ಸೋಮವಾರ, ಮಾರ್ಚ್ 9, 2009

ಜೀವ ನದಿ

ಅಂತರ್ರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ನನ್ನ ಜೀವನದ ಬಹುಮುಖ್ಯ ಅಂಗವಾದ ಒಬ್ಬ ಮಹಿಳೆಯ ಕುರಿತು ಈ ಬರೆಹ:
ಆಕೆ ನನ್ನ ಅಮ್ಮಮ್ಮ. ಹೆಸರಿಗೆ ಅಮ್ಮಮ್ಮನಾದರೂ ವಾಸ್ತವದಲ್ಲಿ ಅಪ್ಪನ ಅಮ್ಮ. ಅಚ್ಚ ಬಿಳಿ ಬಣ್ಣ, ಗುಂಡಗಿನ ಗಿಡ್ಡ ದೇಹ, ಬೋಳಿಸಿದ ತಲೆ, ಗುಳಿ ಬಿದ್ದ ಕಣ್ಣುಗಳು, ನೆರಿಗೆಗಟ್ಟಿದ ಮುಖ-ಮೈ, ಸೊಂಟಕ್ಕೆ ಬಿಗಿಯಾಗಿ ಸುತ್ತಿದ ಕೆಂಪು ಅಥವಾ ಅದರ ಆಚೀಚಿನ ಬಣ್ಣಗಳ ಹತ್ತಿ ಸೀರೆ, ರವಿಕೆ... ಅಮ್ಮಮ್ಮನ ಬಾಹ್ಯ ರೂಪ ಇದು. ನಾನು ಹುಟ್ಟಿದಾಗಿನಿಂದ ನೋಡುತ್ತಿರುವ ರೂಪವೂ ಹೌದು. ಇತ್ತೀಚಿನ ವರ್ಷಗಳಲ್ಲಿ ಸುಕ್ಕು ಹೆಚ್ಚಿದೆ, ಕಣ್ಣು-ಕಿವಿ ಕೊಂಚ ಮಂಜು-ಮಂದ ಆಗಿವೆ, ಮುದಿವಯಸ್ಸು ತನ್ನ ಅಸ್ತಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡಿದೆ ಎಂಬುದನ್ನು ಬಿಟ್ಟರೆ, ಒಟ್ಟಾರೆಯಾಗಿ ಅಮ್ಮಮ್ಮನ ಅಪೀಯರೆನ್ಸ್ ಬಹಳೇನೂ ಬದಲಾಗಿಲ್ಲ.
ದೇಹ ಹಣ್ಣಾಗಿದ್ದರೂ ಅಮ್ಮಮ್ಮನ ಮನಸ್ಸು ಇನ್ನೂ ಹಸಿರು. ಅಲ್ಲಿ ಪ್ರೀತಿ-ವಾತ್ಸಲ್ಯ, ಕಾಳಜಿ, ಅಂತಃಕರಣ (ಅವಳ ಭಾಷೆಯಲ್ಲಿ ತನುಕರಣೆ), ಮನೆಮಕ್ಕಳು, ಮೊಮ್ಮಕ್ಕಳ ಮೇಲಿನ ಮೋಹಗಳ ಚಿಲುಮೆ ಸದಾ ಚಿಮ್ಮುತ್ತದೆ. ಮನೆಗೆ ಬಂದ ಅತಿಥಿಗಳ ಊಟೋಪಚಾರ ಸರಿಯಾಗಿ ಆಗುತ್ತಿದೆಯೋ ಇಲ್ಲವೋ ಎಂಬ ಸಂದೇಹವೂ ಬರುತ್ತದೆ. ತೊಂಬತ್ತೆಂಟರ ಅಮ್ಮಮ್ಮ ಈಗಲೂ ಊಟದ ಪಂಕ್ತಿಯಲ್ಲಿ ಅಡ್ಡಾಡಿ ಖುದ್ದಾಗಿ ಅತಿಥಿಗಳನ್ನು ವಿಚಾರಿಸಿಕೊಂಡು ಬರುತ್ತಾಳೆ.
ಅಪ್ಪ-ಅಮ್ಮ ಜಮೀನು ನೋಡಿಕೊಂಡಿದ್ದ ಊರಿನಲ್ಲಿ ಸರಿಯಾದ ಶಾಲೆ ಇಲ್ಲದ ಕಾರಣ ಅಣ್ಣ, ಅಕ್ಕ, ನಾನು ಚಿಕ್ಕವಯಸ್ಸಿನಲ್ಲಿಯೇ ಅವರನ್ನು ಬಿಟ್ಟು ದೊಡ್ಡಪ್ಪ-ದೊಡ್ಡಮ್ಮಂದಿರೊಂದಿಗೆ ಅಮ್ಮಮ್ಮ ವಾಸಿಸುತ್ತಿದ್ದ ಬಾಳೇಸರ ಸೇರಿಕೊಂಡಿದ್ದೆವು. ತಂದೆ-ತಾಯಿಂದ ದೂರವಿದ್ದ ನಮಗೆ ಅಮ್ಮಮ್ಮನೇ ಎಲ್ಲ ಆಗಿದ್ದವಳು. ಸ್ನಾನ ಮಾಡಿಸಿ, ಬಟ್ಟೆ ತೊಳೆದು ಒಣಗಿಸುವುದರೊಂದಿಗೆ ಶಾಲೆಯಿಂದ ಬರುತ್ತಲೂ ತಿಂಡಿ-ಆಸರಿಗೆ ಒದಗಿಸುವುದು, ನಾವು ಸರಿಯಾಗಿ ಓದಿ-ಬರೆಯುತ್ತೇವೋ ಇಲ್ಲವೋ ಎಂಬ ಬಗ್ಗೆ ನಿಗಾ ಇಡುವುದು, ಸಣ್ಣಪುಟ್ಟ ಜಗಳ-ಹೊಡೆದಾಟ ನಡೆಸಿದರೆ ಮಧ್ಯಸ್ಥಿಕೆ ವಹಿಸಿ ಬಿಡಿಸುವುದು, ಕೊನೆಗೆ ರಾತ್ರಿ ಮಲಗುವಾಗ ಬಂದು ಹಾಸಿಗೆ ಬಿಡಿಸಿ, ಕುಡುವಿಕೊಟ್ಟು ಹೋಗುವವರೆಗೆ ಅಮ್ಮಮ್ಮ ನಮಗೆಲ್ಲ ಸೇವೆ ಮಾಡುತ್ತಿದ್ದಳು. ನಾವು ದೊಡ್ಡವರಾಗುತ್ತಿದ್ದಂತೆ ಇವೆಲ್ಲ ಕೆಲಸ ಖುದ್ದು ಮಾಡಿಕೊಳ್ಳಲು ಕಲಿಸಿದ್ದೂ ಅವಳೇ.
ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ಅಜ್ಜಿಮನೆಯ ಆಶ್ರಯಕ್ಕೆ ಬಂದಿದ್ದ ಅಮ್ಮಮ್ಮನಿಗೆ ಓದು ಬರೆಹ ಕಲಿಯಲಾಗಿರಲಿಲ್ಲ. ಇದೊಂದು ಕೊರಗು ಆಕೆಯಲ್ಲಿ ಯಾವತ್ತೂ ಉಳಿದಿತ್ತು. ಹಾಗಾಗಿ ಓದುವ ಮಕ್ಕಳನ್ನು ಅವಳು ಬಹಳವಾಗಿ ಪ್ರೀತಿಸುತ್ತಾಳೆ. ನಮ್ಮ ಶಾಲಾ ದಿನಗಳಲ್ಲಿ ಶನಿವಾರ, ಭಾನುವಾರ ಬಂತೆಂದರೆ ಆಕೆಗೆ ಪಾಠ ಓದಿ ಹೇಳುವ ಕೆಲಸ ನಮ್ಮದು. ತಾನು ಅಡಿಕೆ ಸುಲಿಯುತ್ತಲೋ, ಅಕ್ಕಿ ಬೀಸುತ್ತಲೋ, ಇನ್ನಾವುದೇ ಕೆಲಸ ಮಾಡುತ್ತಲಿರುವಲ್ಲಿ ನಮ್ಮನ್ನು ಕರೆಸಿಕೊಳ್ಳುತ್ತಿದ್ದ ಅಮ್ಮಮ್ಮ ಕನ್ನಡ ಪಠ್ಯದ ಯಾವುದಾದರೂ ಒಂದು ಪಾಠ ಓದಿ ಹೇಳಲು ಆದೇಶ ನೀಡುತ್ತಿದ್ದಳು. ಪೌರಾಣಿಕ ಪಾಠಕ್ಕೆ ಆದ್ಯತೆ. ಇಲ್ಲವಾದರೆ ಯಾವುದೂ ಸರಿ. ಪದ್ಯಗಳನ್ನೂ ರಾಗವಾಗಿ ಓದಿ ಹೇಳಬೇಕಿತ್ತು. ಅದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದರೆ ಆಕೆಗೆ ಇಮ್ಮಡಿ ಸಂತಸ. ಒಂದು ವಿಷಯ ತಿಳಿದುಕೊಂಡಿದ್ದಕ್ಕೆ, ಇನ್ನೊಂದು ತನ್ನ ಮೊಮ್ಮಕ್ಕಳಿಗೆ ಚಂದ ಮಾಡಿ ಓದಲು ಬರುತ್ತದಲ್ಲ ಎಂಬ ಹೆಮ್ಮೆಗೆ. ಮುಂದೆ ನಾವೆಲ್ಲ ಹೈಸ್ಕೂಲು, ಕಾಲೇಜು ಸೇರಿದ ಮೇಲೆ 'ಇಂಗ್ಲೀಷಲ್ಲಿ ಮಾತಾಡಿ' ಎಂದು ಪ್ರೋತ್ಸಾಹಿಸುತ್ತಿದ್ದಳು. 'ಅಮ್ಮಮ್ಮ ನಿಂಗದೆಲ್ಲ ಅರ್ಥ ಆಗ್ತಿಲ್ಲೆ' ಎಂದರೆ, 'ಅಡ್ಡಿ ಇಲ್ಲೆ, ನಿಂಗ ಮಾತಾಡಿದ್ನ ಕೇಳಿರೂ ಯಂಗದೇ ಸಂತೋಷ' ಎನ್ನುತ್ತಿದ್ದಳಾಕೆ.
ಓದು ಬರದಿದ್ದರೂ ಅಮ್ಮಮ್ಮ ಲೆಕ್ಕದಲ್ಲಿ ಭಾರಿ ಜಾಣೆ. ಮಗ್ಗಿ, ಕಾಲು, ಅರ್ಧ, ಮುಕ್ಕಾಲು ಎಲ್ಲ ಆಕೆಗೆ ಕಂಠಪಾಠ. ನಾಣ್ಯ, ನೋಟುಗಳನ್ನೆಲ್ಲ ಚಿತ್ರ ನೋಡಿಯೇ ಗುರುತಿಸುತ್ತಿದ್ದಳು. ಒಬ್ಬಂಟಿಯಾಗಿ ಬಸ್ ಪ್ರಯಾಣ ಮಾಡುವಷ್ಟು ಧೈರ್ಯವೂ ಇತ್ತು. ಸಂಪ್ರದಾಯದ ಹಾಡುಗಳು, ಗಾದೆಗಳಂತೂ ಸಾವಿರದ ಲೆಕ್ಕದಲ್ಲಿ ಗೊತ್ತು. ಯಾರಾದರೂ ಒಂದು ಹೊಸ ಹಾಡು ಹೇಳಿದರೆ ಒಂದು ಸಲ ಕೇಳುತ್ತಲೇ ಪೂರ್ತಿ ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಅವಳದ್ದು. ಬರೆಹ ಕಲಿಯದ ಆಕೆಯ ಕೊರಗು ಕೊನೆಯವರೆಗೂ ಇರಬಾರದೆಂದು ನಾನು ಆಕೆಗೆ ಸುಮಾರು ಎಂಬತ್ತನಾಲ್ಕು ವರ್ಷವಿದ್ದಾಗ 'ಅ,ಆ,ಇ,ಈ' ಹೇಳಿಕೊಟ್ಟಿದ್ದೆ. ಆಗ ನನಗೆ ಶಾಲಾ ರಜೆ, ಅಮ್ಮಮ್ಮನೂ ನನ್ನಪ್ಪ-ಅಮ್ಮ ಇದ್ದ ಹನುಮಾಪುರಕ್ಕೆ ಬಂದುಳಿದಿದ್ದಳು. ಅಕ್ಷರಾಭ್ಯಾಸ ಮಾಡುವ ಖುಷಿಯಲ್ಲಿ ಅಮ್ಮಮ್ಮ ಕನ್ನಡಾಕ್ಷರಗಳನ್ನು ತಿದ್ದಿದ್ದೇ ತಿದ್ದಿದ್ದು. ಎರಡು ಮೂರು ದಿನಗಳಲ್ಲಿ 'ಅಂ, ಅಃ'ವರೆಗೆ ಕಲಿತಳು. 'ಗೌರಿ' ಎಂದು ತನ್ನ ಹೆಸರು ಬರೆಯಲೂ ಕಲಿತಳು. ಅಪ್ಪ-ಅಮ್ಮನ ಪ್ರೋತ್ಸಾಹವೂ ಇದ್ದಿದ್ದರಿಂದ ಅಲ್ಲಿ ಇದ್ದಷ್ಟು ದಿನ ಸಮಯ ಸಿಕ್ಕಾಗಲೆಲ್ಲ ಕಲಿತಷ್ಟನ್ನು ಬರೆಯುತ್ತಲೇ ಇದ್ದಳು. ಆದರೆ ಬಾಳೇಸರಕ್ಕೆ ವಾಪಸ್ ಬಂದ ಮೇಲೆ ಪ್ರೋತ್ಸಾಹ, ಅವಕಾಶ, ಸಮಯ ಯಾವವೂ ಸಿಗದೇ ಅಮ್ಮಮ್ಮನ ಅಕ್ಷರಾಭ್ಯಾಸ ಅಘನಾಶಿನಿಯಲ್ಲಿ ಕೊಚ್ಚಿ ಹೋಯಿತು.
ದೂರದೂರುಗಳಿಂದ ಬಾಳೇಸರ ಶಾಲೆಗೆ ಬರುತ್ತಿದ್ದ ಹಲವಾರು ಮಕ್ಕಳಿಗೆ ನಮ್ಮನೆಯಲ್ಲಿ ಮಧ್ಯಾಹ್ನದ ಊಟ ಹಾಕುವುದು ಅಜ್ಜನ ಕಾಲದಿಂದಲೇ ಇದ್ದ ಪದ್ಧತಿಯಂತೆ. ಅದು ಶುರುವಾಗಿದ್ದು, ಇನ್ನೂ ನಡೆದುಕೊಂಡು ಬರುತ್ತಿರುವುದು ಅಮ್ಮಮ್ಮನ ಒತ್ತಾಸೆಯಿಂದಲೇ. ಮನೆಯ ಸೊಸೆಯರು ಎಷ್ಟೇ ಬಡಿಸಿದರೂ, 'ಪಾಪ, ಶಾಲೆಗೆ ಹೋಪ ಹುಡ್ರು, ಸರಿಯಾಗಿ ತಿನ್ನವು' ಎಂದು ಅಮ್ಮಮ್ಮ ತಾನೇ ಬಂದು ಮತ್ತಷ್ಟು ತುಪ್ಪ ಹಾಕುವುದು, ಕಜ್ಜಾಯ ಬಡಿಸಿಹೋಗುವುದು ಯಾವತ್ತೂ ಇದ್ದದ್ದೇ. ನಾವು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ, ಮಧ್ಯಾಹ್ನ ಊಟ ಮುಗಿಸಿ ಹೊರಡುವಾಗ ಯಾರಿಗೂ ಗೊತ್ತಾಗದಂತೆ ಒಂದರೆಡು ಚಕ್ಕುಲಿಯನ್ನೋ, ಅತ್ರಾಸ, ಅಂಬೊಡೆಯನ್ನೋ ಕೈಗಿಟ್ಟು ಸದ್ದಿಲ್ಲದೇ ತೆರಳುತ್ತಿದ್ದ ಅಮ್ಮಮ್ಮನ ಚಿತ್ರ ಇಂದಿಗೂ ಕಣ್ಣು ಕಟ್ಟುತ್ತದೆ.
ಅಜ್ಜ ಕೂಡ ಅಮ್ಮಮ್ಮನಂತೆ ಎಳವೆಯಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದಂತೆ. ಮದುವೆಯಾಗುವಾಗ ಇಬ್ಬರಿಗೂ ಚಿಕ್ಕವಯಸ್ಸು. ಕೆಲವೇ ಸಮಯದಲ್ಲಿ ಮನೆಯ ಹಿರಿಯಲು ಇವರನ್ನು ಬರಿಗೈಯಲ್ಲಿ ಮನೆಯಿಂದ ಹೊರ ಹಾಕಿದರಂತೆ. ಆಮೇಲೆ ನಾಲ್ಕು ಜನ ದೊಡ್ಡವರು ಮಧ್ಯಸ್ಥಿಕೆ ನಡೆಸಿ ಬಾಳೇಸರದಲ್ಲೊಂದು ತುಂಡು ಜಮೀನು ಖರೀದಿಸಲು ಸಹಾಯ ಮಾಡಿದ್ದರಂತೆ. ಹೀಗೆ ಏನೂ ಇಲ್ಲದೆಯೇ ಪಾಳು ಬಿದ್ದ ತೋಟ ನಂಬಿ ಸಂಸಾರ ಶುರು ಮಾಡಿದ ಅಜ್ಜನಿಗೆ ಸಮನಾಗಿ ನಿಂತು ಮನೆಯ ಹೊರಗೆ, ಒಳಗೆ ದುಡಿದವಳು ಅಮ್ಮಮ್ಮ. ಶಾಂತ ಸ್ವಭಾವದ ನಿಧಾನಸ್ಥ, ಭಾವುಕ, ಕಾವ್ಯಜೀವಿ ಅಜ್ಜನಿಗೆ ಭಾರಿ ಚುರುಕಿನ, ಚಟುವಟಿಕೆಯ, ವಾಸ್ತವವಾದಿ, ಗಡಸು ಹೆಂಡತಿ ಅಮ್ಮಮ್ಮ. ಅಜ್ಜ ಸ್ವಾತಂತ್ರ್ಯ ಹೋರಾಟಕ್ಕೆ ಸೇರಿ ಜೈಲು ಸೇರಿದಾಗ ಮನೆಯನ್ನು ನಡೆಸಿದವಳು ಅವಳು. ಅಂತೂ ಇಬ್ಬರು ಹೊಂದಿ ದುಡಿದು ಮನೆಯನ್ನು ಬೆಳೆಸಿದರು. ನಾಲ್ವರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು. ದೊಡ್ಡಪ್ಪಂದಿರಿಗೆ, ಅತ್ತೆಯರಿಗೆ ಮದುವೆಯೂ ಆಯಿತು. ಇನ್ನೊಬ್ಬ ದೊಡ್ಡಪ್ಪ, ನನ್ನಪ್ಪ ಇನ್ನೂ ಓದುತ್ತಿರುವಾಗಲೇ ಅಜ್ಜ ಕ್ಯಾನ್ಸರಿನಿಂದ ತೀರಿ ಹೋದರು. ಅಮ್ಮಮ್ಮ ಆಗಿನ ಸಂಪ್ರದಾಯದಂತೆ ತಲೆ ಬೋಳಿಸಿಕೊಂಡು, ಕೆಂಪಿನ ಛಾಯೆಗಳ ಸೀರೆಯುಡುವ ವಿಧವೆಯಾದಳು.
ಬಾಹ್ಯರೂಪಕ್ಕೆ ಮಡಿ ಹೆಂಗಸಾಗಿ ಕಂಡರೂ ಅಂತರಂಗದಲ್ಲಿ ಅಮ್ಮಮ್ಮ ತನ್ನ ಸೊಸೆಯಂದಿರಿಗಿಂತಲೂ ಹೆಚ್ಚು ಮಾಡರ್ನ್. ಮೊಮ್ಮಕ್ಕಳ ಮದುವೆ ವಿಷಯದಲ್ಲಿ 'ನಿಂಗ ಪ್ರೀತಿ ಮಾಡಿ ಬೇರೆ ಜಾತಿಯವರನ್ನು ಮದುವೆ ಆದರೂ ಅಡ್ಡಿಲ್ಲೆ, ಆದರೆ ಮದುವೆ ಆದಂವ ನಿಂಗಳನ್ನ ಯಾವತ್ತೂ ಗೌರವದಿಂದ, ಪ್ರೀತಿಯಿಂದ ಕಾಣವು. ಸಂಸಾರವನ್ನ ಸಮರ್ಥವಾಗಿ ನಡೆಸಿಕ್ಯಂಡು ಹೋಪಷ್ಟು ಗಟ್ಟಿ ಇರವು' ಎಂದವಳು ಅವಳು. ಮೊಮ್ಮಕ್ಕಳಲ್ಲಿ ಹುಡುಗಿಯರೆಲ್ಲ ಚೆನ್ನಾಗಿ ಓದಿ, ನೌಕರಿ ಮಾಡಬೇಕೆಂಬುದು ಅವರ ಮಹದಾಸೆ. ಒಬ್ಬಂಟಿಯಾಗಿ ಪರವೂರಿಗೆ ವಿದ್ಯಾಭ್ಯಾಸಕ್ಕೆ, ನೌಕರಿಗೆ ಹೊರಟು ನಿಂತಾಗ ಬೆನ್ನು ತಟ್ಟಿ ಕಳುಹಿಸಿದ್ದಳು. ಸ್ವಾತಂತ್ರ್ಯ ಹೋರಾಟಗಾರರ ಮಾಸಾಶನ ತರಲು ಸಿದ್ದಾಪುರಕ್ಕೆ ಹೋದಾಗಲೆಲ್ಲ ಅಲ್ಲಿನ ಬ್ಯಾಂಕುಗಳಲ್ಲಿ, ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರನ್ನು ನೋಡಿ ಬರುತ್ತಿದ್ದ ಅಮ್ಮಮ್ಮ 'ತಂಗಿ, ನಿಂಗಳೂ ಎಲ್ಲ ಇಂಥಾ ನೌಕರಿಗೆ ಸೇರಿ. ಕೆಲಸನೂ ಮಾಡಲಾಗ್ತು, ಮಕ್ಕಳನ್ನು ಬೆಳಸಿ ಸಂಸಾರ ನೋಡಿಕ್ಯಂಬಲೂ ಆಗ್ತು' ಎಂದು ಹುರುಪು ತುಂಬುತ್ತಿದ್ದಳು. ಈಗಲೂ ಸಹ, ಪತ್ರಿಕೆಗಳಲ್ಲಿ ಪ್ರಕಟವಾಗುವ ನನ್ನ ಲೇಖನಗಳನ್ನು ಅಪ್ಪ ಅವಳೆದುರು ಓದಿ ಹೇಳುತ್ತಿದ್ದರೆ, 'ತನ್ನ ಮೊಮ್ಮಗಳು ಬರೆದದ್ದು' ಎಂದು ಅವಳಿಗಾಗುವ ಹೆಮ್ಮೆ ಅಲ್ಪಸ್ವಲ್ಪದಲ್ಲ.
ದೈಹಿಕವಾಗಿಯೂ ಅಮ್ಮಮ್ಮ ಗಟ್ಟಿ ಜೀವಿ. ತನ್ನೆಲ್ಲ ಕೆಲಸಗಳನ್ನು ತಾನೇ ಮಾಡಿಕೊಂಡು ಬರುವ ಜೊತೆಗೆ ಅಡುಗೆಯಲ್ಲಿ, ಮನೆವಾರ್ತೆಯಲ್ಲಿ ಸಹಾಯ ಮಾಡುವುದು ಆಕೆ ಸುಮಾರು ಎಂಬತ್ತೈದು ವರ್ಷಗಳವರೆಗೂ ನಡೆಸಿಕೊಂಡು ಬಂದ ನಿತ್ಯ ಕರ್ಮ. ಆದರೆ ಕಳೆದೊಂದು ದಶಕದಲ್ಲಿ ಇಬ್ಬರು ಗಂಡು ಮಕ್ಕಳು, ಒಬ್ಬ ಅಳಿಯನನ್ನು ಕಳೆದುಕೊಂಡಿದ್ದು ಅಮ್ಮಮ್ಮನಿಗೆ ಏಕಾಏಕಿ ಮುದಿತನ ತಂದಿತು. ಈಗೆರಡು ವರ್ಷಗಳಿಂದ ಮರೆವು ಜಾಸ್ತಿ. ಹಿಂದಿನ ದಿನಗಳಾಗಲಿ, ಹಿಂದೆ ಕಲಿತ ಹಾಡು ಹಸೆ ಲೆಕ್ಕ, ಹಳೆಯ ನೆಂಟರು ಯಾರೂ ಆಕೆಗೆ ಮರೆತಿಲ್ಲ. ಆದರೆ ದಿನ ನಿತ್ಯದ ಬದುಕಿನ ಚಿಕ್ಕಪುಟ್ಟ ಸಂಗತಿಗಳು ನೆನಪಿರುವುದಿಲ್ಲ. ಆದರೂ ಬಾಯಿ ರುಚಿ ಇಲ್ಲ, ಪಿಸುಗುಟ್ಟಿದರೆ ಕೇಳುವುದಿಲ್ಲ, ಕಣ್ಣು ಸ್ಪಷ್ಟವಾಗಿ ಕಾಣುವುದಿಲ್ಲ ಎಂಬ ವೃದ್ಧಾಪ್ಯದ ಸಮಸ್ಯೆಗಳನ್ನು ಹೊರತುಪಡಿಸಿದರೆ ಇಂದಿಗೂ ಆಕೆಗೆ ಯಾವುದೇ ರೋಗ ಇಲ್ಲ. ತನ್ನ ಕೆಲಸಗಳಿಗೆ ಯಾರನ್ನೂ ಆಕೆ ಅವಲಂಬಿಸಿಲ್ಲ.
ನಮ್ಮ ಕುಟುಂಬದ ಸಮಷ್ಟಿ ಶಕ್ತಿಯಾಗಿ, ಜೀವ ನದಿಯಾಗಿ ನಿಂತ ಅಮ್ಮಮ್ಮ ಬದುಕಿದಷ್ಟು ದಿನ ನೆಮ್ಮದಿಯಿಂದಿರಲಿ, ಇಷ್ಟೇ ಗಟ್ಟಿ ಇರಲಿ. ಅಮ್ಮಮ್ಮನ ಚೇತನ ಕಿರಿಯರಿಗೆಲ್ಲ ಬೆಳಕಾಗಿರಲಿ ಎಂಬುದು ನನ್ನ ಪ್ರೀತಿಯ ಹಾರೈಕೆ.

ಮಂಗಳವಾರ, ಫೆಬ್ರವರಿ 10, 2009

'ಸುಧಾ'ಪಾನದ ಸುದ್ದಿ

ಇತ್ತೀಚೆಗೆ ಊರಿಗೆ ಹೋದಾಗ ಅಕಸ್ಮಾತ್ತಾಗಿ ಒಂದಿಷ್ಟು ಹಳೆಯ 'ಸುಧಾ'ಗಳ ರಾಶಿ ಕಣ್ಣಿಗೆ ಬಿತ್ತು. ಮಾಡುತ್ತಿದ್ದ ಕೆಲಸ ಕೈ ಬಿಟ್ಟು ಹಾಗೆಯೇ ಓದಲು ಕುಳಿತುಕೊಂಡೆ. ಒಂದೆರಡು ಪುಟ ತಿರುವುತ್ತಿದ್ದಂತೆಯೇ ನಾನೇ ಕಳೆದುಹೋಗಿದ್ದೆ. ಒಂದೊಂದು ಬಿಡಿ ಪತ್ರಿಕೆಯೂ ಒಂದು ನಿಧಿಯಂತೆ. ವೈವಿಧ್ಯಮಯ ನೆನಪುಗಳ ಮೂಟೆಯಂತೆ. ಕುಡಿದಷ್ಟೂ ಇನ್ನೂ ಬೇಕೆನ್ನಿಸುವ, ಮತ್ತು ಹತ್ತಿಸುವ ರಸಪಾಕದಂತೆ ಅನ್ನಿಸತೊಡಗಿತ್ತು.
'ಸುಧಾ' ಜೊತೆಗಿನ ನನ್ನ ನಂಟು ನನಗೊಂದು ಮೂರು-ಮೂರೂವರೆ ವರ್ಷವಾಗಿದ್ದಾಗಲೇ ಶುರುವಾಗಿತ್ತು. ಅಪ್ಪನ ಮೂಲಮನೆ 'ಬಾಳೇಸರ'ದಲ್ಲಿ 'ಸುಧಾ' ತರಿಸುತ್ತಿದ್ದರು. ಊರಿಗೆ ಹೋದಾಗೆಲ್ಲ ಅಪ್ಪ ಹಳೆ ಪತ್ರಿಕೆಗಳನ್ನು ಹಿಡಿದುಕೊಂಡು ನಾವಿರುತ್ತಿದ್ದ ಹನುಮಾಪುರಕ್ಕೆ ತರುತ್ತಿದ್ದ. ರಾತ್ರಿ ಊಟವಾದ ಮೇಲೆ ಚಿಮಣಿ ದೀಪದ ಬೆಳಕಿನಲ್ಲಿ ಅಪ್ಪ-ಅಮ್ಮ ಓದಲು ಶುರು ಮಾಡಿದರೆ ನಾನೂ ಪಕ್ಕದಲ್ಲೊಂದು 'ಸುಧಾ' ಹಿಡಿದು ಕುಳಿತುಕೊಳ್ಳುತ್ತಿದ್ದೆ. ಅಕ್ಷರ ಬರದಿದ್ದರೂ ಚಿತ್ರ ನೋಡುವ ಹಂಬಲ. ಅದರಲ್ಲೂ ಪುಟಾಣಿ ಪುಟ್ಟಿ, ವಿಕ್ರಮ್, ಫ್ಯಾಂಟಮ್ ಕಾರ್ಟೂನುಗಳನ್ನು ನೋಡಿ, ನನಗೆ ತಿಳಿದಂತೆ ಅರ್ಥೈಸಿಕೊಳ್ಳುತ್ತಿದ್ದೆ. ಆಮೇಲೆ ಸರಸರ ಓದಲು ಬರೆಯಲು ಕಲಿತಿದ್ದೇ 'ಸುಧಾ'ದಲ್ಲಿನ ಕಾರ್ಟೂನು, ಮಕ್ಕಳ ಕಥೆ ಓದಬೇಕೆಂಬ ಆಸೆಯಿಂದ.
ಮುಂದೆ ಶಾಲೆಗೆ ಸೇರಲೆಂದು ಬಾಳೇಸರಕ್ಕೆ ಬಂದುಳಿದ ಮೇಲಂತೂ ತೂಕಡಿಸುವವಳಿಗೆ ಹಾಸಿಗೆ ಹಾಸಿಕೊಟ್ಟಂತಾಗಿತ್ತು. ಪ್ರತಿ ಗುರುವಾರ 'ಸುಧಾ' ಬಂತೆಂದರೆ ಮನೆಯಲ್ಲಿದ್ದ ಇತರ ಮಕ್ಕಳ ಜೊತೆ ಜಗಳ ಮಾಡಿಯಾದರೂ ನಾನೇ ಮೊದಲು ಅದನ್ನು ಓದಬೇಕು. ಮೊದಲು ಓದಲು ಅವಕಾಶವಾಗಲಿಲ್ಲವೆಂದರೆ ನನಗಾಗುತ್ತಿದ್ದ ವ್ಯಥೆ, ಅವಮಾನ ಅಷ್ಟಿಷ್ಟಲ್ಲ.
ಅಷ್ಟೊತ್ತಿಗಾಗಲೇ ಮಕ್ಕಳಿಗೆ ಮೀಸಲಾದ ಅಂಕಣಗಳನ್ನೆಲ್ಲಾ ಓದಿ ಅರಗಿಸಿಕೊಳ್ಳುವಷ್ಟು ಪರಿಣಿತಿ ಪಡೆದಿದ್ದ ನಾನು ನನ್ನಷ್ಟಕ್ಕೇ 'ದೊಡ್ಡವರ ಸರಕಿ'ಗೆ ಪ್ರೊಮೋಷನ್ ಕೊಟ್ಟುಕೊಂಡಿದ್ದೆ. ದೊಡ್ಡವರ ಸರಕೆಂದರೆ ಕಥೆ, ಧಾರಾವಾಹಿಗಳು. ಚಿಕ್ಕಮಕ್ಕಳೆಲ್ಲಾ ಧಾರಾವಾಹಿ ಓದಬಾರದು, ದೊಡ್ಡವರ ಮಾತ್ರ ಓದಬೇಕು ಎಂಬುದು ನಮ್ಮ ಮನೆಯಲ್ಲಿದ್ದ ಹಿರಿಯ ಹುಡುಗರು ಅಂದರೆ ನನ್ನ ದೊಡ್ಡಪ್ಪಂದಿರ ಮಕ್ಕಳು ಹಾಕಿದ್ದ ನಿಯಮ. ಅವರು ಬೇಡ ಎಂದಷ್ಟೂ ನನಗೆ ಅದರಲ್ಲೇನೋ ಇದೆ, ನಾನದನ್ನು ಓದಲೇಬೇಕೆಂಬ ಕುತೂಹಲ. ಅವರೆಲ್ಲ ಕೆಳಗೆ ಬರೆಯುವುದರಲ್ಲಿ, ಓದು ಆಟಗಳಲ್ಲಿ ಮಗ್ನರಾಗಿದ್ದಾಗಿದ್ದಾಗ ನಾನು ಕದ್ದು ಮೆತ್ತಿಗೆ ಹೋಗಿ 'ಸುಧಾ' ಧಾರಾವಾಹಿಗಳ ಪುಟ ತೆರೆಯುತ್ತಿದ್ದೆ. ಒಂದೇ ಉಸಿರಿನಲ್ಲಿ ಆ ವಾರದ ಇಡೀ ಕಂತು ಮುಗಿಸುತ್ತಿದ್ದೆ. ಮಧ್ಯದಲ್ಲಿ ಯಾರಾದರೂ ಬಂದರೆ ಸಿಕ್ಕಿ ಹಾಕಿಕೊಳ್ಳಬಾರದೆಂಬ ಉದ್ದೇಶದಿಂದ ಮಧ್ಯದ ಒಂದು ಬೆರಳನ್ನು ಯಾವಾಗಲೂ ಮಕ್ಕಳ ಪುಟದಲ್ಲಿ ಇರಿಸಿಕೊಳ್ಳುತ್ತಿದ್ದೆ. ಮೆತ್ತಿನ ಏಣಿಯನ್ನು ಯಾರಾದರೂ ಹತ್ತಿ ಬರುವ ಸದ್ದಾಗುತ್ತಲೇ ಟಕ್ಕಂತ ಇದನ್ನು ಮುಚ್ಚಿ ಆ ಪುಟಕ್ಕೆ ದೃಷ್ಟಿ ವರ್ಗಾಯಿಸುತ್ತಿದ್ದೆ. ಆದರೆ ಅಕ್ಕ-ಅಣ್ಣಂದಿರಿಗೆ ನಾನು ಧಾರಾವಾಹಿ ಓದುತ್ತೇನೆಂದು ಸದಾ ಸಂಶಯ. ಏಕ್ದಂ ಎಲ್ಲೆಲ್ಲಿಂದಲೋ ಪ್ರತ್ಯಕ್ಷರಾಗಿ, 'ನೀನು ಧಾರ್ವಾಯಿ ಓದ್ತಾ ಇದ್ದಿದ್ದೆ ಹದಾ' ಎಂದು ಅಟ್ಯಾಕ್ ಮಾಡುತ್ತಿದ್ದರು. 'ಇಲ್ಲೇ ಇಲ್ಲ' ಎಂದು ನಾನೂ ಪಟ್ಟು ಬಿಡದೇ ವಾದಿಸುತ್ತಿದ್ದೆ.
ಆ 'ದೊಡ್ಡವರ' ವ್ಯಾಪ್ತಿಯಲ್ಲಿ ಆರನೇ ತರಗತಿಯಲ್ಲಿದ್ದ ನಮ್ಮ ದೊಡ್ಡಪ್ಪನ ಮಗಳೂ ಬರುತ್ತಿದ್ದಳು. ಶಾಲೆಗೆ ಹೋಗುವಾಗ ನಮ್ಮನ್ನೆಲ್ಲಾ ಲೀಡ್ ಮಾಡುತ್ತಿದ್ದ ಹಿರಿಯಕ್ಕ ಅವಳು. ಮಧ್ಯ ದಾರಿಯಲ್ಲಿ ಅವಳದೇ ತರಗತಿಯ ಸ್ನೇಹಿತೆಯೊಬ್ಬಳು, ಇನ್ನೊಂದೆರಡು ಜನ ಚಿಕ್ಕ ಹುಡುಗರ ಜೊತೆ ನಮ್ಮನ್ನು ಸೇರಿಕೊಳ್ಳುತ್ತಿದ್ದಳು. ದಿನಾ ದಾರಿ ತುಂಬ ಅವರಿಬ್ಬರೂ 'ಸುಧಾ'ದಲ್ಲಿ ಓದಿದ್ದನ್ನು ಚರ್ಚಿಸುತ್ತಾ ಸಾಗುತ್ತಿದ್ದರು.
ಒಮ್ಮೆ ಲೇಖಕಿ ವಿದ್ಯುಲ್ಲತಾ ಅವರ 'ರಥಸಪ್ತಮಿ' ಧಾರಾವಾಹಿ ಬರಲಾರಂಭಿಸಿತ್ತು. ಇವರಿಬ್ಬರೂ ಹೊಸ ಧಾರಾವಾಹಿ ಬಗ್ಗೆ ಮಾತುಕತೆ ಆರಂಭಿಸಿದರು. ಏನು ಮಾಡಿದರೂ ಧಾರಾವಾಹಿ ನಾಯಕಿಯ ಹೊಸ ರೀತಿಯ ಹೆಸರು ಇವರಿಗೆ ನೆನಪಿಗೇ ಬರುತ್ತಿಲ್ಲ. 'ಆ ನಾಯಕಿ ಹೆಸರೆಂಥಾ ಆತೇ', 'ಎಂಥೋ ಹೊಸಾ ಹೆಸರು, ಎಂಥಾ ಮಾಡಿರೂ ನೆನಪೇ ಆಗ್ತಿಲ್ಲೆ' ಎಂದು ಇಬ್ಬರೂ ಪರದಾಡಲಾರಂಭಿಸಿದರು. ಹಿಂದೆಯೇ ಬರುತ್ತಿದ್ದ ನನಗೆ ಇವರ ಪೇಚಾಟ ನೋಡಲಾಗಲಿಲ್ಲ. 'ಅಯ್ಯೋ, ಅದ್ರ ಹೆಸರು ಸಮುದ್ಯತಾ' ಎಂದೇ ಹೇಳೇಬಿಟ್ಟೆ. 'ಹಾಂ ಹಾಂ ಸಮುದ್ಯತಾ' ಎಂದು ಇಬ್ಬರೂ ತಲೆದೂಗಿದರೂ, ಮರುಕ್ಷಣ ನಮ್ಮಕ್ಕ 'ನಿಂಗೆ ಹ್ಯಾಂಗೆ ಗೊತ್ತಿದ್ದು ಅದು' ಎಂದು ನನ್ನತ್ತ ದೊಡ್ಡ ಕಣ್ಣು ಬಿಟ್ಟಳು. ತಪ್ಪಿನ ಅರಿವಾದ ನಾನು ಎಂಜಲು ನುಂಗುತ್ತ, 'ಅದಾ, ಅದು ನೀನೇ ಆವತ್ತು ಹೇಳ್ತಾ ಇದ್ದಿದ್ದೆ' ಎಂದೇನೋ ಓಳು ಬಿಟ್ಟು ಪರಾರಿಯಾದೆ.
ಇನ್ನೊಮ್ಮೆ 'ಶಾರದೆ' ಅವರ 'ಕವಲೊಡೆದ ದಾರಿ' ಧಾರಾವಾಹಿಯ ಚರ್ಚೆ. ನಾಯಕ-ನಾಯಕಿಯ ಸಂಸಾರದಲ್ಲಿ ಮೂರನೇ ಹೆಂಗಸಿನ ಪ್ರವೇಶವಾಗಿತ್ತು. ಯಥಾಪ್ರಕಾರ ನಮ್ಮಕ್ಕ-ಅವಳ ಗೆಳತಿಗೆ ಆ ಪಾತ್ರದ ಹೆಸರು ನೆನಪಾಗುತ್ತಿಲ್ಲ. ಹಿಂದಿನ ಸಲದಂತಾಗಬಾರದೆಂದು ನಾನೂ ತಡೆದುಕೊಳ್ಳುವಷ್ಟು ತಡೆದುಕೊಂಡೆ. ಐದು ನಿಮಷವಾದರೂ ಇವರಿಗೆ ನೆನಪೇ ಆಗುತ್ತಿಲ್ಲ. ನೋಡಿ ನೋಡಿ ನನಗೂ ಸಾಕಾಯಿತು. 'ಅದರ ಹೆಸರು ಮೀನಾ ಹೇಳಿ' ಬಾಯ್ತಪ್ಪಿ ಹೇಳಿ ನಾಲಿಗೆ ಕಚ್ಚಿಕೊಳ್ಳುವಷ್ಟರಲ್ಲಿ ನಮ್ಮಕ್ಕ ನನ್ನನ್ನು ಹಿಡಿದಾಗಿತ್ತು. 'ಹೌದಾ, ನೀ ಧಾರ್ವಾಯಿ ಓದ್ತೆ. ಓದ್ತ್ನಿಲ್ಲೆ ಹೇಳಿ ಸುಳ್ಳು ಹೇಳ್ತೆ' ಎಂದು ಅಕ್ಕೋರ ಮಾದರಿಯಲ್ಲಿ ತಲೆ ಹಾಕಲಾರಂಭಿಸಿದಳು. ಈಗ ತಪ್ಪಿಸಿಕೊಳ್ಳುವಂತೆಯೇ ಇರಲಿಲ್ಲ. 'ಇಲ್ಲೆ, ಇಡೀ ಧಾರ್ವಾಯಿ ಓದಿದ್ನಿಲ್ಲೆ, ಇಲ್ಲಿಯವರೆಗೆ... ಹೇಳಿ ಇರ್ತಲೆ, ಅದ್ನ ಮಾತ್ರೆ ಓದಿದ್ದಿ' ಎಂದೆ. ಅವಳಿಗೆ ನಂಬಿಕೆ ಬರಲಿಲ್ಲ. ಆದರೆ ಅಷ್ಟರಲ್ಲಿ ಶಾಲೆ ಹತ್ತಿರ ಬಂದಿತ್ತು, ನಾನು ಬಚಾವಾದೆ.
ಎಳವೆಯಲ್ಲಿ ಓದಿನ ರುಚಿ ಹತ್ತಿಸಿದ 'ಸುಧಾ', ಆಮೇಲೆ ಜೊತೆಗೂಡಿದ ಹಳೆ 'ಕಸ್ತೂರಿ'ಗಳ ಸಖ್ಯದ ಕಥೆ ತುಂಬಾ ದೊಡ್ಡದಿದೆ. ಊರಿಂದ ತಂದಿದ್ದ ಹಳೆ ಪತ್ರಿಕೆಯೊಂದನ್ನು ನೋಡುತ್ತಿದ್ದಂತೆ ಎಲ್ಲ ನೆನಪಾಗುತ್ತಿದೆ ಇಂದು.

ಗುರುವಾರ, ಜನವರಿ 8, 2009

ನನ್ನೊಳಗಿನ ನಾನು

ನನ್ನೊಳಗಿನ ನಾನು ಕಗ್ಗಂಟು
ಒಳಹೊಕ್ಕು ಯಾರೂ ಬಿಡಿಸಲಾರರು
ಗಟ್ಟಿ ಕವಚದ ಒಳಗೆ ಸಿಹಿ ತಿರುಳುಂಟು
ಬಿಡಿಸಿ ಯಾರೂ ಸವಿಯಲಾರರು

ನನ್ನ ಮಾಡಿದರು ಒಂದು ಕೀಲುಗೊಂಬೆ
ಕೂಡ್ರೆಂದರೆ ಕೂರಲು, ನಿಲ್ಲೆಂದರೆ ನಿಲ್ಲಲು
ಒಲ್ಲದೇ ಹೋದಾಗ ನಾ
ಕಾದಿತ್ತು ಮೊನಚು ತಿರಸ್ಕಾರ ಸೊಲ್ಲು ಸೊಲ್ಲಲೂ

ನನ್ನ ಕಡು ಕೋಪ, ನೇರ ನುಡಿ
ಸುತ್ತೆಲ್ಲ ಜನರ ನಾಲಿಗೆಗೆ ಆಹಾರ
ಸುಡು ಕೋಪದ ಹಿಂದೆ ಮಿಡಿವ ಹೃದಯವುಂಟು
ಕಾಣುವ ಕಣ್ಣಿಗೆ ಮಾತ್ರ ಬರವೋ ಬರ

ನನ್ನ ಸರಳ ಸ್ನೇಹ ಇವರ ಮನಕ್ಕೆ ತಟ್ಟದು
ಆಡಂಭರದ ಕೆಳೆಗೆ ಈ ಮನ ಒಪ್ಪದು
ಇರಬಹುದೇನೋ ಹಾಗಾಗಿ ನಾನೊಬ್ಬ ಒಂಟಿಸಲಗ
ಹಾಗಂತ ಇವರೆಲ್ಲ ಪಿಸುನುಡಿವರು ಆಗಾಗ

ನಾನಲ್ಲ ಬಿಳಿಹಾಳೆ, ಜೀವವುಂಟು ನನ್ನಲಿ
ಭೋರ್ಗರೆಯುತ ಧುಮುಕುತ್ತಿಹ ಭಾವವುಂಟು ಎದೆಯಲಿ
ನವಚೈತ್ರದ ಹೊಸ ಚಿಗುರಿಗೆ ಕಾಯುವೆನು ಸತತ
ಹೊಂಬೆಳಕಿನ ಮುಂಜಾವೆ ಬಳಿ ಬಾ, ಇದೋ ಸ್ವಾಗತ
ನಮಸ್ಕಾರ ಸ್ನೇಹಿತರೆ,
ಸ್ಥಳ ಬದಲಾವಣೆಯ ಕಾರಣ ಕೆಲವು ದಿನಗಳಿಂದ ಯಾವುದೇ ಬರಹವನ್ನು ಇಲ್ಲಿ ಪ್ರಕಟಿಸಲಾಗಿರಲಿಲ್ಲ. ಕ್ಷಮೆ ಇರಲಿ. ಇನ್ನು ಮುಂದೆ ಮತ್ತೆ ಎಂದಿನಂತೆ ನಾನು, ನನ್ನ ಬರಹ ಮತ್ತು ನೀವು ಭೇಟಿಯಾಗುತ್ತಿರೋಣ.

ಗುರುವಾರ, ಡಿಸೆಂಬರ್ 11, 2008

'ಬೆಳ್ಳಿ' ಬಟ್ಟಲಲ್ಲಿ ಹಳ್ಳಿ ಸುಧೆ ಹೀರುತ್ತ....

ಹೀಗೊಂದು ಆಯ್ಕೆ: ಒಂದಿಷ್ಟು ಜನಪ್ರಿಯ ಗೀತೆಗಳಿವೆ. ನಿಮಗವು ಬಲು ಇಷ್ಟ. ಆ ಧಾಟಿಯಲ್ಲಿ ಹಾಡೋಣವೆಂದರೆ ಅವುಗಳ ಸಾಹಿತ್ಯ ಕೊಂಚ ಕ್ಲಿಷ್ಟ ಅಥವಾ ಅವೇ ಸಾಲುಗಳನ್ನು ಕೇಳಿ ಕೇಳಿ ಬೇಸರ ಬಂದಿದೆ. ಸರಿ, ನೀವದನ್ನು ನಿಮ್ಮತನಕ್ಕೆ ಒಗ್ಗಿಸಲು ಯತ್ನಿಸುತ್ತೀರಿ. ಹಿಡಿಸದ, ಹಳತಾದ ಸಾಲುಗಳ ಜಾಗದಲ್ಲಿ ಹೊಸ ಸಾಲುಗಳು, ಹೊಸ ಅರ್ಥವನ್ನು ಹೊಂದಿಸುತ್ತೀರಿ. ಈಗ ನಿಮ್ಮೆದುರು ಎರಡು ಆಯ್ಕೆಗಳಿವೆ. ಒಂದೋ, ಧಾಟಿಯನ್ನಷ್ಟೇ ಎತ್ತಿಕೊಂಡು ಅದಕ್ಕೆ ಪಂಚಿಂಗ್ ಮಾತುಗಳನ್ನು ಪೋಣಿಸಿ ನಿಮ್ಮ ನಿಮ್ಮಲ್ಲೇ ಹಾಡಿಕೊಂಡು ಗೆಳೆಯರ ಬಳಗದಲ್ಲಿ ಬೆಳಗಬಹುದು. ಇಲ್ಲವೇ, ಬೇರೆ ಭಾಷೆಯ ಹಾಡುಗಳ ಸಂಗೀತದ ಜೊತೆಗೆ ಸಾಹಿತ್ಯವನ್ನೂ ಒಂದಕ್ಷರ ಬಿಡದೇ ಅನುವಾದಿಸಿ/ಭಾವಾನುವಾದ ಮಾಡಿ, ಕನ್ನಡ ಸಿನೆಮಾ ನಿರ್ಮಾಪಕರಿಗೆ ಮಾರಿ ಚಿತ್ರ ಸಾಹಿತಿಯಾಗಬಹುದು.
ತಮಿಳು, ತೆಲುಗು ಲೇಬಲ್ ಮದ್ಯಕ್ಕಿಷ್ಟು ಕನ್ನಡತನದ ಕಲಬೆರಕೆ ಮಾಡಿ ಭಟ್ಟಿ ಇಳಿಸಿ, ಕನ್ನಡೀಕರಿಸಿದ ಹೆಸರು ಹಚ್ಚಿ ಹಿಂಬಾಗಿಲಿಂದ ಮನೆಯೊಳು ತಂದು ಮಧುಪಾನ ಮಾಡಿಸುವುದು ಚಿತ್ರಸಾಹಿತಿಗಳಿಗೇ (ಕನಿಷ್ಠ ಕೆಲವರಿಗಾದರೂ) ಸರಿ ಹೊಂದುವ ಕಾರ್ಯ. ಹೀಗಾಗಿ ನೀವು ಎರಡನೆಯದನ್ನು ಅವರಿಗೆ ಬಿಟ್ಟು, ಮೊದಲಿನದನ್ನೇ ಒಪ್ಪಿಕೊಳ್ಳುತ್ತೀರಾದರೆ- ಸುಸ್ವಾಗತ! ದೊಡ್ಡದೊಂದು ಕುಟುಂಬ ನಿಮ್ಮನ್ನು ತನ್ನೊಡಲಲ್ಲಿ ಸೇರಿಸಿಕೊಳ್ಳಲಿದೆ. ಇಲ್ಲಿ ಯಾರೂ/ಎಲ್ಲರೂ ಜನಪ್ರಿಯ ಹಾಡುಗಳಿಗೆ ತಮ್ಮದೇ ಪದಜೋಡಣೆ ಮಾಡಲಡ್ಡಿಯಿಲ್ಲ. ಪದ ಬದಲಿಸಿಕೊಂಡ ಪರ್ಯಾಯ ಪದ್ಯವನ್ನು ಕುಟುಂಬದ ಎಲ್ಲರೂ ಸವಿಯುತ್ತಾರೆ. ಆದರೆ ನೆನಪಿಡಿ, ಯಾರಿಗೂ ಆ ಸವಿ ಉಣಬಡಿಸಿದ ಕ್ರೆಡಿಟ್ ಸಲ್ಲುವುದಿಲ್ಲ. ಅಸಲಿಗೆ ಕುಟುಂಬಕ್ಕೇ ಒಂದು ಹೆಸರಿಲ್ಲ. ಅದೊಂಥರ ಆಗಾಗ ಹೊಸಬರನ್ನು, ಹೊಸ ವರ್ಷನ್ನನ್ನು ಸೇರಿಸಿಕೊಳ್ಳುತ್ತ, ಹಳತನ್ನು-ಹಳಬರನ್ನು ಕಳಚಿಕೊಳ್ಳುತ್ತ ಸಾಗುವ ಆಟೋ ಅಪ್ಗ್ರೇಡಿಂಗ್ ಎಂಟಿಟಿ.
ನನ್ನ ಬಾಲ್ಯದಲ್ಲಿ ಸಮಾನ ವಯಸ್ಕರ, ನಮ್ಮ ತಲೆಮಾರಿನವರ ನಡುವೆ ಇಂಥ ಪರ್ಯಾಯ ಪದ್ಯಗಳು ಭಾರಿ ಚಾಲ್ತಿಯಲ್ಲಿದ್ದವು. ಇವುಗಳಿಗೆಲ್ಲ ಮೂಲ ಸೆಲೆ ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಹಾಡುಗಳು. ಪದ ಬದಲಿಸುವ ಸ್ವಾತಂತ್ರ್ಯವನ್ನು ಎಲ್ಲರೂ ತೆಗೆದುಕೊಳ್ಳುತ್ತಿದ್ದುದುಂಟು.
ಚಿಕ್ಕಂದಿನಲ್ಲಿ ನಮ್ಮೂರಿಗೆ ರೆಗ್ಯುಲರ್ ಆಗಿ ದ್ಯಾವರು ಎಂಬ ಕೆಲಸಿ ಬರುತ್ತಿದ್ದ. ಅವನೆದುರು ಕುಳಿತಾಕ್ಷಣ 'ಬೋಳಿಸಲೆಂದೇ ಕೂಪನು ತಂದೆ, ಕೂಪನು ಮಸೆಯಲು ನಾನಿಂದೆ, ತೆಗೆಯೋ ಟೊಪ್ಪಿಯನು, ತಮ್ಮಾ ತೆಗೆಯೋ ಟೊಪ್ಪಿಯನು' ('ಎರಡು ಕನಸು' ಚಿತ್ರದ 'ಪೂಜಿಸಲೆಂದೇ' ಧಾಟಿಯಲ್ಲಿ) ಎಂದು ಅವನ ಪರವಾಗಿ ಹಾಡಿ ಮುಗಿಸಿಯೇ ಅಣ್ಣ ತಲೆ ಒಡ್ಡುತ್ತಿದ್ದುದು. ಅತ್ತ ಹಣ್ಣು ಹಣ್ಣು ಮುದುಕ ದ್ಯಾವರು ಬೊಚ್ಚು ಬಾಯಿ ಕಿರಿದು ಮುಸಿ ಮುಸಿ ನಗುತ್ತಿದ್ದರೆ, ಇತ್ತ ಕಲ್ಪನಾ ಪ್ರೇಮಿ ಅಮ್ಮ 'ಇದೇ ಹಾಡೇ ಬೇಕಾಗಿತ್ತ ನಿಂಗೆ' ಎಂದು ಸಿಡಿಮಿಡಿಗೊಳ್ಳುತ್ತಿದ್ದಳು.
'ಎಡಕಲ್ಲು ಗುಡ್ಡದ ಮೇಲೆ' ಚಿತ್ರದ 'ವಿರಹ ನೂರು ನೂರು ತರಹ' ಹಾಡನ್ನು ಚಹಕ್ಕೆ ಸಮೀಕರಿಸಿ ಹಾಡುತ್ತಿದ್ದೆವು. ಒಮ್ಮೆ ನನ್ನಕ್ಕ ಒಬ್ಬಳು ತನ್ನ ಚಿಕ್ಕ ವಯಸ್ಸಿನ ಮಗಳೊಂದಿಗೆ ನೆಂಟರ ಮನೆಗೆ ಹೋಗಿದ್ದಳು. ಮಾತಿನ ಮಧ್ಯೆ ಅತಿಥಿಗಳಿಗೆ ಚಹ ಬಂತು. ಒಂದು ತೊಟ್ಟು ಗುಟುಕರಿಸಿದ ಮಗಳು ತಟ್ಟನೆ ಲೋಟ ಕುಕ್ಕಿ ಗಟ್ಟಿ ದನಿಯಲ್ಲಿ 'ಈ ಚಹ ನೀರು ನೀರು ತರಹ, ಈ ಚಹ ಕುಡಿವುದೆನ್ನೆಯ ಹಣೆ ಬರಹ' ಎಂದು ಹಾಡಿದಳು. ಮಗಳನ್ನು ಕರೆದುಕೊಂಡು ಹೋದದ್ದಕ್ಕಾಗಿ ತನ್ನನ್ನೇ ಶಪಿಸಿಕೊಳ್ಳುತ್ತ ಅಕ್ಕ ಲಗುಬಗೆಯಿಂದ ಮನೆಗೆ ಹೊರಟಳು.
ಇಡ್ಲಿ-ಸಾಂಬಾರು ಮಾಡಿದಾಗೆಲ್ಲ 'ನಮ್ಮ ಸಂಸಾರ, ಇಡ್ಲಿ ಸಾಂಬಾರ, ದೋಸೆ ಎಂಬ ದೈವವೇ ನಮಗಾಧಾರ, ಚಟ್ನಿ ತಂದ ಬಲದಿಂದ ಬಾಳೇ ಬಂಗಾರ' ಹಿಮ್ಮೇಳದೊಂದಿಗೆ ಉಂಡಾಗಲೇ ಅದರ ಸವಿ ಮೈಗೆ ಹತ್ತುತ್ತಿತ್ತು. ಇನ್ನು ಕಾಯಿ ತಂಬುಳಿ ಬಡಿಸಿದಾಗೆಲ್ಲ 'ಬಂಧನ' ಚಿತ್ರದ 'ಪ್ರೇಮದಾ ಕಾದಂಬರಿ' ಧಾಟಿಯಲ್ಲಿ 'ಪ್ರೀತಿಯ ಕಾಯ್ತಂಬುಳಿ, ಬೀಸಿದೆ ಒಳ್ಕಲ್ಲಲಿ, ಅನ್ನ ಮುಗಿದೇ ಹೋದರೂ ಮುಗಿಯದಿರಲಿ ತಂಬುಳಿ' ಎಂದು ಹಾಡುತ್ತ ಅದನ್ನು ಕಲಸುತ್ತಿದ್ದರೆ ತಂಬುಳಿಯ ರುಚಿಯೊಂದಿಗೆ ರಸಿಕತೆಯ ಒಗ್ಗರಣೆ ಬೆರೆತು ಪರಿಮಳ ನೆತ್ತಿಗೇರಿ ಮತ್ತೇರಿಸುತ್ತಿತ್ತು. ಇದೇ 'ಬಂಧನ' ಚಿತ್ರದ 'ನೂರೊಂದು ನೆನಪು' ಕೈ ಕೊಟ್ಟಾಗ ಇರಲಿ ಎಂದು 'ನೂರೊಂದು ಬಸ್ಸು ಹಳಿಯಾಳದಿಂದ, ಹಾಳಾಗಿ ಬಂತು ಅಪಘಾತದಿಂದ' ಎಂಬ ಬ್ಯಾಕಪ್ ಮೆಮೊರಿ ತಯಾರಾಗಿತ್ತು. ಹಾಗೆಯೇ 'ಉಪಕಾರ್' ಚಿತ್ರದ 'ಮೆರೆ ದೇಶ್ ಕೇ ಧರತಿ' ಹಾಡು 'ಮೇರೆ ಸೇಠ್ ಕೇ ಚಡ್ಡಿ ಫಡ್ ಫಡ್ ಫಾಟೆ, ಸಿಲೇ ನ ಕೋಯಿ ದರ್ಜಿ, ಮೇರೆ ಸೇಠ್ ಕೇ ಚಡ್ಡಿ' ಎಂಬ ರೂಪ ಪಡೆದಿತ್ತು.
ಹಿಂದಿ ಚಿತ್ರಗೀತೆಗಳ ಪದ್ಯಬಂಡಿ ಆಡುವಾಗೆಲ್ಲ ಒಮ್ಮೆ 'ಸ' ಬಂದರೆ 'ತೇಜಾಬ್' ಚಿತ್ರದ 'ಸೋ ಗಯಾ ಯೇ ಜಹಾಂ' ಹಾಡು ಗ್ಯಾರಂಟಿ. ಮತ್ತೊಮ್ಮೆ 'ಸ' ಬಂದಾಗ ಅದೇ ಧಾಟಿಯಲ್ಲಿ 'ಸೋ ಗಯಾ ಯೇ ಗಧಾ, ಸೋ ಗಯಾ ವೋ ಗಧಾ, ಸೋ ಗಯೀ ಹೈ ಸಾರೇ ಬಕರಿಯಾಂ, ಸೋ ಗಯಾ ಹೈ ಕುತ್ತಾ ಭೌಭೌ' ಎಂದು ಹಿನ್ನೆಲೆ ಸಂಗೀತದ ಸಮೇತ ಹಾಡು ಹೊರಬರುತ್ತಿತ್ತು. ಆಮೇಲಿನ 'ಏ, ಈ ಹಾಡು ಇಲ್ಲ, ಹೀಂಗೆಲ್ಲಾ (ವಿ)ಚಿತ್ರಗೀತೆ ಹಾಡೋ ಹಾಗಿಲ್ಲ.......'ಲ್ಲಲ್ಲಲ್ಲಾಪವೂ ಅಷ್ಟೇ ಗ್ಯಾರಂಟಿ.
ನಾನು ಜವಾಹರ ನವೋದಯ ವಿದ್ಯಾಲಯದಲ್ಲಿ ಓದುತ್ತಿದ್ದಾಗ ಒಂದು ಸಂಜೆ ವಿದ್ಯುತ್ ಕಡಿತಗೊಂಡ ಸಂದರ್ಭ. ಕತ್ತಲೆ ಡಾರ್ಮಿಟರಿಯಲ್ಲಿ ಎಲ್ಲರೂ ತಣ್ಣಗೆ ಕುಳಿತಿದ್ದೆವು. ಇದ್ದಕ್ಕಿದ್ದಂತೆ ಒಬ್ಬಾಕೆ 'ಹೇ, ನಂಗೇನೋ ಕಚ್ಚಿ ಬಿಡ್ತಲ್ಲೆ, ದೀಪ ತಗಂಡು ಬಾರೆ' ಎಂದು 'ಹಮ್ರಾಝ್' ಚಿತ್ರದ 'ಹೇ ನೀಲೆ ಗಗನ್ ಕೆ ತಲೆ' ಅನುಸರಿಸಿ ಹಾಡಿದಳು. ಕತ್ತಲೊಂದಿಗೆ ಕವಿದಿದ್ದ ಮೌನದ ತೆರೆಯನ್ನು ಆ ಹಾಡು ಏಕ್ದಂ ಸರಿಸಿ, ತಿಳಿ ನಗೆಯ ತಿಂಗಳಬೆಳಕನ್ನು ಹರಡಿತ್ತು. ಆ ವಸತಿ ಶಾಲೆಯಲ್ಲಿ ವಿದ್ಯಾಥರ್ಿಗಳ ಸಂಖ್ಯೆ ಹೆಚ್ಚಿದ್ದ ಕಾರಣ ಎರಡು ಬ್ಯಾಚ್ಗಳಲ್ಲಿ ಊಟಕ್ಕೆ ಹೋಗುತ್ತಿದ್ದೆವು. ಎರಡನೇ ಬ್ಯಾಚ್ನವರು ಊಟ ಶುರು ಮಾಡುವ ಹೊತ್ತಿಗೆ ಸಾಂಬಾರೆಂಬುದು ಹೋಳು, ಬೇಳೆಯನ್ನೆಲ್ಲ ಕಳೆದುಕೊಂಡು ತಿಳಿಸಾರಾಗಿರುತ್ತಿತ್ತು. ಅನ್ನದ ಮೇಲಿಷ್ಟು ಸುರಿದುಕೊಂಡು ಬಂದ ಸಾರಲ್ಲಿ ಅಪರೂಪಕ್ಕೊಮ್ಮೆ ಬೇಳೆ ಕಂಡಿತೆಂದರೆ ಬಾಯಿಯ ಬಾವಿಯಲ್ಲಿ ಜೊಲ್ಲಿನ ಜೊತೆ ಈ ಹಾಡೂ ಚಿಮ್ಮುತ್ತಿತ್ತು- 'ದೇಖಾ ಹೈ ಪೆಹಲೀ ಬಾರ್, ಸಾಂಬಾರ್ ಮೇ ತುಅರ್ ಕಾ ದಾಲ್, ಅಬ್ ಜಾಕೆ ಆಯಾ ಮೇರೆ ಭೂಕೆ ಯೇ ಪೇಟ್ ಕೋ ಕರಾರ್, ಪೇಟ್ ಭರ್ ತುಜೇ ಖಾನೆ ಕೋ ಕಬ್ ಸೇ ಥೀ ಮೈ ಬೇಕರಾರ್, ಅಬ್ ಜಾಕೆ ಆಯಾ ಮೇರೆ ಭೂಕೆ ಯೇ ಪೇಟ್ ಕೋ ಕರಾರ್'- ಗೆಳತಿಯರ ಪೈಕಿ ಒಬ್ಬಾಕೆ ಇದನ್ನು ಹಾಡಿದರೆ ಉಳಿದವರಿಂದ 'ಸಾಜನ್' ಚಿತ್ರದ ಆ ಹಾಡಿನ ಹಿನ್ನಲೆ ಸಂಗೀತದ ಮಾದರಿಯಲ್ಲೇ 'ಪಾಂಚ್ ಕಾ ಪಚಾಸ್, ಪಾಂಚ್ ಕಾ ಪಚಾಸ್' ಎಂಬ ಕೋರಸ್.
ಸಾಮಾನ್ಯವಾಗಿ ಇಂಥ ಪರ್ಯಾಯ ಪದ್ಯಗಳೆಲ್ಲ ಚಿತ್ರಗೀತೆಗಳನ್ನೇ ಅನುಸರಿಸುತ್ತಿದ್ದರೂ ಅಪರೂಪಕ್ಕೆ ಕೆಲವು ರಾಷ್ಟ್ರೀಯ ಗೀತೆಗಳೂ ಪದ ಬದಲು ಪ್ರಕ್ರಿಯೆಗೆ ಒಳಗಾಗುತ್ತಿದ್ದವು. ಕೆಲವೊಂದು ಮಜವಾಗಿದ್ದರೆ ವಿಶೇಷವಾಗಿ ಒಂದು ಪದ್ಯ 'ಸಜ'ವಾಗಿತ್ತು.
ನವೋದಯಲ್ಲಿ ರಸಾಯನ ವಿಜ್ಞಾನದ ಶಿಕ್ಷಕಿಯಾಗಿದ್ದ ಸಾರಾ ಎಂಬುವವರು 'ಶಿಕ್ಷಾ'ದಷ್ಟೇ 'ಶಿಕ್ಷೆ'ಗೂ ಪ್ರಾಮುಖ್ಯತೆ ನೀಡುತ್ತಿದ್ದ ಘಾಟಿ ವ್ಯಕ್ತಿ. ಉನ್ನತ ಮಟ್ಟದ ಬೋಧನಾ ಸಾಮಥ್ರ್ಯದ ಜೊತೆಗೆ ಸಿಟ್ಟಿನ ಪ್ರತಿರೂಪದಂತಿದ್ದ ಅವರ ಕಲಿಸುವಿಕೆ, 'ಕೋಲಿಸು'ವಿಕೆ ಕೈಕೈ ಹಿಡಿದು ಸಾಗುತ್ತಿದ್ದವು. ಒಮ್ಮೆ ಏಳು ತಿಂಗಳ ಗರ್ಭಿಣಿಯಾಗಿದ್ದ ಅವರು ಇನ್ನೇನು ನಮ್ಮ ತರಗತಿಯನ್ನು ಪ್ರವೇಶಿಸಬೇಕು ಅನ್ನುವಷ್ಟರಲ್ಲಿ 'ಸಾರೇ ಜಹಾಂ ಸೇ ಅಚ್ಛಾ'ದ ಪರ್ಯಾಯ ಪದ್ಯ ಅವರ ಕಿವಿಗೆ ಬಿತ್ತು. ಧುಮುಧುಮಿಸುತ್ತಲೇ ಒಳ ಬಂದ ಸಾರಾ ಮೇಡಂ 'ಗುಡ್ ಮಾರ್ನಿಂಗ್' ಗಿಳಿಪಾಠ ಒಪ್ಪಿಸಿದ ನಮ್ಮತ್ತ ಚೂಪನೆಯ ದೃಷ್ಟಿ ಬೀರಿ 'ಗರ್ಲ್ಸ್ ಸಿಡೌನ್' ಎಂದರು. ಪ್ರಶ್ನಾರ್ಥಕ ನೋಟ ಹೊತ್ತ ಹುಡುಗರತ್ತ ಕೆಂಗಣ್ಣು ಬೀರಿದವರೇ 'ಯಾರು ಅದನ್ನು ಹಾಡಿದವರು' ಎಂದರು. ಹುಡುಗರ ಅಯೋಮಯ ದೃಷ್ಟಿ ಒಬ್ಬರಿಂದೊಬ್ಬರಿಗೆ ಹರಿದು ಕಗ್ಗಂಟಾಯಿತೇ ಹೊರತು 'ಇವರೇನು ಕೇಳುತ್ತಿದ್ದಾರೆ, ಆ 'ಅದು' ಏನು' ಎಂಬುದು ತಲೆಬುಡ ತಿಳಿಯಲಿಲ್ಲ. ತಮ್ಮ ಕೋಪದ ಬೆಂಕಿಯಲ್ಲಿ ಸುಡಲೊಂದು ಸೂಕ್ತ ಕಟ್ಟಿಗೆ ಸಿಗದೇ ಸಿಡಿಮಿಡಿಗೊಂಡ ಅವರು ತರಗತಿಯ ಎಲ್ಲಾ ಹುಡುಗರನ್ನೂ ಒಂದಿಡೀ ತಾಸು ಹೊರಗೆ ನಿಲ್ಲಿಸಿದರು.
ಆಮೇಲೆ ತಿಳಿಯಿತು: ಮೇಡಂ ತರಗತಿಯನ್ನು ಪ್ರವೇಶಿಸಬೇಕೆನ್ನುವಷ್ಟರಲ್ಲಿ ಪಕ್ಕದಲ್ಲೇ ಇದ್ದ ಡಾರ್ಮಿಟರಿಯ ಹುಡುಗರು 'ಸಾರೇ ಜಹಾಂ ಸೇ ಅಚ್ಛಾ, ಸಾರಾ ಕೆ ಪೇಟ್ ಮೇ ಬಚ್ಚಾ' ಎಂದು (ಕೊಂಚ ಕೀಳು ಮಟ್ಟದಲ್ಲಿಯೇ) ಹಾಡಿದ್ದರು. ಎದುರಿಗೇ ಕುಳಿತಿದ್ದ ನಮ್ಮ ತರಗತಿಯ ಹುಡುಗರೇ ಅದನ್ನು ಹಾಡಿರಬೇಕು ಎಂದುಕೊಂಡ ಅವರು ಒಳಗೆ ಬಂದವರೇ ಶಿಕ್ಷಿಸಲು ಮುಂದಾದರು. ಮೊಸರು ತಿಂದಿದ್ದು ಮಂಗ; ಮುಸುಡಿ ಮೇಲೆ ಬರೆ ಬಿದ್ದಿದ್ದು ಮೇಕೆಗೆ.
ಕನ್ನಡ ಶಾಲೆಯಲ್ಲಿ ಓದುವಾಗ 'ವಂದೇ ಮಾತರಂ' ಬಲ್ಲದ ಮಕ್ಕಳಿಗೂ 'ವಂದೇ ಮಾಸ್ತರಂ' ಮುದ್ದಾಂ ಬರುತ್ತಿತ್ತು. ಮಾಸ್ತರರ ಬೆನ್ನ ಹಿಂದೆ 'ವ(ಒ)ಂದೇ ಮಾಸ್ತರಂ, ಹೊಡಿತಂ, ಬಡಿತಂ, ಕಿವಿ ಚಟ್ಟೆ ಹಿಂಡುತಂ' ಎಂದು ಹಾಡಿಕೊಂಡರೆ ತಿಂದ ಹೊಡೆತಕ್ಕಿಷ್ಟು ನ್ಯಾಯ ಸಲ್ಲಿಸಿದಂತೆ ಭಾಸ.
ಹೆಚ್ಚಿನ ಹಾಡುಗಳು ತಿಳಿ ಹಾಸ್ಯದಲ್ಲಿ ಮಿಂದೆದ್ದು ಬಂದು ಆಹ್ಲಾದಮಯ ನಗೆಗಂಧವನ್ನು ಹರಡುವಂತಿದ್ದರೆ ಒಮ್ಮೊಮ್ಮೆ ಕೆಲವು ಪೋಲಿತನದ ಕೊಚ್ಚೆಯಲ್ಲಿ ಉರುಳಾಡಿ ಉಸಿರುಕಟ್ಟಿಸುವಂತಿದ್ದುದು ಖರೆ. 'ಬಣ್ಣಾ ನನ್ನ ಒಲವಿನ ಬಣ್ಣಾ', 'ಶಿಲೆಗಳು ಸಂಗೀತವ ಹಾಡಿವೆ', 'ಧರಣಿ ಮಂಡಲ ಮಧ್ಯದೊಳಗೆ', 'ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ'ದಂಥ ಮಧುರ ಹಾಡುಗಳು ವಿರೂಪಗೊಂಡು ಮುಜುಗರ ಮೂಡಿಸುವ ರೂಪ ಪಡೆದದ್ದುಂಟು. (ಆ (ವಿ)ರೂಪ ಪ್ರಸ್ತುತಪಡಿಸಲಾರೆ, ಕ್ಷಮಿಸಿ). ಸಂಸ್ಕೃತದ ಕೆಲವು ಶ್ಲೋಕಗಳಿಗೂ ಇದೇ ಗತಿ.
ಸಾಮಾನ್ಯವಾಗಿ ಈ ಹಾಸ್ಯಮಯ ಪರ್ಯಾಯ ಪದ್ಯಗಳೆಲ್ಲ ಪಲ್ಲವಿಗಷ್ಟೇ ಸೀಮಿತವಾಗಿರುತ್ತಿದ್ದವು, ಚರಣಗಳ ತುದಿವರೆಗೆ ಯಾವ ಕವಿ(ಪಿ)ಯೂ ಚರಣ ಬೆಳೆಸುತ್ತಿದ್ದುದಿಲ್ಲ. ಆದರೂ ಅಪರೂಪಕ್ಕೆ ಕೆಲವು ಅಜ್ಞಾತ ಕವಿಗಳು ಚಿತ್ರಗೀತೆಗಳ ಧಾಟಿಯಲ್ಲಿ ಅರ್ಥವತ್ತಾದ ಭಕ್ತಿಗೀತೆಗಳನ್ನು ರಚಿಸಿದ್ದುಂಟು. ಮಜವೆಂದರೆ (ಸ)ರಸವತ್ತಾದ ಚರಣಗಳನ್ನು ಮೂಸಿಯೂ ನೋಡದೇ ಮುಖ ಸಿಂಡರಿಸುತ್ತಿದ್ದ ಹಿರಿಯರೆಲ್ಲ ಥಳಥಳಿಸುವ 'ಬೆಳ್ಳಿ' ಬಾಟಲಿಯಲ್ಲಿ ಬಂದ ಭಕ್ತಿ ಸುಧೆಯನ್ನು ಚಪ್ಪರಿಸಿ ಸವಿಯುತ್ತಿದ್ದರು. 'ದೋ ಆಂಖೆ ಬಾರಾ ಹಾಥ್'ನ 'ಏ ಮಾಲಿಕ್ ತೇರೆ ಬಂದೆ ಹಮ್' ಧಾಟಿಯ 'ಮಂಗಳೇಶ ಮಹೇಶ ನಮೋ', 'ಬೀಸ್ ಸಾಲ್ ಬಾದ್'ನ 'ಕಹೀಂ ದೀಪ್ ಜಲೆ ಕಹೀಂ ದಿಲ್' ಧಾಟಿಯ 'ಗುರುದೇವ ಪರಿಪೂರ್ಣ', 'ಕವಿರತ್ನ ಕಾಳಿದಾಸ'ದ 'ಸದಾ ಕಣ್ಣಲಿ' ಹಿಂಬಾಲಿಸಿ ಬಂದ 'ಗುರುವೆ ನಿನ್ನೆಯ ನಾಮವ', 'ಕಸ್ತೂರಿ ನಿವಾಸ'ದ 'ಎಲ್ಲೇ ಇರು' ಅಂಗಿ ತೊಟ್ಟ 'ಗೌರಿ ಪ್ರಿಯ, ತೋರೋ ದಯ'ಗಳೆಲ್ಲ ಹೀಗೆ ಡಿಸೈನರ್ ಅಚ್ಚಿನಲ್ಲಿ ಅದ್ದಿ ತೆಗೆದ ಲೋಕಲ್ ಭಜನೆಗಳು. ಸಾಂಪ್ರದಾಯಿಕ ಭಜನೆ ಕಾರ್ಯಕ್ರಮವೊಂದರಲ್ಲಿ ಇಂಥ ಹಾಡೊಂದನ್ನು ಹಾಡಿದರೆ ನ್ಯೂಯಾರ್ಕ್ ಬೀದಿಯಲ್ಲಿ ಸೀರೆಯುಟ್ಟು ನಡೆಯುವ ಯುವತಿಯ ರೀತಿಯಲ್ಲಿ ಗಮನ ಸೆಳೆಯುತ್ತಿದ್ದವು (ಬೆಂಗಳೂರಿನ ಬ್ರಿಗೇಡ್ ರಸ್ತೆ ಎನ್ನಲಾರೆ, ಅಲ್ಲಿ ಸೀರೆ ಅಪರೂಪವಾದರೂ ಅದನ್ನುಟ್ಟರೆ ಯಾರೂ ಕಣ್ಣೆತ್ತಿ ನೋಡಲಾರರು).
ಸೀಮಿತ ಅವಕಾಶದಲ್ಲಿ ಪ್ರತಿಭೆಯ ಪ್ರಭೆಯನ್ನು ಹೊರಸೂಸಲು ಅವಕಾಶ ಮಾಡಿಕೊಡುವ ಈ ಪರ್ಯಾಯ ಪದ್ಯಗಳಿಗೆ ಒರಿಜಿನಲ್ ಚಿತ್ರಗೀತೆಗಳಿಗಿರುವ ಸಾರ್ವಕಾಲಿಕ ಜನಪ್ರಿಯತೆಯ, ರಾಷ್ಟ್ರೀಯ ಗೀತೆಗಳು ಹೊದ್ದ ಇನ್ಶೂರ್ಡ್ ಗೌರವದ, ಶ್ಲೋಕಗಳ ಪಾವಿತ್ರ್ಯ, ಪರಂಪರೆಯ ಅಗ್ಗಳಿಕೆಯ ಅಥವಾ ಭಾವಗೀತೆಗಳ ಸಾಹಿತ್ಯಿಕ ಘನತೆಯ, ಘಮಲಿನ ವಿಶೇಷ ಸವಲತ್ತುಗಳೊಂದೂ ಇಲ್ಲ. ಆದರೂ ತುಂಟ ಎಸ್ಸೆಮ್ಮೆಸ್ಗಳಂತೆ ತುಟಿಯ ಮೇಲೊಂದು ತುಂತುರು ನಗೆ ಅರಳಿಸಿ, ತಲೆ ಹತ್ತಿ ಕುಳಿತ ಚಿಂತೆಯ ತೊಲೆಯನ್ನು ಇಳಿಸಿ ಹಗುರ ಮಾಡಿ, ಪುಟ್ಟ ಪುಟ್ಟ ರಸಗಳಿಗೆಗಳನ್ನು ಸೃಷ್ಟಿಸುವ ಸೊಗಸು ಇದೆ.
ಕೊನೆಗೊಂದು ಕೊಸರು: ಹಲವು ಸಲ 'ಚಲ್ತೇ ಚಲ್ತೇ' ಚಿತ್ರದ ಶೀರ್ಷಿಕೆ ಗೀತೆ- 'ಚಲ್ತೇ ಚಲ್ತೇ ಮೇರೆ ಯೇ ಗೀತ್ ಯಾದ್ ರಖನಾ'ದೊಂದಿಗೆ ಸ್ನೇಹ ಸಮಾರಂಭಗಳಿಗೆ ಮುಕ್ತಾಯ ಹಾಡುವುದುಂಟು. ಈ ಗೀತೆಗೊಬ್ಬ ಮಲಸೋದರಿ. ಆಕೆಯೂ ಸಮಾರೋಪ ಸಂಗೀತದಲ್ಲಿ ಸಮರ್ಥಳು. ಆಕೆಯನ್ನು ಮುಂದಿಟ್ಟುಕೊಂಡು ಇತ್ತಲಿಂದ ಬೈ ಬೈ, ಸಲಾಂ- 'ಇರಲಿ, ನೆನಪಿರಲಿ, ನಮ್ಮ ಗೆಳೆತನದ ಸವಿ ನೆನಪಿರಲಿ, ಆ ನೆನಪೇ ಶಾಶ್ವತವು, ಅದುವೆ ಚಿರ ನೂತನವು'.

('ದ್ಯಾಟ್ಸ್ ಕನ್ನಡ'ಕ್ಕೆ ಧನ್ಯವಾದ ಹೇಳುತ್ತ..)

ಸೋಮವಾರ, ಡಿಸೆಂಬರ್ 8, 2008

ಅದೋ ಅಲ್ಲಿ, ಅಲ್ಲಿಗೇಟರ್!!

ಆರು ತಿಂಗಳ ಹಿಂದೆ 'ಫ್ಲೋರಿಡಾಕ್ಕೆ ಹೊರಡುತ್ತಿದ್ದೇವೆ' ಎಂದು ಗೊತ್ತಾಗುತ್ತಿದ್ದಂತೆಯೇ ಸಹಜವಾಗಿ ಜಯರಾಮ ಗೆ ಕೇಳಿದೆ: 'ಹೇಗಿದೆಯಂತೆ ಅದು?' ಮೂರು ಶಬ್ದಗಳಲ್ಲಿ ಉತ್ತರ ಬಂತು- 'ಸೆಖೆ, ಬೀಚು, ಅಲ್ಲಿಗೇಟರ್ಸ್'. 'ಮೊಸಳೆ- ಅಷ್ಟೊಂದಿದೆಯೆ' ತತ್ಕ್ಷಣಕ್ಕೆ ಕುತೂಹಲ ಮೂಡಿತ್ತು ನನಗೆ.
ಟಾಂಪಾ ವಿಮಾನ ನಿಲ್ದಾಣದಿಂದ ಹೊರಬೀಳುತ್ತಿದ್ದಂತೆಯೇ ಸೆಖೆಯ ಅಂದಾಜು ಹತ್ತಿತು ನನಗೆ. ಬಂದ ಒಂದೆರಡು ದಿನದಲ್ಲೇ ಬೀಚ್ ಕೂಡ ಸುತ್ತಾಡಿ ಬಂದೆವು. ನಾನು ಈವರೆಗೆ ನೋಡಿದ್ದಕ್ಕಿಂತ ಅತ್ಯಂತ ಸ್ವಚ್ಛ ನೀರು, ಸುಂದರ-ನಯವಾದ ಮರಳು ಅಲ್ಲಿತ್ತು. ಹೇಳಿ ಕೇಳಿ 'ಕ್ಲೀಯರ್ ವಾಟರ್' ಎಂದು ಹೆಸರು ಆ ಸಾಗರದಂಚಿಗೆ. ಮಕರ ದರ್ಶನ ಮಾತ್ರ ಬಾಕಿ ಉಳಿದಿತ್ತು.
ಒಂದಿನ ನಾವು ಮತ್ತು ಜಯರಾಮ್ ಸಹೋದ್ಯೋಗಿ ದಂಪತಿ ಕಾರ್ ಖರೀದಿಗೆಂದು ಒಂದೆಡೆ ಹೋದೆವು. ಮಾರುತ್ತಿದ್ದ ವ್ಯಕ್ತಿ ಕೆರೆಯಂಚಿನ ಗೃಹ ಸಮುಚ್ಚಯವೊಂದರಲ್ಲಿ ವಾಸವಿದ್ದ. ಕಾರ್ ನೋಡಿ ಜಯರಾಮ್ ಮತ್ತು ಸಹೋದ್ಯೋಗಿ ಪರೀಕ್ಷಾರ್ಥ ಚಾಲನೆಗೆ ತೆರಳಿದರು. ಅವರ ಪತ್ನಿ ಮತ್ತು ನಾನು ಕಾರ್ ಮಾಲೀಕನೊಂದಿಗೆ ಮಾತಿಗಿಳಿದೆವು. ಮಾಮೂಲಿನಂತೆ ಹವಾಮಾನ, ಬೀಚ್ ಅದು ಇದು ಮಾತು ಮುಗಿಸಿ, 'ಇಲ್ಲಿ ಸಿಕ್ಕಾಪಟ್ಟೆ ಅಲ್ಲಿಗೇಟರ್ಸ್ ಇವೆಯಂತೆ ಹೌದಾ' ಎಂದೆವು. 'ಹಾಂ, ನಿನ್ನೆ ಬೆಳಿಗ್ಗೆ ಇಲ್ಲೇ ಒಂದು ಬಂದಿತ್ತು' ಎಂದು ಅಂವ ನಮ್ಮಿಬ್ಬರ ಕಾಲಡಿಗೆ ಇದ್ದ ಮಳೆ ನೀರಿನ ಕಾಲುವೆಯತ್ತ ಕೈ ತೋರಿಸಿದ. ಕಾಲುವೆಗೆ ಮುಚ್ಚಿದ್ದ ತೂತು ತೂತಿನ ಮುಚ್ಚಳದಿಂದ ಗರಗಸದ ದಂತಪಂಕ್ತಿ ತೂರಿದಂತಾಗಿ ಬೆಚ್ಚಿ ನಾವಿಬ್ಬರು ನಾಲ್ಕಡಿ ದೂರ ಜಿಗಿದೆವು.
ಅದೇ ವೇಳೆ ಬಾಡಿಗೆ ಮನೆಯನ್ನೂ ಹುಡುಕುತ್ತಿದ್ದೆವು. ಸರಿ, ಅಪಾರ್ಟಮೆಂಟ್ ಒಂದನ್ನು ನೋಡಿ, ಬಾಡಿಗೆ ಒಪ್ಪಂದ ಮಾಡಿಕೊಳ್ಳಲೆಂದು ಅದೇ ದಂಪತಿ ಜೊತೆ ಆ ಗೃಹ ಸಮುಚ್ಚಯದ ಕಚೇರಿಗೆ ಬಂದೆವು. ಕಣ್ಣಳತೆಯಲ್ಲೇ ಮೂರ್ನಾಲ್ಕು ಕೆರೆಗಳು, ಅಡ್ಡಾದಿಡ್ಡಿ ಹುಲ್ಲು ತುಂಬಿದ ನೆಲ, ಮೈತುಂಬ ಶಿಲಾವಲ್ಕದ ಮಾಲೆ ಜೋತಾಡಿಸಿಕೊಂಡ ಮರಗಳು... ವಾತಾವರಣ ವಿಚಿತ್ರವೆನಿಸಿತು ನಮಗೆ. 'ಇಲ್ಲಿ ಸಿಕ್ಕಾಪಟ್ಟೆ ಓತಿಕ್ಯಾತ ಇದ್ದಂಗಿದೆ' ಎಂದೆವು ಅಪಾರ್ಟಮೆಂಟ್ ಆಡಳಿತಾಧಿಕಾರಿಗೆ. 'ಹಾಂ, ಓತಿಕ್ಯಾತ, ಅಳಿಲು, ಅಲ್ಲಿಗೇಟರ್ಸ್ ಎಲ್ಲಾ ಇಲ್ಲಿ ಬೇಕಾದಷ್ಟಿವೆ' ಆರಾಮವಾಗಿ ಹೇಳಿದರಾಕೆ. ಓತಿಯನ್ನು ನೋಡೇ ಹೆದರಿಕೊಂಡಿದ್ದ ಜಯರಾಮ್ ಸಹೋದ್ಯೋಗಿಯ ಪತ್ನಿ ಕಂಗಾಲು.
ಹೊಸ ಮನೆಗೆ ಬಂದುಳಿದ ಮಾರನೇ ದಿನವೇ ಮೊಸಳೆ ವೀಕ್ಷಣೆಗೆ ಹೊರಟೆ ಮಗನೊಂದಿಗೆ. ಕೆರೆಯ ಸಮೀಪ ಹೋಗಿ ನಿಂತುಕೊಂಡು ಉದ್ದಕ್ಕೂ ಕಣ್ಣು ಹಾಯಿಸುತ್ತದ್ದಂತೆಯೇ ಕಾಲ ಬುಡದಲ್ಲೇ ಏನೋ ಪುಳಕ್ಕೆಂದು ನೀರೊಳಕ್ಕೆ ನುಗ್ಗಿದಂತಾಯಿತು. ಬೆದರಿ ಹಿಂದೆ ಸರಿದು ನೋಡಿದರೆ... ಅಯ್ಯೋ, ದಂಡೆಯಲ್ಲಿ ಮೈಚಾಚಿದ್ದ ಆಮೆಯೊಂದು ಉಲ್ಟಾ ನನ್ನನ್ನು ಕಂಡು ಹೆದರಿ ನೀರಿಗೆ ಜಿಗಿದಿತ್ತಷ್ಟೇ. 'ಸಧ್ಯ' ಎಂದು ಉಸಿರು ಎಳೆದುಕೊಳ್ಳುತ್ತ ದೃಷ್ಟಿ ಚಾಚುತ್ತಿದ್ದಂತೆಯೇ, 'ಅರೇ'- ಈ ಬಾರಿ ನಿಜಕ್ಕೂ 'ಅಲ್ಲಿಗೇಟರ್!' ಹತ್ತು ಮೀಟರ್ ದೂರದಲ್ಲಿ ಆರಾಮವಾಗಿ ನೀರೊಳಗೆ ಮೈ ಹರವಿಕೊಂಡು, ಮೂತಿಯನ್ನಷ್ಟೇ ತೇಲಿ ಬಿಟ್ಟು ನಿಶ್ಚಲವಾಗಿತ್ತು ಮೊಸಳೆ. ಅತ್ಯುತ್ಸಾಹದಿಂದ 'ಅದೇ, ಅಲ್ನೋಡು ಅಲ್ಲಿಗೇಟರ್' ಎಂದು ಮಗನಿಗೆ ತೋರಿಸಿದೆ. ಮರದ ತೊಗಟೆಯ ತುಂಡಿನಂತೆ ಕಾಣುತ್ತಿದ್ದ ಅದನ್ನು ಮೊಸಳೆ ಎಂದು ಗುರುತಿಸಲು ಮಗನಿಗೆ ಸ್ವಲ್ಪ ಕಷ್ಟವಾಯ್ತೇನೋ. 'ಅದು ಅಲ್ಲಿಗೇಟರ್ರಾ'- ಎಂದ ಅಪನಂಬಿಕೆಯಿಂದ. ಅಷ್ಟೊತ್ತಿಗೆ ನಮ್ಮ ಮಾತಿನಿಂದ ಮೊಸಳೆ ಅಪಾಯವನ್ನು ಗ್ರಹಿಸಿತೇನೋ. ಅದೂ ಪುಳಕ್ಕನೇ ಮರೆಯಾಯಿತು. ಎಲ್ಲಿ ಹೋಯಿತು ಎಂದು ಆಚೀಚೆ ನೋಡುವಷ್ಟರಲ್ಲಿ, ಒಂದು ಸೆಕೆಂಡ್ ಅಂತರದಲ್ಲಿ ಹದಿನೈದು ಮೀಟರ್ ಆಚೆ ಮತ್ತೆ ಪ್ರತ್ಯಕ್ಷವಾಯಿತು.
ಮೊಲ, ನರಿ, ಜಿಂಕೆ, ಹಂದಿ, ಹೆಬ್ಬಾವು ಇಂಥ ಅನೇಕ ಪ್ರಾಣಿಗಳನ್ನು ಭಾರತದಲ್ಲಿ ನಾನು ಹುಟ್ಟಿ ಬೆಳೆದ ಪರಿಸರದಲ್ಲಿ, ಮನೆಯ ಆಸುಪಾಸಿನಲ್ಲೇ ಸಾಕಷ್ಟು ಕಂಡಿದ್ದೆನಾದರೂ ಮೊಸಳೆಯನ್ನು ಎಂದೂ ಕಂಡಿರಲಿಲ್ಲ. ಹಾಗಾಗಿ ಆ ದಿನ ನನಗಾದ ನನಗಾದ ಪುಳಕ ಅಷ್ಟಿಷ್ಟಲ್ಲ. ಆಮೇಲಾಮೇಲೆ ಗೃಹ ಸಮುಚ್ಚಯ ಆವರಣದ ಯಾವುದೇ ಕೆರೆಯ ಬಳಿ ಹೋದರೂ ಆಗೀಗ ಮೊಸಳೆ ಕಾಣಿಸಲಾರಂಭಿಸಿದ ಮೇಲೆ ನನ್ನ ಉತ್ಸಾಹ ಒಂದು ಹದಕ್ಕೆ ಬಂತು. ಶಬರಿಮಲೆಯಲ್ಲಿ ಮಧ್ಯರಾತ್ರಿಯ ಕಾವಳದಲ್ಲಿ ಕಾದು ಜನ 'ಮಕರ ಜ್ಯೋತಿ'ಯ ದರ್ಶನ ಮಾಡುತ್ತಾರಂತೆ. ಇಲ್ಲಿ ಹಾಡು ಹಗಲೇ ಸೂರ್ಯನ ಜ್ಯೋತಿಯಲ್ಲಿ 'ಮಕರ ದರ್ಶನ' ಲಭ್ಯ.
ಈ ಕಡೆ ರಸ್ತೆಯಂಚಿನಲ್ಲಿ, ಕಾಡಿನಂಚಿನಲ್ಲಿ ಇರುವ ಪುಟ್ಟ ಪುಟ್ಟ ಕೆರೆಗಳಲ್ಲೂ ಮೊಸಳೆಗಳು ಇರುತ್ತವಂತೆ. ಇತ್ತೀಚೆಗೆ ಕೇಪ್ ಕೆನಾವರಲ್ಗೆ ಹೋದಾಗ ನಾಸಾ ಪ್ರವಾಸಿ ಕೇಂದ್ರವನ್ನು ತಲುಪುವ ದಾರಿಯ ಇಕ್ಕೆಲಗಳಲ್ಲಿ ಇದ್ದ ನಾಲೆಗಳಲ್ಲಿ ಹೆಚ್ಚೆಂದರೆ ಒಂದು ವಾರದ ಹಿಂದೆ ಹುಟ್ಟಿರಬಹುದಾದಷ್ಟು ಎಳೆಯ, ಅರ್ಧ ಅಡಿ ಉದ್ದದ ಮೊಸಳೆಯಿಂದ ಹಿಡಿದು ಐದು-ಐದೂವರೆ ಅಡಿ ಉದ್ದದ ಪ್ರೌಢ ಮೊಸಳೆಗಳವರೆಗೆ ಎಲ್ಲಾ ಸೈಜಿನ ಮಕರ ದರ್ಶನವಾಗಿತ್ತು. ಇಲ್ಲಿನ ಕೆರೆ, ಕಾಲುವೆಗಳ ಅಂಚಿನಲ್ಲಿ 'ಮೊಸಳೆಗಳನ್ನು ಹಿಂಸಿಸಬೇಡಿ, ಆಹಾರ ಹಾಕಬೇಡಿ' (ಆಹಾರವಾಗಲೂಬೇಡಿ) ಎಂಬ ಎಚ್ಚರಿಕೆ ಸಾಮಾನ್ಯ.
ಇಲ್ಲಿನ ಮೊಸಳೆಗಳು (ಅಲ್ಲಿಗೇಟರ್ ಮಿಸ್ಸಿಸ್ಸಿಪ್ಪಿನ್ಸಿಸ್) ಭಾರತದಲ್ಲಿ ಸಾಮಾನ್ಯವಾಗಿ ಕಂಡು ಬರುವ 'ಮಗರ್' (ಕ್ರೊಕೊಡೈಲಸ್ ಪ್ಯಾಲಸ್ಟ್ರೈಸ್) ಜಾತಿಯ ಮೊಸಳೆಗಳಿಗಿಂತ ವಿಭಿನ್ನ. ಇವಕ್ಕೆ ಆಂಗ್ಲ ಭಾಷೆಯ 'ಯು' ಆಕಾರದ ಅಗಲ ಮೂತಿಯಿದ್ದರೆ ಅವರದ್ದು 'ವಿ' ಆಕಾರದ ಮೂತಿ. ಇವುಗಳ ಕೆಳದವಡೆಯ ಹಲ್ಲು ಮೇಲ್ದವಡೆಯಲ್ಲಿ ಮುಚ್ಚಿಕೊಂಡಿದ್ದರೆ, ಮಗರ್ ಗಳ ಕೆಳದವಡೆಯ ನಾಲ್ಕನೇ ಹಲ್ಲು ಹೊರಗೆ, ಮೇಲ್ಚಾಚಿಕೊಂಡಿರುತ್ತದೆ. ಸಿಹಿ ನೀರಿನಲ್ಲಷ್ಟೇ ವಾಸಿಸುವ ಇವು 'ಅಲ್ಲಿಗೇಟರ್'ಗಳು, ಸಿಹಿ ನೀರಿನ ಜೊತೆ ಉಪ್ಪು-ಸಿಹಿ ಮಿಶ್ರಿತ ನೀರಿನಲ್ಲೂ ವಾಸಿಸುವ ಅವು 'ಕ್ರೊಕೊಡೈಲ್'ಗಳು. ಭಾರತದ ಗಂಗಾ ನದಿ, ಮಹಾನದಿ-ಚಂಬಲ್ ನದಿ ಕಣಿವೆ ಪ್ರದೇಶದಲ್ಲಿ 'ಘರಿಯಲ್' (ಗವಿಯಾಲಿಸ್ ಗ್ಯಾಂಜೆಟಿಕಸ್) ಎಂಬ ಸಪೂರ, ಚಾಚು ಮೂತಿಯ ಮತ್ತೊಂದು ಜಾತಿಯ ಮೊಸಳೆಗಳೂ ಇವೆ. ಅವುಗಳ ಮೂತಿಯ ಆಕಾರದಿಂದಾಗಿ ಅವು ಮೀನುಗಳನ್ನಷ್ಟೇ ಹಿಡಿದು ತಿನ್ನಬಹುದಲ್ಲದೇ ದೊಡ್ಡ ಪ್ರಾಣಿಗಳನ್ನು ತಿನ್ನಲು ಸಾಧ್ಯವಿಲ್ಲ. ಅಂಡಮಾನ್ ದ್ವೀಪ ಸಮೂಹದಲ್ಲಿ, ಸುಂದರ ಬನದಂತಹ ಕೆಲವು ನದಿ ಮುಖಜಭೂಮಿಯಲ್ಲಿ ಉಪ್ಪುನೀರಿನಲ್ಲಿ ವಾಸಿಸುವ ಮೊಸಳೆಗಳೂ (ಕ್ರೊಕೊಡೈಲಸ್ ಪೊರೊಸಸ್) ಇವೆ.
ಬಾಳೇಸರದ ನಮ್ಮ ಮನೆಯ ಬಳಿ ಅಘನಾಶಿನಿ ನದಿಯಲ್ಲಿ 'ಮಕರ ಕಟ್ಟು' ಎಂಬ ಜಾಗವೊಂದಿದೆ. ಹಿಂದೆ ಅಲ್ಲಿ ಹರಿವ ಹೊಳೆನೀರಿಗೆ ಕಟ್ಟ ಕಟ್ಟುವಷ್ಟು ಸಂಖ್ಯೆಯಲ್ಲಿ ಮೊಸಳೆಗಳಿದ್ದವಂತೆ. ನಾನು ಬಾಲ್ಯ ಕಳೆದ ಹನುಮಾಪುರದ ಬಳಿ ಹೆಸರೇ ಇಲ್ಲದ ಹಳ್ಳವೊಂದಿದೆ. ಮಳೆಗಾಲದಲ್ಲಿ ಮಾತ್ರ ನೀರು ತುಂಬಿ ಹರಿಯುವ, ಬೇಸಿಗೆಯಲ್ಲಿ ಬತ್ತಿ ಹೋಗುವ ಆ ಹಳ್ಳದಲ್ಲಿ ವರ್ಷಪೂರ್ತಿ ನೀರಿರುವ ಏಕೈಕ ಜಾಗವೆಂದರೆ 'ಮೊಸಳೆ ಗುಂಡಿ'. ವಿಷಾದವೆಂದರೆ ಆ ಎರಡೂ ತಾಣಗಳಲ್ಲಿ ಹೆಸರಿಗೆ ಮರ್ಯಾದೆ ಕೊಡಲಾದರೂ ಒಂದು ಮೊಸಳೆ ಉಳಿದಿಲ್ಲ. 'ಛೇ, ನೈಸರ್ಗಿಕ ತಾಣದಲ್ಲಿ ಮೊಸಳೆಯನ್ನು ನೋಡೋ ಅವಕಾಶವೇ ಇಲ್ಲವಲ್ಲ ನನಗೆ' ಎಂದು ಹಲವು ಬಾರಿ ಹಳಹಳಿಸಿದ್ದೆ. ಫ್ಲೋರಿಡಾ ವಾಸ ಆ ಹಳಹಳಿಕೆಯನ್ನು ಅಳಿಸಿಬಿಟ್ಟಿತು.
Free Web Counter

Free Counter