ಮೌನ ದನಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮೌನ ದನಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಫೆಬ್ರವರಿ 17, 2014

‘ಹಣೆಬರಾ ಅಳ್ಚಕಾಗ್ತದ್ಯ’

‘ಅಮಾ, ನಾ ಬಂದನ್ರೋ……..’ಧೋ…ಗುಡುವ ಮಳೆಯ ಜೋಗುಳದ ಹಿನ್ನೆಲೆಯಲ್ಲಿ ಮಲಗಿದ್ದವಳನ್ನು ಬಡಿದೆಬ್ಬಿಸಿದ್ದು ಗಡಸು ದನಿಯ ಸುಪ್ರಭಾತ. ‘ಹೋ ಮಾದೇವಿ, ಇಂಥಾ ಮಳೆಲ್ಲೂ ಇಷ್ಟು ಬ್ಯಾಗ ಬಂದ್ಯನೆ. ನಮ್ಮನೆ ಹಿಳ್ಳೆ, ಬಾಳಂತಿಗೆ ಇನ್ನೂ ಬೆಳಗೇ ಆಗಿಲ್ಲ’ ಅಂಗಳದಲ್ಲಿ ಅಮ್ಮನ ಸ್ವಾಗತ.’ಮಳೆಯಾರೆಂಥು, ಬಿಸ್ಲಾರೆಂಥು? ನಮ್ ಕೆಲ್ಸಕ್ಕೆ ನಾವು ಬರದೇರಾ. ತಂಗಿ ಯಂಥ ಒಂಬತ್ತಾದ್ರೂ ಇನ್ನೂ ಮಲ್ಕಂಡದೆ? ಮೀಸಿ ಮಲಗ್ಸದ್ಯಾವಾಗ? ಬ್ಯಾಗ ಯಬ್ಬಿಸ್ನಿ ವೇದಮಾ”ಅದ್ರ ಗಂಡ ರಾತ್ರೆ ಫೋನ್ ಮಾಡಿ ತಾಸುಗಟ್ಲೆ ಮಾತಾಡ್ತಿದ್ದ. ಮಾಣಿನೂ ರಾತ್ರ್ಯೆಲ್ಲಾ ಎದ್ಕತ್ತಿದ್ದಿದ್ದಾ. ಬೆಳಗಿನ್ ಜಾವದಲ್ಲಿ ಇಬ್ರೂ ಮಲ್ಕಂಡಾರೆ, ಹಂಗಾಗಿ ಇನ್ನೂ ಎಬ್ಸಿಲ್ಲಾ’ ಅಮ್ಮನ ಸಮಝಾಯಿಷಿ.’ಆದ್ರೂ ನಿಮ್ಮನೆ ಬಾಳಂತಿಗೆ ಬ್ಯಳಗಾಗದು ಹನಿ ತಡಾನೇ ಅಂತ್ನಿ’ ಮಾದೇವಿಯ ಆಕ್ಷೇಪಪೂರ್ವಕ ಒಬ್ಸರ್ವೇಶನ್.
ಇನ್ನೂ ಮಲಗಿದ್ರೆ ಊಊಊದ್ದನೆಯ ಭಾಷಣ ಕೇಳಬೇಕಾದೀತೆಂದು ಧಡಕ್ಕನೆ ಎದ್ದು ಬ್ರಷ್ಷು ಹಿಡಿದು ಬಚ್ಚಲ ಕಡೆ ಹೊರಟೆ. ಹಿತ್ಲಾಕಡೆ ಒಳದಲ್ಲಿ ಕುಕ್ಕುರುಗಾಲಲ್ಲಿ ಕುಂತು ಚಾ ಹೀರುತ್ತಿದ್ದ ಮಾದೇವಿ ಮುಂದುವರೆಸಿದ್ದಳು, ‘ನೀವು ಯಂಥದೇ ಹೇಳಿ, ಪ್ಯಾಟೆ ಕಂಡು ಬಂದವ್ಕೆ ಬ್ಯಾಗ ಬ್ಯಳಗಾಗಕಲ್ಲ. ನಮ್ಮನ್ಯಾಗೂ ಐದಾನೆ ಒಬ್ಬಂವಾ. ರಾತ್ರೆ ಬ್ಯಾಗ ಮಲ್ಗಾಕಲ್ಲ, ಬ್ಯಳಿಗ್ಗೆ ಯೋಳಾಕಲ್ಲಾ. ಈ ಪ್ಯಾಟೆ ಮ್ಯಾಲಿನ ಗಾಳಿ ತಾಗಿರೆ…… ”ಹೋ ಮಾದೇವಿ, ನಾ ಆಗಲೇ ಎದ್ದಾಗದೆ. ಮಾಣಿ ಕೊಂಯ್ಗುಟ್ದಾಂಗಾತು, ಹಂಗಾಗಿ ಅಲ್ಲೇ ಕುಂತಿದ್ದೆ’ ಮಾತಿನ ಧಾರೆಯನ್ನು ಕತ್ತರಿಸುತ್ತ ಹೇಳಿದೆ.’ಹಂಗಾರೆ ಯಬ್ಸಿಕ್ಯಂಡು ಬರುದ. ಜಗಿಸಿಕ್ಯಂಡು ಹಾಂಗೇ ಎಣ್ಣಿ ಹಚ್ಚಿ ಮೀಸುಕಾಗ್ತಿತ್ತು’ ಮಾದೇವಿ ಮುಂದುವರೆಸಿದಳು. ಅವಳು ‘ಜಗಿಸುದು’ ಅಂದಿದ್ದಕ್ಕೆ ಹಣೆ ಸಿಂಡರಿಸಿಕೊಳ್ಳುತ್ತ ‘ತಡ್ಕ ಮಾರಾಯ್ತಿ. ಸ್ವಲ್ಪ ಶಾಂತಿಂದ ಆಸ್ರಿಗೆ ಕುಡ್ಕಂತೆ. ಕಡಿಗೆ ಎಬ್ಸುವ ಅಂವನ್ನಾ’ ಎಂದೆ. ಚಾ ಮುಗಿಸಿ ಲೋಟ ತೊಳೆಯುತ್ತಿದ್ದ ಮಾದೇವಿ, ‘ಹಂಗಾರೆ ಉಚ್ಚೆ ವಸ್ತ್ರ ತೊಳಿತ್ನಿ ಮದ್ಲು’ ಎಂದಳು.’ಹಾಂಗೇ ಸ್ವಲ್ಪ ಬಚ್ಚಲು ಬೆಂಕಿ, ಹೊಡ್ತಲ ಬೆಂಕಿ ಘನಾಕೆ ಕತ್ಸು ಮಾರಾಯ್ತಿ. ರಾತ್ರಿ ಮಳೆಗೆ ಸೌದೆ ರಾಶಿಯೆಲ್ಲಾ ಒಬ್ಬಶಿ ಆಗೋಗದೆ. ಒಲೆ ಬೆಂಕಿ ಕತ್ತಾನೆ ಇಲ್ಲ. ಉಬಿಸಿ ಉಬಿಸಿ ಸಾಕಾತು’ ನಿಟ್ಟುಸಿರುಗರೆದಳು ಅಮ್ಮ. ‘ಥೋ, ನಮ್ಮನ್ಯಾಗೂ ಹಾಂಗೇರಾ, ನಾಕ್ ದಿನಾ ನೇರ್ತಾ ಬಿಸ್ಲಿಗ್ ಹಾಕಿರೂ ಬೆಂಕಿ ವಟ್ಟಾಕ್ ಬರದು ಯಂಥನ…’ ಸೋಗುಟ್ಟುತ್ತ ಕಟ್ಟಿಗೆ ಮನೆ ಕಡೆ ಹೋದಳು ಮಾದೇವಿ.
ಆಸ್ರಿಗೆ ಕುಡಿತಾ ಕುಳಿತವಳಿಗೆ ಬಚ್ಚಲ ಕಡೆಯಿಂದ ಮಾದೇವಿಯ ದನಿ ಕೇಳಿಸುತ್ತಿತ್ತು. ಹೆಚ್ಚು ಕಮ್ಮಿ ನನ್ನಮ್ಮನ ವಯಸ್ಸಿನವಳೇ ಆದ ಮಾದೇವಿ ಹೋದಲ್ಲೆಲ್ಲ ಮಾತು, ಮಾತು… ಹತ್ತು ಹಳ್ಳಿ ಸುತ್ತಿ ಚಾಕರಿ ಮಾಡುವುದರಿಂದ ಊರ ಮೇಲಿನ ಸುದ್ದಿಯೆಲ್ಲ ನಾಲಿಗೆ ತುದಿಯಲ್ಲೇ. ದಟ್ಟ ಕಪ್ಪು ಮೈಬಣ್ಣ, ಮುಕ್ಕಾಲುವಶಿ ನೆರೆತ ತಲೆ, ಸಣಕಲು ಮೈಗೆ ಒಂಚೂರು ಹೊಂದಿಕೆಯಾಗದ ಗಡಸಾದ ದನಿ. ಉಬಿಸಿದರೆ ಹಾರಿ ಹೋಗುವಂಥ ಕಾಯದಲ್ಲಿ ಅದೇನು ಶಕ್ತಿಯೋ, ಸದಾಕಾಲ ಮೈಮುರಿದು ದುಡಿಯುವ ‘ದುಡಿವಾನಿ’. ಸ್ವಂತದ ಮನೆ ಬಿಟ್ಟರೆ ಬೇರೆ ಅಂಗೈ ಅಗಲದ ಜಮೀನೂ ಇಲ್ಲ, ಗಂಡ ಶಣ್ಯನೋ ಪರಮ ದುಪ್ಪಾಳ. ಆಚೀಚೆ ಊರ ದನ ಕಾಯುವುದು ಬಿಟ್ಟರೆ ಬೇರೆ ಕೆಲಸ ಮಾಡಿದ್ದ ದಾಖಲೆಯೇ ಇಲ್ಲ. ಗ್ರಾಮಕ್ಕೆ ಹಾಲಿನ ಡೇರಿ ಬಂದ ಮೇಲೆ ಜನರೆಲ್ಲ ಜಾಸ್ತಿ ಹಾಲು ಕೊಡುವ ಜರ್ಸಿ ದನ ಕಟ್ಟಿ ಮನೆಯಲ್ಲಿ ಆರೈಕೆ ಶುರು ಮಾಡಿದ್ದರಿಂದ ಆ ಕೆಲಸವೂ ಇಲ್ಲವಾಯಿತು. ಮೂರು ಹೊತ್ತು ರೇಡಿಯೋ ಕಿವಿಗಂಟಿಸಿಕೊಂಡು ಕೋಳಿಗಳನ್ನ ಗೂಡಿಂದ ಹೊರಗೆ ಬಿಡೋದು- ಒಳಗೆ ಅಟ್ಟೋದು, ಸಂಜೆ ಗಡದ್ದು ಕುಡಿದು ಹೊಟ್ಟೆಬಿರಿ ಉಂಡು ಮಲಗುವುದು… ಇಷ್ಟೇ ಅವನಿಗಿದ್ದ ಘನಂದಾರಿ ಕೆಲಸ. ‘ಮಾದೇವಿ ದುಡಿದಿದ್ದಕ್ಕೆ ಸೋಂಗೆ ಮನೆ ಮಾಡು ಹೋಗಿ ಹಂಚು ಬಂತು’ ಎನ್ನುವುದು ಊರಲ್ಲಿ ಒಕ್ಕೊರಲಿನ ಮಾತು. ತೆರಡಿಕೆ, ಸೋಂಗೆ ಆರಿಸುವ, ಅಡಿಕೆ-ಚಾಲಿ ಸುಲಿಸುವ, ಕಾಫಿ ಬೀಜ ಬಿಡಿಸುವಂಥ ತೋಟದ ಮೇಲಿನ ಚಾಕರಿ ಜೊತೆ ಅಂಗಳ ತೊಡೆಯುವ, ಅಕ್ಕಿ ಆರಿಸುವ, ವಿಶೇಷದ ದಿನ ಪಾತ್ರೆ ತೊಳೆಯುವ ಕೆಲಸಕ್ಕೆಲ್ಲ ‘ಮಾದೇವಿನ್ನ ಲೆಕ್ಕಕ್ಕೆ ಹಿಡಿಯಲೆ ಅಡ್ಡಿಲ್ಲೆ’ ಎಂಬ ನಂಬಿಕೆ ಊರಲ್ಲಿ. ಇನ್ನು ಅವಳ ಸ್ಪೆಷಾಲಿಟಿ ಬಾಣಂತನದ ಚಾಕರಿ. ಹಿಳ್ಳೆ-ಬಾಣಂತಿ ಸ್ನಾನ, ಆರೈಕೆ, ಚಿಕ್ಕ ಪುಟ್ಟ ನಾಟಿ ಔಷಧಿ, ಗುಡ್ಡೆಗಟ್ಟಲೆ ಬಟ್ಟೆ ಒಗೆತ ಎಲ್ಲದಕ್ಕೂ ಮಾದೇವಿ ಬ್ರಾಂಡಿನ ಸೇವೆ ಸುಪ್ರಸಿದ್ಧ. ಅವಳ ಅವ್ವ, ಅಜ್ಜವ್ವನೂ ಇದೇ ಮಾಡಿದವರಂತೆ. ಅವರೆಲ್ಲರ ಅನುಭವಸಾರ ಸೇರಿ ‘ಮಾದೇವಿ ಛಾಪು’ ರೂಪುಗೊಂಡಿತ್ತು. ಊರಲ್ಲಿ ಯಾರದೇ ಮಗಳು/ಸೊಸೆ ಬಸುರಿ ಎಂದು ಗೊತ್ತಾಗುತ್ತಿದ್ದಂತೆ ಹೆಂಗಸರು ‘ಇದೊಂದು ಬಾಳಂತನ ನೀ ಮಾಡ್ಕೊಡದೆಯಾ’ ಎಂದು ರಿಸರ್ವ್ ಮಾಡಿಬಿಡುತ್ತಿದ್ದರು. ನಮ್ಮನೆಯಲ್ಲೂ ದೊಡ್ಡಪ್ಪನ ಮಕ್ಕಳಿಬ್ಬರ, ನನ್ನಕ್ಕನ ಬಾಣಂತನಕ್ಕೆ ಅವಳದ್ದೇ ಪುರೋಹಿತ್ಗೆಯಾಗಿ ಈಗ ನನ್ನ ಸರದಿ ಬಂದಿತ್ತು.
‘ಆಸ್ರಿಗ್ಯಾತ? ಮಾಣಿನ ಎಬ್ಸಿ ಹಾಲು ಕುಡಿಸಿಕ್ಯಂಡು ಬಾ ಬೇಗ’ ಅಮ್ಮ ಅವಸರಿಸಿದಳು.ತಿಂಡಿ ಮುಗಿಸಿ ಬರುವಷ್ಟರಲ್ಲಿ ಮಗರಾಯ ಎದ್ದು ರಂಪ ಶುರುಮಾಡಿದ್ದ. ‘ಎದ್ದ ಕೂಡಲೇ ಹೊಟ್ಟೆಗೆ ಬೇಕು ಮಾಣಿಗೆ, ಅಪ್ಪನ್ ಕಾಣದೇ ಹೋದ್ರೂ ಅಂವಂದೇ ಬುದ್ಧಿ’, ಹುಸಿಮುನಿಸು ತೋರುತ್ತ ಎದೆಗಂಟಿಸಿಕೊಂಡೆ. ಮಗನ ದನಿ ಅಡಗುತ್ತಿದ್ದಂತೆ ಮತ್ತೆ ಮಾದೇವಿ ದನಿಯ ಭೋರ್ಗರೆತ, ಈ ಬಾರಿ ಹೊಡತಲ ಕಡೆಯಿಂದ. ಕೊಟ್ಟಿಗೆಯಲ್ಲಿದ್ದ ದೊಡ್ಡಮ್ಮನ ಬಳಿ ಮಾತನಾಡುತ್ತಿರಬೇಕು, ‘ಯಂಥಾ ಮಾಡದ್ರಾ ಸುಶೀಲಮಾ, ಎಲ್ಲಾ ಹಣೇಬರಾ, ಇಲ್ಲಾರೆ ನಮ್ ರತ್ನಿ ಕತೆ ಹೀಂಗ್ ಆಗ್ತಿತ್ತನ್ರಾ. ಊರವ್ಕೆಲ್ಲಾ ನಾ ಬಾಳಂತನಾ ಆರೈಸ್ತ್ನಿ, ನನ್ ಮಗ್ಳಿಗೇ ಮಾಡುಕೆ ಹಣೇಲಿ ಬರೀನಲ್ಲಾ. ಅದು ಗಂಡನಮಲ್ಲಿ ಯಂಥ ತಿಂತ, ಯಂಥ ಕುಡೀತ… ಒಂದ್ ಮಾತು ನಂಗ್ಯಾರೂ ಹೇಳ್ನಲ್ಲ, ಕೇಳ್ನಲ್ಲ. ಮೊಮ್ಮ ಹುಡುಗನ್ನ ನೋಡಾಕೂ ಇನ್ನೂ ಮೂರ್ತ ಕೂಡ್ಬರ್ನಲ್ಲ ನಂಗೆ’ ಎಂದು ನಿಡುಸುಯ್ಯುತ್ತಿದ್ದಳು. ರತ್ನಳ ಕಂಗಾಲು ಕಣ್ಣುಗಳು ನೆನಪಿಗೆ ಬಂದವು. ನನಗಿಂತ ಎರಡು ವರ್ಷ ಚಿಕ್ಕವಳು, ಶಾಲೆಯಲ್ಲಿದ್ದಾಗಲಿಂದಲೂ ಪರಿಚಯ. ಓದು ಹತ್ತದೇ ಏಳನೆತ್ತಿಗೇ ಶಾಲೆ ಬಿಟ್ಟವಳು ತಾಯಿ ಜೊತೆ ದುಡಿತ ಶುರು ಮಾಡಿದ್ದಳು. ಅವಳಿಗೆ ಇಪ್ಪತ್ತು-ಇಪ್ಪತ್ತೆರಡು ವರ್ಷವಾಗಿದ್ದೇ ಮಗಳ ‘ಮದೀ’ ತಲೆಬಿಸಿ ಹಚ್ಚಿಕೊಂಡ ಮಾದೇವಿ, ‘ನಮ್ ಜನಾ ಇತ್ಲಾಗೆ ಕಮ್ಮಿ ಐದಾವೆ. ಸಾಗರ ಬದೀಗೆ, ಘಟ್ಟದ ತೆಳಗೆ ಹುಡ್ಕಕೆ ಹೋಬೇಕು, ವಟ್ಟು ನಮಗೆ ತಿರುಗ್ಯಾಟವೇ ಸೈ’ ಎನ್ನುತ್ತಿದ್ದಳು.
ಕಷ್ಟಪಟ್ಟು ಹುಡುಕಿದ ಹುಡುಗರೂ ‘ಹುಡ್ಗಿ ಕಪ್ ಅದೆ’ ಎಂದು ಬಿಟ್ಟುಬಿಡುತ್ತಿದ್ದರಂತೆ. ಖುದ್ದು ಮಾದೇವಿಯೇ ‘ಯಂಥ ಮಾಡದ್ರಾ, ನಮ್ಮನೆ ಹುಡ್ಗಿ ಹನಿ ಕಪ್ಪದೆ’ ಎಂದು ಷರಾ ಬರೆಯುತ್ತಿದ್ದಳು. ಎಲ್ಲ ಒಪ್ಪಿಗೆಯಾದ್ರೆ ವರದಕ್ಷಿಣೆ ಬಾಬ್ತು ಕೈ ಮೀರಿದ್ದಾಗಿರುತ್ತಿತ್ತು. ಅಂತೂ ಇಪ್ಪತ್ತಾರು ತುಂಬುವುದರೊಳಗೆ ಕುಮಟಾ ಕಡೆಯ ಚಂದದ ಹುಡುಗನ ಜೊತೆ ಮಗಳ ಮದುವೆಯಾದಾಗ ಮಾದೇವಿಯ ಖುಷಿ ಹೇಳತೀರದಂತೆ; ‘ಮದ್ವೆ ದಿನಾ ಮಾದೇವಿ ನೆಲ ಬಿಟ್ಟು ಮೂರಡಿ ಮ್ಯಾಲೆ ಹಾರ್ತಾ ಇತ್ತು’ ದೂರವಾಣಿಯಲ್ಲಿ ವರದಿ ಕೊಟ್ಟಿದ್ದಳು ಅಮ್ಮ. ಜೊತೆಗೇ ‘ಯಂಥೆಂಥಾ ಸುಮಾರಿನವೂ ರತ್ನ ‘ಕಪ್ಪು’ ಹೇಳಿ ಬಿಟ್ಟಿದ್ದಿದ್ದ. ಈಗ ಇಷ್ಟು ಚಂದ ಇದ್ದಂವ ವರದಕ್ಷಿಣೆ ಸೈತಾ ತಗಳ್ಳದ್ದೇ ಮದ್ವೆ ಆಜಾ ಅಂದ್ರೆ ಯಾಕೋ ಅನುಮಾನ… ಊರ ಬದೀಗೆ ಎಲ್ಲಾ ಇದೇ ಮಾತಾಡ್ಕ್ಯತ್ತಿದ್ದ’ ಎಂದೂ ಹೇಳಿದ್ದಳು.ಆರು ತಿಂಗಳ ಹಿಂದೆ ನಮ್ಮೂರ ಬಸ್ಸ್ಟ್ಯಾಂಡಿನಲ್ಲಿ ಕಂಡಿದ್ದೆ ಅವಳನ್ನ. ಒಂಬತ್ತು ತಿಂಗಳ ಬಸುರಿ ಆಕೆ ಆಗ. ಬಸವಳಿದ ಮೈ, ಬಾಡಿದ ಮುಖ… ನನ್ನ ‘ಆರಾಮನೇ…ರತ್ನಾ’ಗೆ ಪ್ರತ್ಯುತ್ತರವಾಗಿ ನಿರ್ಜೀವ ನಗು ಬೀರಿದ್ದಳಷ್ಟೇ. ‘ರತ್ನಂಗೆ ಯಂಥಾ ಆಜೆ? ಬಡಕಲು ಬೇತಾಳದಂಗೆ ಆಗೋಜು. ಹಗರ ದಬ್ಬೆಗೆ ಹೊಟ್ಟೆ ತಂದು ಕಟ್ಟಿ ಇಟ್ಟಾಂಗೆ ಕಾಣ್ತು’ ಎಂದಿದ್ದಕ್ಕೆ, ‘ಪಾಪ, ಅದರ ಕತೆ ಯಂಥ ಕೇಳ್ತೆ, ಹುಡುಕೀ ಹುಡುಕೀ ಹಾಳು ಬಾವಿಗೆ ಕೆಡಗಿದಾಂಗಾಜು’ ಎಂದಿದ್ದಳು ಅಮ್ಮ. ಊರವರ ಊಹೆ ನೂರಕ್ಕೆ ನೂರು ಸತ್ಯ ಮಾಡಿದ್ದ ಚಟಸಾರ್ವಭೌಮನಂತೆ ಆಕೆಯ ಗಂಡ ಮಾಬ್ಲ. ಕುಡಿತ, ಇಸ್ಪೀಟು, ದುಂದು, ದುಪ್ಪಾಳತನ… ಮೇಲಿಂದ ಲಂಪಟತನ. ಊರ ಬದಿ ಹೆಣ್ಣು ಸಿಗುವುದೇ ಕಷ್ಟವಾಗಿ ಘಟ್ಟದ ಮೇಲೆ ಬಂದು ಹುಡುಕುತ್ತಿದ್ದಾಗ ರತ್ನ ಸಸಾರಕ್ಕೆ ಸಿಕ್ಕಿಕೊಂಡಿದ್ದಳು.
ದುಡಿತಕ್ಕೆ ಹೆದರುವವಳಲ್ಲ ಆಕೆ- ಮದುವೆಗೆ ಮುನ್ನ ದುಪ್ಪಾಳ ಅಪ್ಪನನ್ನು ಕಂಡಿದ್ದಳು; ಈಗ ದುಪ್ಪಾಳ ಗಂಡ. ವ್ಯತ್ಯಾಸವೆಂದರೆ ಮೊದಲು ಅವ್ವನ ಅಕ್ಕರೆ ಇತ್ತು, ಈಗ ಅತ್ತೆಯ ಅಸಡ್ಡೆ ಅಷ್ಟೇ. ಹೇಗೋ ಗಂಡನ ಮನವೊಲಿಸಿ ದಾರಿಗೆ ತರುವಷ್ಟರಲ್ಲಿ ಬಸುರಿ ಆಕೆ. ಇತ್ಲಾಗೆ ಮಾದೇವಿಯ ಮಗ ಸುಬ್ರಾಯಂದು ಮದುವೆ ನಿಶ್ಚಯವಾಗಿತ್ತು. ಮದುವೆಗೆ ಬಂದ ರತ್ನ ಆರಾಮಿಲ್ಲದೇ, ಡಾಕ್ಟರ ಸಲಹೆಯಂತೆ ತವರಲ್ಲೇ ಉಳಿದಿದ್ದಳು. ಹೆಂಡತಿ ದೂರವಾಗಿದ್ದೇ ಮಾಬ್ಲ ಮತ್ತೆ ಬಾಲ ಬಿಚ್ಚಿದ್ದನಂತೆ. ಅತ್ತಿಗೆಯ ತಂಗಿ ಜೊತೆ ಸಂಬಂಧ ಬೆಳೆಸಿ ಆಕೆ ಗರ್ಭಿಣಿಯಾಗಿದ್ದರಿಂದ, ಹೆಂಡತಿಯನ್ನು ಬಿಟ್ಟು ಅವಳನ್ನೇ ಮದುವೆಯಾಗು ಎಂದು ಅಣ್ಣ-ಅತ್ತಿಗೆ ಪಟ್ಟು ಹಿಡಿದಿದ್ದರಂತೆ. ಗಂಡನ ಅವಾಂತರ ರತ್ನಳ ಜೀವಕಳೆಯನ್ನೇ ಕಳೆದಿತ್ತು. ಇದೇ ಸಂದರ್ಭದಲ್ಲಿ ನಾನು ಆಕೆಯನ್ನು ಕಂಡದ್ದು. ಅದಾಗಿ ಒಂದು ವಾರಕ್ಕೆ ನಡೆದ ಪಂಚಾಯಿತಿಯಲ್ಲಿ ಸುಬ್ರಾಯಂಗೂ, ಮಾಬ್ಲಂಗೂ, ಅವನ ಅಣ್ಣಂಗೂ ಜಟಾಪಟಿಯಾಗಿ ಪರಸ್ಪರ ಕುತ್ತಿಗೆ ಪಟ್ಟಿಗೆ ಕೈ ಹಾಕಿ ಹೊಡೆದಾಡಿದ ನಂತರ ಮಾಬ್ಲ, ‘ಜನ್ಮಿತ ಇನ್ನು ನಿಮ್ಮನೆಗೆ ಕಳಸಾಕಲ್ಲ’ ಹೇಳಿ ತಿಂಗಳು ತುಂಬಿದ ರತ್ನಳನ್ನು ವಾಪಸ್ ಕರಕೊಂಡು ಹೋದನಂತೆ. ಆಮೇಲೆ ಮಗಳು ಗಂಡು ಮಗು ಹಡೆದಿದ್ದು, ಅವಳ ಗಂಡ ಅಣ್ಣನಿಂದ ಬೇರೆಯಾಗಿದ್ದು ಎಲ್ಲಾ ಅಡಾಪಡಾ ಸುದ್ದಿಯಾಗೇ ಮಾದೇವಿಯನ್ನು ತಲುಪಿದ್ದು. ಹೋಗಿ ನೋಡಿ ಬರೋಣವೆಂದರೆ ಮನೆಯಲ್ಲಿ ಶಣ್ಯಂದು, ಸುಬ್ರಾಯಂದು ಆಣೆ, ಭಾಷೆ ಕಟ್ಟಲೆ.
ಯೋಚನೆಯನ್ನು ತುಂಡರಿಸಿದ್ದು ದೂರವಾಣಿ ಕರೆ. ಉದ್ದನೆಯ ರಿಂಗ್…. ಪ್ರದೀಪನದೇ… ಅನುಮಾನವಿಲ್ಲ. ಮಗುವನ್ನು ಎದೆಗವಚಿಕೊಂಡೇ ‘ಹಲೋ’ ಎಂದೆ. ‘ಹಾಯ್ ಹನಿ’… ಮಗಚಿಟ್ಟು ಬರುವಷ್ಟು ಸವಿ ಅವನ ದನಿಯಲ್ಲಿ. ‘ಮಗನ ಫೋಟೋ ಯಾವಾಗ ತೆಗೆಸ್ತೆ? ವೀಕೆಂಡ್ ಒಳಗೆ ಪಾಸ್ಪೋರ್ಟ್ ಡಾಕ್ಯುಮೆಂಟ್ ರೆಡಿ ಮಾಡಿಡು. ಅಪ್ಲಿಕೇಶನ್ ಸಬ್ಮಿಟ್ ಮಾಡಲೆ ಏರ್ಪಾಟು ಮಾಡ್ತಿ’ ಎಂದ. ಉತ್ತರ ಕೊಡಲು ಮನಸ್ಸಾಗಲಿಲ್ಲ. ‘ಯೋಚ್ನೆ ಮಾಡ್ತಿ’ ಎಂದು ಫೋನಿಟ್ಟೆ. ನಿನ್ನೆ ರಾತ್ರಿ ಇದೇ ವಿಷಯಕ್ಕಲ್ಲವೇ ಒಂದು ತಾಸು ಫೋನಿನಲ್ಲೇ ತಿಕ್ಕಾಟ ನಡೆಸಿದ್ದು. ನಾನು ಗರ್ಭಿಣಿಯಾಗುತ್ತಲೇ ಹೆರಿಗೆ ರಜೆಯ ಪ್ಲಾನಿಂಗ್ ಶುರು ಮಾಡಿದ್ದರೆ ಇಂವ ವಿದೇಶ ಪ್ರಯಾಣಕ್ಕೆ ಸ್ಕೆಚ್ ಹಾಕಿದ್ದ. ‘ಎಲ್ಲಾ ನಮ್ಮ ಒಳ್ಳೇದಕ್ಕೆ. ನೀನು ಬಾಣಂತನ ಹೇಳಿ ನಾಲ್ಕು ತಿಂಗಳು ಊರಿಗೆ ಹೋಗಿ ಕುಂತ್ರೆ ಇಲ್ಲಿ ನಾನೊಬ್ನೇ ಆಗ್ತಿ. ಅದರ ಬದ್ಲು ‘ಆನ್ ಸೈಟ್’ ಹೋದ್ರೆ ಸಖತ್ ದುಡ್ಡು ಮಾಡಲಾಗ್ತು. ನೀ ವಾಪಸ್ ಬರಹೊತ್ತಿಗೆ ನಾನೂ ವಾಪಸ್ಸಾಗ್ತಿ’, ಬೆಣ್ಣೆ ಹಚ್ಚಿದ್ದ. ‘ನಾನು ಬೇನೆ ತಿಂದು ನರಳ್ತಾ ಇದ್ರೆ ನೀನು ಫಾರಿನ್ ಮಜಾ ಮಾಡ್ತ್ಯ, ಹುಟ್ಟಿದ ಮಗುವನ್ನ ಎತ್ತಿಗ್ಯತ್ತ್ತಿಲ್ಯ, ಹೆಸರಿಡಲೆ ಅಪ್ಪನೇ ಬರವು ಗೊತ್ತಿದ್ದ’ ದಬಾಯಿಸಿದ್ದೆ. ‘ನಿನ್ನ ನೋವು ನಾ ಹಂಚಿಕೊಳ್ಳಲಾಗ್ತ ಹೇಳು, ಶಿಶುಗಂತೂ ಯಾರು ಎತ್ತಿಕ್ಯಂಡ್ರೂ ಒಂದೇ, ಏನೂ ತಿಳಿತಿಲ್ಲೆ. ದುಡಕಂಡು ಬಂದ್ರೆ ನೀನು ಇಷ್ಟಪಟ್ಟಂಥ ಮನೆ ಆಗ್ತು ಬೆಂಗಳೂರಲ್ಲಿ’ ವಾದ ಮಾಡಿದ್ದ. ತನ್ನ ಮಹತ್ವಾಕಾಂಕ್ಷೆಗೇ ಅಂಟಿಕೊಂಡು ವಿದೇಶಕ್ಕೆ ಹೋದವನಿಗೆ ಈಗಿನ್ನೊಂದು ಆಸೆ. ‘ನೀನೂ ಇಲ್ಲಿ ಬಂದ್ಬಿಡು. ಒಂದು ವರ್ಷ ಝುಮ್ಮಂತ ಇದ್ದು ಹೋಪನ’ ಎನ್ನುತ್ತಿದ್ದಾನೆ. ಕೆಲಸ ಬಿಡಬೇಕಾಗುತ್ತಲ್ಲ ಎಂದು ನಾನು ಚಿಂತಿಸಿದರೆ ‘ಚೊಲೋನೆ ಆತು, ಜಾಸ್ತಿ ಹೊತ್ತು ಜೊತೆಗೆ ಇರಲಾಗ್ತು’ ಎನ್ನುತ್ತಾನವ. ಅಪ್ಪ ಅಮ್ಮನೂ ಅವನಿಗೆ ಬೆಂಬಲವಾಗಿ ‘ಸಣ್ಣ ಶಿಶು ಇಟ್ಗಂಡು ಕೆಲಸ ಕಷ್ಟನೇ. ಆರಾಮಾಗಿ ಮನೆಲ್ಲಿದ್ದು ಮಗನ್ನ ನೋಡ್ಕ್ಯ. ಎಲ್ಲರಿಗೂ ಒಳ್ಳೇದು’ ಎಂದು ತುಂಬಕ್ಕಿ ತಟ್ಟುತ್ತಿದ್ದಾರೆ. ನನ್ನ ಅಭಿಲಾಷೆಗೆ ಬೆಲೆ ಇಲ್ಲವೇ? ತಲೆ ಹನ್ನೆರಡಾಣೆಯಾಗುತ್ತಿದೆ.
ಮಾಣಿಗೆ ಎಣ್ಣೆ ತೀಡಿದ ಅಮ್ಮ ಸ್ನಾನಕ್ಕೆ ಕರೆದುಕೊಂಡು ಹೋದರೂ ಅನ್ಯಮನಸ್ಕಳಾಗಿ ಕುಂತೇ ಇದ್ದೆ. ನೀರಿನ ಬಿಸಿ ತಡೆಯಲಾರದೇ ಅಂವ ಒಂದೇ ಸಮ ಅತ್ತಿದ್ದು, ಕೆಂಪಗಾಗಿ ಉಗಿ ಹಾಯುತ್ತಿರುವ ಮೊಮ್ಮಗನನ್ನು ಎತ್ತಿಕೊಂಡು ಬಂದ ಅಮ್ಮ ‘ಬಾಳೆಯ ಬನ ಚಂದ, ತಾಳೆಯ ಹೂ ಚಂದ, ಯಮ್ಮನೆ ತಮ್ಮಯ್ಯನ ಅಳು ಚಂದ…. ಒಳೊಳಳೆಯ್…’ಎನ್ನುತ್ತ ಪೌಡರ್ ಮೆತ್ತಿ ಪಂಜಿ ಸುತ್ತಿದ್ದು ಮರಗಟ್ಟಿದ್ದ ನನ್ನ ಮನಕ್ಕೆ ತಾಗಲೇ ಇಲ್ಲ. ‘ಯಂಥಾ ತಲೆ ಕೆಡಿಸಿಕ್ಯತ್ತೆ ತಂಗಿ, ಹಣೇ ಬರದಲ್ಲಿ ಇದ್ದಂಗಾಗ್ತು. ಗಂಡ-ಸಂಸಾರಕ್ಕಿಂತ ನಿನ್ನ ಕೆಲಸ ಹೆಚ್ಚಲ್ಲ. ತಗ, ಮಾಣಿನ್ ಮಲಗಿಸಿ ಬಾ. ಮೀಯಲಕ್ಕು’ ಸಸಾರಕ್ಕೆ ಹೇಳಿದ ಅಮ್ಮ ಮಗನನ್ನು ಕೈಗಿತ್ತು ಅಡುಗೆ ಮನೆಯತ್ತ ನಡೆದಳು. ಇನ್ನು ನನಗೆ ಕಷಾಯ, ಪಥ್ಯದ ಪದಾರ್ಥ, ಮಧ್ಯಾಹ್ನದ ಅಡಿಗೆ… ಎನ್ನುತ್ತ ಮನೆಕೆಲಸದಲ್ಲಿ ಮುಳುಗಿಹೋಗುವ ಅಮ್ಮನಿಗೆ ನನ್ನ ವಾದ ‘ಹಠ’ವಾಗಿ ಕಂಡರೆ ಆಶ್ಚರ್ಯವೇನಿಲ್ಲ.ಮಗ ಮಲಗುತ್ತಿದ್ದಂತೆ ನನ್ನ ಸ್ನಾನ ‘ಸಂಘರ್ಷ’ ಶುರು! ಹಂಡೆಗಟ್ಟಲೆ ಕುದಿ ನೀರನ್ನು ಮಾದೇವಿ ಧಸಭಸ ಮೈ ಮೇಲೆ ಹೊಯ್ಯುತ್ತಿದ್ದರೆ ದಿನಾ ಕೂಗಿಕೊಳ್ಳುತ್ತಿದ್ದೆ. ಇವತ್ತು ಆ ನೀರಿಗಿಂತ ಜಾಸ್ತಿ ಬಿಸಿ ಮನಸ್ಸಿನಲ್ಲಿ ತುಂಬಿಕೊಂಡಿದ್ದರಿಂದ ತಾಪವೂ ತಿಳಿಯಲಿಲ್ಲ, ಚರ್ಮ ಕೆಂಪಾಗಿ ಉರಿಯುತ್ತಿದ್ದುದೂ ಅರಿವಾಗಲಿಲ್ಲ. ಸ್ನಾನದ ನಂತರ ‘ಬೆವರಿಳಿಸಿಕೊಳ್ಳುವ’ ರಾಮಾಯಣ! ‘ಬಾಳಂತಿ ಮೈ ಚೊಲೋ ಬೆಗರಬಕು. ಬಾಳಂತನದಾಗೆ ಬೆಗರಿಸಿಕಳ್ನಲ್ಲ ಅಂದ್ರೆ ಕಡಿಗೆ ಸಾಯತಂಕ ಕಸಾಲೆ ತಪ್ಪಕಲ್ಲ’ ಎಂಬುದು ಕಳೆದ ಒಂದೂವರೆ ತಿಂಗಳಿಂದ ಮಾದೇವಿಯ ಪ್ರತಿದಿನದ ಬೋಧನೆ. ಹೊಡತಲ ಬೆಂಕಿಯೆದುರು ಕಂಬಳಿ ಮುಚ್ಚಿಕೊಂಡು ದುಂಡಗೆ ಮಲಗುವುದೆಂದರೆ ನನಗೆ ಎಲ್ಲಿಲ್ಲದ ಮುಜುಗರ, ಕಿರಿಕಿರಿ. ಇವೆಲ್ಲ ಅರ್ಥವಿಲ್ಲದ ಆಚರಣೆಗಳೆಂದು ದಿನಾ ತಕರಾರು ತೆಗೆಯುತ್ತಿದ್ದೆ. ಇವತ್ತು ಯಾವುದಕ್ಕೂ ಮನಸ್ಸಾಗದೇ ಸೀದಾ ಹೋಗಿ ಕಂಬಳಿ ಮೇಲೆ ಬಿದ್ದುಕೊಂಡೆ. ಹಿಂದೆಯೇ ಬಂದ ಮಾದೇವಿ ಮೇಲಿಂದೆರಡು ಕಂಬಳಿ ಮುಚ್ಚಿ ಬೆಂಕಿ ಹೆಚ್ಚಿಸಿದಳು. ಧಗೆಗೆ ಸ್ವೇದಗ್ರಂಥಿಗಳೆಲ್ಲ ಬಾಯ್ತೆರೆದು ಗುಳುಗುಳು ಉಗುಳತೊಡಗಿ ರೇಜಿಗೆಗಿಟ್ಟುಕೊಳ್ಳುವ ಹೊತ್ತಿಗೆ ಸರಿಯಾಗಿ ‘ಟಕ ಟಕ’ ಸದ್ದು ಹತ್ತಿರವಾಯ್ತು.
ಅಮ್ಮಮ್ಮ ಕೋಲೂರುತ್ತ ಬಂದಿರಬೇಕು, ಬೆಂಕಿ ಕಾಸಲು. ‘ಘನಾಕೆ ಬೆಂಕಿ ಕತ್ಸು ಮಾದೇವಿ. ಗಳಗಳ ಬೆವರಿಳಿಬೇಕು ನೋಡು’- ಪಕ್ಕದಲ್ಲಿ ಕುಳಿತುಕೊಂಡು ಕಂಬಳಿ ಮೇಲಿಂದಲೇ ನನ್ನ ಮೈ ತಡವಿದ ಅಮ್ಮಮ್ಮ, ‘ಬೆಂಗಳೂರಲ್ಲಿ ಚೊಲೋ ಕೆಲಸದಲ್ಲದೆ ನಮ್ಮನೆ ಮೊಮ್ಮಗಳು. ಹಡೆದ ಮೈ ಗಟ್ಟಿ ಆದ್ರೆ ನಾಳೆ ಕೆಲಸಕ್ಕೋಪದು ಸಸಾರ. ಸರೀ ಆರೈಸು ಅದ್ರನ್ನ’ ಎಂದಳು. ಅಕ್ಕರೆಯ ದನಿಗೆ ಆ ಧಗೆಯಲ್ಲೂ ತಂಗಾಳಿ ಬೀಸಿದಂತಾಯ್ತು.’ನಿನ್ನ ಮಗಳ ಪಂಚಾಯ್ತಿ ಮುಗಿತಿದ್ದಂಗೆ ಮಗಂದು ಶುರುವಾಗದೆ ಹೇಳಿ ಅಡಾಪಡಾ ಕೇಳ್ದೆ. ಯಂಥೇ ಅದು?’ ಸೊಂಟ ಕಾಸುತ್ತ ಅಮ್ಮಮ್ಮ ಕೆದಕಿದಳು.’ಥೋ, ಅಂವನ ಸುದ್ದಿ ಯಂಥ ಕೇಳ್ತ್ರಿ ಗೌರಮಾ. ಆವಾಗ ಮನ್ಯಾಗೆ ಇನ್ನೊಂದು ತಂಗಿ ಅದೆ, ಅದ್ರ ಮದೀ ಮಾಡು ಮದ್ಲು ಅಂದ್ರೂ ಕೇಳ್ದೇ ತಾನು ಮದೀಯಾದ. ಹುಡ್ಗಿ ಹೀಂಗದೆ ಹೇಳಿ ನಮಗ್ಯೆಂತಾ ಗೊತ್ತಿತ್ತನ್ರಾ’ ಅಳಲು ತೋಡಿಕೊಂಡಳು ಮಾದೇವಿ.’ಗಂಡುಹುಡ್ಗ’ ಸುಬ್ರಾಯನ್ನ ಮುದ್ದಿನಿಂದ ಸಾಕಿದ್ದಳು ಮಾದೇವಿ. ನನ್ನ ಕ್ಲಾಸಿನಲ್ಲಿ ಇದ್ದವ ಎಂಟನೆತ್ತಿಗೆ ಢುಮ್ಕಿ ಹೊಡ್ದು ಊರಲ್ಲೇ ಓಡಾಡಿಕೊಂಡಿದ್ದ. ಹೇಳಿದವರ ಮನೆಗೆ ನೆಟ್ಟಗೆ ಕೆಲಸಕ್ಕೆ ಹೋಗುತ್ತಿಲ್ಲ, ಗುಟ್ಕಾ ಜಗಿಯುತ್ತಾನೆ ಎಂದು ತಾಯಿ ಒಮ್ಮೆ ಜೋರು ಬಯ್ದಿದ್ದಕ್ಕೆ ಸಿಟ್ಟಾಗಿ ಕಿವಿಯೋಲೆ ಕದ್ದು ಓಡಿ ಹೋದವ ವರ್ಷದ ಮೇಲೆ ಖಾಲಿ ಕೈಯಲ್ಲಿ ವಾಪಸ್ಸಾಗಿದ್ದ.
ಹೊಸದಾಗಿ ಕಲಿತ ವಿದ್ಯೆಯೆಂದರೆ ಸಿನೆಮಾ ಷೋಕಿ, ಕುಡಿತ. ಆದರೂ ಮತ್ತೆಲ್ಲಿ ಓಡಿ ಹೋದಾನೋ ಎಂದು ಮಾದೇವಿ ತಣ್ಣಗೆ ಉಳಿದಿದ್ದಳು. ಸೊಸೈಟಿಯ ರಾತ್ರಿ ಕಾವಲುಗಾರನಾಗಿ ಸೇರಿಕೊಂಡರೂ ಸಂಪಾದನೆಯೆಲ್ಲ ಷೋಕಿಗೇ ಆಗುತ್ತಿತ್ತು. ಇದ್ದಿದ್ದರಲ್ಲಿ ದಡ ಹತ್ತಿದವಳೆಂದರೆ ಕಿರಿ ಮಗಳು ಸವಿತಾ. ಹತ್ತನೆತ್ತಿ ಮುಗಿಸಿ ಡೇರಿಯಲ್ಲಿ ಕ್ಯಾನು ತೊಳೆಯುವ, ಗುಡಿಸಿ ಒರೆಸುವ ಕೆಲಸಕ್ಕೆ ಸೇರಿ ಒಂಚೂರು ಸಂಪಾದಿಸುತ್ತಿದ್ದಳು.ಇಂತಿಪ್ಪ ಸುಬ್ರಾಯ ಏಕಾಏಕಿ ಒಂದಿನ ತನಗೊಂದು ಹುಡುಗಿ ಗೊತ್ತು ಮಾಡಿಕೊಂಡು ಬಂದ. ಕಿರಿ ತಂಗಿಯದಾಗಲಿ ತಡಿ ಎಂಬ ಹಿತವಚನಕ್ಕೆ ತಲೆ ಬಾಗದ್ದರಿಂದ ಮಾದೇವಿ-ಶಣ್ಯ ಮದುವೆಗೆ ಹೂಂಗುಟ್ಟಿದರು. ಸಂಭ್ರಮ ಇಳಿದ ಮೇಲೆ ಸೊಸೆಯೇ ಹೇಳಿದಳಂತೆ ತಾನು ಮದುವೆಗೆ ಮೊದಲೇ ಬಸುರಾಗಿ ಹೆತ್ತವಳು… ಮದುವೆ ದಿನ ‘ನಂಟರ ಹುಡ್ಗ’ ಎಂದು ಓಡಾಡಿಕೊಂಡಿದ್ದ ಪೋರ ತನ್ನ ಮಗ ಎಂದು. ಶುರುವಾಯಿತು ಸುಬ್ರಾಯನ ಪೌರುಷ ಪ್ರತಾಪ- ಹೊಡೆತ, ಬಡಿತ ಎಲ್ಲ. ಅವನ ಹೆಂಡತಿ ‘ತನ್ನದೇ ತಪ್ಪು’ ಎಂದು ತಿಂಗಳುಗಟ್ಟಲೇ ಸಹಿಸಿಕೊಂಡು ಇದ್ದಳಂತೆ. ಆದರೆ ಗ್ರಾಮದ ‘ಸ್ತ್ರೀ ಶಕ್ತಿ’ ಸಂಘದವರು ತಡೆಯಲಿಕ್ಕಾಗದೇ ಪೊಲೀಸ್ ಕಂಪ್ಲೇಂಟ್ ಕೊಟ್ಟು, ಪೋಲಿಸರು ಬಂದು ಸುಬ್ರಾಯನಿಗೆ ನಾಕು ತದುಕಿದ್ದಲ್ಲದೇ, ಕುಟುಂಬದ ಎಲ್ಲರೂ ಠಾಣೆಗೆ ಬಂದು ‘ಇನ್ನು ಹೀಂಗೆ ಮಾಡೋದಿಲ್ಲ’ ಎಂದು ಮುಚ್ಚಳಿಕೆ ಬರೆದುಕೊಡಬೇಕೆಂದು ತಾಕೀತು ಮಾಡಿದ್ದರಂತೆ. ಅದೇ ಸುದ್ದಿ ಅಮ್ಮಮ್ಮನಿಗೆ ವಿವರಿಸಿದ ಮಾದೇವಿ ‘ನಾಳೀಕೆ ಬ್ಯಳಿಗ್ಗೆ ಠಾಣೆಗೆ ಬರೂಕೆ ಹೇಳಿ ಹೋಗ್ಯಾವೆ’ ಎಂದಳು.
ಬೆವರೊರೆಸಿಕೊಂಡವಳು ಬಟ್ಟೆ ತೊಟ್ಟು ಬಂದು ಹಾಸಿಗೆ ಮೇಲೆ ಬಿದ್ದುಕೊಂಡೆ. ಜಗುಲಿಯಲ್ಲಿ ಅಮ್ಮ ಮಾದೇವಿಗೆ ಕವಳ ಕೊಡುತ್ತಿದ್ದವಳು, ‘ಹಂಗಾರೆ ನಾಳೆ ಮೀಸಲೆ ಬರುದಿಲ್ಲ ನೀನು, ಠಾಣೆ ಕಾಂಬಲೆ ಹೋಪವಳಿದ್ದೀಯೆ’ ಎಂದಳು.’ಅದಕ್ಕೆಂಥು? ಎಂಟು ಗಂಟಿಗೇ ಬತ್ನಿ. ಒಂಬತ್ತೂವರೆ ಬಸ್ಸಿಗೆ ಹೋದ್ರೂ ಆತದೆ ನಂಗೆ. ಠಾಣೆ ನೋಡದು ನನ್ ಹಣೆಬರದಾಗೆ ಇದ್ರೆ ಅಳ್ಚಕಾಗ್ತದ್ಯ’ ಕವಳ ಬಾಯಿಗೆ ಗಿಡಿಯುತ್ತ ಮಾದೇವಿ ಹೊರಟಳು.ಕೇಳುತ್ತಿದ್ದ ನನಗೆ ಬೆಳಿಗ್ಗೆ ಎಂಟು ಗಂಟೆಯೊಳಗೆ ಏಳಬೇಕಲ್ಲ ಎಂಬ ಚಿಂತೆ ಜೊತೆಗೆ ‘ಹಣೆಬರಾ ಅಳ್ಚಕಾಗ್ತದ್ಯ’ ಎಂಬ ಜಿಜ್ಞಾಸೆಯೂ ಮೂಡಿ ಸಿಕ್ಕಾಪಟ್ಟೆ ಸುಸ್ತೆನಿಸತೊಡಗಿತು. ‘ಸ್ಟ್ರೆಸ್ ಮ್ಯಾನೇಜ್ಮೆಂಟ’ನ್ನು ಮಾದೇವಿಯಿಂದಲೇ ಕಲಿತರೊಳ್ಳೆಯದೇನೋ.

('ಅವಧಿ.ಕಾಮ್'ನಲ್ಲಿ ಫೆಬ್ರವರಿ ೧೧, ೨೦೧೪ರಂದು ಪ್ರಕಟವಾದ ಲೇಖನ)

ಶುಕ್ರವಾರ, ಸೆಪ್ಟೆಂಬರ್ 6, 2013

ಮೌನದ ಮನವಿ

ಎಲ್ಲಿ ಅಡಗಿರುವೆ ಸ್ವರ
ಮೆಲ್ಲಗೆ ಮರೆಯಾಗಿ
ಕಲ್ಲಾಗಿದೆ ಕೊರಳು
ಸೊಲ್ಲೆತ್ತಲೂ ಬರದೆ

ಮನ್ನಿಸು ಅಸಡ್ಡೆಯನು
ಬಿನ್ನಹದ ಉಪೇಕ್ಷೆಯನು
ನಿನ್ನಿರುವ ಮರೆತು
ಬೆನ್ನು ತೋರಿದ ತಪ್ಪನು

ಮತ್ತಿನ ಮಬ್ಬಿನಲಿದ್ದೆ
ಕತ್ತಲೆಯ ಹೊದ್ದಿದ್ದೆ
ಚಿತ್ತದ ನುಡಿ ಲೆಕ್ಕಿಸದೆ
ಮೆತ್ತಗೆ ಮುಸುಕೆಳೆದಿದ್ದೆ

ಭ್ರಮೆ ಚದುರಿ ಬಯಲಾಗೆ
ಕಮರಿತ್ತು ದನಿ ಟಿಸಿಲು
ಅಮಾವಾಸ್ಯೆಯ ನಭದಂತೆ
ಜಮೆಯಾದ ಕಾರ್ಮುಗಿಲು

ಇಲ್ಲೀಗ ಗದ್ದಲ, ಎಲ್ಲೆಲ್ಲೂ ಸಪ್ಪಳ
ಚೆಲ್ಲಿ ತುಳುಕಿದೆ ಕರ್ಕಶ ರವ
ಒಲ್ಲೆ ಈ ಗೌಜು, ನಿಲ್ಲದ ಮೋಜು
ಮೆಲ್ಲುಲಿಗೆ ಕಿವಿಯಾಗಿ ಕಾದಿದೆ ಜೀವ

ಬಿಕ್ಕುತಿಹೆ ಬೇಡುತಿಹೆ ಪ್ರೀತಿಯಲಿ ಬೈಯುತಿಹೆ
ಸಿಕ್ಕು ನೀ ಬೇಗ, ಕಣ್ಣಂತೆ ಕಾಯುವೆ
ಸುಕ್ಕಿದ ಚೇತನಕೆ ತುಸು ಕಸುವು ತುಂಬುವೆ
ಅಕ್ಕರೆಯಲಿ ಆದರಿಸಿ ಬೆನ್ನಾಗಿ ನಿಲ್ಲುವೆ
(ಅವಧಿ.ಕಾಮ್ ನಲ್ಲಿ ಪ್ರಕಟವಾದ ಕವನ)

ಸೋಮವಾರ, ಮಾರ್ಚ್ 9, 2009

ಜೀವ ನದಿ

ಅಂತರ್ರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ನನ್ನ ಜೀವನದ ಬಹುಮುಖ್ಯ ಅಂಗವಾದ ಒಬ್ಬ ಮಹಿಳೆಯ ಕುರಿತು ಈ ಬರೆಹ:
ಆಕೆ ನನ್ನ ಅಮ್ಮಮ್ಮ. ಹೆಸರಿಗೆ ಅಮ್ಮಮ್ಮನಾದರೂ ವಾಸ್ತವದಲ್ಲಿ ಅಪ್ಪನ ಅಮ್ಮ. ಅಚ್ಚ ಬಿಳಿ ಬಣ್ಣ, ಗುಂಡಗಿನ ಗಿಡ್ಡ ದೇಹ, ಬೋಳಿಸಿದ ತಲೆ, ಗುಳಿ ಬಿದ್ದ ಕಣ್ಣುಗಳು, ನೆರಿಗೆಗಟ್ಟಿದ ಮುಖ-ಮೈ, ಸೊಂಟಕ್ಕೆ ಬಿಗಿಯಾಗಿ ಸುತ್ತಿದ ಕೆಂಪು ಅಥವಾ ಅದರ ಆಚೀಚಿನ ಬಣ್ಣಗಳ ಹತ್ತಿ ಸೀರೆ, ರವಿಕೆ... ಅಮ್ಮಮ್ಮನ ಬಾಹ್ಯ ರೂಪ ಇದು. ನಾನು ಹುಟ್ಟಿದಾಗಿನಿಂದ ನೋಡುತ್ತಿರುವ ರೂಪವೂ ಹೌದು. ಇತ್ತೀಚಿನ ವರ್ಷಗಳಲ್ಲಿ ಸುಕ್ಕು ಹೆಚ್ಚಿದೆ, ಕಣ್ಣು-ಕಿವಿ ಕೊಂಚ ಮಂಜು-ಮಂದ ಆಗಿವೆ, ಮುದಿವಯಸ್ಸು ತನ್ನ ಅಸ್ತಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡಿದೆ ಎಂಬುದನ್ನು ಬಿಟ್ಟರೆ, ಒಟ್ಟಾರೆಯಾಗಿ ಅಮ್ಮಮ್ಮನ ಅಪೀಯರೆನ್ಸ್ ಬಹಳೇನೂ ಬದಲಾಗಿಲ್ಲ.
ದೇಹ ಹಣ್ಣಾಗಿದ್ದರೂ ಅಮ್ಮಮ್ಮನ ಮನಸ್ಸು ಇನ್ನೂ ಹಸಿರು. ಅಲ್ಲಿ ಪ್ರೀತಿ-ವಾತ್ಸಲ್ಯ, ಕಾಳಜಿ, ಅಂತಃಕರಣ (ಅವಳ ಭಾಷೆಯಲ್ಲಿ ತನುಕರಣೆ), ಮನೆಮಕ್ಕಳು, ಮೊಮ್ಮಕ್ಕಳ ಮೇಲಿನ ಮೋಹಗಳ ಚಿಲುಮೆ ಸದಾ ಚಿಮ್ಮುತ್ತದೆ. ಮನೆಗೆ ಬಂದ ಅತಿಥಿಗಳ ಊಟೋಪಚಾರ ಸರಿಯಾಗಿ ಆಗುತ್ತಿದೆಯೋ ಇಲ್ಲವೋ ಎಂಬ ಸಂದೇಹವೂ ಬರುತ್ತದೆ. ತೊಂಬತ್ತೆಂಟರ ಅಮ್ಮಮ್ಮ ಈಗಲೂ ಊಟದ ಪಂಕ್ತಿಯಲ್ಲಿ ಅಡ್ಡಾಡಿ ಖುದ್ದಾಗಿ ಅತಿಥಿಗಳನ್ನು ವಿಚಾರಿಸಿಕೊಂಡು ಬರುತ್ತಾಳೆ.
ಅಪ್ಪ-ಅಮ್ಮ ಜಮೀನು ನೋಡಿಕೊಂಡಿದ್ದ ಊರಿನಲ್ಲಿ ಸರಿಯಾದ ಶಾಲೆ ಇಲ್ಲದ ಕಾರಣ ಅಣ್ಣ, ಅಕ್ಕ, ನಾನು ಚಿಕ್ಕವಯಸ್ಸಿನಲ್ಲಿಯೇ ಅವರನ್ನು ಬಿಟ್ಟು ದೊಡ್ಡಪ್ಪ-ದೊಡ್ಡಮ್ಮಂದಿರೊಂದಿಗೆ ಅಮ್ಮಮ್ಮ ವಾಸಿಸುತ್ತಿದ್ದ ಬಾಳೇಸರ ಸೇರಿಕೊಂಡಿದ್ದೆವು. ತಂದೆ-ತಾಯಿಂದ ದೂರವಿದ್ದ ನಮಗೆ ಅಮ್ಮಮ್ಮನೇ ಎಲ್ಲ ಆಗಿದ್ದವಳು. ಸ್ನಾನ ಮಾಡಿಸಿ, ಬಟ್ಟೆ ತೊಳೆದು ಒಣಗಿಸುವುದರೊಂದಿಗೆ ಶಾಲೆಯಿಂದ ಬರುತ್ತಲೂ ತಿಂಡಿ-ಆಸರಿಗೆ ಒದಗಿಸುವುದು, ನಾವು ಸರಿಯಾಗಿ ಓದಿ-ಬರೆಯುತ್ತೇವೋ ಇಲ್ಲವೋ ಎಂಬ ಬಗ್ಗೆ ನಿಗಾ ಇಡುವುದು, ಸಣ್ಣಪುಟ್ಟ ಜಗಳ-ಹೊಡೆದಾಟ ನಡೆಸಿದರೆ ಮಧ್ಯಸ್ಥಿಕೆ ವಹಿಸಿ ಬಿಡಿಸುವುದು, ಕೊನೆಗೆ ರಾತ್ರಿ ಮಲಗುವಾಗ ಬಂದು ಹಾಸಿಗೆ ಬಿಡಿಸಿ, ಕುಡುವಿಕೊಟ್ಟು ಹೋಗುವವರೆಗೆ ಅಮ್ಮಮ್ಮ ನಮಗೆಲ್ಲ ಸೇವೆ ಮಾಡುತ್ತಿದ್ದಳು. ನಾವು ದೊಡ್ಡವರಾಗುತ್ತಿದ್ದಂತೆ ಇವೆಲ್ಲ ಕೆಲಸ ಖುದ್ದು ಮಾಡಿಕೊಳ್ಳಲು ಕಲಿಸಿದ್ದೂ ಅವಳೇ.
ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ಅಜ್ಜಿಮನೆಯ ಆಶ್ರಯಕ್ಕೆ ಬಂದಿದ್ದ ಅಮ್ಮಮ್ಮನಿಗೆ ಓದು ಬರೆಹ ಕಲಿಯಲಾಗಿರಲಿಲ್ಲ. ಇದೊಂದು ಕೊರಗು ಆಕೆಯಲ್ಲಿ ಯಾವತ್ತೂ ಉಳಿದಿತ್ತು. ಹಾಗಾಗಿ ಓದುವ ಮಕ್ಕಳನ್ನು ಅವಳು ಬಹಳವಾಗಿ ಪ್ರೀತಿಸುತ್ತಾಳೆ. ನಮ್ಮ ಶಾಲಾ ದಿನಗಳಲ್ಲಿ ಶನಿವಾರ, ಭಾನುವಾರ ಬಂತೆಂದರೆ ಆಕೆಗೆ ಪಾಠ ಓದಿ ಹೇಳುವ ಕೆಲಸ ನಮ್ಮದು. ತಾನು ಅಡಿಕೆ ಸುಲಿಯುತ್ತಲೋ, ಅಕ್ಕಿ ಬೀಸುತ್ತಲೋ, ಇನ್ನಾವುದೇ ಕೆಲಸ ಮಾಡುತ್ತಲಿರುವಲ್ಲಿ ನಮ್ಮನ್ನು ಕರೆಸಿಕೊಳ್ಳುತ್ತಿದ್ದ ಅಮ್ಮಮ್ಮ ಕನ್ನಡ ಪಠ್ಯದ ಯಾವುದಾದರೂ ಒಂದು ಪಾಠ ಓದಿ ಹೇಳಲು ಆದೇಶ ನೀಡುತ್ತಿದ್ದಳು. ಪೌರಾಣಿಕ ಪಾಠಕ್ಕೆ ಆದ್ಯತೆ. ಇಲ್ಲವಾದರೆ ಯಾವುದೂ ಸರಿ. ಪದ್ಯಗಳನ್ನೂ ರಾಗವಾಗಿ ಓದಿ ಹೇಳಬೇಕಿತ್ತು. ಅದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದರೆ ಆಕೆಗೆ ಇಮ್ಮಡಿ ಸಂತಸ. ಒಂದು ವಿಷಯ ತಿಳಿದುಕೊಂಡಿದ್ದಕ್ಕೆ, ಇನ್ನೊಂದು ತನ್ನ ಮೊಮ್ಮಕ್ಕಳಿಗೆ ಚಂದ ಮಾಡಿ ಓದಲು ಬರುತ್ತದಲ್ಲ ಎಂಬ ಹೆಮ್ಮೆಗೆ. ಮುಂದೆ ನಾವೆಲ್ಲ ಹೈಸ್ಕೂಲು, ಕಾಲೇಜು ಸೇರಿದ ಮೇಲೆ 'ಇಂಗ್ಲೀಷಲ್ಲಿ ಮಾತಾಡಿ' ಎಂದು ಪ್ರೋತ್ಸಾಹಿಸುತ್ತಿದ್ದಳು. 'ಅಮ್ಮಮ್ಮ ನಿಂಗದೆಲ್ಲ ಅರ್ಥ ಆಗ್ತಿಲ್ಲೆ' ಎಂದರೆ, 'ಅಡ್ಡಿ ಇಲ್ಲೆ, ನಿಂಗ ಮಾತಾಡಿದ್ನ ಕೇಳಿರೂ ಯಂಗದೇ ಸಂತೋಷ' ಎನ್ನುತ್ತಿದ್ದಳಾಕೆ.
ಓದು ಬರದಿದ್ದರೂ ಅಮ್ಮಮ್ಮ ಲೆಕ್ಕದಲ್ಲಿ ಭಾರಿ ಜಾಣೆ. ಮಗ್ಗಿ, ಕಾಲು, ಅರ್ಧ, ಮುಕ್ಕಾಲು ಎಲ್ಲ ಆಕೆಗೆ ಕಂಠಪಾಠ. ನಾಣ್ಯ, ನೋಟುಗಳನ್ನೆಲ್ಲ ಚಿತ್ರ ನೋಡಿಯೇ ಗುರುತಿಸುತ್ತಿದ್ದಳು. ಒಬ್ಬಂಟಿಯಾಗಿ ಬಸ್ ಪ್ರಯಾಣ ಮಾಡುವಷ್ಟು ಧೈರ್ಯವೂ ಇತ್ತು. ಸಂಪ್ರದಾಯದ ಹಾಡುಗಳು, ಗಾದೆಗಳಂತೂ ಸಾವಿರದ ಲೆಕ್ಕದಲ್ಲಿ ಗೊತ್ತು. ಯಾರಾದರೂ ಒಂದು ಹೊಸ ಹಾಡು ಹೇಳಿದರೆ ಒಂದು ಸಲ ಕೇಳುತ್ತಲೇ ಪೂರ್ತಿ ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಅವಳದ್ದು. ಬರೆಹ ಕಲಿಯದ ಆಕೆಯ ಕೊರಗು ಕೊನೆಯವರೆಗೂ ಇರಬಾರದೆಂದು ನಾನು ಆಕೆಗೆ ಸುಮಾರು ಎಂಬತ್ತನಾಲ್ಕು ವರ್ಷವಿದ್ದಾಗ 'ಅ,ಆ,ಇ,ಈ' ಹೇಳಿಕೊಟ್ಟಿದ್ದೆ. ಆಗ ನನಗೆ ಶಾಲಾ ರಜೆ, ಅಮ್ಮಮ್ಮನೂ ನನ್ನಪ್ಪ-ಅಮ್ಮ ಇದ್ದ ಹನುಮಾಪುರಕ್ಕೆ ಬಂದುಳಿದಿದ್ದಳು. ಅಕ್ಷರಾಭ್ಯಾಸ ಮಾಡುವ ಖುಷಿಯಲ್ಲಿ ಅಮ್ಮಮ್ಮ ಕನ್ನಡಾಕ್ಷರಗಳನ್ನು ತಿದ್ದಿದ್ದೇ ತಿದ್ದಿದ್ದು. ಎರಡು ಮೂರು ದಿನಗಳಲ್ಲಿ 'ಅಂ, ಅಃ'ವರೆಗೆ ಕಲಿತಳು. 'ಗೌರಿ' ಎಂದು ತನ್ನ ಹೆಸರು ಬರೆಯಲೂ ಕಲಿತಳು. ಅಪ್ಪ-ಅಮ್ಮನ ಪ್ರೋತ್ಸಾಹವೂ ಇದ್ದಿದ್ದರಿಂದ ಅಲ್ಲಿ ಇದ್ದಷ್ಟು ದಿನ ಸಮಯ ಸಿಕ್ಕಾಗಲೆಲ್ಲ ಕಲಿತಷ್ಟನ್ನು ಬರೆಯುತ್ತಲೇ ಇದ್ದಳು. ಆದರೆ ಬಾಳೇಸರಕ್ಕೆ ವಾಪಸ್ ಬಂದ ಮೇಲೆ ಪ್ರೋತ್ಸಾಹ, ಅವಕಾಶ, ಸಮಯ ಯಾವವೂ ಸಿಗದೇ ಅಮ್ಮಮ್ಮನ ಅಕ್ಷರಾಭ್ಯಾಸ ಅಘನಾಶಿನಿಯಲ್ಲಿ ಕೊಚ್ಚಿ ಹೋಯಿತು.
ದೂರದೂರುಗಳಿಂದ ಬಾಳೇಸರ ಶಾಲೆಗೆ ಬರುತ್ತಿದ್ದ ಹಲವಾರು ಮಕ್ಕಳಿಗೆ ನಮ್ಮನೆಯಲ್ಲಿ ಮಧ್ಯಾಹ್ನದ ಊಟ ಹಾಕುವುದು ಅಜ್ಜನ ಕಾಲದಿಂದಲೇ ಇದ್ದ ಪದ್ಧತಿಯಂತೆ. ಅದು ಶುರುವಾಗಿದ್ದು, ಇನ್ನೂ ನಡೆದುಕೊಂಡು ಬರುತ್ತಿರುವುದು ಅಮ್ಮಮ್ಮನ ಒತ್ತಾಸೆಯಿಂದಲೇ. ಮನೆಯ ಸೊಸೆಯರು ಎಷ್ಟೇ ಬಡಿಸಿದರೂ, 'ಪಾಪ, ಶಾಲೆಗೆ ಹೋಪ ಹುಡ್ರು, ಸರಿಯಾಗಿ ತಿನ್ನವು' ಎಂದು ಅಮ್ಮಮ್ಮ ತಾನೇ ಬಂದು ಮತ್ತಷ್ಟು ತುಪ್ಪ ಹಾಕುವುದು, ಕಜ್ಜಾಯ ಬಡಿಸಿಹೋಗುವುದು ಯಾವತ್ತೂ ಇದ್ದದ್ದೇ. ನಾವು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ, ಮಧ್ಯಾಹ್ನ ಊಟ ಮುಗಿಸಿ ಹೊರಡುವಾಗ ಯಾರಿಗೂ ಗೊತ್ತಾಗದಂತೆ ಒಂದರೆಡು ಚಕ್ಕುಲಿಯನ್ನೋ, ಅತ್ರಾಸ, ಅಂಬೊಡೆಯನ್ನೋ ಕೈಗಿಟ್ಟು ಸದ್ದಿಲ್ಲದೇ ತೆರಳುತ್ತಿದ್ದ ಅಮ್ಮಮ್ಮನ ಚಿತ್ರ ಇಂದಿಗೂ ಕಣ್ಣು ಕಟ್ಟುತ್ತದೆ.
ಅಜ್ಜ ಕೂಡ ಅಮ್ಮಮ್ಮನಂತೆ ಎಳವೆಯಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದಂತೆ. ಮದುವೆಯಾಗುವಾಗ ಇಬ್ಬರಿಗೂ ಚಿಕ್ಕವಯಸ್ಸು. ಕೆಲವೇ ಸಮಯದಲ್ಲಿ ಮನೆಯ ಹಿರಿಯಲು ಇವರನ್ನು ಬರಿಗೈಯಲ್ಲಿ ಮನೆಯಿಂದ ಹೊರ ಹಾಕಿದರಂತೆ. ಆಮೇಲೆ ನಾಲ್ಕು ಜನ ದೊಡ್ಡವರು ಮಧ್ಯಸ್ಥಿಕೆ ನಡೆಸಿ ಬಾಳೇಸರದಲ್ಲೊಂದು ತುಂಡು ಜಮೀನು ಖರೀದಿಸಲು ಸಹಾಯ ಮಾಡಿದ್ದರಂತೆ. ಹೀಗೆ ಏನೂ ಇಲ್ಲದೆಯೇ ಪಾಳು ಬಿದ್ದ ತೋಟ ನಂಬಿ ಸಂಸಾರ ಶುರು ಮಾಡಿದ ಅಜ್ಜನಿಗೆ ಸಮನಾಗಿ ನಿಂತು ಮನೆಯ ಹೊರಗೆ, ಒಳಗೆ ದುಡಿದವಳು ಅಮ್ಮಮ್ಮ. ಶಾಂತ ಸ್ವಭಾವದ ನಿಧಾನಸ್ಥ, ಭಾವುಕ, ಕಾವ್ಯಜೀವಿ ಅಜ್ಜನಿಗೆ ಭಾರಿ ಚುರುಕಿನ, ಚಟುವಟಿಕೆಯ, ವಾಸ್ತವವಾದಿ, ಗಡಸು ಹೆಂಡತಿ ಅಮ್ಮಮ್ಮ. ಅಜ್ಜ ಸ್ವಾತಂತ್ರ್ಯ ಹೋರಾಟಕ್ಕೆ ಸೇರಿ ಜೈಲು ಸೇರಿದಾಗ ಮನೆಯನ್ನು ನಡೆಸಿದವಳು ಅವಳು. ಅಂತೂ ಇಬ್ಬರು ಹೊಂದಿ ದುಡಿದು ಮನೆಯನ್ನು ಬೆಳೆಸಿದರು. ನಾಲ್ವರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು. ದೊಡ್ಡಪ್ಪಂದಿರಿಗೆ, ಅತ್ತೆಯರಿಗೆ ಮದುವೆಯೂ ಆಯಿತು. ಇನ್ನೊಬ್ಬ ದೊಡ್ಡಪ್ಪ, ನನ್ನಪ್ಪ ಇನ್ನೂ ಓದುತ್ತಿರುವಾಗಲೇ ಅಜ್ಜ ಕ್ಯಾನ್ಸರಿನಿಂದ ತೀರಿ ಹೋದರು. ಅಮ್ಮಮ್ಮ ಆಗಿನ ಸಂಪ್ರದಾಯದಂತೆ ತಲೆ ಬೋಳಿಸಿಕೊಂಡು, ಕೆಂಪಿನ ಛಾಯೆಗಳ ಸೀರೆಯುಡುವ ವಿಧವೆಯಾದಳು.
ಬಾಹ್ಯರೂಪಕ್ಕೆ ಮಡಿ ಹೆಂಗಸಾಗಿ ಕಂಡರೂ ಅಂತರಂಗದಲ್ಲಿ ಅಮ್ಮಮ್ಮ ತನ್ನ ಸೊಸೆಯಂದಿರಿಗಿಂತಲೂ ಹೆಚ್ಚು ಮಾಡರ್ನ್. ಮೊಮ್ಮಕ್ಕಳ ಮದುವೆ ವಿಷಯದಲ್ಲಿ 'ನಿಂಗ ಪ್ರೀತಿ ಮಾಡಿ ಬೇರೆ ಜಾತಿಯವರನ್ನು ಮದುವೆ ಆದರೂ ಅಡ್ಡಿಲ್ಲೆ, ಆದರೆ ಮದುವೆ ಆದಂವ ನಿಂಗಳನ್ನ ಯಾವತ್ತೂ ಗೌರವದಿಂದ, ಪ್ರೀತಿಯಿಂದ ಕಾಣವು. ಸಂಸಾರವನ್ನ ಸಮರ್ಥವಾಗಿ ನಡೆಸಿಕ್ಯಂಡು ಹೋಪಷ್ಟು ಗಟ್ಟಿ ಇರವು' ಎಂದವಳು ಅವಳು. ಮೊಮ್ಮಕ್ಕಳಲ್ಲಿ ಹುಡುಗಿಯರೆಲ್ಲ ಚೆನ್ನಾಗಿ ಓದಿ, ನೌಕರಿ ಮಾಡಬೇಕೆಂಬುದು ಅವರ ಮಹದಾಸೆ. ಒಬ್ಬಂಟಿಯಾಗಿ ಪರವೂರಿಗೆ ವಿದ್ಯಾಭ್ಯಾಸಕ್ಕೆ, ನೌಕರಿಗೆ ಹೊರಟು ನಿಂತಾಗ ಬೆನ್ನು ತಟ್ಟಿ ಕಳುಹಿಸಿದ್ದಳು. ಸ್ವಾತಂತ್ರ್ಯ ಹೋರಾಟಗಾರರ ಮಾಸಾಶನ ತರಲು ಸಿದ್ದಾಪುರಕ್ಕೆ ಹೋದಾಗಲೆಲ್ಲ ಅಲ್ಲಿನ ಬ್ಯಾಂಕುಗಳಲ್ಲಿ, ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರನ್ನು ನೋಡಿ ಬರುತ್ತಿದ್ದ ಅಮ್ಮಮ್ಮ 'ತಂಗಿ, ನಿಂಗಳೂ ಎಲ್ಲ ಇಂಥಾ ನೌಕರಿಗೆ ಸೇರಿ. ಕೆಲಸನೂ ಮಾಡಲಾಗ್ತು, ಮಕ್ಕಳನ್ನು ಬೆಳಸಿ ಸಂಸಾರ ನೋಡಿಕ್ಯಂಬಲೂ ಆಗ್ತು' ಎಂದು ಹುರುಪು ತುಂಬುತ್ತಿದ್ದಳು. ಈಗಲೂ ಸಹ, ಪತ್ರಿಕೆಗಳಲ್ಲಿ ಪ್ರಕಟವಾಗುವ ನನ್ನ ಲೇಖನಗಳನ್ನು ಅಪ್ಪ ಅವಳೆದುರು ಓದಿ ಹೇಳುತ್ತಿದ್ದರೆ, 'ತನ್ನ ಮೊಮ್ಮಗಳು ಬರೆದದ್ದು' ಎಂದು ಅವಳಿಗಾಗುವ ಹೆಮ್ಮೆ ಅಲ್ಪಸ್ವಲ್ಪದಲ್ಲ.
ದೈಹಿಕವಾಗಿಯೂ ಅಮ್ಮಮ್ಮ ಗಟ್ಟಿ ಜೀವಿ. ತನ್ನೆಲ್ಲ ಕೆಲಸಗಳನ್ನು ತಾನೇ ಮಾಡಿಕೊಂಡು ಬರುವ ಜೊತೆಗೆ ಅಡುಗೆಯಲ್ಲಿ, ಮನೆವಾರ್ತೆಯಲ್ಲಿ ಸಹಾಯ ಮಾಡುವುದು ಆಕೆ ಸುಮಾರು ಎಂಬತ್ತೈದು ವರ್ಷಗಳವರೆಗೂ ನಡೆಸಿಕೊಂಡು ಬಂದ ನಿತ್ಯ ಕರ್ಮ. ಆದರೆ ಕಳೆದೊಂದು ದಶಕದಲ್ಲಿ ಇಬ್ಬರು ಗಂಡು ಮಕ್ಕಳು, ಒಬ್ಬ ಅಳಿಯನನ್ನು ಕಳೆದುಕೊಂಡಿದ್ದು ಅಮ್ಮಮ್ಮನಿಗೆ ಏಕಾಏಕಿ ಮುದಿತನ ತಂದಿತು. ಈಗೆರಡು ವರ್ಷಗಳಿಂದ ಮರೆವು ಜಾಸ್ತಿ. ಹಿಂದಿನ ದಿನಗಳಾಗಲಿ, ಹಿಂದೆ ಕಲಿತ ಹಾಡು ಹಸೆ ಲೆಕ್ಕ, ಹಳೆಯ ನೆಂಟರು ಯಾರೂ ಆಕೆಗೆ ಮರೆತಿಲ್ಲ. ಆದರೆ ದಿನ ನಿತ್ಯದ ಬದುಕಿನ ಚಿಕ್ಕಪುಟ್ಟ ಸಂಗತಿಗಳು ನೆನಪಿರುವುದಿಲ್ಲ. ಆದರೂ ಬಾಯಿ ರುಚಿ ಇಲ್ಲ, ಪಿಸುಗುಟ್ಟಿದರೆ ಕೇಳುವುದಿಲ್ಲ, ಕಣ್ಣು ಸ್ಪಷ್ಟವಾಗಿ ಕಾಣುವುದಿಲ್ಲ ಎಂಬ ವೃದ್ಧಾಪ್ಯದ ಸಮಸ್ಯೆಗಳನ್ನು ಹೊರತುಪಡಿಸಿದರೆ ಇಂದಿಗೂ ಆಕೆಗೆ ಯಾವುದೇ ರೋಗ ಇಲ್ಲ. ತನ್ನ ಕೆಲಸಗಳಿಗೆ ಯಾರನ್ನೂ ಆಕೆ ಅವಲಂಬಿಸಿಲ್ಲ.
ನಮ್ಮ ಕುಟುಂಬದ ಸಮಷ್ಟಿ ಶಕ್ತಿಯಾಗಿ, ಜೀವ ನದಿಯಾಗಿ ನಿಂತ ಅಮ್ಮಮ್ಮ ಬದುಕಿದಷ್ಟು ದಿನ ನೆಮ್ಮದಿಯಿಂದಿರಲಿ, ಇಷ್ಟೇ ಗಟ್ಟಿ ಇರಲಿ. ಅಮ್ಮಮ್ಮನ ಚೇತನ ಕಿರಿಯರಿಗೆಲ್ಲ ಬೆಳಕಾಗಿರಲಿ ಎಂಬುದು ನನ್ನ ಪ್ರೀತಿಯ ಹಾರೈಕೆ.

ಗುರುವಾರ, ಜನವರಿ 8, 2009

ನನ್ನೊಳಗಿನ ನಾನು

ನನ್ನೊಳಗಿನ ನಾನು ಕಗ್ಗಂಟು
ಒಳಹೊಕ್ಕು ಯಾರೂ ಬಿಡಿಸಲಾರರು
ಗಟ್ಟಿ ಕವಚದ ಒಳಗೆ ಸಿಹಿ ತಿರುಳುಂಟು
ಬಿಡಿಸಿ ಯಾರೂ ಸವಿಯಲಾರರು

ನನ್ನ ಮಾಡಿದರು ಒಂದು ಕೀಲುಗೊಂಬೆ
ಕೂಡ್ರೆಂದರೆ ಕೂರಲು, ನಿಲ್ಲೆಂದರೆ ನಿಲ್ಲಲು
ಒಲ್ಲದೇ ಹೋದಾಗ ನಾ
ಕಾದಿತ್ತು ಮೊನಚು ತಿರಸ್ಕಾರ ಸೊಲ್ಲು ಸೊಲ್ಲಲೂ

ನನ್ನ ಕಡು ಕೋಪ, ನೇರ ನುಡಿ
ಸುತ್ತೆಲ್ಲ ಜನರ ನಾಲಿಗೆಗೆ ಆಹಾರ
ಸುಡು ಕೋಪದ ಹಿಂದೆ ಮಿಡಿವ ಹೃದಯವುಂಟು
ಕಾಣುವ ಕಣ್ಣಿಗೆ ಮಾತ್ರ ಬರವೋ ಬರ

ನನ್ನ ಸರಳ ಸ್ನೇಹ ಇವರ ಮನಕ್ಕೆ ತಟ್ಟದು
ಆಡಂಭರದ ಕೆಳೆಗೆ ಈ ಮನ ಒಪ್ಪದು
ಇರಬಹುದೇನೋ ಹಾಗಾಗಿ ನಾನೊಬ್ಬ ಒಂಟಿಸಲಗ
ಹಾಗಂತ ಇವರೆಲ್ಲ ಪಿಸುನುಡಿವರು ಆಗಾಗ

ನಾನಲ್ಲ ಬಿಳಿಹಾಳೆ, ಜೀವವುಂಟು ನನ್ನಲಿ
ಭೋರ್ಗರೆಯುತ ಧುಮುಕುತ್ತಿಹ ಭಾವವುಂಟು ಎದೆಯಲಿ
ನವಚೈತ್ರದ ಹೊಸ ಚಿಗುರಿಗೆ ಕಾಯುವೆನು ಸತತ
ಹೊಂಬೆಳಕಿನ ಮುಂಜಾವೆ ಬಳಿ ಬಾ, ಇದೋ ಸ್ವಾಗತ

ಭಾನುವಾರ, ಡಿಸೆಂಬರ್ 7, 2008

ಅಸ್ತ-ಉದಯ

ಆತ ಓಡುತ್ತಲೇ ಇದ್ದ
ನಾ ಹಿಂಬಾಲಿಸಿ ಬಸವಳಿದೆ
ಆತ ಮುನ್ನುಗ್ಗಿ ಮರೆಯಾದ
ನಾ ಮುಸುಕೆಳೆದು ಮಲಗಿದೆ

ಕಣ್ಣೊಡೆದರೆ, ಅರೆ!
ಆತ ಆಗಲೇ ಎದುರಿದ್ದಾನೆ
ನಾ ಮುಖ ತೊಳೆದು ಮಡಿಯಾದೆ
ಮತ್ತೆ ಓಟ ಶುರುವಾಗಿದೆ...

ಶುಕ್ರವಾರ, ಡಿಸೆಂಬರ್ 5, 2008

ಹೆತ್ತೊಡಲ ಹಕ್ಕು

ಹಕ್ಕಿದೆ ನನಗೆ ಮಗುವಿನ ಮೇಲೆ
ಲಾಲಿಸಲು, ಮುದ್ದಿಸಲು, ರಮಿಸಲು
ಹೆಸರಿಟ್ಟು ಕೂಗಿ ಕರೆಯಲು
ಶಿಕ್ಷಿಸಲು, ತಿದ್ದಿ ನಡೆಸಲು
ಅದ ಕಿತ್ತುಕೊಳ್ಳದಿರಿ ನೀವು

ಹೊತ್ತಿದ್ದೆ ಅವನನ್ನು
ಸುತ್ತಲ ಜಗದ ಬೇಗೆ ತಾಕದಂತೆ
ಮುಚ್ಚಟೆಯಿಂದ ಬಸಿರಲ್ಲಿ
ಹಿರಿದು, ಹಿಸಿದು ಕೆಳ ಜಗ್ಗುತಿಹ
ಭಾರವನ್ನು ಸಹಿಸಿ ಪೊರೆದಿದ್ದೆ ಒಡಲಲ್ಲಿ

ಹಿಡಿಹಿಡಿಯಾಗಿ ಹಿಂಡಿದ
ಹನ್ನೆರಡು ತಾಸಿನ ಹೆರಿಗೆಗೆ ಹೆದರಿ
ಕುಂತು, ನಿಂತು
ಸೋತು
ಹೊರಳಾಡಿ, ಅರಚಾಡಿ ಅಂತೂ
ಪಡೆದಿದ್ದೆ ಮಡಿಲಲ್ಲಿ

ನಿದ್ರಾವಶನಾದ ಕಂದ
ಕಾಲ ಮರೆತು ಬಿದ್ದು ಮಲಗುತಿರೆ
ಬಸಿಯುತಿಹ ಎದೆಹಾಲ ಕಂಡು
'ಛೇ, ಸೋರಿಹೋಗುತ್ತಿದೆಯಲ್ಲ ಜೀವಾಮೃತ'
ಎಂದು ಮರುಗಿ ಪರಿತಪಿಸಿದ್ದೆ

ಒಪ್ಪುತ್ತೇನೆ, ಕೊಟ್ಟಿದ್ದೀರಿ ನೀವು
ದುಡ್ಡು, ಅಂತಸ್ತು, ಐಷಾರಾಮಗಳನ್ನು
ಅದ ನಾ ಕೊಡಲೂಬಲ್ಲೆ
ಅದಕ್ಕೆ ಮುಂಚೆ
ಹಡೆದು ತೋರಿಸಿ ಒಮ್ಮೆ.