ಶುಕ್ರವಾರ, ಸೆಪ್ಟೆಂಬರ್ 6, 2013

ನಮ್ಮ ನಿಮ್ಮ ನಡುವಿನ ಮಹಾನ್ 'ಕಥೆ'ಗಾರರು!

ಇಲ್ಲ, ನಾನು ಮಾಸ್ತಿ, ಕೆ. ಸದಾಶಿವ, ಲಂಕೇಶ, ವೈದೇಹಿ ಇವರ ಬಗ್ಗೆ ಹೇಳುತ್ತಿಲ್ಲ, ಓ. ಹೆನ್ರಿ, ಚೆಕಾವ್‌ರ ಬಗ್ಗೆಯೂ ಅಲ್ಲ. ಅವರೆಲ್ಲಾ ಭಾರಿ ಎತ್ತರಕ್ಕೆ, ಅಗಲಕ್ಕೆ ಬೆಳೆದವರು. ನಾನು ಕೈ ಚಾಚಿದ್ದು ಹೋಗಲಿ, ಉದ್ದದ ದೋಟಿ ಹಿಡಿದು ಕುಪ್ಪಳಿಸಿದರೂ ಅವರ ಕಥನ ಕುಸುಮ ಕೈಗೆ ಸಿಗುವುದಿಲ್ಲ. ಏನಿದ್ದರೂ ಪರಿಮಳ ಮಾತ್ರ ಆವರಿಸಿಕೊಳ್ಳುತ್ತದೆ. 

ನನಗೆ ಸಿಗುವುದೇನಿದ್ದರೂ ಇಲ್ಲೇ ಅಕ್ಕ-ಪಕ್ಕ ಇರುವ, ನಮ್ಮಲ್ಲಿನ 'ನ, ಮ, ಮವತ್ತು' ಎಲ್ಲ ಆಗಿರುವ ಸಾಮಾನ್ಯ ಜನರು. ನಮ್ಮೊಳಗಿನ ಅಸಾಧಾರಣ ಕಥೆಗಾರರು! ಅಷ್ಟೋ, ಇಷ್ಟೋ ಶಿಕ್ಷಣ, ಒಂದು ಕೆಲಸ, ಒಂದಷ್ಟು ಜವಾಬ್ದಾರಿ, ಸಂ-ಸಾರ, ಬಂಧು-ಬಳಗ... ಇವರ ಬಯೋಡೇಟಾ. ಬಾಯ್ತುಂಬ ನಗು, ಚೂರು ಹಾಸ್ಯಪ್ರಜ್ಞೆ, ಅದನ್ನು ಮಾತಿಗೆ ಬಗ್ಗಿಸುವ ಕಲೆಗಾರಿಕೆ.... ಅವರ ಆಸ್ತಿ. ಇವರ ಕಥೆ ಅಕ್ಷರಗಳಲ್ಲಿ ಅರಳುವುದಿಲ್ಲ. ಕಿವಿಯಲ್ಲಿ ತೂರಿಕೊಂಡು ಸೀದಾ ಮೆದುಳಿಗೆ ಹೋಗಿ, ಅಲ್ಲಿನ ಬಿಗಿದುಕೊಂಡ ನರತಂತುಗಳನ್ನೆಲ್ಲಾ ಸಡಲಿಸಿ, ಬೆಚ್ಚನೆಯ ಮಸಾಜ್ ಮಾಡಿ, ಅಲ್ಲಿಂದಲೇ ಒಂದು ಸಿಗ್ನಲ್ ಕೊಟ್ಟು, ಬಾಯಗಲಿಸಿ, ಕೆನ್ನೆ ಅರಳಿಸಿ, ಹಲ್ಲು ಕಿರಿಸಿ, ಕಣ್ಣು ಕಿರಿದಾಗಿಸಿ.... ನಗಲು ಏನೇನು ಬೇಕೋ ಎಲ್ಲ ಮಾಡುತ್ತದೆ. ಮನವನ್ನು ಹಗುರ ಹತ್ತಿಯನ್ನಾಗಿಸುತ್ತದೆ. 
ಹಳ್ಳಿಗಳಲ್ಲಿ ಮದುವೆ, ಮುಂಜಿ, ಶ್ರಾದ್ಧ, ಸಮಾರಾಧನೆಗಳಲ್ಲಿ ಹತ್ತು ಜನ ಸೇರಿದಾಗ ಇಂಥ ಒಬ್ಬವರಿದ್ದರೆ ಪುಕ್ಕಟೆ ಸಮಯಾಲಾಪ. ಅಲ್ಲಿ ಮದುವೆಯೋ, ಉಪನಯನವೋ ಒಂದು ಕಾರ್ಯ ನಿಶ್ಚಯವಾಯಿತೆಂದರೆ ಅದನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ಮನೆಯವರದು, ಬಂಧುಗಳದು, ಊರವರದು. ಬುಕ್ ಮಾಡಿದರೆ ಆಯಾ ಹೊತ್ತಿಗೆ ಬಂದು ಪಟಪಟ ಕೆಲಸ ಮುಗಿಸಿ, ನಿರ್ವಿಕಾರದಿಂದ ದುಡ್ಡು ಎಣಿಸಿಕೊಂಡು ಹೋಗುವ ಜನ ಅವರಲ್ಲ. ಎರಡು ದಿನ ಇರುವಾಗಲಿಂದಲೇ ಬರುತ್ತ, ಹೋಗುತ್ತ 'ಏನಾದರೂ ಕೆಲ್ಸ ಇದ್ರೆ ಮುದ್ದಾಂ ಹೇಳಿ' ಎಂದು ವಿಚಾರಿಸುವ, ಊಟಕ್ಕೆ ಬೇಕಾಗುವ ಬಾಳೆಎಲೆ ಸಂಸ್ಕರಿಸಿ, ಅಂಗಳ ಅಲಂಕರಿಸಿ, ಮಂಟಪ, ಮೇಲ್ಗಟ್ಟು ಕಟ್ಟಿಕೊಡುವ, ಅಡುಗೆಗೆ ತರಕಾರಿ ಹೆಚ್ಚಿಕೊಟ್ಟು, ಕಾಯಿ ತುರಿದು, ಲಾಡು ಕಟ್ಟಿ, ಹೋಳಿಗೆ ಬೇಯಿಸಿ.... ಎಲ್ಲ ಕೆಲಸಕ್ಕೂ ಸೈ ಎನ್ನುವ ಜನ. ಇಂಥ ಹತ್ತಾರು ಕೆಲಸ, ಅದೂ ಪರಿಚಯದ ಜನರ ನಡುವೆ ಒಣ ಮೌನದಲ್ಲಿ ನಡೆಯುತ್ತದೆಯೇ? ಭರಪೂರ ಮಾತು, ತಮಾಷೆ, ತರಲೆ, ಮಧ್ಯದಲ್ಲಿ ಅವಲಕ್ಕಿ-ಚಾ ಫಳಾರ..... ಮೇಲಿಂದ ಹಂಚು ಹಾರಿಸುವಷ್ಟು ನಗೆ. 
ಇವರ ಕಥೆಗೊಂದು ದೊಡ್ಡ ಸುದ್ದಿ ಬೇಕಿಲ್ಲ. ಯಾರೋ ಒಬ್ಬ ಜಾರಿ ಬಿದ್ದ ಜಾಣ, ಎಡವಟ್ಟು-ಎಚ್ಚರಗೇಡಿ, ಯಾವುದೋ ಕಾರ್ಯಕ್ರಮದ ವ್ಯವಸ್ಥೆ-ಅವ್ಯವಸ್ಥೆ, ಪ್ರವಾಸ-ಪ್ರಯಾಸ... ಕೊನೆಗೆ ಆಸ್ಪತ್ರೆಯಾತ್ರೆ, ತಪ್ಪಿಸಿಕೊಂಡ ಆಕಳು, ಸೇತುವೆ ಮೇಲೆ ಹರಿದ ನೀರು.... ಎಲ್ಲವೂ ಕುತೂಹಲ ಹುಟ್ಟಿಸುವ ವಿಷಯವೇ. ಅಪಘಾತ, ಪ್ರೇಮ ಪ್ರಸಂಗಗಳಂತೂ ಭಾರಿ ಆಕರ್ಷಣೆಯ ವಿಷಯಗಳು. ಕೆಲಸ ಮಾಡುತ್ತಿರುವಾಗ, ಊಟ-ಆಸ್ರಿಗೆ ಮುಗಿಸಿ ಕವಳ (ಎಲಡಿಕೆ) ಹಾಕಿಕೊಂಡು ಕುಂತಾಗ, ಇಸ್ಪೀಟ್ ಮಂಡಲಗಳ ಮಧ್ಯದಲ್ಲಿ ಒಬ್ಬ ಮಾತುಗಾರ 'ಆಮೇಲೆ, ಆ .... ಸುದ್ದಿ ಗೊತ್ತಾ' ಎಂದು ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ ಸುತ್ತ ಕುಂತ ಹತ್ತು ಜನ ಇತ್ತ ತಿರುಗಿ, 'ಹಾಂ, ಹೌದು ಮಾರಾಯ, ಆ ಸುದ್ದಿ ಹೇಳೋ' ಎಂದು ಆ ವಿಷಯ ಮಂಡನೆಯನ್ನು ಅನುಮೋದಿಸುತ್ತಾರೆ. ಕಥೆಯ ಮೋಡಕ್ಕೆ ಕೇಳುಗರು ಗಾಳಿ ಊದುತ್ತಿದ್ದಂತೆಯೇ ಭರಭರ ಮಾತಿನ ಮುಸಲಧಾರೆ! 
ಕಡಿಮೆ ಮಾತಿನ ಜನವಾಗಿದ್ದರೆ 'ಬಸ್ ಸ್ಕಿಡ್ ಆಗಿ ರಸ್ತೆಯಂಚಿನ ಕಾಲುವೆಗೆ ಹೋಗಿ ನಿಂತಿತಂತೆ, ನಾಲ್ಕೈದು ಜನಕ್ಕೆ ಗಾಯವಾಯ್ತಂತೆ' ಎಂದೋ, 'ಭಟ್ರ ಮಗಳು ಕ್ರಿಶ್ಚಿಯನ್ ಹುಡುಗನ ಜೊತೆ ಓಡಿ ಹೋಗಿ ಮದುವೆ ಆದ್ಲಂತೆ' ಎಂದೋ ಒಂದೆರಡು ವಾಕ್ಯಗಳಲ್ಲಿ ಹೇಳಿ ಮುಗಿಸುವ ವಿಷಯವನ್ನು ಇವರು ಬರೋಬ್ಬರಿ ಎರಡು ತಾಸು ಹೇಳಬಲ್ಲರು. ಅಪಘಾತವಾದ ಬಸ್ ಹಿಂದಿನ ಟ್ರಿಪ್‌ಗೆ ಎಲ್ಲಿಗೆ ಹೋಗಿತ್ತು ಎಂಬಲ್ಲಿಂದ ಶುರುವಾದರೆ- ಎಷ್ಟು ಹೊತ್ತಿಗೆ ಪೇಟೆಯಿಂದ ಹೊರಟಿತು, ಅದಕ್ಕೂ ಮೊದಲು ಚಾಲಕ ಏನೇನು ಮಾಡಿದ, ಬಸ್‌ನಲ್ಲಿ ಯಾರ್ಯಾರು ಎದ್ದರು, ಅವರು ಏನೆಲ್ಲಾ ಕಾರಣಕ್ಕೆ ಪೇಟೆಗೆ ಹೋಗಿದ್ದರು, ರಶ್ ಇತ್ತೇ, ಇದ್ದರೆ ಏಕೆ, ಇರಲಿಲ್ಲವೇ- ಅದು ಏಕೆ, ಅವತ್ತು ಸೆಖೆ ಇತ್ತೇ, ಮೋಡಗಟ್ಟಿತ್ತೇ..... ಕಥಾನದಿಗೆ ಸೇರಿಕೊಳ್ಳುವ ಹಳ್ಳ-ಕೊಳ್ಳಗಳು ಅಪಾರ. ಒಂದೊಂದು ಹಳ್ಳ ಸೇರಿಕೊಂಡಾಗಲೂ ಹರಿವು ಹಿರಿದಾಗುತ್ತ ಭೋರ್ಗರೆಯತೊಡಗುತ್ತದೆ. ಕಥೆ ಶುರುವಾಗಿ ಮುಕ್ಕಾಲು ಗಂಟೆಯಾದರೂ ಬಸ್ ಇನ್ನೂ ಅಪಘಾತ ಆಗಲಿರುವ ಜಾಗಕ್ಕೆ ಬಂದಿರುವುದಿಲ್ಲ. ಎರಡೆರಡು ನಿಮಿಷಕ್ಕೊಮ್ಮೆ 'ಆಮೇಲೇನು ಆಯ್ತು ಗೊತ್ತಾ', 'ನಿಮ್ಗೆ ಹೇಳ್ಬೇಕು ಅಂದ್ರೆ', 'ನಿಮಗೆ ಗೊತ್ತಿದೆಯೋ ಇಲ್ವೋ'....ಗಳಂಥ ಸ್ಪೀಡ್ ಬ್ರೇಕರ್‌ಗಳನ್ನು ಬಳಸುವುದರಿಂದ ಕಥೆ ನಾಗಾಲೋಟ ಸಾಗುವುದು ಕಷ್ಟವೇ. 
ಹಾಗೆಯೇ ಪಕ್ಕದೂರಿನ ಹುಡುಗಿಯ/ಹುಡುಗನ ಪ್ರೇಮ ಪ್ರಸಂಗವನ್ನು ಕೇಳುತ್ತ ಕುಳಿತವರಿಗೆ ಕಥೆಯ ಜೊತೆ ಬೋನಸ್ ಆಗಿ ಆಕೆಯ/ಆತನ ಜೋಡಿ ಯಾರು, ಅವನ/ಳ ಹಿನ್ನೆಲೆ ಏನು, ಅವರ ಸ್ನೇಹಿತೆ/ತರ್‍ಯಾರು, ಅವರ್‍ಯಾರಾದರೂ ಹೀಗೆಯೇ ಪ್ರೇಮಪಾಶದಲ್ಲಿ ಸಿಕ್ಕಿಕೊಂಡಿದ್ದಾರೆಯೇ, ಇದ್ದರೆ ಯಾರ ಜೊತೆ, ಅವರ ಮನೆಯಲ್ಲಿ, ಮನೆತನದಲ್ಲಿ ಬೇರೆ ಯಾರಿಗಾದರೂ ಹೀಗೆ ಹೂಬಾಣ ಹೊಡೆದಿತ್ತೇ, ಅವರು ಆಮೇಲೆ ಯಾರನ್ನು ಮದುವೆಯಾದರು... ಇಂಥ ಹತ್ತಾರು ಪ್ರಸಂಗಗಳ ಸ್ಥೂಲ ಪರಿಚಯ ದೊರೆಯುತ್ತದೆ. 
ಬೇರೆಯವರ ಕೈಗೊಂದು ಹತ್ತಿಯ ಉಂಡೆ ಕೊಟ್ಟರೆ ಹೆಚ್ಚೆಂದರೆ ಹೂಬತ್ತಿ ಹೊಸೆಯಬಹುದು. ಇವರೋ ಅದನ್ನು ಹಿಂಜಿ ಹಿಂಜಿ ನೂಲು ಹೊಸೆದು ಅಂಗಿ ಮಾಡಿ ಹಾಕಿಕೊಳ್ಳುವಷ್ಟು ಹಿಂಜುಬುರುಕರು. ಹೆಚ್ಚು ಕಡಿಮೆ ಎಲ್ಲ ಕಥೆಗಳ 'ಎಲ್ಲಾಯ್ತು, ಏನಾಯ್ತು' ಎಂಬುದು ಕೇಳುಗರಿಗೆ ಅರಿವಿರುತ್ತದೆ. ಆದರೆ ಹಸಿ ತರಕಾರಿ ತಿನ್ನುವುದಕ್ಕಿಂತ, ಉಪ್ಪು ಖಾರ ಹಚ್ಚಿ, ಮಸಾಲೆ ಒಗ್ಗರಣೆ ಮಾಡಿ ತಿಂದರೆ ರುಚಿ ಹೆಚ್ಚು ನೋಡಿ- ಹಾಗಾಗಿ ಅವರೂ ಮಜ ತೆಗೆದುಕೊಳ್ಳುತ್ತ ಕುಳಿತುಕೊಳ್ಳುತ್ತಾರೆ. 
ಕಥೆಯಲ್ಲಿ ಕಾಮಿಡಿಯೇ ಇರಬೇಕೆಂದಿಲ್ಲ. ರೋಗ-ರುಜಿನ, ಸಾವಿನ ಪ್ರಸಂಗಗಳನ್ನೂ ಇವರು ಅರೆನಿಮಿಷ ಬಿಟ್ಟುಹೋಗದಂತೆ ಪುನರ್ರಚನೆ ಮಾಡಿ ಕೇಳುಗರನ್ನು ಆಸ್ಪತ್ರೆಗೋ, ಸಾವಿನ ಮನೆಗೋ ಕರೆದೊಯ್ದು ಬಿಡುತ್ತಾರೆ. ಮೃತರ ಸಂಬಂಧಿಕರ ಗೋಳಿನ ಸುದ್ದಿಗೆ ಕೇಳುಗರ ಕಣ್ಣಂಚೂ ಒದ್ದೆಯಾದರೆ, ಹೃದಯ ವಜ್ಜೆಯಾಗುತ್ತದೆ. 
ನಮ್ಮ ಸಂಬಂಧಿಕರ ಕುಟುಂಬವೊಂದಿದೆ. ಕಥೆ ಹೇಳುವುದು ಅವರ ಜೀವತಂತುವಿನಲ್ಲೇ ಇರಬೇಕು. ಅವರ ಮನೆಯಲ್ಲಿ ಎಲ್ಲರೂ ಕಥೆಗಾರರೇ. ರಾತ್ರಿ ಊಟದ ನಂತರ ಎಲ್ಲ ಸೇರಿ ಕಥೆ ಗಂಟು ಬಿಚ್ಚಿದರೆಂದರೆ ಅದೊಂದು ದೊಡ್ಡ ಮನರಂಜನಾ ಕಾರ್ಯಕ್ರಮ. ನನ್ನ ಮದುವೆಯ ನಂತರ ಪತಿಯೊಂದಿಗೆ ಅವರ ಮನೆಗೆ ಹೋಗಿದ್ದೆ. ಊಟವಾಗುತ್ತಿದ್ದಂತೆ ಗಂಡಸರು, ಮಕ್ಕಳೆಲ್ಲ ಸೇರಿ ಹೊಸ ನೆಂಟನೊಂದಿಗೆ ಮಾತಿಗೆ ಕುಳಿತರು. ಮನೆಯ ಹಿರಿಯಣ್ಣನ ಬೀಗರ ಮನೆಯಲ್ಲಿ ಸೂತಕ ಬಂದು ಮದುವೆಯೊಂದು ನಿಂತು ಹೋಗಿತ್ತು. ಅವರು ಶುರು ಮಾಡಿದರು- 'ನಮ್ಮ ಗೀತನ ಮನೆಲ್ಲಿ ಮಾರಾಯ, ಸೂತಕದ್ದೇ ಸಮಸ್ಯೆ. ಎಲ್ಲರ ಮನೆಲ್ಲಿ ಹನ್ನೊಂದು ದಿನಕ್ಕೆ ಸೂತಕ ಮುಗಿದ್ರೆ ಇವಕ್ಕೆ ಮುನ್ನೂರ ಹನ್ನೊಂದು ದಿನವಾದ್ರೂ ಸೂತಕ'. ಎರಡನೇ ಸೋದರ ಮುಂದುವರಿಸಿದರು- 'ದೊಡ್ಡ ಮನೆತನ ನೋಡಿ, ನೂರಾರು ಜನ ಇದ್ದ. ಎಲ್ಲ ಹಿಸ್ಸೆಯಾಗಿ ಹೋದ್ರೂ ಸೂತಕ ಸಂಬಂಧ ಮುರಿದ್ದಿಲ್ಲೆ'. ಈಗ ಕಿರಿಯ ಸೋದರನ ಪಾಳಿ- 'ಯಾವ (ಶುಭ)ಕಾರ್ಯ ನಿಶ್ಚಯ ಮಾಡಿದ್ರೂ ಎರಡ್ಮೂರು ಸಲ ಸೂತಕ ಬಂದು ಮುಂದೆ ಹೋಪದು ಗ್ಯಾರಂಟಿ. ಸತ್ತ ಸೂತಕ ಮುಗಿತು ಹೇಳಿ ಕಾರ್ಯ ಖಾಯಂ ಮಾಡಲು ಹೋದ್ರೆ ಹಡೆದ ಸುದ್ದಿ ಬರ್‍ತು. ಆ ಸೂತಕ ಮುಗಿಯೋ ಹೊತ್ತಿಗೆ ಇನ್ಯಾರೋ ಬಸುರಿಗೆ ದಿನ ತುಂಬಿದ ಸುದ್ದಿ ಬರ್‍ತು. ಭಾರಿ ಕಷ್ಟ ಮಾರಾಯ'.
ದೊಡ್ಡ ಮನೆತನ ಅಂದ ಮೇಲೆ ಸದಸ್ಯರು ಜಾಸ್ತಿ ತಾನೆ, ಮದುವೆ, ಮುಂಜಿ, ಶುಭ ಕಾರ್ಯಗಳೂ ಜಾಸ್ತಿ. ಸರಿ, ಯಾವ್ಯಾವ ಕಾರ್ಯಕ್ಕೆ ಎಷ್ಟೆಷ್ಟು ಸಲ ಅಡ್ಡಿ ಬಂತು, ಹೇಗ್ಹೇಗೆ ಅಂತೂ ಪೂರೈಸಿದರು ಎಂಬುದನ್ನು ಮನೆಯ ಹಿರಿ ತಲೆಯಿಂದ ಕಿರಿಯ ಮೊಮ್ಮಕ್ಕಳವರೆಗೆ 'ಖೋ' ಪಡೆದವರಂತೆ, ರಿಲೇ ಬೇಟನ್ ಪಡೆದವರಂತೆ ಒಬ್ಬೊಬ್ಬರಾಗಿ ಹೇಳಿದರು. ಮನೆಗೆಲಸ ಮುಗಿಸಿ ಬಂದ ಹೆಂಗಸರೂ ಮಧ್ಯದಲ್ಲಿ ಸೇರಿಕೊಂಡು 'ಖೋ' ಅಂದವರೇ. 'ಸೂತಕ ಕಳೆಯುವ' ಹೊತ್ತಿಗೆ ಬರೋಬ್ಬರಿ ಮೂರು ತಾಸು ಕಳೆದಿತ್ತು. ಅಷ್ಟು ಹೊತ್ತು ಒಂದೇ ವಿಷಯವನ್ನು ಹೇಳಿದ್ದರೂ ನಮಗೆಲ್ಲೂ ಒಂದಿನಿತೂ ಬೇಸರ ಬಂದಿರಲಿಲ್ಲ, ಬದಲಾಗಿ ನಗೆಯ ಹೊಳೆಯೇ ಹರಿದಿತ್ತು ಅಲ್ಲಿ. ಕಥೆ ಹೇಳುವವರು ಬೇರೆ ಬೇರೆಯವರಾದರೂ ಹಾಸ್ಯದ ತೂಕವನ್ನು, ನಮ್ಮ ಆಸಕ್ತಿಯ ಮಟ್ಟವನ್ನು ಕಾಯ್ದುಕೊಂಡು ನಗು ಚಿಮ್ಮಿಸಿದ ರೀತಿ ಮೆಚ್ಚಲರ್ಹವಾಗಿತ್ತು. 
ಮನುಷ್ಯರ ಜೊತೆಗೆ ಇರುವೆ-ಗೊದ್ದಗಳನ್ನೂ ಆಕರ್ಷಿಸುವ ಬೆಲ್ಲದಂತೆ ಈ ಕಥೆ ಹೇಳುವ ಕಲೆ. ಉಳ್ಳವ-ಇಲ್ಲದವ, ಒಡೆಯ-ಆಳು, ಗಂಡಸು-ಹೆಂಗಸು, ಹಿರಿಯ-ಕಿರಿಯ ಎಲ್ಲ ಭೇದಗಳನ್ನೂ ಅಳಿಸಿ ಕೇವಲ ಹೇಳುವವ-ಕೇಳುವವ(ರು) ಎಂಬುದೊಂದು ತಾತ್ಕಾಲಿಕವಾದರೂ ಪ್ರಾಮಾಣಿಕವಾದ ಸಂಬಂಧವನ್ನು ಹುಟ್ಟುಹಾಕುತ್ತದೆ. ಸುದ್ದಿಯೆಂಬ ರಬ್ಬರ್ ಚೂರಿಗೆ ಗಾಳಿ ಊದಿ ಊದಿ ಪುಗ್ಗಿ ಹಾರಿ ಬಿಡುವ ಇದು, ಇಂಥದ್ದೇ ಚೌಕಟ್ಟಿನಲ್ಲಿ ಜನರನ್ನು ರಂಜಿಸುವ ಟಿವಿ 'ಟಾಕ್ ಶೋ'ಗಳ ಹಂಬಲ್ ಕೌಂಟರ್‌ಪಾರ್ಟ್. ಟಾಕ್ ಶೋ ನಡೆಸುವವರು ಕಾರ್ಯಕ್ರಮ ಮುಗಿದ ಮೇಲೆ ಝಣಝಣ ದುಡ್ಡೆಣಿಸುತ್ತಾರೆ. ನಮ್ಮ ಕಥೆಗಾರರೋ... ಒಂದು ಚಾ ಕುಡಿದೋ, ಎಲಡಿಕೆ ಹಾಕಿಕೊಂಡೋ ಮನೆಗೆ ಮರಳುತ್ತಾರೆ. ಕಥೆ ಇನ್ನೊಂದು ದಿನ ಇನ್ನೆಲ್ಲೋ ಮರು ಹುಟ್ಟು ಪಡೆಯುತ್ತದೆ. 

(ದ್ಯಾಟ್ಸ್ ಕನ್ನಡ.ಕಾಮ್ ನಲ್ಲಿ ಪ್ರಕಟವಾದ ಲೇಖನ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ