಳಗೆ ಸಿಹಿ ತಿರುಳುಂಟು
ಬಿಡಿಸಿ ಯಾರೂ ಸವಿಯಲಾರರು

ನನ್ನ ಮಾಡಿದರು ಒಂದು ಕೀಲುಗೊಂಬೆ
ಕೂಡ್ರೆಂದರೆ ಕೂರಲು, ನಿಲ್ಲೆಂದರೆ ನಿಲ್ಲಲು
ಒಲ್ಲದೇ ಹೋದಾಗ ನಾ
ಕಾದಿತ್ತು ಮೊನಚು ತಿರಸ್ಕಾರ ಸೊಲ್ಲು ಸೊಲ್ಲಲೂ

ನನ್ನ ಕಡು ಕೋಪ, ನೇರ ನುಡಿ
ಸುತ್ತೆಲ್ಲ ಜನರ ನಾಲಿಗೆಗೆ ಆಹಾರ
ಸುಡು ಕೋಪದ ಹಿಂದೆ ಮಿಡಿವ ಹೃದಯವುಂಟು
ಕಾಣುವ ಕಣ್ಣಿಗೆ ಮಾತ್ರ ಬರವೋ ಬರ

ನನ್ನ ಸರಳ ಸ್ನೇಹ ಇವರ ಮನಕ್ಕೆ ತಟ್ಟದು
ಆಡಂಭರದ ಕೆಳೆಗೆ ಈ ಮನ ಒಪ್ಪದು
ಇರಬಹುದೇನೋ ಹಾಗಾಗಿ ನಾನೊಬ್ಬ ಒಂಟಿಸಲಗ
ಹಾಗಂತ ಇವರೆಲ್ಲ ಪಿಸುನುಡಿವರು ಆಗಾಗ

ನಾನಲ್ಲ ಬಿಳಿಹಾಳೆ, ಜೀವವುಂಟು ನನ್ನಲಿ
ಭೋರ್ಗರೆಯುತ ಧುಮುಕುತ್ತಿಹ ಭಾವವುಂಟು ಎದೆಯಲಿ
ನವಚೈತ್ರದ ಹೊಸ ಚಿಗುರಿಗೆ ಕಾಯುವೆನು ಸತತ
ಹೊಂಬೆಳಕಿನ ಮುಂಜಾವೆ ಬಳಿ ಬಾ, ಇದೋ ಸ್ವಾಗತ
ನಮಸ್ಕಾರ ಸ್ನೇಹಿತರೆ,
ಸ್ಥಳ ಬದಲಾವಣೆಯ ಕಾರಣ ಕೆಲವು ದಿನಗಳಿಂದ ಯಾವುದೇ ಬರಹವನ್ನು ಇಲ್ಲಿ ಪ್ರಕಟಿಸಲಾಗಿರಲಿಲ್ಲ. ಕ್ಷಮೆ ಇರಲಿ. ಇನ್ನು ಮುಂದೆ ಮತ್ತೆ ಎಂದಿನಂತೆ ನಾನು, ನನ್ನ ಬರಹ ಮತ್ತು ನೀವು ಭೇಟಿಯಾಗುತ್ತಿರೋಣ.